ಮಂಗಳೂರು: ಬದುಕಿನಲ್ಲಿ ಯಶಸ್ಸು ಕಾಣಬೇಕಾದರೆ ನಮ್ಮೊಂದಿಗೆ ನಾವೇ ಸ್ಪರ್ಧೆಯೊಡ್ಡಿ ಮುನ್ನಡೆಯಬೇಕು. ಅನ್ಯರನ್ನು ದೂಷಿಸದ ಆರೋಗ್ಯಕರ ಸ್ಪರ್ಧೆ ನಮ್ಮದಾಗಬೇಕು. ಆಗ ಬದುಕು ಹಸನಾಗಲು ಸಾಧ್ಯ ಎಂದು ಮಣಿಪಾಲ ವಿಶ್ವವಿದ್ಯಾನಿಲಯದ ಮಾಜಿ ಕುಲಪತಿ ಡಾ.ಬಿ.ಎಂ.ಹೆಗ್ಡೆ ಹೇಳಿದರು.
ಕ್ರೀಡಾಭಾರತಿ ಮಂಗಳೂರು ವಿಭಾಗ ಹಾಗೂ ದ.ಕ.ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಮಂಗಳೂರು ಇದರ ಆಶ್ರಯದಲ್ಲಿ ಶುಕ್ರವಾರ ನಗರದ ಸಂಘನಿಕೇತನದಲ್ಲಿ ಆಯೋಜಿಸಿದ್ದ ಕ್ರೀಡಾಭಾರತಿ ಪ್ರತಿಭಾ ಪುರಸ್ಕಾರ ಹಾಗೂ ಜೀಜಾಬಾಯಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.
ದೈಹಿಕ ಶಿಕ್ಷಣ ಎಂಬುದು ಕೂಡ ಮನೋ ವಿಕಾಸದ ಮಾನಸಿಕ ಶಿಕ್ಷಣವೇ ಆಗಿದೆ. ದೇಹವೆಂಬ ಮನಸ್ಸು ಆರೋಗ್ಯಕರವಾಗಿದ್ದರೆ ಲವಲವಿಕೆ ಹೆಚ್ಚುತ್ತದೆ. ಸ್ಫರ್ಧೆ ಎಂಬ ಕಲ್ಪನೆಯನ್ನು ತಂದವರು ವಿದೇಶಿಯರು. ಭಾರತದಲ್ಲಿ ಅಂತಹ ಸಂಸ್ಕೃತಿ ಇರಲಿಲ್ಲ. ಎಲ್ಲರೂ ಸಮಾನವಾಗಿ ಜೊತೆಯಾಗಿ ಸಾಗಬೇಕು. ಜೊತೆಯಾಗಿಯೇ ಗೆಲುವು ಸಾಧಿಸಬೇಕು ಎಂಬ ಪರಿಕಲ್ಪನೆ ಈ ದೇಶದ್ದು ಎಂದರು.
ಒಲಿಂಪಿಕ್ಸ್ನಂತಹ ಕ್ರೀಡೆ ಆಯೋಜಿಸಿದರೆ ಅದೊಂದು ಹಣಗಳಿಕೆಯ ವಿಧಾನವೇ ಹೊರತು ಕ್ರೀಡೆಗೆ ಪ್ರೋತ್ಸಾಹ ಎಂಬುದನ್ನು ಒಪ್ಪಲು ಸಾಧ್ಯವಿಲ್ಲ.
ಇಂದು ವಿಶ್ವದಲ್ಲಿ ಸುಮಾರು 45 ಮಿಲಿಯದಷ್ಟು ಮಕ್ಕಳು ಒಂದು ಹೊತ್ತಿನ ಊಟವಿಲ್ಲದೆ ಬಳಲುತ್ತಿದ್ದಾರೆ. ಲೆಕ್ಕವಿಲ್ಲದ ಸಂಖ್ಯೆಯಲ್ಲಿ ಸಾವನ್ನಪ್ಪುತ್ತಿದ್ದಾರೆ. ಆದರೆ ಮಂಗಳ ಗೃಹಕ್ಕೆ ತೆರಳಲು 1 ಲಕ್ಷ ಕೋಟಿಯಷ್ಟು ಹಣವನ್ನು ನಾವು ವ್ಯಯಿಸುತ್ತೇವೆ. ಆ ಹಣವನ್ನೇ ಈ ಮಕ್ಕಳ ಉಳಿವಿಗೆ ಬಳಕೆಯಾಗಿದ್ದರೆ ಅದಕ್ಕೊಂದು ಅದಕ್ಕೊಂದು ಅರ್ಥವಿತ್ತು ಎಂದು ಬಿ.ಎಂ.ಹೆಗ್ಡೆ ವಿಷಾದಿಸಿದರು.
