ಮಂಗಳೂರು : ಈ ಭಾಗದ ನಾಲ್ವರು ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದಾಗ ಜಿಲ್ಲೆಯ ಜನತೆ ಸಹಜವಾಗಿಯೇ ಖುಷಿಗೊಂಡಿದ್ದರು. ಜಿಲ್ಲೆಯ ಬಹುತೇಕ ಸಮಸ್ಯೆಗಳು ಬಗೆಹರಿಯಬಹುದು ಎಂಬ ತುಂಬು ವಿಶ್ವಾಸದಲ್ಲಿದ್ದರು. ಆದರೆ ವರ್ಷ ಮೂರು ಕಳೆದರೂ ಜಿಲ್ಲೆಯಲ್ಲಿ ಹೇಳಿಕೊಳ್ಳುವ ಯಾವೊಂದು ಅಭಿವೃದ್ಧಿ ಕಾರ್ಯಗಳೂ ಆಗಿಲ್ಲ. ಸ್ವತಃ ಜಿಲ್ಲೆಯ ಜನತೆಯೇ ಮಂತ್ರಿಗಳತ್ತ ಬೊಟ್ಟು ಮಾಡುತ್ತಿದ್ದಾರೆ. ನಾಲ್ವರು ಸಚಿವರಿದ್ದು, ಜಿಲ್ಲೆ ಅಭಿವೃದ್ಧಿ ಕಾರ್ಯದಲ್ಲಿ ಮಾದರಿಯಾಗಬೇಕಿತ್ತು ಆದರೆ ಆದದ್ದಾರೂ ಏನು?
ಯಥಾ ರಾಜಾ ತಥಾ ಮಂತ್ರಿ ಎಂಬಂತೆ ನಿದ್ದೆ ಮಾಡುವ ಮುಖ್ಯಮಂತ್ರಿಗೆ ನಿದ್ದೆ ತೂಗುವ ಮಂತ್ರಿಗಳು. ಆದರೆ ಇವರ ನಿದ್ದೆಯಿಂದಾಗಿ ಜಿಲ್ಲೆಯ ಜ್ವಲಂತ ಸಮಸ್ಯೆಗಳಿಂದ ಜನತೆ ಸಂತ್ರಸ್ತರಾದರೂ ಯಾರೂ ಸ್ಪಂದಿಸುತ್ತಿಲ್ಲ. ನುಡಿದಂತೆ ನಡೆಯುತ್ತೇವೆ ಎಂದು ಜನತೆಗೆ ಪೊಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದ ಸರಕಾರ ಜನರ ನಿರೀಕ್ಷೆಗಳನ್ನು ಈಡೇರಿಸುವುದು ಬಿಡಿ, ಸಮಸ್ಯೆಗಳೇನು ಎಂದು ಕೇಳುವ ಗೋಜಿಗೂ ಹೋಗಿಲ್ಲ. ಟೇಕ್ ಆಫ್ ಆಗುವುದಲ್ಲ ರನ್ವೇಯಲ್ಲಿ ಬಾಕಿ ಆಗಿ ಅವಧಿ ಮುಗಿಯುವ ಮುನ್ನ ಪತನಕ್ಕೆ ಕಾಯುವ ನಿಷ್ಕ್ರಿಯ ಸರಕಾರ.
