ಭಾರತದ ಸಂವಿಧಾನವು ಹೆಣ್ಣು ಮತ್ತು ಗಂಡಿಗೆ ಸಮಾನವಾದ ಅವಕಾಶಗಳನ್ನು ಒದಗಿಸಿದೆ. ಯಾವುದೇ ರೀತಿಯ ತಾರತಮ್ಯವನ್ನೂ ಅದು ವಿರೋಧಿಸುತ್ತದೆ. ಸಂವಿಧಾನದ ಆಶಯದಂತೆ ಹೆಣ್ಣುಮಕ್ಕಳ ರಕ್ಷಣೆ ಮತ್ತು ಸಮಾನತೆ, ಸಬಲೀಕರಣಕ್ಕಾಗಿ ಸರ್ಕಾರಗಳು ಹತ್ತು ಹಲವು ಯೋಜನೆಗಳನ್ನು ತಂದಿದೆ.
ಇಂತಹ ಕೆಲವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹೆಣ್ಣು ಮಕ್ಕಳಿಗಾಗಿ ತಂದಿರುವ ಪ್ರಮುಖ ಯೋಜನೆಗಳ ಪಟ್ಟಿ ಈ ಕೆಳಗಿನಂತಿದೆ.
ಬೇಟಿ ಬಚಾವೋ ಬೇಟಿ ಪಡಾವೋ
2015 ರ ಜನವರಿ 22 ರಂದು ಪ್ರಧಾನ ಮಂತ್ರಿಯವರು ಹರಿಯಾಣದ ಪಾಣಿಪತ್ನಲ್ಲಿ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಗೆ ಚಾಲನೆ ನೀಡಿದರು. ಮಕ್ಕಳ ಲಿಂಗಾನುಪಾತ ಹಾಗೂ ಮಹಿಳಾ ಸಬಲೀಕರಣದ ಸಮಸ್ಯೆಗಳಿಗೆ ಈ ಯೋಜನೆ ಉತ್ತರ ಕಂಡುಕೊಳ್ಳುತ್ತಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಮಾನವ ಸಂಪನ್ಮೂಲಾಭಿವೃದ್ಧಿ ಇಲಾಖೆಗಳ ಜಂಟಿ ಚಿಂತನೆಯ ಫಲವಾಗಿ ಈ ಯೋಜನೆ ರೂಪಿತವಾಗಿದೆ.
ತರಬೇತಿ, ವಿಚಾರದ ಅರಿವು, ಜಾಗೃತಿ ಕಾರ್ಯಕ್ರಮಗಳು ಮತ್ತು ತಳಮಟ್ಟದಲ್ಲಿ ಸಮುದಾಯಗಳನ್ನು ಒಗ್ಗೂಡಿಸುವ ಮೂಲಕ ಜನರ ಮನಸ್ಸಿನಲ್ಲಿ ಹೆಣ್ಣು ಮಕ್ಕಳ ಬಗೆಗಿನ ನಿಲುವಿನಲ್ಲಿ ಬದಲಾವಣೆ ತರುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ. ಹೆಣ್ಣು ಮಕ್ಕಳ ಬಗೆಗಿನ ಸಮಾಜದ ದೃಷ್ಟಿಕೋನವನ್ನು ಬದಲಾಯಿಸುವ ಉದ್ದೇಶವನ್ನು ಇದು ಹೊಂದಿದೆ. ಹೆಣ್ಣು ಮಕ್ಕಳ ರಕ್ಷಣೆ ಮತ್ತು ಶಿಕ್ಷಣ ಈ ಯೋಜನೆಯ ಮೂಲ ಆಶಯ.