ಶಾಸಕ ಜೆ.ಆರ್.ಲೋಬೊ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕರಾವಳಿಯು ಹಲವಾರು ಪ್ರತಿಭೆಗಳಿಗೆ ಆಶ್ರಯದಾಣವಾಗಿದೆ. ಆದರೆ ಶೈಕ್ಷಣಿಕ ಗುಣಮಟ್ಟಕ್ಕೆ ಹೆಚ್ಚು ಒತ್ತು ಕೊಡುವ ಭರಾಟೆಯಲ್ಲಿ ಕ್ರೀಡೆಯನ್ನು ಮರೆಯಬಾರದು. ಮಕ್ಕಳಲ್ಲಿ ಹೆತ್ತವರು ಕ್ರೀಡಾ ಆಸಕ್ತಿಯನ್ನೂ ಬೆಳೆಸಿ ಪ್ರೋತ್ಸಾಹಿಸಬೇಕು ಎಂದರು.
ಕ್ರೀಡೆಯ ವಿವಿಧ ವಿಭಾಗಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಸಾಧಕರ ತಾಯಂದಿರಿಗೆ ಜೀಜಾಬಾಯಿ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಸಾಧಕರಾದ ಜಗದೀಶ್ ಕುಂಬ್ಳೆ ಮತ್ತು ಅವರ ಸೋಹದರಿ ಕಮಲ ಅವರಿಗೆ, ಅಭಿಷೇಕ್ ಶೆಟ್ಟಿ ಅವರ ತಾಯಿ ತುಳಸಿ ಶೆಟ್ಟಿ, ರಕ್ಷಿತ್ ಎಸ್ ಅವರ ತಾಯಿ ಗೀತಾ ಮತ್ತು ತಂದೆ ಶಂಕರ್, ಸಂಧ್ಯಾಸಿ.ಆರ್ ಅವರ ತಾಯಿ ಕಲಾವತಿ ಮತ್ತು ತಂದೆ ರಾಜು, ದೀಕ್ಷಾ ಕೆ. ಅವರ ತಾಯಿ ಪ್ರೇಮಾ ಮತ್ತು ತಂದೆ ಕೊರಗಪ್ಪ ಗೌಡ , ಎಸ್.ಬಿ. ಸುಪ್ರಿಯಾ ಅವರ ತಾಯಿ ಕೆ. ಸಿ. ವಾಣಿ ಮತ್ತು ಬಸವರಾಜುಎಸ್.ಎನ್ ಅವರಿಗೆ ಜೀಜಾಬಾಯಿ ಗೌರವ ನೀಡಿ ಸನ್ಮಾನಿಸಲಾಯಿತು.
ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ವಿಶೇಷ ಸಾಮರ್ಥ್ಯ ಮಕ್ಕಳಾದ ಧನಾನ್ ಜೆ. ಸಲ್ಡಾನಾ ಮತ್ತು ಮೊಯ್ದಿನ್ ತಸ್ವನ್ ಮೊಹ್ಮದ್ ಅವರನ್ನು ಸನ್ಮಾನಿಸಲಾಯಿತು. ನಿವೃತ್ತ ದೈಹಿಕ ಶಿಕ್ಷಕರಾದ ಸೇವಂತಿ, ತುಕರಾಮ ಹೊಳ್ಳ, ಚಿದಾನಂದ ರೈ, ಸುಧೀರ್ ಹೆಗ್ಡೆ, ಚಂದ್ರಶೇಖರ್ ರೈ ಆಗ್ನೆಸ್ ಗೋಮ್ಸ್, ರಾಘವ ವೈದ್ಯ, ಕೆ.ಹರಿಣಾಕ್ಷಿ, ರಮೇಶ್ ಕಾರಂತ್, ಜಯಶ್ರೀ, ಪೃಥ್ವಿರಾಜ್ ಜೈನ್, ಕರುಣಾಕ್ಷಿ ಅವರನ್ನು ಗೌರವಿಸಲಾಯಿತು.
