ಮಂಗಳೂರು: ಯಕ್ಷಗಾನ ಕ್ಷೇತ್ರದಲ್ಲಿ ತೀರಾ ಬಡತನದಲ್ಲಿರುವ ಅಶಕ್ತ ಕಲಾವಿದರಿಗೆ ಸೂರು ಒದಗಿಸುವ ಕಾರ್ಯಕ್ಕೆ ಯಕ್ಷಧ್ರುವ ಪಟ್ಲ ಪೌಂಡೇಶನ್ ಟ್ರಸ್ಟ್ ಯೋಜನೆ ರೂಪಿಸಿದೆ.
ಇತ್ತೀಚೆಗೆ ಯಕ್ಷಧ್ರುವ ಪಟ್ಲ ಪೌಂಡೇಶನ್ ಟ್ರಸ್ಟ್ನ ಮಾಸಿಕ ಸಭೆ ಬಲ್ಲಾಲ್ಬಾಗ್ನಲ್ಲಿರುವ ಪತ್ತ್ಮುಡಿ ಸೌಧದಲ್ಲಿ ಜರಗಿತು. ಸಭೆಯ ಅಧ್ಯಕ್ಷತೆಯನ್ನು ಟ್ರಸ್ಟ್ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ವಹಿಸಿದ್ದರು. ಇತ್ತೀಚೆಗೆ ಮಂಗಳೂರು ಪುರಭವನದಲ್ಲಿ ಪಟ್ಲ ಪೌಂಡೇಶನ್ ಟ್ರಸ್ಟ್ನ ಕಾರ್ಯಕ್ರಮದಲ್ಲಿ ಅಶಕ್ತ ಕಲಾವಿದರಿಗೆ ಧನಸಹಾಯ ವಿತರಣೆಗೆ ನೀಡಿದ ಎಲ್ಲರ ಸಹಕಾರವನ್ನು ಸ್ಮರಿಸುತ್ತಾ ಮುಂದಿನ ದಿನಗಳಲ್ಲಿ ಕಡು ಬಡತನದಲ್ಲಿರುವ ಯಕ್ಷಗಾನ ಕ್ಷೇತ್ರದಲ್ಲಿರುವ ನಿವೇಶನ ರಹಿತ ವೃತ್ತಿ ಕಲಾವಿದರಿಗೆ ಮನೆ ಒದಗಿಸಿಕೊಡುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಿದರು.
ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮಾಂತರ ಪ್ರದೇಶದಲ್ಲಿ ಸುಮಾರು ಐದು ಎಕ್ರೆ ಜಾಗವನ್ನು ಖರೀದಿಸಿ ಸುಮಾರು 100 ಮನೆಗಳನ್ನು ನಿರ್ಮಿಸಿ ಬಡಕಲಾವಿದರ ಕುಟುಂಬಕ್ಕೆ ಹಸ್ತಾಂತರಿಸುವ ಕಾರ್ಯಕ್ಕೆ ಯೋಜನೆಯನ್ನು ಹಾಕಿಕೊಳ್ಳಲಾಗುವುದು ಎಂದರು.
ಯಕ್ಷಗಾನ ಕಲಾವಿದರು ಯಕ್ಷಗಾನದಲ್ಲೇ ಮುಂದುವರಿಯಬೇಕು. ಅವರ ಮಕ್ಕಳೂ ಯಕ್ಷಗಾನದತ್ತ ಆಕರ್ಷಿತರಾಗಬೇಕು ಎನ್ನುವ ಅಭಿಲಾಷೆಯನ್ನು ಹೊಂದಿದ್ದೇನೆ. ಇದಕ್ಕಾಗಿ ದಾನಿಗಳನ್ನು ಸಂಪರ್ಕಿಸಿ ಕಾರ್ಯಯೋಜನೆಗೆ ಮುಂದಾಗುವುದು ಎಂದು ಅವರು ತಿಳಿಸಿದರು.