ಈ ಯೋಜನೆಯನ್ನು ಪ್ರಸ್ತುತ ಭಾರತದ, ಕಡಿಮೆ ಮಕ್ಕಳ ಲೈಂಗಿಕ ಅನುಪಾತ (ಸಿಎಸ್ಆರ್) ಇರುವ 100 ಜಿಲ್ಲೆಗಳಲ್ಲಿ ಜಿಲ್ಲೆಗಳಲ್ಲಿ ಜಾರಿಗೆ ತರಲಾಗಿದೆ, ಅಲ್ಲಿ ಪಂಚಾಯತ್ ಮತ್ತು ಜಿಲ್ಲಾ ಮಟ್ಟದ ಸರ್ಕಾರಿ ಅಧಿಕಾರಿಗಳು ಹೆಣ್ಣು ಭ್ರೂಣ ಹತ್ಯೆ ಮತ್ತು ಶಿಶುಹತ್ಯೆಯನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ ಮತ್ತು ಪ್ರತಿಯೊಬ್ಬ ಯುವತಿಯರಿಗೂ ಉಚಿತ ಪ್ರಾಥಮಿಕ ಶಿಕ್ಷಣವನ್ನು ಖಾತ್ರಿಪಡಿಸಿಕೊಳ್ಳುತ್ತಿದ್ದಾರೆ.
ಸುಕನ್ಯಾ ಸಮೃದ್ಧಿ ಯೋಜನೆ
ದೇಶದ ಹೆಣ್ಣು ಮಕ್ಕಳ ಭವಿಷ್ಯವನ್ನು ಉತ್ತಮಗೊಳಿಸುವ ಉದ್ದೇಶದಿಂದ 2015ರ ಜನವರಿಯಲ್ಲಿ ಕೇಂದ್ರ ಸರಕಾರ ಸುಕನ್ಯಾ ಸಮೃದ್ಧಿ ಯೋಜನೆಯನ್ನು ಆರಂಭಿಸಿದೆ. ಇದು ಹೆಣ್ಣು ಮಕ್ಕಳ ಹೆಸರಲ್ಲಿ ತೆರೆಯಲಾಗುವ ಸಣ್ಣ ಉಳಿತಾಯ ಯೋಜನೆ ಖಾತೆ ಎಂದು ಭಾರತ ಸರಕಾರದ ವೆಬ್ಸೈಟ್ india.gov.in ನಲ್ಲಿ ತಿಳಿಸಲಾಗಿದೆ.
ಮುಂಚೆ ಈ ಯೋಜನೆಯಲ್ಲಿ ಇದ್ದ 1000 ರೂಪಾಯಿ ಕನಿಷ್ಠ ಕಂತಿನ ಮೊತ್ತವನ್ನು ಇತ್ತೀಚೆಗೆ ರೂ. 250 ಕ್ಕೆ ಇಳಿಸಲಾಗಿದೆ. ಅಂದರೆ ಇನ್ನು ಖಾತೆದಾರರು ವರ್ಷಕ್ಕೆ ಕೇವಲ 250 ರೂಪಾಯಿ ಪಾವತಿಸುವ ಮೂಲಕ ಖಾತೆಯನ್ನು ಚಾಲ್ತಿಯಲ್ಲಿಡಬಹುದಾಗಿದೆ. ಹೆಣ್ಣು ಮಕ್ಕಳ ಪಾಲಕರು ಅಥವಾ ಕಾನೂನಾತ್ಮಕ ಪೋಷಕರು ಹೆಣ್ಣು ಮಗುವಿನ ಹೆಸರಲ್ಲಿ ಸುಕನ್ಯಾ ಸಮೃದ್ಧಿ ಖಾತೆ ತೆರೆಯಬಹುದು. ಸುಕನ್ಯಾ ಸಮೃದ್ಧಿ ಯೋಜನೆಯಡಿ ಓರ್ವ ಪಾಲಕ ಅಥವಾ ಪೋಷಕ ಓರ್ವ ಹೆಣ್ಣು ಮಗುವಿನ ಹೆಸರಲ್ಲಿ ಒಂದು ಖಾತೆ ಅಥವಾ ಗರಿಷ್ಠ ಇಬ್ಬರು ಹೆಣ್ಣು ಮಕ್ಕಳ ಹೆಸರಲ್ಲಿ ಎರಡು ಖಾತೆಗಳನ್ನು ಆರಂಭಿಸಲು ಅವಕಾಶವಿದೆ. ಎರಡನೇ ಹೆರಿಗೆ ಸಂದರ್ಭದಲ್ಲಿ ಅವಳಿ ಹೆಣ್ಣು ಮಕ್ಕಳು ಅಥವಾ ಮೊದಲ ಹೆರಿಗೆಯಲ್ಲೇ ತ್ರಿವಳಿ ಹೆಣ್ಣು ಮಕ್ಕಳು ಜನಿಸಿದಲ್ಲಿ ಮೂವರು ಹೆಣ್ಣು ಮಕ್ಕಳ ಹೆಸರಿನಲ್ಲಿ ಖಾತೆ ಆರಂಭಿಸಬಹುದು.
