ಮಂಗಳೂರು ಲಿಟ್ ಫೆಸ್ಟ್ನ ಎರಡನೆಯ ದಿನ ಮಂಥನ ಸಭಾಂಗಣ ಕವಿತೆಗಳ ಸಂಗಮಕ್ಕೆ ಸಾಕ್ಷಿಯಾಯಿತು. ನಾಡಿನ ಖ್ಯಾತ ಕವಿಗಳು ಭಾಗವಹಿಸಿದ್ದ ಕವಿಗೋಷ್ಠಿಯಲ್ಲಿ ಪ್ರತಿ ಐದು ನಿಮಿಷಕ್ಕೊಮ್ಮೆ ಕರತಾಡನಗಳು ಮೊಳಗುತ್ತಿದ್ದವು.
ಸುಬ್ರಾಯ ಚೊಕ್ಕಾಡಿಯವರು ಅಧ್ಯಕ್ಷತೆ ವಹಿಸಿದ್ದ ಕವಿಗೋಷ್ಠಿಯಲ್ಲಿ ಧನಂಜಯ ಕುಂಬ್ಳೆಯವರ ಮೀಟೂ, ನಂದಿನಿ ಹೆದ್ದುರ್ಗ ಅವರ ನೀಲಿ, ಡಾ. ವಸಂತಕುಮಾರ್ ಪೆರ್ಲ ಅವರ ಭೋಜರಾಜನ ಸಿಂಹಾಸನ ಕವಿತೆಗಳು ಸಭಿಕರ ಗಮನಸೆಳೆದವು.
ತಮ್ಮ ತುಂಟತನದ ಲವಲವಿಕೆಯ ಧಾಟಿಯ ಕವಿತೆಗಳಿಂದಲೇ ಜನಮನ ಗೆದ್ದ ಹಿರಿಯ ಕವಿ ಬಿ.ಆರ್.ಲಕ್ಷ್ಮಣ ರಾವ್, ನವಿಲು ಮತ್ತು ಮುಳ್ಳುಹಂದಿಗಳನ್ನು ಒಂದಾಗಿಸಿ ತಮ್ಮದೇ ರೀತಿಯಲ್ಲಿ ಐಡಿಯಾ ಆಫ಼್ ಭಾರತ್ ಪರಿಕಲ್ಪನೆಯನ್ನು ತೆರೆದಿಟ್ಟರು. ಅವರ ಟ್ವಿಂಕಲ್ ಮತ್ತು ಅಂಕಲ್ ಕವಿತೆ ಸಭಿಕರನ್ನು ನಗೆಗಡಲಲ್ಲಿ ತೇಲಿಸುವುದರ ಜೊತೆಗೆ ಗಂಭೀರ ಚಿಂತನೆಗೆ ಹಚ್ಚಿತು. ಅವರ ಹಿಂದುತ್ವ ಕವಿತೆ ಎಲ್ಲರ ಗಮನ ಸೆಳೆಯಿತು.
ಹನಿಗವನಗಳ ರಾಜ ಎಂದೇ ಪ್ರಖ್ಯಾತರಾದ ಡುಂಡಿರಾಜ್ ಅವರು ಐಡಿಯಾ ಆಫ಼್ ಭಾರತ್ ಪರಿಕಲ್ಪನೆಯ ಗಂಭೀರ ಕವಿತೆಯೊಂದನ್ನು ಓದಿದಾಗ ಸಭಿಕರು ಅಚ್ಚರಿಗೊಳಗಾದರು. ನಂತರ ಅವರ ಹನಿಗವಿತೆಗಳನ್ನು ಕೇಳಿದ ಸಭಿಕರು ನಿಮಿಷಕ್ಕೊಮ್ಮೆ ಬಿದ್ದು ಬಿದ್ದು ನಕ್ಕರು.
ಸುಬ್ರಾಯಚೊಕ್ಕಾಡಿಯವರ ಅಧ್ಯಕ್ಷೀಯ ಭಾಷಣ ಮತ್ತು ಕವಿತೆಗಳ ವಾಚನದೊಂದಿಗೆ ಕವಿಗೋಷ್ಠಿ ಮುಕ್ತಾಯವಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.