ಐದು ಎಕ್ರೆ ಜಾಗದಲ್ಲಿ ರಸ್ತೆ ನಿರ್ಮಾಣ, 100 ಮನೆಗಳ ಯೋಜನೆ, ದಾರಿದೀಪ, ಲೈಬ್ರೇರಿ, ಮಕ್ಕಳಿಗೆ ಆಟದ ಮೈದಾನ ಹೀಗೆ ಮೂಭೂತ ಸೌಕರ್ಯಗಳನ್ನು ಕಲಾವಿದರಿಗೆ ಒದಗಿಸಿಕೊಡುವ ಯೋಜನೆ ಇದಾಗಿದೆ. ಯಕ್ಷಧ್ರುವ ಪಟ್ಲ ಪೌಂಡೇಶನ್ ಟ್ರಸ್ಟ್ನಿಂದ ನಿರ್ಮಾಣವಾಗುವ ‘ಪಟ್ಲ ಯಕ್ಷಾಶ್ರಯ ಕಲಾಗ್ರಾಮ’ ಯೋಜನೆಗೆ ಸರ್ವರ ಸಹಕಾರ ಬಯಸುವುದಾಗಿ ಅವರು ಹೇಳಿದರು.
ಘಟಕ ಉದ್ಘಾಟನೆ
ಯಕ್ಷಧ್ರುವ ಪಟ್ಲ ಪೌಂಡೇಶನ್ನ ನೂತನ ಎಕ್ಕಾರ್ ಘಟಕ ಆಗಸ್ಟ್ 15 ರಂದು ಕಟೀಲ್ನಲ್ಲಿ ಹಾಗೂ ಆ. 20 ರಂದು ವಾಮಂಜೂರುನಲ್ಲೂ ನೂತನ ಘಟಕ ಅಸ್ತಿತ್ವಕ್ಕೆ ಬರಲಿದೆ. ಪ್ರತೀ ಘಟಕದಲ್ಲಿ ಆ ಪ್ರದೇಶದಲ್ಲಿರುವ ಅಸಕ್ತ ಕಲಾವಿದರನ್ನು ಗುರುತಿಸಿ ಗೌರವ ಧನ ನೀಡುವ ಯೋಜನೆ ಇದೆ. ಪ್ರಾದೇಶಿಕ ಘಟಕಗಳನ್ನು ಚುರುಕುಗೊಳಿಸಿ ಕಾರ್ಯಕ್ರಮಗಳನ್ನು ನೀಡಲಾಗುವುದು ಎಂದು ಪಟ್ಲ ಸತೀಶ್ ಶೆಟ್ಟಿ ತಿಳಿಸಿದರು.
ಸಭೆಯಲ್ಲಿ ಸುಧೀರ್ಭಟ್ ಎಕ್ಕಾರ್ ಅವರಿಂದ ತೆರವಾದ ಉಪಾಧ್ಯಕ್ಷ ಸ್ಥಾನಕ್ಕೆ ಪ್ರೊ.ಮನುರಾವ್ ಅವರನ್ನು ಸೇರಿಸಿಕೊಳ್ಳಲಾಯಿತು. ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಕೆ.ಭಂಡಾರಿ, ಕೋಶಾಧಿಕಾರಿ ಸಿಎ ಸುದೇಶ್ ರೈ, ಜತೆ ಕಾರ್ಯದರ್ಶಿ ರಾಜೀವ ಕೆ.ಕೈಕಂಬ. ಸಂಘಟನಾ ಕಾರ್ಯದರ್ಶಿ ಕದ್ರಿ ನವನೀತ ಶೆಟ್ಟಿ, ಜಗನ್ನಾಥ ಶೆಟ್ಟಿ ಬಾಳ, ರವಿ ಶೆಟ್ಟಿ, ಜಗದೀಶ್ ಶೆಟ್ಟಿ ಪ್ರದೀಪ್ ಆಳ್ವ. ಮನುರಾವ್ ಸುಧೀರ್ ಭಟ್ ಎಕ್ಕಾರ್, ಪ್ರಮೋದ್ ಶೆಟ್ಟಿ, ಸತೀಶ್ ಶೆಟ್ಟಿ ಎಕ್ಕಾರ್, ದುರ್ಗಾಪ್ರಸಾದ್ ಪಡುಬಿದ್ರಿ, ವಿನೋದ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.