ಮಂಗಳೂರು: ಗಿಡ ಮರ ಮತ್ತು ಗೋವು ಇವೆರಡೂ ಮಾನವ ಬದುಕಿನಲ್ಲಿ ಎರಡು ಕಣ್ಣುಗಳಿದ್ದಂತೆ. ಅವುಗಳನ್ನು ಕಾಪಾಡಿಕೊಳ್ಳಬೇಕಾದ್ದು ನಮ್ಮೆಲ್ಲರ ಕರ್ತವ್ಯ ಎಂದು ಮಂಗಳೂರಿನ ಶಾರದಾ ವಿದ್ಯಾಸಂಸ್ಥೆಗಳ ಅಧ್ಯಕ್ಷರಾದ ಪ್ರೊ. ಎಂ.ಬಿ. ಪುರಾಣಿಕ್ ಹೇಳಿದರು.
ಶಾರದಾ ವಿದ್ಯಾಲಯದಲ್ಲಿ ಸಮಾಜಮುಖೀ ವಿದ್ಯಾರ್ಥಿಸಂಘ ‘ನಂದನ’ ವನ್ನು ಉದ್ಘಾಟಿಸಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಾ, ನಮಗೂ ಪರಿಸರಕ್ಕೂ ಇರುವ ಸಂಬಂಧಗಳ ವೈಜ್ಞಾನಿಕ ವಿಶ್ಲೇಷಣೆಯನ್ನು ಮಾಡಿದರು. ‘ನಮ್ಮ ಬದುಕಿಗೆ ಅನಿವಾರ್ಯವಾದ ಪರಿಸರದ ಬಗ್ಗೆ ಕಾಳಜಿ ಹಾಗೂ ಪ್ರೀತಿಗಳನ್ನು ಬಾಲ್ಯದಿಂದಲೇ ಮೈಗೂಡಿಸಿಕೊಳ್ಳಬೇಕು. ಗಿಡ-ಮರಗಳಿಗೂ ನಮ್ಮಂತೆಯೇ ನೋವು-ನಲಿವುಗಳಿಗೆ ಸ್ಪಂದಿಸುವ ಗುಣವಿದೆ. ನಮ್ಮ ಪೂರ್ವಜರು ಇದನ್ನು ಅರ್ಥ ಮಾಡಿಕೊಂಡು ನಮಗೂ ಹೇಳುತ್ತಿದ್ದರು. ಅವರ ಪರಿಸರ ಪ್ರೇಮದ ಪರಿಣಾಮವಾಗಿ ನಾವಿಂದು ಉಸಿರಾಡುತ್ತಿದ್ದೇವೆ. ಮನುಷ್ಯನಿಲ್ಲದಿದ್ದರೂ ಪರಿಸರ ಇರಬಲ್ಲುದು; ಪರಿಸರವಿಲ್ಲದೆ ಮನುಷ್ಯನಿಲ್ಲ ಎಂಬುದನ್ನು ಮರೆಯಬಾರದು. ಹಿಂದೆ ಅಷ್ಟಮಿ-ಚೌತಿ ಮುಂತಾದ ಸಂದರ್ಭಗಳಲ್ಲಿ ಗಿಡ ನೆಡುವ ಸಂಪ್ರದಾಯವಿತ್ತು. ಈಗಲೂ ಅಷ್ಟೆ ನಮ್ಮ ನಮ್ಮ ಮನೆಗಳ ಸುತ್ತ-ಮುತ್ತ ಸಾಧ್ಯವಾದಷ್ಟೂ ಗಿಡಗಳನ್ನು ನೆಟ್ಟು ಬೆಳೆಸೋಣ. ತನ್ಮೂಲಕ ಈ ಭೂಮಿಯನ್ನು ‘ನಂದನವನ’ವನ್ನಾಗಿಸೋಣ ಎಂದು ಹೇಳುತ್ತಾ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಶಾರದಾ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿಯ ಟ್ರಸ್ಟಿಗಳಾದ ಶ್ರೀ ಪ್ರದೀಪ ಕುಮಾರ ಕಲ್ಕೂರಾ ಅವರು ಮಾತನಾಡುತ್ತಾ ಹಿಂದಿನ ಕಾಲದಲ್ಲಿ ವನಮಹೋತ್ಸವ ಮುಂತಾದ ಕಾರ್ಯಕ್ರಮಗಳಿಲ್ಲ. ಅವುಗಳ ಅವಶ್ಯಕತೆಯೂ ಇರಲಿಲ್ಲ. ಗಿಡ-ಮರ-ಕೃಷಿಗಳು ನಮ್ಮ ಜೀವನ ಕ್ರಮದಲ್ಲಿ ಬೆರೆತು ಹೋಗಿತ್ತು. ‘ಸುಜಲಾಂ ಸುಫಲಾಂ ಮಲಯಜ ಶೀತಲಾಂ ಸಸ್ಯ ಶ್ಯಾಮಲಾಂ’ ಎಂದು ಹಾಡಿದರೆ ಸಾಲದು ಈ ಧರೆಯನ್ನು ಸಸ್ಯಶ್ಯಾಮಲೆಯನ್ನಾಗಿಸಬೇಕು ಎಂದು ಕರೆಯಿತ್ತರು.
ಶಾರದಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ| ಶ್ರೀಪತಿ ರಾವ್, ಶಾರದಾ ವಿದ್ಯಾಲಯದ ಪ್ರಾಂಶುಪಾಲರಾದ ಶ್ರೀಮತಿ ಸುನೀತಾ ವಿ ಮಡಿ, ಉಪ-ಪ್ರಾಂಶುಪಾಲರಾದ ಶ್ರೀ ದಯಾನಂದ ಕಟೀಲ್ ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಅಧ್ಯಾಪಕರಾದ ಶ್ರೀ ಸುಧಾಕರ ಶೆಟ್ಟಿ ಮತ್ತು ಶ್ರೀ ಸತ್ಯನಾರಾಯಣ ಭಟ್ರಕೋಡಿ ಅವರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಕು| ಶಿವಾನಿ ನಿರ್ವಹಿಸಿದರು.
ವಿದ್ಯಾರ್ಥಿಗಳಾದ ಶಶಾಂಕ್ ಸ್ವಾಗತಿಸಿ, ಕು| ಪ್ರತೀಕ್ಷಾ ಧನ್ಯವಾದವಿತ್ತರು. ಉದ್ಘಾಟನಾ ಸಮಾರಂಭದ ಬಳಿಕ ಶಾಲಾ ಉದ್ಯಾನವನದಲ್ಲಿ ಸುಮಾರು ೫೦ಕ್ಕಿಂತಲೂ ಹೆಚ್ಚು ಗಿಡಗಳನ್ನು ನೆಡಲಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.