ಖಾತೆ ಆರಂಭಿಸಿದ ದಿನದಿಂದ 21 ವರ್ಷಗಳವರೆಗೆ ಖಾತೆ ಚಾಲನೆಯಲ್ಲಿರುತ್ತದೆ. ತದನಂತರ ಖಾತೆಯನ್ನು ಮುಕ್ತಾಯಗೊಳಿಸಿ, ಖಾತೆ ಹೊಂದಿರುವ ಹೆಣ್ಣು ಮಗುವಿಗೆ ಸಂಪೂರ್ಣ ಮೊತ್ತವನ್ನು ನೀಡಲಾಗುತ್ತದೆ. ಒಂದು ವೇಳೆ 21 ವರ್ಷದ ಪಕ್ವತಾ ಅವಧಿಯ ನಂತರವೂ ಖಾತೆಯನ್ನು ಬಂದ್ ಮಾಡದಿದ್ದಲ್ಲಿ ಖಾತೆಯಲ್ಲಿನ ಹಣಕ್ಕೆ ಆಯಾ ಕಾಲಕ್ಕೆ ನಿರ್ಧರಿತವಾಗುವ ದರದಲ್ಲಿ ಬಡ್ಡಿಯನ್ನು ಜಮೆ ಮಾಡಲಾಗುತ್ತದೆ. ಒಂದು ವೇಳೆ ಖಾತೆ ಆರಂಭಿಸಿದ 21 ವರ್ಷದೊಳಗೆ ಖಾತೆ ಹೊಂದಿದ ಹೆಣ್ಣು ಮಗಳು ವಿವಾಹವಾದಲ್ಲಿ ಖಾತೆಯನ್ನು ಸ್ವಚಾಲಿತವಾಗಿ ಮುಕ್ತಾಯಗೊಳಿಸಲಾಗುತ್ತದೆ.
ಬಾಲಿಕಾ ಸಮೃದ್ಧಿ ಯೋಜನೆ
ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್ಇ)ಯ ಉಡಾನ್
ಸಿಬಿಎಸ್ಇ ಪ್ರಾರಂಭಿಸಿದ ಈ ಯೋಜನೆಯು ದೇಶಾದ್ಯಂತ ಎಂಜಿನಿಯರಿಂಗ್ ಸಂಸ್ಥೆಗಳಲ್ಲಿ ಬಾಲಕಿಯರ ದಾಖಲಾತಿಯನ್ನು ಹೆಚ್ಚಿಸುವ ಮೂಲಕ ತಾಂತ್ರಿಕ ಶಿಕ್ಷಣದಲ್ಲಿ ಲಿಂಗ ಅಂತರವನ್ನು ನಿವಾರಿಸುವ ಗುರಿಯನ್ನು ಹೊಂದಿದೆ, ವಿಶೇಷವಾಗಿ ಕಡಿಮೆ ಸವಲತ್ತು ಹೊಂದಿರುವ ಆರ್ಥಿಕ ಸ್ತರದಿಂದ ಬಂದ ಹೆಣ್ಣು ಮಕ್ಕಳಿಗೆ ಈ ಯೋಜನೆ ಸಹಕಾರಿಯಾಗಿದೆ.
