ನವದೆಹಲಿ: ಕೋಲ್ಕತ್ತ ಪೊಲೀಸ್ ಕಮಿಷನರ್ ರಾಜೀವ್ ಕುಮಾರ್ ಅವರು ಸಿಬಿಐ ಮುಂದೆ ವಿಚಾರಣೆಗೆ ಹಾಜರಾಗಬೇಕು ಎಂದು ಸುಪ್ರೀಂಕೋರ್ಟ್ ನೀಡಿದ ತೀರ್ಪನ್ನು ಬಿಜೆಪಿ ಸ್ವಾಗತಿಸಿದ್ದು, ಇದು ಸಿಬಿಐಗೆ ಸಿಕ್ಕ ನೈತಿಕ ಜಯ ಎಂದು ವಿಶ್ಲೇಷಿಸಿದೆ.
ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಪಟ್ಟಂತೆ ಸಿಬಿಐ ಮುಂದೆ ವಿಚಾರಣೆಗೆ ಹಾಜರಾಗಬೇಕು ಎಂದು ಸುಪ್ರೀಂಕೋರ್ಟ್, ರಾಜೀವ್ ಕುಮಾರ್ ಅವರಿಗೆ ಆದೇಶಿಸಿದೆ. ಮೇಘಾಲಯದ ರಾಜಧಾನಿ ಶಿಲ್ಲಾಂಗ್ನಲ್ಲಿ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದೆ. ಆದರೆ, ವಿಚಾರಣೆಯ ಸಂದರ್ಭದಲ್ಲಿ ಬಂಧನದಂತಹ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಬಾರದು ಎಂದು ಆದೇಶಿಸಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರು, ‘ಈ ವಿಷಯವನ್ನು ರಾಜಕೀಯಗೊಳಿಸಬಾರದು, ಸುಪ್ರೀಂ ತೀರ್ಪು ತನಿಖಾ ಸಂಸ್ಥೆ ಸಿಬಿಐಗೆ ಸಿಕ್ಕ ಅತೀದೊಡ್ಡ ನೈತಿಕ ಜಯ’ ಎಂದಿದ್ದಾರೆ.
‘ಚಿಟ್ ಫಂಡ್ ಹಗರಣದಲ್ಲಿ ಲಕ್ಷಾಂತರ ಮಂದಿಯನ್ನು ದೋಚಲಾಯಿತು, ಅವರ ಹಣವನ್ನು ಲೂಟಿ ಮಾಡಲಾಯಿತು. ಈ ಪ್ರಕರಣದ ತನಿಖೆ ನಡೆಸಬೇಕಾದುದು ನೈತಿಕ ಜವಾಬ್ದಾರಿಯಲ್ಲವೆ? ’ ಎಂದು ಪ್ರಶ್ನಿಸಿರುವ ಪ್ರಸಾದ್, ಹಗರಣದ ಬಗ್ಗೆ ಮಮತಾ ಅವರ ಮೌನವನ್ನು ಪ್ರಶ್ನಿಸಿದ್ದಾರೆ.
ತನಿಖೆ ನ್ಯಾಯಸಮ್ಮತವಾದ ರೀತಿಯಲ್ಲಿ ನಡೆಯಬೇಕು, ಶಿಲ್ಲಾಂಗ್ನಲ್ಲಿ ಸಿಬಿಐ ಮುಂದೆ ಸುಪ್ರೀಂ ಆದೇಶದಂತೆ ಕೋಲ್ಕತ್ತಾ ಪೊಲೀಸ್ ಕಮಿಷನರ್ ಹಾಜರಾಗಬೇಕು ಎಂದಿದ್ದಾರೆ.
ಪಶ್ಚಿಮಬಂಗಾಳದ ಬಿಜೆಪಿ ಮುಖ್ಯಸ್ಥ ಕೈಲಾಸ್ ವಿಜಯವರ್ಗೀಯ ಅವರು ಟ್ವಿಟ್ ಮಾಡಿ, ‘ಸುಪ್ರೀಂ ತೀರ್ಪು ಪ್ರಜಾಪ್ರಭುತ್ವದ ವಿಜಯವಾಗಿದೆ, ಮಮತಾ ಬ್ಯಾನರ್ಜಿಯವರು ತಕ್ಷಣವೇ ರಾಜೀನಾಮೆಯನ್ನು ಸಲ್ಲಿಸಬೇಕು. ಪೊಲೀಸ್ ಕಮಿಷನರ್ ಅವರು ಸಿಬಿಐ ವಿಚಾರಣೆಗೆ ಹಾಜರಾಗದಂತೆ ತಡೆಯುವುದೇ ಮಮತಾ ಅವರ ಧರಣಿಯ ಉದ್ದೇಶವಾಗಿದೆ. ಶಾರದಾ ಚಿಟ್ ಫಂಡ್ ಹಗರಣದಲ್ಲಿ ಹಣ ಕಳೆದುಕೊಂಡವರಿಗೆ ಮರಳಿ ಹಣ ದೊರಕಿಸಲು ಮಮತಾ ಧರಣಿ ನಡೆಸುವುದನ್ನು ನೋಡಲು ದೇಶದ ಜನ ಬಯಸುತ್ತಿದ್ದಾರೆ’ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.