ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಭದ್ರತಾ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ತೀವ್ರಗತಿಯಲ್ಲಿ ಬಲಿಷ್ಠಗೊಳಿಸುತ್ತಿದೆ. ಈಗಾಗಲೇ ಅತ್ಯಧಿಕ ಸಂಖ್ಯೆಯ ಸೈನಿಕರನ್ನು ಅಲ್ಲಿ ನಿಯೋಜನೆಗೊಳಿಸಲಾಗಿದ್ದು, ಅಮರನಾಥ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದ್ದು ತೀವ್ರ ಕುತೂಹಲಗಳಿಗೆ ಎಡೆ ಮಾಡಿಕೊಟ್ಟಿದೆ. ಇನ್ನೊಂದೆಡೆ ಕಿಸ್ತ್ವಾರ ಜಿಲ್ಲೆಯಲ್ಲಿ ನಡೆಯುತ್ತಿದ್ದ 43 ದಿನಗಳ ಮಕೈಲ್ ಮಾತಾ ಯಾತ್ರೆಯನ್ನೂ ರದ್ದುಪಡಿಸಲಾಗಿದೆ. ರ್ಯಾಪಿಡ್ ಆ್ಯಕ್ಷನ್ ಪೋರ್ಸ್ಗಳನ್ನು ಅಲ್ಲಿ ನಿಯೋಜನೆಗೊಳಿಸಲಾಗಿದೆ.
ಜುಲೈ 25ರಂದು ಆರಂಭವಾಗಿದ್ದ ಈ ಯಾತ್ರೆ ಸೆಪ್ಟಂಬರ್ 5ಕ್ಕೆ ಮುಕ್ತಾಯವಾಗಬೇಕಿತ್ತು. ಆದರೆ ಕಿಸ್ತ್ವಾರದ ಜಿಲ್ಲಾಧಿಕಾರಿ ಯಾತ್ರೆಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಇನ್ನೊಂದೆಡೆ ಶ್ರೀನಗರ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಓದುತ್ತಿರುವ ಸ್ಥಳಿಯರಲ್ಲದ ವಿದ್ಯಾರ್ಥಿಗಳನ್ನು ಕಾಲೇಜು ಬಿಟ್ಟು ಮನೆಗಳಿಗೆ ತೆರಳುವಂತೆ ಸೂಚಿಸಲಾಗಿದೆ. ಮುಂದಿನ ಆದೇಶ ಬರುವವರೆಗೂ ಇಲ್ಲಿನ ತರಗತಿಗಳನ್ನು ರದ್ದುಪಡಿಸಲು ಸೂಚನೆಯನ್ನು ನೀಡಲಾಗಿದೆ.
ಪ್ರಸ್ತುತ ಶ್ರೀನಗರವನ್ನು ಭದ್ರತಾ ಪಡೆಗಳ ಹದ್ದಿನ ಕಣ್ಗಾವಲಲ್ಲಿ ಇರಿಸಲಾಗಿದ್ದು, ಶೀಘ್ರದಲ್ಲೇ ಅಲ್ಲಿ ಇಂಟರ್ನೆಟ್ ಸೇವೆ ಕೂಡ ಸ್ಥಗಿತಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಇಂದು ಮಧ್ಯಾಹ್ನ ರ್ಯಾಪಿಡ್ ಆ್ಯಕ್ಷನ್ ಫೋರ್ಸ್ (RAF) ಜಮ್ಮುವಿಗೆ ಆಗಮಿಸಿದ್ದು ಇನ್ನಷ್ಟು ಕುತೂಹಲಗಳಿಗೆ ಕಾರಣವಾಗಿದೆ.
ಇನ್ನೊಂದೆಡೆ, ಪ್ರವಾಸಿಗರನ್ನು ಮತ್ತು ಯಾತ್ರಿಕರನ್ನು ವಾಪಸ್ ಹೋಗುವಂತೆ ಸರ್ಕಾರ ಸೂಚಿಸಿದ್ದರಿಂದ ವಿಮಾನ ನಿಲ್ದಾಣದಲ್ಲಿ ಭಾರೀ ಜನಜಂಗುಳಿ ಏರ್ಪಟ್ಟಿದ್ದು, ಟಿಕೆಟಿಗಾಗಿ ಜನ ಮುಗಿಬೀಳುತ್ತಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರು, “ಪಡೆಗಳ ನಿಯೋಜನೆಯನ್ನು ಬೇರೆ ಯಾವ ವಿಷಯಗಳಿಗೂ ತಳುಕು ಹಾಕುವ ಅಗತ್ಯವಿಲ್ಲ. ಪಡೆಗಳ ನಿಯೋಜನೆ ಬಗ್ಗೆ ಯಾವುದೇ ಆತಂಕಪಡುವ ಅಗತ್ಯವಿಲ್ಲ. ಸಾಂವಿಧಾನಿಕ ತಿದ್ದುಪಡಿಗಳಲ್ಲಿನ ಬದಲಾವಣೆಯ ಉದ್ದೇಶವೂ ಸಧ್ಯಕ್ಕೆ ಇಲ್ಲ” ಎಂದಿದ್ದಾರೆ.
ಎಲ್ಲಾ ಪಕ್ಷಗಳು ಮತ್ತು ಅದರ ಬೆಂಬಲಿಗರು ಯಾವುದೇ ವದಂತಿಗಳಿಗೆ ಕಿವಿಗೊಡದೆ ಶಾಂತವಾಗಿರಬೇಕು ಎಂದು ಅವರು ಕರೆ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.