ಪಠ್ಯಕ್ರಮದ ವಿನ್ಯಾಸ, ವರ್ಗಾವಣೆ ಮತ್ತು ಮೌಲ್ಯಮಾಪನಗಳ ಮೂಲಕ ಮೂರು ಆಯಾಮದ ವಿಧಾನದಲ್ಲಿ ಶಾಲಾ ಮಟ್ಟದಲ್ಲಿ ವಿಜ್ಞಾನ ಮತ್ತು ಗಣಿತದ ಬೋಧನೆ ಮತ್ತು ಕಲಿಕೆಗೆ ವಿಶೇಷ ಗಮನ ನೀಡುವ ಕಾರ್ಯವನ್ನು ಈ ಯೋಜನೆಯಡಿ ಮಾಡಲಾಗುತ್ತದೆ.
ಸಿಬಿಎಸ್ಇ ಶಾಲೆಗಳ 11 ಮತ್ತು 12 ನೇ ತರಗತಿಗಳಲ್ಲಿ ಭೌತಶಾಸ್ತ್ರ, ಗಣಿತ ಮತ್ತು ರಸಾಯನಶಾಸ್ತ್ರವನ್ನು ಆರಿಸಿಕೊಂಡ ಬಾಲಕಿಯರು ಈ ಯೋಜನೆಯ ಪ್ರಯೋಜನವನ್ನು ಪಡೆಯಲು ಅರ್ಹರಾಗಿದ್ದಾರೆ.
ಅನುಮಾನ ಪರಿಹರಿಸುವ ಸಹಾಯವಾಣಿಯನ್ನು ಇದು ಹೊಂದಿದೆ. ಉಚಿತ ಪಠ್ಯ ಮತ್ತು ವಿಡಿಯೋ ಅಧ್ಯಯನ ಸಾಮಗ್ರಿಗಳು ಮತ್ತು ರಾಷ್ಟ್ರೀಯ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಗಳಿಗೆ ವಿಶೇಷ ಆನ್ಲೈನ್ ತರಬೇತಿ ಇದರಡಿಯಲ್ಲಿ ಲಭ್ಯವಿದೆ.
ಸಮರ್ಪಿತ ಆಕಾಂಕ್ಷಿಗಳಿಗೆ ಪೀರ್-ಟು-ಪೀರ್ ಕಲಿಕೆಯ ಮಾದರಿ ಮತ್ತು ಮಾರ್ಗದರ್ಶನ ಸವಲತ್ತುಗಳನ್ನು ಹೊಂದಿದೆ.
ಪ್ರೌಢ ಶಿಕ್ಷಣಕ್ಕಾಗಿ ಬಾಲಕಿಯರಿಗೆ ರಾಷ್ಟ್ರೀಯ ಪ್ರೋತ್ಸಾಹ ಧನ
ಎಸ್ಸಿ / ಎಸ್ಟಿ ಸಮುದಾಯಗಳ ಬಾಲಕಿಯರ ಶಿಕ್ಷಣಕ್ಕಾಗಿ ವಿತ್ತೀಯ ಪ್ರೋತ್ಸಾಹವನ್ನು ಈ ಯೋಜನೆಯಡಿ ನೀಡಲಾಗುತ್ತದೆ.
ಎಂಟನೇ ತರಗತಿಯಲ್ಲಿ ಉತ್ತೀರ್ಣರಾದ ಎಸ್ಸಿ / ಎಸ್ಟಿ ಬಾಲಕಿಯರು ವಿತ್ತೀಯ ಪ್ರೋತ್ಸಾಹ ಪಡೆಯಲು ಅರ್ಹರಾಗಿದ್ದಾರೆ.
