ಕಲ್ಲಡ್ಕ: ಶ್ರೀರಾಮ ವಿದ್ಯಾಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಶಿಕ್ಷಕ ಹಾಗೂ ಶಿಕ್ಷಕೇತರರಿಗೆ ಒಂದು ದಿನದ ಚಿಂತನ ಬೈಠಕ್ನ್ನು ನಡೆಸಲಾಯಿತು. ವಿದ್ಯಾಕೇಂದ್ರದ ಧ್ಯೇಯ, ಬೋಧನೆಯು ಪರಿಣಾಮಕಾರಿಯಾಗುವಂತೆ ಮಾಡಲು ಬೇಕಾದ ವಿಷಯಗಳ ಬಗೆಗೆ ಹಾಗೂ ಶಿಕ್ಷಣದಲ್ಲಿ ಸಂಸ್ಕಾರವನ್ನು ಮೈಗೂಡಿಸುವಂತೆ ಮಾಡಲು ಬೇಕಾದ ಮೂಲ ಚಿಂತನೆಯನ್ನು ಬಿತ್ತಲು ಇದನ್ನು ಆಯೋಜಿಸಲಾಗಿತ್ತು.
ಮೊದಲನೇ ಅವಧಿಯಲ್ಲಿ ವಿದ್ಯಾಕೇಂದ್ರ ೩೫ ವರ್ಷಗಳ ಹಿಂದೆ ಶ್ರೀರಾಮ ಮಂದಿರದಲ್ಲಿ ಪ್ರಾರಂಭವಾದ ಶ್ರೀರಾಮ ಪ್ರೌಢಶಾಲೆ, ಈ ಶಾಲೆ ಪ್ರಾರಂಭದಲ್ಲಿ ಎದುರಿಸಿದ ಸಮಸ್ಯೆಗಳು ಹಾಗೂ ಸಮಸ್ಯೆಗಳ ನಿವಾರಣೆಗೆ ವಿರೋಧಿ ಶಕ್ತಿಗಳ ವಿರುದ್ಧ ಹಾಗೂ ಸರಕಾರದ ಜೊತೆ ನಡೆಸಿದ ಹೋರಾಟದ ಬಗ್ಗೆ ಸಂಚಾಲಕ ಡಾ. ಪ್ರಭಾಕರ ಭಟ್ ಸವಿವರವಾಗಿ ವಿವರಿಸಿದರು.
ನಂತರ ಹಂತ ಹಂತವಾಗಿ ಬೆಳೆದ ರೀತಿ ಹಾಗೂ ಈ ಸಂಸ್ಥೆಯಿಂದ ಸಮಾಜದ ಪ್ರತಿಯೊಬ್ಬನಿಗೂ ಅನುಕೂಲವಾಗಬೇಕು ಎಂಬ ವಿದ್ಯಾಕೇಂದ್ರದ ಆಶಯವನ್ನು ಅವರು ತಿಳಿಸಿದರು.
ಎರಡನೇ ಅವಧಿಯಲ್ಲಿ ಕುಟುಂಬ ಪ್ರಭೋಧನ್, ಅಖಿಲ ಭಾರತ ಪ್ರಮುಖ್ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಮಾತನಾಡಿ ಪಂಚಕೋಶಾತ್ಮಕ ವಿಕಾಸದ ಶಿಕ್ಷಣದಿಂದ ಶಾರೀರಿಕ ವಿಕಾಸ, ಪ್ರಾಣ ಶಕ್ತಿಯ ವಿಕಾಸ, ಮಾನಸಿಕ ವಿಕಾಸ, ಬೌದ್ಧಿಕ ವಿಕಾಸ ಹಾಗೂ ಆಧ್ಯಾತ್ಮಿಕ ವಿಕಾಸವು ಹೇಗೆ ಸಾಧ್ಯ ಎಂಬುದನ್ನು ತುಂಬಾ ಸರಳವಾಗಿ ಮನಮುಟ್ಟುವಂತೆ ವಿವರಿಸಿದರು.
ಮೂರನೇ ಅವಧಿಯಲ್ಲಿ ಎಲ್ಲಾ ಅಧ್ಯಾಪಕರು ವಿವಿಧ ಗುಂಪುಗಳಲ್ಲಿ ಚರ್ಚೆ, ನಂತರ ಪ್ರಶ್ನೋತ್ತರ ಹಾಗೂ ಬೈಠಕ್ನ ಅನಿಸಿಕೆಯನ್ನು ಹಂಚಿಕೊಂಡರು. ದಿನಪೂರ್ತಿ ನಡೆದ ಈ ಚಿಂತನ ಬೈಠಕ್ನಲ್ಲಿ ವಿದ್ಯಾಭಾರತಿಯ ಪ್ರಾಂತ ಸಹಕಾರ್ಯದರ್ಶಿ ಶ್ರೀ ವಸಂತ ಮಾಧವ, ಜಿಲ್ಲಾ ಉಪಾಧ್ಯಕ್ಷ ಶ್ರೀ ವೆಂಕಟ್ರಮಣ ರಾವ್, ಜಿಲ್ಲಾ ಕಾರ್ಯದರ್ಶಿ ಶ್ರೀ ವಸಂತ ಮಾಧವ ಮತ್ತು ವಿವೇಕಾನಂದ ವಿದ್ಯಾವರ್ಧಕ ಸಂಘದ ರಘುರಾಜ ಉಬರಡ್ಕ ಹಾಗೂ ಹಿರಿಯರಾದ ಡಾ. ಕಮಲಾ ಪ್ರಭಾಕರ ಭಟ್ ಮತ್ತಿತರರು ಉಪಸ್ಥಿತರಿದ್ದರು.
ಒಟ್ಟು ವಿದ್ಯಾಸಂಸ್ಥೆಯ ೧೬೦ಕ್ಕೂ ಹೆಚ್ಚು ಬೋಧಕರು ಹಾಗೂ ಬೋಧಕೇತರ ಸಿಬ್ಬಂಧಿಯರು ಮತ್ತು ಆಡಳಿತ ಮಂಡಳಿಯವರು ಭಾಗವಹಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.