ನವದೆಹಲಿ : ಇತ್ತೀಚೆಗೆ ನಡೆದ ಚುನಾವಣೆಯಿಂದಾಗಿ ಮೇಲ್ಮನೆಯಲ್ಲಿ ಯುಪಿಎಗಿಂತ ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳ ಕೈ ಮೇಲಾಗಿದೆ. ಹೀಗಾಗಿ ಬಹುನಿರೀಕ್ಷಿತ ಜಿಎಸ್ಟಿ ಮಸೂದೆಯನ್ನು ಕಾಂಗ್ರೆಸ್ ಬೆಂಬಲ ಇಲ್ಲದೆ ಜಾರಿಗೊಳಿಸುವ ಭರವಸೆ ಕೇಂದ್ರಕ್ಕೆ ಸಿಕ್ಕಿದೆ.
ಈ ಮಳೆಗಾಲದ ಅಧಿವೇಶನದಲ್ಲಿ ಕಾಂಗ್ರೆಸ್ ಬೆಂಬಲ ಇಲ್ಲದೆಯೇ ಜಿಎಸ್ಟಿ ಮಂಡನೆಗೊಳಿಸಲು ಸರಕಾರ ಪ್ರಯತ್ನಿಸಲಿದೆಯೇ ಎನ್ನುವ ಕುತೂಹಲ ಎಲ್ಲರಲ್ಲಿ ಮೂಡಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿತ್ತ ಸಚಿವ ಅರುಣ್ ಜೇಟ್ಲಿ, ಸರ್ಕಾರ ಎಲ್ಲರನ್ನೂ ವಿಶ್ವಾಸಕ್ಕೆ ತೆಗದುಕೊಂಡು ಮಸೂದೆಯನ್ನು ಮಂಡನೆಗೊಳಿಸಲು ಪ್ರಯತ್ನಿಸಲಿದೆ. ಆದರೆ ಕಾಂಗ್ರೆಸ್ ಬೆಂಬಲವಿಲ್ಲದೆ ಮಂಡಿಸುವ ಪರಿಸ್ಥಿತಿ ಬಂದರೆ ಅದಕ್ಕೂ ಸಿದ್ದ ಎಂದಿದ್ದಾರೆ.
ಸದ್ಯ ಬಿಜೆಪಿ ಮತ್ತು ಮೈತ್ರಿ ಪಕ್ಷಗಳು ರಾಜ್ಯಸಭೆಯಲ್ಲಿ 81 ಸಂಸದರನ್ನು ಹೊಂದಿದೆ. ಯುಪಿಎ 68 ಸದಸ್ಯರನ್ನು ಹೊಂದಿದೆ. ಎನ್ಡಿಎ ಮತ್ತು ಯುಪಿಎಯೇತರ 91 ಸದಸ್ಯರಿದ್ದಾರೆ. ಆದರೆ ಸಾಂಪ್ರದಾಯಿಕವಾಗಿ ಕಾಂಗ್ರೆಸ್ ಬೆಂಬಲಿಸುವ ಎನ್ಸಿಪಿ, ಟಿಎಂಸಿ, ಎಸ್ಪಿ, ಜೆಡಿಯು, ಬಿಎಸ್ಪಿ ಮತ್ತು ಬಿಜೆಡಿ ಈಗಾಗಲೇ ಜಿಎಸ್ಟಿಗೆ ಬೆಂಬಲ ಘೋಷಿಸಿದೆ. ಇದರಿಂದಾಗಿ ಜೆಎಸ್ಟಿಗೆ ೧೪೧ ಸಂಸದರ ಬಲ ದೊರೆತಂತಾಗಿದೆ.
ಕಾಂಗ್ರೆಸ್, ಆರ್ಜೆಡಿ ಎಡಪಕ್ಷಗಳ ವಿರೋಧ ಮುಂದುವರೆದಿದೆ.
ಒಟ್ಟು 245 ಸದಸ್ಯರಿರುವ ರಾಜ್ಯಸಭಾದಲ್ಲಿ ಸಾಂವಿಧಾನಿಕ ತಿದ್ದುಪಡಿ ನಡೆಯಲು 164 ಮತಗಳ ಅಗತ್ಯವಿದೆ. 13 ಸದಸ್ಯರಿರುವ ಎಐಎಡಿಎಂಕೆ ಸದ್ಯಕ್ಕೆ ಜಿಎಸ್ಟಿಯನ್ನು ವಿರೋಧಿಸುತ್ತಿದೆ. ಆದರೆ ಸರಕಾರ ಅದನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನದಲ್ಲಿದೆ.
ಇದರಲ್ಲಿ ಯಶಸ್ವಿಯಾದರೆ ಮತ್ತೆ ಕೇವಲ 10 ಸಂಸದರ ಬೆಂಬಲದ ಅಗತ್ಯ ಬೀಳುತ್ತದೆ. ಆಗ ವೈಎಸ್ಆರ್, ಟಿಆರ್ಎಸ್, ಜೆಡಿಎಸ್ ಸ್ವತಂತ್ರ ಸದಸ್ಯರ ಮನ ಒಲಿಕೆಗೆ ಕೇಂದ್ರ ಮುಂದಾಗುವ ಸಾಧ್ಯತೆ ಇದೆ.
ಸೆಲಿಬ್ರಿಟಿ ಸದಸ್ಯರಾದ ರೇಖಾ ಮತ್ತು ಸಚಿನ್ ತೆಂಡೂಲ್ಕರ್ ಅವರ ನಡೆಯೂ ಕುತೂಹಲ ಮೂಡಿಸಿದೆ.
ಒಂದು ವೇಳೆ ಇವರೆಲ್ಲರ ಬೆಂಬಲ ಪಡೆದರೂ, ಕಾಂಗ್ರೆಸ್ ಕಲಾಪಕ್ಕೆ ಅಡ್ಡಿ ಪಡಿಸಿ ಮಸೂದೆ ಜಾರಿಯಾಗದಂತೆ ಮಾಡುವ ಸಾಧ್ಯತೆಯ ಬಗ್ಗೆಯೂ ಕೇಂದ್ರ ತಲೆ ಕೆಡೆಸಿಕೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.