ಕಸ್ತೂರಿ ಬಾ ಗಾಂಧಿ ಬಾಲಿಕಾ ವಿದ್ಯಾಲಯದಿಂದ ಎಂಟನೇ ತರಗತಿಯಲ್ಲಿ ಉತ್ತೀರ್ಣರಾಗಿ ರಾಜ್ಯ / ಯುಟಿ ಸರ್ಕಾರ, ಸರ್ಕಾರಿ ಅನುದಾನಿತ ಅಥವಾ ಸ್ಥಳೀಯ ಸಂಸ್ಥೆಯ ಶಾಲೆಗಳಲ್ಲಿ ಒಂಬತ್ತನೇ ತರಗತಿಗೆ ದಾಖಲಾದ ಎಲ್ಲ ಬಾಲಕಿಯರಿಗೂ ಇದರ ಪ್ರಯೋಜನ ಸಿಗುತ್ತದೆ.
ಒಂಬತ್ತನೇ ತರಗತಿಗೆ ಸೇರ್ಪಡೆಗೊಳ್ಳಲು ಅರ್ಜಿದಾರರು 16 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು
ಆಯ್ದ ಅಭ್ಯರ್ಥಿಗಳಿಗೆ ರೂ. 3,000 ಅನ್ನು ಸ್ಥಿರ ಠೇವಣಿಯಾಗಿ ಒದಗಿಸಲಾಗುತ್ತದೆ, ಇದನ್ನು ವಿದ್ಯಾರ್ಥಿನಿಯು 10ನೇ ಬೋರ್ಡ್ ಪರೀಕ್ಷೆಗಳಲ್ಲಿ ಉತ್ತೀರ್ಣಳಾಗಿ 18 ವರ್ಷ ದಾಟಿದ ನಂತರ ಹಿಂಪಡೆಯಬಹುದು.
ಹೆಣ್ಣು ಮಗುವಿಗಾಗಿ ರಾಜ್ಯ ಸರ್ಕಾರದ ಯೋಜನೆಗಳು
ಅನೇಕ ರಾಜ್ಯಗಳು ಹೆಣ್ಣು ಮಕ್ಕಳಿಗಾಗಿ ತಮ್ಮದೇ ಆದ ಕಲ್ಯಾಣ ಯೋಜನೆಗಳನ್ನು ಪರಿಚಯಿಸಿವೆ, ಇದನ್ನು ಕೇಂದ್ರ ಸರ್ಕಾರದ ಯೋಜನೆಗಳ ಜೊತೆಗೂ ಪಡೆಯಬಹುದು. ಜನಪ್ರಿಯ ರಾಜ್ಯ ಆಧಾರಿತ ಕೆಲವು ಯೋಜನೆಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ:
🔹 ಆಂಧ್ರಪ್ರದೇಶ ಮತ್ತು ತೆಲಂಗಾಣ – ಹೆಣ್ಣು ಮಕ್ಕಳ ರಕ್ಷಣಾ ಯೋಜನೆ
🔹 ತಮಿಳುನಾಡು-ಶಿವಗಾಮಿ ಅಮ್ಮಯರ್ ಮೆಮೋರಿಯಲ್ ಗರ್ಲ್ ಚೈಲ್ಡ್ ಪ್ರೊಟೆಕ್ಷನ್ ಸ್ಕೀಮ್
🔹 ಮಧ್ಯಪ್ರದೇಶ-ಲಾಡ್ಲಿ ಲಕ್ಷ್ಮೀ ಯೋಜನಾ
🔹 ಹರಿಯಾಣ-ಲಾಡ್ಲಿ ಯೋಜನೆ
🔹 ಒರಿಸ್ಸಾ-ಕಿಶೋರಿ ಶಕ್ತಿ ಯೋಜನಾ
🔹 ಮಹಾರಾಷ್ಟ್ರ-ಮಜ್ಹಿ ಕನ್ಯಾ ಭಾಗ್ಯಶ್ರೀ
🔹 ಪಶ್ಚಿಮಬಂಗಾಳ- ಕನ್ಯಾಶ್ರೀ ಪ್ರಕಲ್ಪ
🔹 ಕರ್ನಾಟಕ-ಭಾಗ್ಯಲಕ್ಷ್ಮೀ ಯೋಜನೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.