ನವದೆಹಲಿ : ದೆಹಲಿ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನಾಯಕಿ ಶೀಲಾ ದೀಕ್ಷಿತ್ ಅವರು ಮುಂಬರುವ ಉತ್ತರ ಪ್ರದೇಶ ಚುನಾವಣೆಯ ಮುಖ್ಯಮಂತ್ರಿ ಅಭ್ಯರ್ಥಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಈ ಸುದ್ದಿಗೆ ಇಂಬು ಕೊಡುವಂತೆ ಶೀಲಾ ದೀಕ್ಷಿತ್ ಅವರು ಗುರುವಾರ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಮತ್ತು ಅವರ ಪುತ್ರ ರಾಹುಲ್ ಗಾಂಧಿಯನ್ನು ಭೇಟಿಯಾಗಿದ್ದಾರೆ.
78 ವರ್ಷದ ಶೀಲಾ ದೀಕ್ಷಿತ್ ಅವರನ್ನು ಸಿಎಂ ಅಭ್ಯರ್ಥಿಯನ್ನಾಗಿ ಮಾಡಲು ಕಾಂಗ್ರೆಸ್ ಮುಖಂಡರ ಚಿಂತನೆ ನಡೆದಿದೆ. ಸೋನಿಯಾ ಪುತ್ರಿ ಪ್ರಿಯಾಂಕ ವಾದ್ರಾ ಚುನಾವಣಾ ಪ್ರಚಾರದ ಮುಂದಾಳತ್ವ ವಹಿಸಲಿದ್ದಾರೆ.
ಯುಪಿಯಲ್ಲಿ 30 ಶಾಸಕರನ್ನು, 2 ಸಂಸದರನ್ನು ಹೊಂದಿರುವ ಕಾಂಗ್ರೆಸ್ ಸಮಾಜವಾದಿ, ಬಿಎಸ್ಪಿ ಮತ್ತು ಬಿಜೆಪಿಗಿಂತ ಹಿಂದಿದೆ.
ಇದೀಗ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಈ ಎಲ್ಲಾ ಪಕ್ಷಗಳನ್ನು ಹಿಂದಿಕ್ಕಲು ಕಾಂಗ್ರೆಸ್ ಭರ್ಜರಿ ಕಸರತ್ತುಗಳನ್ನು ಆರಂಭಿಸಿದೆ.
ಲೋಕಸಭಾ ಚುನಾವಣೆಯಲ್ಲಿ ಮೋದಿಯನ್ನು, ಬಿಹಾರದಲ್ಲಿ ನಿತೀಶ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ರಾಜಕೀಯ ನಿಪುಣ ಪ್ರಶಾಂತ್ ಕಿಶೋರ್ ಅವರನ್ನು ಯುಪಿ ಚುನಾವಣಾ ಪ್ರಚಾರ ಮುಖ್ಯಸ್ಥನನ್ನಾಗಿ ಮಾಡಿರುವ ಕಾಂಗ್ರೆಸ್, ಪ್ರಶಾಂತ್ ಕಿಶೋರ್ ಅವರ ಸಲಹೆಯಂತೆಯೇ ಬ್ರಾಹ್ಮಣರಾದ ಶೀಲಾ ದೀಕ್ಷಿತ್ ಅವರನ್ನು ಸಿಎಂ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಮುಂದಾಗಿದೆ ಎನ್ನಲಾಗುತ್ತಿದೆ.
ಶೀಲಾ ದೀಕ್ಷಿತ್ ಅವರ ಮಾವ ಉಮಾಶಂಕರ್ ದೀಕ್ಷಿತ್ ಯುಪಿಯ ಪ್ರಮುಖ ಕಾಂಗ್ರೆಸ್ ನಾಯಕರಾಗಿದ್ದರು. ಇವರು ಕೇಂದ್ರ ಸಚಿವರಾಗಿ ಮತ್ತು ಗವರ್ನರ್ ಆಗಿಯೂ ಸೇವೆ ಸಲ್ಲಿಸಿದ್ದಾರೆ. ಇದನ್ನು ಬಂಡವಾಳವಾಗಿಸಿಕೊಂಡು ಶೀಲಾ ದೀಕ್ಷಿತ್ ಅವರನ್ನು ಮುಖ್ಯ ಭೂಮಿಕೆಗೆ ಇಳಿಸಲು ಕಾಂಗ್ರೆಸ್ ಚಿಂತನೆ ನಡೆಸಿದೆ ಎನ್ನಲಾಗುತ್ತಿದೆ.
ಮೂಲಗಳ ಪ್ರಕಾರ ಕಮಲ್ನಾಥ್ ಅವರು ಪಂಜಾಬ್ ಕಾಂಗ್ರೆಸ್ ಉಸ್ತುವಾರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಶೀಲಾ ದೀಕ್ಷಿತ್ ಅವರನ್ನು ಪಂಜಾಬ್ ಕಾಂಗ್ರೆಸ್ನ ಉಸ್ತುವಾರಿಯನ್ನಾಗಿಯೂ ನೇಮಕ ಮಾಡಬಹುದು ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.