ಮಂಗಳೂರು : ಲೇಖಕಿ, `ಹೊಸ ದಿಗಂತ’ ಪತ್ರಿಕೆಯ ಹಿರಿಯ ಉಪಸಂಪಾದಕಿ ಅ.ನಾ.ಪೂರ್ಣಿಮಾ ಅವರ `ಸಾಕು ಮೌನದ ಭಾಷೆ’ ಕವನ ಸಂಕಲನ ಅನಾವರಣ ಕಾರ್ಯಕ್ರಮ ಭಾನುವಾರ ನಗರದ ಉರ್ವಾಸ್ಟೋರ್ ಬಳಿ ಇರುವ ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘದ ಸಭಾಂಗಣದಲ್ಲಿ ನಡೆಯಿತು.
ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಹಿರಿಯ ಲೇಖಕಿ ಮನೋರಮಾ ಎಂ.ಭಟ್, ಕವನಗಳು ಮನದ ಭಾವನೆಗಳನ್ನು ಧ್ವನಿಸಬಲ್ಲವು. ಜೀವನದಲ್ಲಿನ ಘಟನೆಗಳು, ತವಕ ತಲ್ಲಣಗಳು ಪದಪುಂಜಗಳಾಗಿ ರೂಪು ಪಡೆದು ಉತ್ತಮ ಕವನಗಳಾಗಿ ಹೊರಬರಲು ಸಾಧ್ಯವಿದೆ ಎಂದರು.
ಕವನ ಬರೆಯುವುದು ಲೇಖನ ಬರೆದಷ್ಟು ಕಷ್ಟಕರವೇನಲ್ಲ. ಪ್ರತಿಯೊಬ್ಬರೂ ತಮ್ಮ ಅನುಭವ, ಚಿಂತನೆಗಳನ್ನು ಕವನರೂಪಕ್ಕಿಳಿಸುವ ಪ್ರಯತ್ನ ಮಾಡಬಹುದು ಎಂದರಲ್ಲದೆ `ಸಾಕು ಮೌನದ ಭಾಷೆ’ ಕವನ ಸಂಕಲದ ಮೂಲಕ ಅ.ನಾ.ಪೂರ್ಣಿಮಾ ಅವರು ಉತ್ತಮ ಕವನಗಳನ್ನು ಹೊರತಂದಿದ್ದಾರೆ ಎಂದು ಶ್ಲಾಘಿಸಿದರು.ಸಾಹಿತಿ ಎಚ್.ರಮೇಶ ಕೆದಿಲಾಯ ಕೃತಿ ಪರಿಚಯ ಮಾಡಿದರು.
ಕವಿತೆಯಲ್ಲಿ ಕ್ಲಿಷ್ಟಕರ ಪದಬಳಕೆ ಇದ್ದರೇನೇ ಅದಕ್ಕೊಂದು ತೂಕ ಎಂಬ ಭ್ರಮೆ ಹಲವು ಮಂದಿ ಬರಹಗಾರರಲ್ಲಿದೆ. ಆ ಭ್ರಮೆಯಿಂದ ಹೊರಬಂದು ಕವಿತೆ ರಚಿಸಬೇಕು. ಸರಳ ಭಾಷೆ ಮತ್ತು ಸಹಜ ಸೌಂದರ್ಯದಿಂದ ಕೂಡಿದ್ದರೆ ಕವನ ಹೆಚ್ಚು ಮನಸ್ಸುಗಳನ್ನು ತಟ್ಟಬಲ್ಲದು. ಅ.ನಾ.ಪೂರ್ಣಿಮಾ ಅವರ ಕವಿತೆಗಳು ಸರಳ ಭಾಷೆಯ ಮೂಲಕ ಹೆಚ್ಚು ಹತ್ತಿರವಾಗಿವೆ ಎಂದು ರಮೇಶ ಕೆದಿಲಾಯ ಮೆಚ್ಚುಗೆ ವ್ಯಕ್ತಪಡಿಸಿದರು.
ಹೃದಯದ ಭಾಷೆ ಅರ್ಥವಾಗುವವರಿಗೆ ಕವನಗಳು ಹೆಚ್ಚು ಪ್ರಿಯವೆನಿಸುತ್ತವೆ. ಹೃದಯ ಭಾಷೆಗೆ ಕಿವಿಗೊಟ್ಟು, ಅದಕ್ಕೆ ಸೋತಾಗ ನಮ್ಮಲ್ಲಿ ಹೊಸ ಪದಗಳು ಸೃಷ್ಟಿಯಾಗಿ ಕವನಗಳಿಗೆ ಸಹಕಾರಿಯಾಗಲು ಸಾಧ್ಯ. ಪ್ರೀತಿ ವಿಶ್ವಾಸವನ್ನು ಎಲ್ಲೋ ಹುಡುಕುವುದಲ್ಲ. ನಾವದನ್ನು ಗಳಿಸಿಕೊಳ್ಳಬೇಕು. ನಮ್ಮೊಳಗೆ ಪ್ರೀತಿಯ ಮೊಳಕೆಯೊಡೆಯಬೇಕು ಎಂದು ವಿಶ್ಲೇಷಿಸಿದರು.
ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘದ ಅಧ್ಯಕ್ಷೆ ಡಾ.ಶೈಲಾ. ಯು ಅಧ್ಯಕ್ಷತೆ ವಹಿಸಿ ಮಾತನಾಡಿದರು.ಲೇಖಕಿ ಅ.ನಾ.ಪೂರ್ಣಿಮಾ ಅವರು ತನ್ನ ಕವನಗಳು ಹುಟ್ಟು ಪಡೆದ ಬಗೆಯನ್ನು ವಿವರಿಸಿದರಲ್ಲದೆ ಕವನ ಸಂಕಲನ ಬಿಡುಗಡೆಗೆ ಪ್ರೋತ್ಸಾಹ ಮತ್ತು ಸಹಕಾರ ನೀಡಿದ ಎಲ್ಲರನ್ನು ಸ್ಮರಿಸಿಕೊಂಡರು. ಕಾರ್ಯಕ್ರಮದಲ್ಲಿ ಚೈತ್ರಾ ಅವಿನಾಶ್ ಅವರಿಂದ ಅನಾವರಣಗೊಂಡ ಕವನ ಸಂಕಲನದ ಆಯ್ದ ಕವಿತೆಗಳ ಗಾಯನ ನಡೆಯಿತು.
ಶಿಕ್ಷಕಿಯರಾದ ಜ್ಯೋತಿ ಚೇಳಾಯುರು ಸ್ವಾಗತಿಸಿ ಎ.ಎನ್.ಶಾರದ ವಂದಿಸಿದರು. ಆಕಾಶವಾಣಿ ಕಲಾವಿದೆ ಸಾವಿತ್ರಿ ಪೂರ್ಣಚಂದ್ರ ಕಾರ್ಯಕ್ರಮ ನಿರೂಪಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.