ಮಂಗಳೂರು : ಜಲಕ್ಷಾಮದಿಂದ ಬಳಲುತ್ತಿರುವ ಮಂಗಳೂರು ನಗರದ ಜನರಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವಲ್ಲಿ ರಾಜಕೀಯ ಪ್ರಚಾರ ಮಾಡುತ್ತಿರುವ ಕಾಂಗ್ರೆಸ್ನ ನೀಚ ಬುದ್ಧಿಯನ್ನು ಬಿ.ಜೆ.ಪಿ ತೀವ್ರವಾಗಿ ಖಂಡಿಸುತ್ತದೆ. ಹೊತ್ತಿ ಉರಿಯುವ ಮನೆಯ ಬೆಂಕಿಯಲ್ಲಿ ಸಿಗರೇಟು ಉರಿಸಿ ಸಂಭ್ರಮಿಸುವ ರೀತಿಯಲ್ಲಿ ಕಾಂಗ್ರೆಸ್ ನಾಯಕರು ನೀರು ಸರಬರಾಜು ಮಾಡುತ್ತಿರುವ ಟ್ಯಾಂಕರ್ಗಳಲ್ಲ, ವಾಹನಗಳಲ್ಲಿ ತಮ್ಮ ನಾಯಕರ ಭಾವಚಿತ್ರಗಳಿರುವ ಬ್ಯಾನರುಗಳನ್ನು ಅಳವಡಿಸಿ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿರುವುದು ಕಾಂಗ್ರೆಸ್ನ ಹೀನಾಯ ಸ್ಥಿತಿಯನ್ನು ಬಿಂಬಿಸುತ್ತದೆ.
ಮಹಾನಗರ ಪಾಲಿಕೆಯ ಗುತ್ತಿಗೆದಾರರು ತಾವೇ ಮುಂದೆಬಂದು ನೀರು ಸರಬರಾಜು ಮಾಡಲು ವಾಹನಗಳನ್ನು ಉಚಿತವಾಗಿ ನೀಡಿ ಹೃದಯವಂತಿಕೆ ಮೆರೆದರೆ, ಇತ್ತ ಕಾಂಗ್ರೆಸ್ ನಾಯಕರಾದ ಜಿಲ್ಲೆಯ ಉಸ್ತುವಾರಿ ಸಚಿವರು ನೀರು ಸರಬರಾಜು ಮಾಡುವಾಗ ತಮ್ಮ ಭಾವಚಿತ್ರಗಳುಳ್ಳ ಟ್ಯಾಂಕರುಗಳನ್ನು ಅಳವಡಿಸಿರುವುದು ಖಂಡನೀಯವಾಗಿದೆ. ಇಂತಹ ವಾಹನಗಳಿಗೆ ಬ್ಯಾನರು ಅಳವಡಿಸುವ ಅಸಕ್ತಿ ಇಚ್ಚಾಶಕ್ತಿಯನ್ನು ತುಂಬೆ ವೆಂಟೆಡ್ ಡ್ಯಾಮ್ ಪೂರ್ತಿಗೂಳಿಸಲು ತೋರಿಸಿದಲ್ಲಿ ಇಂದು ಮಂಗಳೂರು ಇಂತಹ ಜಲಕ್ಷಾಮಕ್ಕೆ ಒಳಗಾಗುತ್ತಿರಲಿಲ್ಲ.
ಅಧಿಕಾರಕ್ಕೆ ಬಂದು ಎರಡು ವರ್ಷದೊಳಗೆ ತುಂಬೆ ಡ್ಯಾಂನ್ನು ಪೂರ್ತಿಗೊಳಿಸುವುದಾಗಿ ಜನರಿಗೆ ಭರವಸೆ ನೀಡಿದ ಕಾಂಗ್ರೆಸ್ ಇಂದು ತಾನು ನೀಡಿದ ಭರವಸೆಗಳನ್ನು ಪೂರೈಸಲಾರದೆ, ಜನರು ನೀರಿಗಾಗಿ ಬವಣೆ ಪಡುವಂತೆ ಮಾಡಿರುವುದಲ್ಲದೆ, ಪುನ: ಉಚಿತವಾಗಿ ಸಿಕ್ಕ ಟ್ಯಾಂಕರ್ ಮತ್ತು ವಾಹನಗಳ ಮೇಲೆ ತಮ್ಮ ನಾಯಕರ ಭಾವಚಿತ್ರ ಪ್ರಕಟಿಸಿ ಬಿಟ್ಟಿ ಪ್ರಚಾರ ಪಡೆಯಲು ಯತ್ನಿಸುತ್ತಿರುವುದು ನಾಚಿಕೆಗೇಡಿನ ವಿಷಯವಾಗಿದೆ. ಹಾಗೂ ತನ್ನ ಆಡಳಿತ ವೈಫಲ್ಯವನ್ನು ಮರೆಮಾಚಲು ಮಾಡುವ ಯತ್ನವಾಗಿದೆ.
