ಲಕ್ನೋ: ವಾರಣಾಸಿ ಕಲೆ, ಸಂಗೀತದ ನೆಲೆವೀಡಾಗಿದೆ. ಕಲಿಕೆಗೆ ಸಂಬಂಧಿಸಿದಂತೆ ಜಾಗತಿಕ ಕೇಂದ್ರವಾಗಬಲ್ಲ ಎಲ್ಲಾ ಲಕ್ಷಣಗಳೂ ವಾರಣಾಸಿಯಲ್ಲಿವೆ ಎಂದು ಪ್ರಧಾನಿ ಮೋದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅವರು ವಾರಣಾಸಿಯಲ್ಲಿ ನಿರ್ಮಾಣವಾಗಿರುವ ಅಂತರಾಷ್ಟ್ರೀಯ ಸಹಕಾರ ಮತ್ತು ಸಮಾವೇಶ ಅಡಿಟೋರಿಯಂ ‘ರುದ್ರಾಕ್ಷ’ ವನ್ನು ಉದ್ಘಾಟಿಸಿ ಮಾತನಾಡಿ, ಕಾಶಿ ವಿಶ್ವದ ಅತ್ಯಂತ ಪುರಾತನ ನಗರ. ಶಿವನಿಂದ ಬುದ್ಧನವರೆಗೆ ಕಾಶಿಯು ಎಲ್ಲಾ ರೀತಿಯ ಕಲೆ , ಸಂಸ್ಕೃತಿಯನ್ನು ಸಂರಕ್ಷಣೆ ಮಾಡಿಕೊಂಡು ಬಂದಿದೆ ಎಂದು ಹೇಳಿದ್ದಾರೆ. ಅದಕ್ಕೆ ಪೂರಕ ಎಂಬಂತೆ ಬನಾರಸ್ನ ಪ್ರತಿಯೊಂದು ಮೂಲೆಯಲ್ಲಿಯೂ ಕಲೆ ಮತ್ತು ಸಂಗೀತಕ್ಕೆ ಸಂಬಂಧಿಸಿದಂತೆ ಇರುವ ವಸ್ತುಗಳನ್ನು, ವಿಚಾರಗಳನ್ನು ನಾವು ಕಾಣಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
ಗಂಗೆಯ ಮಡಿಲಲ್ಲಿ ಹಲವಾರು ಕಲಾಪ್ರಕಾರಗಳು ಬೆಳೆದುಕೊಂಡು, ಅಭಿವೃದ್ಧಿ ಹೊಂದಿಕೊಂಡು ಬಂದಿವೆ. ಈ ನೆಲವು ಜ್ಞಾನದ ನೆಲೆಯಾಗಿದೆ. ಈ ನೆಲದಲ್ಲಿ ಮಾನವೀತೆ ಇದೆ. ಇಡೀ ಜಗತ್ತಿನಲ್ಲೇ ವಾರಣಾಸಿ ಕಲೆ, ವಿಜ್ಞಾನದ ದೊಡ್ಡ, ಸುಪ್ರಸಿದ್ಧ ಕೇಂದ್ರವಾಗಿ ಕಂಗೊಳಿಸಲಿದೆ ಎಂದು ಮೋದಿ ತಿಳಿಸಿದ್ದಾರೆ. ಹಾಗೆಯೇ ಇದು ಸಮ್ಮೇಳನಗಳಿಗೂ ಆಕರ್ಷಕ ತಾಣವಾಗಲಿದ್ದು, ಪ್ರವಾಸೋದ್ಯಮ ಮತ್ತು ಆರ್ಥಿಕತೆಯ ಬೆಳವಣಿಗೆಯ ಮೇಲೆಯೂ ಸಕಾರಾತ್ಮಕ ಪರಿಣಾಮ ಬೀರಲಿದೆ ಎಂದು ಹೇಳಿದ್ದಾರೆ.
ರುದ್ರಾಕ್ಷವು ಪ್ರಾಚೀನ ಪರಂಪರೆಯ ಆಧುನಿಕ ಮಿಶ್ರಣವಾಗಿದೆ. ಸಾಂಸ್ಕೃತಿಕ ಮತ್ತು ಆರ್ಥಿಕ ಪ್ರಾಮುಖ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಇಂತಹ ಒಂದು ಅಭೂತಪೂರ್ವ ಸಮ್ಮೇಳನ ಸಭಾಂಗಣದ ನಿರ್ಮಾಣ ಮಾಡಲಾಗಿದೆ ಎಂದು ಹೇಳಿದ್ದಾರೆ. ಇದರಲ್ಲಿ 108 ರುದ್ರಾಕ್ಷ ಗಳನ್ನು ಸ್ಥಾಪಿಸಲಾಗಿದೆ. ಸಿಗ್ರಾ ಪ್ರದೇಶದ 2.87 ಎಕರೆ ಪ್ರದೇಶದಲ್ಲಿ ಎರಡು ಅಂತಸ್ತಿನ ಈ ಕಟ್ಟಡ ನಿರ್ಮಾಣವಾಗಿದ್ದು, ಇದರಲ್ಲಿ 1200 ಜನರು ಕುಳಿತುಕೊಳ್ಳುವ ಸಾಮರ್ಥ್ಯ ಇದೆ. ರುದ್ರಾಕ್ಷ ಕಾಶಿಯ ಪುರಾತನ ಪರಂಪರೆಯ ಪ್ರತೀಕವಾಗಿ ಮುಂದಿನ ದಿನಗಳಲ್ಲಿ ಜಾಗತಿಕ ಮಟ್ಟದಲ್ಲಿ ರಾರಾಜಿಸುತ್ತಿದೆ ಎಂದು ಮೋದಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.