ಈಶಾನ್ಯ ರಾಜ್ಯ ಅಸ್ಸಾಂನಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಸುಮಾರು ಮೂರೂವರೆ ವರ್ಷಗಳಾಗಿವೆ. ಹಿಮಾಂತ ಬಿಸ್ವಾ ಶರ್ಮಾ ಅವರ ನೇತೃತ್ವದಲ್ಲಿ ರಾಜ್ಯದ ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಸರ್ಕಾರ ಅನೇಕ ಅತ್ಯುತ್ತಮ ಉಪಕ್ರಮಗಳನ್ನು ಕೈಗೊಂಡಿದೆ.
ಹೊಸದಾಗಿ ಅಲ್ಲಿ ಅರುಂಧತಿ ಯೋಜನೆಯನ್ನು ತರಲಾಗುತ್ತಿದ್ದು, ಈ ಯೋಜನೆಯಡಿ ಬಂಗಾರವನ್ನು ಖರೀದಿಸಲು ರಾಜ್ಯದ ಪ್ರತಿ ವಧುವಿಗೆ 30,000 ರೂಪಾಯಿಗಳನ್ನು ನೀಡುವುದಾಗಿ ಸರ್ಕಾರ ಘೋಷಿಸಿದೆ. ಅರುಂಧತಿ ಯೋಜನೆಗೆ ಸರ್ಕಾರ 800 ಕೋಟಿ ರೂಪಾಯಿಗಳನ್ನು ಬಜೆಟ್ನಲ್ಲಿ ನೀಡಿದೆ.
“ಮದುವೆಯ ಸಂದರ್ಭ 10 ಗ್ರಾಂ ಚಿನ್ನವನ್ನು ವಧುವಿಗೆ ನೀಡಲಾಗುವುದು ಎಂದು ನಮ್ಮ ಸರ್ಕಾರವು ಬಜೆಟಿನಲ್ಲಿ ಘೋಷಿಸಿದೆ. ಬಾಲ್ಯ ವಿವಾಹ ತಡೆಗಟ್ಟಲು ಇದೊಂದು ಅತ್ಯುತ್ತಮ ಮಾರ್ಗವೂ ಹೌದು. ಏಕೆಂದರೆ, ಯೋಜನೆಯ ಲಾಭ ಪಡೆಯಲು ಬಯಸುವವರು ಮದುವೆಯನ್ನು ನೋಂದಾಯಿಸಲೇಬೇಕು, ಆಗ ವಯಸ್ಸನ್ನು ನಮೂದು ಮಾಡಲೇಬೇಕು. ವಧುವಿಗೆ ಕನಿಷ್ಠ ವಯಸ್ಸು 18 ಮತ್ತು ವರನಿಗೆ 21 ವರ್ಷಗಳು ಎಂದು ಈಗಾಗಲೇ ನಿಗದಿಪಡಿಸಲಾಗಿದೆ. ಆದ್ದರಿಂದ, ನಾವು ಆ ನಿರ್ದಿಷ್ಟ ಯೋಜನೆಯನ್ನು ಅಂಗೀಕರಿಸಿದ್ದೇವೆ. ಈಗ ಯಾವುದೇ ನೋಂದಾಯಿತ ಮದುವೆಯ ವಧುವಿಗೆ ಚಿನ್ನ ಖರೀದಿ ಮಾಡಲು ರಾಜ್ಯ ಸರ್ಕಾರದಿಂದ 30,000 ರೂ. ಸಿಗಲಿದೆ. ಆದರೆ, ಯೋಜನೆಯ ಲಾಭ ಪಡೆಯಲು ಕನಿಷ್ಠ ವಯಸ್ಸು 18 ವರ್ಷ ಮತ್ತು 21 ವರ್ಷಗಳು ಆಗಿರಬೇಕು. ಮಾತ್ರವಲ್ಲದೇ, 10 ನೇ ತರಗತಿ ಕಲಿತಿರಬೇಕು ”ಎಂದು ಅಸ್ಸಾಂ ಹಣಕಾಸು ಸಚಿವರೂ ಆಗಿರುವ ಸಿಎಂ ಡಾ. ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.
ಹೆಣ್ಣುಮಕ್ಕಳ ವಿದ್ಯಾಭ್ಯಾಸ ಉತ್ತೇಜನ ಮತ್ತು ಬಾಲ್ಯ ವಿವಾಹ ರದ್ಧತಿ ಎರಡೂ ದೃಷ್ಟಿಯಿಂದಲೂ ಈ ಯೋಜನೆ ಅತ್ಯುತ್ತಮವಾಗಿದೆ.