ಖ್ಯಾತ ಕ್ರೀಡಾಪಟುವಾಗಿದ್ದು, ತರಬೇತುದಾರರಾಗಿ ಸೇವೆ ಸಲ್ಲಿಸುತ್ತಿರುವ ಸಾಧಕರಾದ ಪ್ರೇಮನಾಥ ಉಳ್ಳಾಲ್, ಲಕ್ಷ್ಮಣ್ ರೈ, ಮಹೇಶ್, ದೀನಾಮಣಿ, ಸುಮನಾ ಶ್ರೀಕಾಂತ್, ಪ್ರತೀಪ್ಕುಮಾರ್, ಡಿ.ಎಂ.ಅಸ್ಲಂ ಇವರಿಗೆ ಸೇವೇ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅಲ್ಲದೆ ಕ್ರೀಡಾ ಭಾರತಿಯ ಸಾಧಕರಾದ ಗೀತಾಬಾಯಿ, ಜಯಪ್ಪ ಲಮಾಣಿ, ಪ್ರಣಾಳಿ ಶೆಟ್ಟಿ, ಆರತಿ ಶೆಟ್ಟಿ, ರಾಜ್ ಕುಮಾರ್ ಕೋಟ್ಯಾನ್ ಇವರನ್ನು ಗೌರವಿಸಲಾಯಿತು.
ಅಲ್ಲದೆ ರಾಜ್ಯ ಮಟ್ಟದಲ್ಲಿಸಾಧನೆ ಮಾಡಿದ ವಿಶೇಷ ಮಕ್ಕಳು, ಸಿಬಿಎಸ್ಇ ಮತ್ತು ಐಸಿಎಸ್ಇ ಶಾಲೆಗಳ ವಿದ್ಯಾರ್ಥಿ ಸಾಧಕರಿಗೆ ಗೌರವ ಸಲ್ಲಿಸಲಾಯಿತು.
ದ.ಕ.ಜಿಲ್ಲಾಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅಧ್ಯಕ್ಷತೆ ವಹಿಸಿದ್ದರು. ಕ್ರೀಡಾಭಾರತಿಯ ಗೌರವಾಧ್ಯಕ್ಷ, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ಹೃದಯರೋಗ ತಜ್ಞ ಡಾ.ಮುಕುಂದ, ಡಾ.ಸತೀಶ್ ಭಂಡಾರಿ, ಆರೆಸ್ಸೆಸ್ಸ್ ಪ್ರಾಂತ ಸಹ ಸಂಘ ಚಾಲಕ್ ಡಾ.ಪಿ.ವಾಮನ್ ಶೆಣೈ, ಡಿಡಿಪಿಐ ವಾಲ್ಟರ್ ಡಿಮೆಲ್ಲೋ, ಪಾಲಿಕೆ ವಿಪಕ್ಷ ನಾಯಕಿ ರೂಪಾ ಡಿ.ಬಂಗೇರ, ರಾಜ್ಯ ಅಲ್ಪ ಸಂಖ್ಯಾತ ನಿಗಮದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಪ್ರಮುಖರಾದ ದಿವಾಕರ್, ಲೀಲಾಕ್ಷ ಕರ್ಕೇರ, ಕೇಶವ, ಅಲೋಶಿಯಸ್ ಡಿಸೋಜ, ಚಂದ್ರಶೇಖರ ಜಹಗೀರ್ದಾರ್, ದ.ಕ.ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಎಚ್.ನಾಯಕ್, ಕ್ರೀಡಾಭಾರತಿ ಸಂಯೋಜಕ ಭೋಜರಾಜ ಕಲ್ಲಡ್ಕ ಮತ್ತಿತರರು ಉಪಸ್ಥಿತರಿದ್ದರು. ಕ್ರೀಡಾ ಭಾರತಿ ಅಧ್ಯಕ್ಷ ಚಂದ್ರಶೇಖರ ರೈ ಸ್ವಾಗತಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.