ಭ್ರಷ್ಟ ಸರಕಾರ : ಭ್ರಷ್ಟಾಚಾರದ ಕೂಪದಲ್ಲಿ ಮಿಂದೇಳುತ್ತಿರುವ ಸರಕಾರ ಈಗಷ್ಟೇ ಅಲ್ಲ ಮುಂದೆಯೂ ಈಗ ಮಾಡಿದ ಭ್ರಷ್ಟಾಚಾರದಲ್ಲಿ ಸಿಕ್ಕಿ ಬೀಳಬಾರದು ಎಂಬುದಕ್ಕೆ ಬೇಕಾದ ವ್ಯವಸ್ಥೆಗಳನ್ನು ಮಾಡುತ್ತಿದೆ. ಲೋಕಾಯುಕ್ತಕ್ಕೆ ಸೂಕ್ತ ಮಾರ್ಪಾಡು ಮಾಡಿ ಇನ್ನಷ್ಟು ಬಲಯುತಗೊಳಿಸುತ್ತೇವೆ ಎಂದು ನಂಬಿಸಿ ಲೋಕಾಯುಕ್ತಕ್ಕೆ ಅಂತಿಮ ಮೊಳೆ ಹೊಡೆದು ತಮ್ಮ ನಂಬುಗೆಯ ಅಧಿಕಾರಿಗಳ ತಂಡದ ಎಸಿಬಿ ಎಂಬ ಭ್ರಷ್ಟಾಚಾರ ನಿಗ್ರಹ ದಳ ಅಥವಾ ಭ್ರಷ್ಟಾಚಾರ ಪೋಷಕ ದಳ ರಚಿಸಲಾಗಿದೆ. ವಿವಿಧ ಮಂತ್ರಿಗಳ ಮೇಲೆ ಭ್ರಷ್ಟಾಚಾರದ ಆರೋಪ ಬಂದಾಗಲೂ ತನಿಖೆಯೂ ಮಾಡದೇ, ರಾಜೀನಾಮೆಯೂ ನೀಡದೇ ನಿರ್ಲಕ್ಷ್ಯದಿಂದ ಅಧಿಕಾರವೇ ಪರಮಧ್ಯೇಯ ಎಂಬಂತೆ ವರ್ತಿಸಲಾಗುತ್ತಿದೆ. ಸ್ವತಃ ಮುಖ್ಯಮಂತ್ರಿಗಳ ಮೇಲೆ ಭ್ರಷ್ಟಾಚಾರದ ಆರೋಪ ಬರುವಷ್ಟು ಆಡಳಿತ ವ್ಯವಸ್ಥೆ ಭ್ರಷ್ಟವಾದ ಭ್ರಷ್ಟ ಸರಕಾರ.
ಜಿಲ್ಲೆಯ ಭಾವನೆಗೆ ಕಿವಿಕೊಡದ ಸರಕಾರ : ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿ ಒಂದೆಡೆಯಿಂದ ಮಾತುಕತೆ ಮಾಡುತ್ತೇವೆ ಎಂದೂ, ಇನ್ನೊಂದೆಡೆಯಿಂದ ಯೋಜನೆ ಮಾಡುವುದು ಶತಸ್ಸಿದ್ಧ ಎಂದೂ ಹೇಳುತ್ತಾರೆ. ಯಾವುದು ನಿಜ? ಎತ್ತಿನಹೊಳೆ ಯೋಜನೆಯಲ್ಲಿ ಜನಾಭಿಪ್ರಾಯ ಪಡೆಯಲು ಮೂರು ವರ್ಷಗಳಾದರೂ ಸಾಧ್ಯವಾಗಿಲ್ಲ. ದ.ಕ.ದಲ್ಲಿ ಇಷ್ಟೆಲ್ಲ ಹೋರಾಟಗಳು ನಡೆಯುತ್ತಿದ್ದರೂ ದಿವ್ಯ ನಿರ್ಲಕ್ಷ್ಯ ವಹಿಸಿ ರಾಜಕೀಯ ಪಕ್ಷಗಳು, ಹೋರಾಟಗಾರರು, ಎನ್ಜಿಒಗಳನ್ನು ಕರೆಸಿ ಮಾತನಾಡುವ ವ್ಯವಧಾನ ಇಲ್ಲದ ಸರಕಾರ.