ಈಗಾಗಲೇ, ಅಸ್ಸಾಂ ಸರ್ಕಾರವು ಸರ್ಕಾರಿ ನೌಕರರು ತಮ್ಮ ಹೆತ್ತವರನ್ನು ನೋಡಿಕೊಳ್ಳುವುದನ್ನು ಕಡ್ಡಾಯಗೊಳಿಸಿದೆ. ಒಂದು ವೇಳೆ ಪೋಷಕರನ್ನು ನೋಡಿಕೊಳ್ಳದಿದ್ದರೆ ವೇತನದಲ್ಲಿ ಕಡಿತ ಮಾಡುವ ಕಾನೂನನ್ನು ಅದು ಜಾರಿಗೆ ತರುತ್ತಿದೆ. ಅವರ ವೇತನದ ಕಡಿತಗೊಳಿಸಿದ ಭಾಗವನ್ನು ಪೋಷಕರಿಗೆ ರಾಜ್ಯ ಸರ್ಕಾರವು ನೀಡಲಿದೆ. ರಾಜ್ಯ ಬಜೆಟ್ನಲ್ಲಿ ರೂಪಿಸಲಾದ ಪ್ರಸ್ತಾವನೆಯನ್ನು ಕಠಿಣ ಪರಿಶೀಲನೆಗೆ ಒಳಪಡಿಸಲಾಗಿದ್ದು, ಪ್ರಸಕ್ತ ವರ್ಷದಲ್ಲಿ ಶಾಸನವನ್ನು ತರಲು ಸಮಾಜ ಕಲ್ಯಾಣ ಇಲಾಖೆಯಿಂದ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.
“ಬದಲಾಗುತ್ತಿರುವ ಜನಸಂಖ್ಯಾ ವಯಸ್ಸಿನ ರಚನೆಯಿಂದಾಗಿ 60 ವರ್ಷಕ್ಕಿಂತ ಮೇಲ್ಪಟ್ಟ ಜನಸಂಖ್ಯೆಯ ಶೇಕಡಾವಾರು ಪ್ರಮಾಣವು ಹೆಚ್ಚಾಗಲಿದೆ ಎಂದು ನಿರೀಕ್ಷಿಸಲಾಗಿದೆ. ವೃದ್ಧರು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಅವರ ಅಗತ್ಯತೆ ಪೂರೈಸುವ ಸೇವೆಗಳನ್ನು ಸಾಂಸ್ಥಿಕ ಮೂಲಗಳಿಂದ ಮಾತ್ರವಲ್ಲದೆ ಕೌಟುಂಬಿಕ ರಚನೆಗಳ ಮೂಲಕವೂ ಒದಗಿಸಬೇಕಾಗುತ್ತದೆ. ಈ ಯೋಜನೆಯ ಹಿಂದಿನ ಉದ್ದೇಶವೆಂದರೆ, ಸಮಾಜಕ್ಕೆ ಬಲವಾದ ಸಂದೇಶವನ್ನು ರವಾನಿಸುವುದು ಮತ್ತು ನಮ್ಮ ಯುವ ಜನತೆಯು ವಯಸ್ಕರನ್ನು ಚೆನ್ನಾಗಿ ನೋಡಿಕೊಳ್ಳಲು ಪ್ರೇರೇಪಿಸುವುದು ಮತ್ತು ಅವರನ್ನು ಪೋಷಿಸುವಂತೆ ಮಾಡುವುದು” ಎಂದು ಶರ್ಮಾ ಹೇಳಿದ್ದಾರೆ.
ಕೌಟುಂಬಿಕ ಜವಾಬ್ದಾರಿಗಳಿಗೆ ಶಾಸಕಾಂಗದ ವ್ಯಾಪ್ತಿಯಂತಹ ಪ್ರಕ್ರಿಯೆಯನ್ನು ಪ್ರಾರಂಭಿಸಲು ಅಸ್ಸಾಂ ಸರ್ಕಾರ ಈಗಾಗಲೇ ಕ್ರಮ ಕೈಗೊಂಡಿದೆ. ಅದು “ಸಬ್ ಕಾ ಸಾಥ್ ಸಬ್ ಕಾ ವಿಕಾಸ್” ಘೋಷಣೆಯೊಂದಿಗೆ ಮುನ್ನಡೆಯುತ್ತಿದೆ. ಈ ಮಾದರಿಯನ್ನು ಎಲ್ಲಾ ರಾಜ್ಯ ಸರ್ಕಾರಗಳು ಕೂಡ ಅಳವಡಿಸಿಕೊಂಡರೆ ಭವ್ಯ ಭಾರತ ನಿರ್ಮಾಣವಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.