ಗದಗ: ಕಪ್ಪತ್ತಗುಡ್ಡವನ್ನು ಸಂರಕ್ಷಿತ ಮೀಸಲು ಅರಣ್ಯ ಪ್ರದೇಶವಾಗಿ ಮರು ಘೋಷಿಸಬೇಕೆಂದು ಒತ್ತಾಯಿಸಿ ಆರಂಭಗೊಂಡ ಸತ್ಯಾಗ್ರಹಕ್ಕೆ ಸಾಹಿತಿಗಳು, ಚಿಂತಕರು, ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ವಿವಿಧ ಸಂಘಟನೆಗಳಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.
ಕಪ್ಪತಗುಡ್ಡ ಸಂರಕ್ಷಣೆಗೆ ಒತ್ತಾಯಿಸಿ, ತೋಂಟದಾರ್ಯ ಶ್ರೀಗಳ ನೇತೃತ್ವದಲ್ಲಿ ಇಲ್ಲಿನ ಗಾಂಧಿ ವೃತ್ತದಲ್ಲಿ ನಡೆಯುತ್ತಿರುವ ಅಹೋರಾತ್ರಿ ಉಪವಾಸ ಸತ್ಯಾಗ್ರಹ 3 ನೇ ದಿನಕ್ಕೆ ಕಾಲಿಟ್ಟಿದೆ.
ಸಾಮಾಜಿಕ ಹೋರಾಟಗಾರ ಎಸ್.ಆರ್. ಹಿರೇಮಠ್, ನಾರಾಯಣ ಸ್ವಾಮಿ ಹಾಗೂ ಇತರರು ಸತ್ಯಾಗ್ರಹದ ಮುಂಚೂಣಿಯಲ್ಲಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅವರೂ ಈ ಹೋರಾಟಕ್ಕೆ ಬೆಂಬಲ ಸೂಚಿಸಿ ಪತ್ರ ಬರೆದಿದ್ದಾರೆ. ತೋಂಟದಾರ್ಯ ಶ್ರೀಗಳ ನೇತೃತ್ವದಲ್ಲಿ ನಡೆಯುತ್ತಿರುವ ಈ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದ್ದು, ಅನಿವಾರ್ಯ ಕಾರಣಗಳಿಂದ ಧರಣಿ ಸ್ಥಳದಲ್ಲಿ ನನಗೆ ಭಾಗಿಯಾಗಲು ಆಗುತ್ತಿಲ್ಲ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ರಾಜ್ಯಮಟ್ಟದಲ್ಲಿಯೂ ಈ ಹೋರಾಟ ರೂಪುಗೊಳ್ಳಬೇಕಿದ್ದು, ಈ ಹೋರಾಟಕ್ಕೆ ಸದಾ ಬೆಂಬಲ ನೀಡುವೆ. ಕಪ್ಪತ್ತಗುಡ್ಡ ಸಂರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಅವರು ತಿಳಿಸಿದ್ದಾರೆ.
ಹೋರಾಟದಲ್ಲಿ ಪಾಲ್ಗೊಂಡಿದ್ದ ಪ್ರಭುಗೌಡ ಪಾಟೀಲ್, ಪ್ರತಿಮಾ ಅವರು ಅಸ್ವಸ್ಥರಾಗಿದ್ದಾರೆ. ದೇಹದಲ್ಲಿ ಸಕ್ಕರೆ ಅಂಶ ಕಡಿಮೆಯಾಗಿ ಅಸ್ವಸ್ಥರಾದ ಪ್ರಭುಗೌಡ ಪಾಟೀಲರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಹೋರಾಟದ ಸ್ಥಳದಲ್ಲಿ ವೈದ್ಯರು, ಪೊಲೀಸರು ಬೀಡು ಬಿಟ್ಟಿದ್ದಾರೆ. ವೈದ್ಯರು ಹೋರಾಟಗಾರರ ಆರೋಗ್ಯ ತಪಾಸಣೆ ನಡೆಸಿದ್ದಾರೆ.
ಮೂರು ದಿನಗಳ ಅಹೋರಾತ್ರಿ ಸತ್ಯಾಗ್ರಹಕ್ಕೆ ಭಜನೆ, ಸಂಗೀತ, ಕ್ರಾಂತಿಗೀತೆಗಳೂ ಸಾಥ್ ನೀಡಿದ್ದು, ಹೋರಾಟಗಾರರಲ್ಲಿ ಇನ್ನಷ್ಟು ಹುರುಪು ತುಂಬಿವೆ. ದಿನದಿಂದ ದಿನಕ್ಕೆ ಜನಾಂದೋಲನವಾಗಿ ರೂಪುಗೊಳ್ಳುತ್ತಿರುವ ಕಪ್ಪತ್ತಗುಡ್ಡ ಉಳಿಸಿ ಸತ್ಯಾಗ್ರಹ ಸರ್ಕಾರದ ಕಣ್ಣು ತೆರೆಸುವುದೋ ಹೇಗೆ ಕಾದು ನೋಡಬೇಕಿದೆ.
ಮಾರಲು ಯತ್ನ
ಕಪ್ಪತ್ತಗುಡ್ಡವನ್ನು ರಾಜಕಾರಣಿಗಳು ಮಾರಲು ಯತ್ನಿಸುತ್ತಿದ್ದಾರೆ. ಕಪ್ಪತ್ತಗುಡ್ಡವನ್ನು ಎತ್ತಿಡಲು ಸಾಧ್ಯವಿದ್ದರೆ ರಾಜಕಾರಣಿಗಳು ಇದನ್ನು ವಿಧಾನಸೌಧದ ಪಕ್ಕದಲ್ಲೇ ಇಟ್ಟುಕೊಳ್ಳುತ್ತಿದ್ದರು.
-ಚನ್ನವೀರ ಕಣವಿ,
ಚೆಂಬೆಳಕಿನ ಕವಿಜಾಗೃತಿ ಜಾಥಾ
ಅಹೋರಾತ್ರಿ ಧರಣಿ ಇಂದು ಸಂಜೆಗೆ ಮುಕ್ತಾಯವಾಗಲಿದೆ. ಸರ್ಕಾರ ಅಷ್ಟರೊಳಗೆ ತನ್ನ ನಿಲುವು ಪ್ರಕಟಿಸದಿದ್ದಲ್ಲಿ, ಸಿಎಂ ತವರು ಸಿದ್ದರಾಮಯ್ಯನ ಹುಂಡಿಯಿಂದ (ಏ.15 ರಿಂದ ಮೇ.1 ರವರೆಗೆ) ಹಾವೇರಿ ವರೆಗೆ ಮತದಾರರಲ್ಲಿ ಜಾಗೃತಿ ಮೂಡಿಸುವ ಜಾಥಾ ಹಮ್ಮಿಕೊಳ್ಳಲಾಗುವುದು.
-ಎಸ್.ಆರ್.ಹಿರೇಮಠ, ಮುಖ್ಯಸ್ಥರು
ಸಮಾಜ ಪರಿವರ್ತನಾ ಸಮುದಾಯ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.