ಅದರಂತೆ ಜಲಕ್ಷಾಮದ ಇಂತಹ ಸಂಕಷ್ಟದ ಸಮಯದಲ್ಲಿ ರಾಜಕೀಯ ಲಾಭವನ್ನು ಮರೆತು ರಾಜಕೀಯ ರಹಿತವಾಗಿ ಕುಡಿಯುವ ನೀರಿನ ಕೊರತೆ ಅತಿಹೆಚ್ಚು ಭಾದಿತವಾಗಿರುವ ಪ್ರದೇಶಗಳಿಗೆ ಅವಶ್ಯಕತೆ ಮತ್ತು ಆದ್ಯತಾವಾರು ಸ್ಥಳೀಯ ಜನಪ್ರತಿನಿಧಿಗಳ ಸಲಹೆ ಸೂಚನೆಗಳನ್ನು ಅನುಸರಿಸಿ ಟ್ಯಾಂಕರ್ ನೀರು ಪೂರೈಸುವುದು ಪಾಲಿಕೆಯ ಕರ್ತವ್ಯವಾಗಿದೆ.
ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಬಿಗಡಾಯಿಸುವುದರಿಂದ ಪಾಲಿಕೆ ವ್ಯಾಪ್ತಿಯೊಳಗೆ ಲಭ್ಯವಿರುವ ನೀರಿನ ಮೂಲಗಳನ್ನು ಬಳಸುವ ಬಗ್ಗೆ ಇನ್ನು ಕ್ಷಿಪ್ರ ಕಾರ್ಯಾಚರಣೆ ಪ್ರಾರಂಭಿಸದ ಪಾಲಿಕೆ, ಬಳಕೆಯಾಗದೆ ಈಗ ಉಪಯೋಗಿಸಲು ಅಸಾಧ್ಯವಾದ ಸಾರ್ವಜನಿಕ -ಖಾಸಗಿ ಬಾವಿಗಳ ನೀರನ್ನು ಶುದ್ಧೀಕರಿಸಿ ಸಾರ್ವಜನಿಕರಿಗೆ ಒದಗಿಸಲು ಬೇಡಿಕೆಗೆ ಅನುಗುಣವಾಗಿ ಸಾಕಷ್ಟು ಯಂತ್ರೋಪಕರಣಗಳನ್ನು (ಪಂಪ್ ಗಳನ್ನು) ವ್ಯವಸ್ಥೆ ಮಾಡಿರುವುದಿಲ್ಲ. ಇದರಿಂದಾಗಿ ನೀರು ಇರುವ ಬಾವಿಗಳ ನೀರನ್ನು ಜನರಿಗೆ ಉಪಯೋಗಿಸಲು ಸಾಧ್ಯವಾಗುತ್ತಿಲ್ಲ.
ಇನ್ನು ಮಳೆ ಬರುವ ವರೆಗೆ ಮಂಗಳೂರು ನಗರದಲ್ಲಿ ವಾಸಿಸುವ ಜನರಿಗೆ ನೀರಿನ ಅವಶ್ಯಕತೆ ಅತೀ ಅಮೂಲ್ಯವಾಗಿರುವುದರಿಂದ ಕರ್ನಾಟಕ ಸರಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು, ನಗರಾಭಿವೃದ್ಧಿ ಸಚಿವರು ಮತ್ತು ಶಾಸಕರುಗಳು ಪೂರ್ಣ ಜವಾಬ್ದಾರಿಯನ್ನು ತೆಗೆದುಗೊಳ್ಳಬೇಕು ಮತ್ತು ನಗರಪಾಲಿಕೆಯನ್ನು ಆಡಳಿತ ಮಾಡುವ ಕಾಂಗ್ರೆಸ್ ಈ ಹೊಣೆಯನ್ನು ವಹಿಸಬೇಕು. ಇನ್ನು ಮುಂದಕ್ಕೆ ಕುಡಿಯುವ ನೀರಿನ ವಿಷಯದಲ್ಲಿ ರಾಜಕೀಯ ಮಾಡುವುದನ್ನು ಬಿಟ್ಟು ಜನರ ಸಂಕಷ್ಟಕ್ಕೆ ಸ್ಪಂದಿಸಿಬೇಕೆಂದು ಈ ಮೂಲಕ ರೂಪಾ ಡಿ.ಬಂಗೇರ ಆಗ್ರಹಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.