ಬದಿಯಡ್ಕ : ಸ್ವಾರ್ಥ ಲಾಲಸೆಗಳು ತುಂಬಿ ಜನರ ಮನಸ್ಸುಗಳು ವೈರುಧ್ಯವಾಗಿ ಚಿಂತಿಸುವ ಇಂದಿನ ಕಾಲಘಟ್ಟದಲ್ಲಿ ಬಡವರ,ದೀನರ ಸೇವೆಯನ್ನು ಜೀವನದ ಪಣವಾಗಿ ಸ್ವೀಕರಿಸಿ ಅಶಕ್ತರ ಪಾಲಿನ ಬೆಳಕಾಗಿರುವ ಸಾಯಿರಾಂ ಗೋಪಾಲಕೃಷ್ಣ ಭಟ್ ರವರು ಈ ಕಾಲದ ಅವತಾರ ಪುರುಷರೆನ್ನಲು ಅಡ್ಡಿಯಿಲ್ಲ. ಇತರರಿಗೆ ಮಾದರಿಯಾಗಿರುವ ಭಟ್ ರವರ ಜೀವನ ಮೌಲ್ಯ ನಾಡಿನ, ರಾಷ್ಟ್ರದ ಕೀರ್ತಿಯನ್ನು ಬೆಳಗಿಸಿ ಹೆಮ್ಮೆಯೆನಿಸಿದ್ದಾರೆಂದು ಕರ್ನಾಟಕ ಸರಕಾರದ ವಿಧಾನ ಪರಿಷತ್ ಸಭಾಪತಿ ಡಿ.ಎಚ್ ಶಂಕರಮೂರ್ತಿ ಅಭಿಪ್ರಾಯಪಟ್ಟರು.
ಅವರು ಕಿಳಿಂಗಾರು ಸಾಯಿರಾಂ ಗೋಪಾಲಕೃಷ್ಣ ಭಟ್ ಸಂಕಷ್ಟದಲ್ಲಿರುವವರಿಗೆ ನೀಡುವ 228 ಹಾಗೂ 229 ನೇ ಮನೆಗಳ ಕೀಲಿಕೈಯನ್ನು ಹಸ್ತಾಂತರಿಸಿ ಮಾತನಾಡುತ್ತಿದ್ದರು. ಉಪಸ್ಥಿತರಿದ್ದ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮಾತನಾಡಿ ಸಾಮಾಜಿಕವಾದ ಕಳಕಳಿಯುಳ್ಳ ವಿಶಾಲ ಮನೋಭಾವದ ವ್ಯಕ್ತಿಗಳ ವಿರಳ ಸನ್ನಿವೇಶದಲ್ಲಿ ಸಾಯಿರಾಂ ಗೋಪಾಲಕೃಷ್ಣ ಭಟ್ ನಮ್ಮಿದಿರು ವಿಶೇಷವಾಗಿ ಕಂಡುಬರುತ್ತಾರೆ.ಆದರೆ ಅವರು ನಡೆದು ತೋರಿಸಿದ ಧರ್ಮ ಮಾರ್ಗವನ್ನು ಅನುಸರಿಸಿ ಸೇವೆಯಲ್ಲಿ ದೇವರನ್ನು ಕಾಣುವ ಮನೋಭಾವ ನಮ್ಮಲ್ಲೂ ಜಾಗೃತಗೊಳ್ಳಬೇಕು.ತನ್ಮೂಲಕ ಸಮಗ್ರ ಅಭಿವೃದ್ದಿಯ ಕಲ್ಪನೆಯ ಸಾಕಾರ ಸಾಧ್ಯವೆಂದು ತಿಳಿಸಿದರು.
ಕರ್ನಾಟಕ ಜಾನಪದ ಪರಿಷತ್ ಕೇರಳ ಗಡಿನಾಡ ಘಟಕಾಧ್ಯಕ್ಷ ಕೇಶವ ಪ್ರಸಾದ ನಾಣಿತ್ತಿಲು,ಉಪಾಧ್ಯಕ್ಷ ಪ್ರೊ.ಎ.ಶ್ರೀನಾಥ್,ಬದಿಯಡ್ಕ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಕೆ.ಎನ್ ಕೃಷ್ಣ ಭಟ್,ಲಕ್ಷ್ಮಣ ಪ್ರಭು ಕುಂಬಳೆ,ಯಜಮಾನ್ ಟಿ.ವರದರಾಜ ಪೈ,ಶಾರಾದಾ ಸಾಯಿರಾಂ ಗೋಪಾಲಕೃಷ್ಣ ಭಟ್,ಶೀಲಾ ಕೆ.ಎನ್ ಭಟ್,ಕರ್ನಾಟಕ ಸರಕಾರದ ಮಾರ್ಕೆಟಿಂಗ್ ಕನ್ಸಲ್ಟೆಂನ್ಸಿ ಅಧ್ಯಕ್ಷ ಎಲ್.ಎನ್ ಮೂರ್ತಿ ಮೊದಲಾದವರು ಉಪಸ್ಥಿತರಿದ್ದರು.
ಕವಿತಾ ಎಣ್ಮಕಜೆ ಹಾಗೂ ನಿಶಾ ಕುಮಾರಮಂಗಲ ರವರಿಗೆ ಮನೆಯ ಕೀಲಿಕೈ ಹಸ್ತಾಂತರಿಸಲಾಯಿತು.ಜೊತೆಗೆ ಸಾಯಿರಾಂ ಭಟ್ ರವರ ಸುಪುತ್ರ,ಬದಿಯಡ್ಕ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಕೆ.ಎನ್ ಕೃಷ್ಣ ಭಟ್ ಕೊಡಮಾಡಿದ 6 ಉಚಿತ ಹೊಲಿಗೆ ಯಂತ್ರಗಳನ್ನು ಗಿರಿಜಾ,ದಿವ್ಯಾ,ಲಲಿತಾ,ಪವಿತ್ರ,ರೇಷ್ಮಾ ಹಾಗೂ ರೋಹಿಣಿಯವರಿಗೆ ಹಸ್ತಾಂತರಿಸಲಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.