ರೈತರ ಸಮಸ್ಯೆಗಳಿಗೆ ಸ್ಪಂದಿಸದ ಸರಕಾರ : ಕುಮ್ಕಿ ಹಕ್ಕಿನ ಕುರಿತು ಬಿಜೆಪಿ ಸರಕಾರ ಸಿದ್ಧಪಡಿಸಿದ ಕಾಯ್ದೆ ಆಗ ಕಾಂಗ್ರೆಸ್ಸಿನ ಪಿತೂರಿಯ ಕಾರಣಗಳಿಂದ ರಾಜ್ಯಪಾಲರಿಂದ ತಡೆ ಹಿಡಿಯಲ್ಪಟ್ಟರೂ ಈ ಸರಕಾರ ಬಂದು ೩ ವರ್ಷಗಳಾದರೂ ಕುಮ್ಕಿ ಭೂಮಿಯನ್ನು ರೈತರಿಗೆ ನೀಡದ ಸರಕಾರ. ವಿದ್ಯುತ್ ಕೊರತೆಗೆ ಕೇಂದ್ರ ಸಹಾಯ ಮಾಡುತ್ತೇವೆ ಎಂದರೂ ಪಡೆಯದೇ ವಿದ್ಯುತ್ ಕೇಳಿದ ರೈತರನ್ನು ಜೈಲಿಗೆ ತಳ್ಳುವ ಅಪ್ರಬುದ್ಧ ಸರಕಾರ. ಕುಡಿಯಲು, ಕೃಷಿಗೆ ನೀರು ಕೇಳಿದರೆ ರೈತರ ಮೇಲೆ ಲಾಠಿ ಬೀಸುವ ರೈತ ವಿರೋಧಿ ಸರಕಾರ. ರಬ್ಬರು, ಅಡಿಕೆ ಬೆಳೆಗಾರರ ರಕ್ಷಣೆಗೆ ಧಾವಿಸದೇ, ಪ್ರಕೃತಿ ವಿಕೋಪದಲ್ಲಿ ನಷ್ಟವಾದರೂ ಸೂಕ್ತವಾಗಿ ಸ್ಪಂದಿಸದೇ ಮೈಕೊಡವಿ ಎದ್ದೇಳದ ಮೈಗಳ್ಳ ಸರಕಾರ.
ಭೂ ನೋಂದಣಿ ಸಮಸ್ಯೆ : 9 ಮತ್ತು 11 ಸಮಸ್ಯೆಗೆ ಚುನಾವಣೆ ಬಂದಾಗ ಮಾತ್ರ ಸುತ್ತೋಲೆ ಕಳುಹಿಸಿ ಅದು ಅನುಷ್ಠಾನವಾಗದೇ ಜನರಿಗೆ ತೊಂದರೆಯಾಗುತ್ತಿದ್ದರೂ ಮಾತನಾಡದೇ ಮೂಕವಾದ ಸರಕಾರ. ಒಂದೆಡೆಯಿಂದ ಪಡಿತರ ಚೀಟಿ ನೀಡಿ ಇನ್ನೊಂದೆಡೆಯಿಂದ ರದ್ದುಪಡಿಸಿ ಬಡವರ ಹೊಟ್ಟೆ ಮೇಲೆ ಹೊಡೆಯುವ ನಿಷ್ಕರುಣಿ ಸರಕಾರ.
ಹದಗೆಟ್ಟ ಕಾನೂನು ವ್ಯವಸ್ಥೆ : ಕಾನೂನು ಸುವ್ಯವಸ್ಥೆ ಹದಗೆಟ್ಟು, ಪಕ್ಷಪಾತ ತನ ತೋರಿಸಿ ಹಿಂದೂಗಳ ಮೇಲೆ ದಬ್ಬಾಳಿಕೆ ನಡೆಸಿ ಹಿಂದೂ ಕಾರ್ಯಕರ್ತರ ಕೊಲೆಯಾದರೂ ಸಮರ್ಪಕ ತನಿಖೆ ನಡೆಸದೇ ಬಹುತೇಕ ಕಡೆ ಹಿಂದೂಗಳ ಮೇಲೆಯೇ ಸುಳ್ಳು ಕೇಸು ದಾಖಲಿಸಿ ಇತರ ವರ್ಗದ ಆರೋಪಿಗಳನ್ನು ರಾಜಾರೋಷವಾಗಿ ತಿರುಗಲು ಬಿಡುವ ಅವ್ಯವಸ್ಥೆಯ ಸರಕಾರ.
ಅಕ್ರಮ ಮರಳುಗಾರಿಕೆ ಮೂಲಕ ಮಧ್ಯಮ ವರ್ಗಕ್ಕೆ ಹೊಡೆತ ನೀಡಿ ಖದೀಮರಿಗೆ ಅಕ್ರಮವಾಗಿ ಹಣ ಮಾಡಲು ಪ್ರೋತ್ಸಾಹ ನೀಡುವ ಕೆಟ್ಟ ಸರಕಾರ ದ.ಕ.ಜಿಲ್ಲಾಧ್ಯಕ್ಷ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.