ಮಂಗಳೂರು : ರಾಜ್ಯದಲ್ಲಿ ದ್ವಿತೀಯ ಪಿ.ಯೂ.ಸಿ ಪ್ರಶ್ನೆ ಪತ್ರಿಕೆ 2 ನೇ ಬಾರಿಗೆ ಸೋರಿಕೆಯಾಗಿರುವುದಕ್ಕೆ ಪದವಿ ಪೂರ್ವ ಶಿಕ್ಷಣ ಮಂಡಳಿ, ಶಿಕ್ಷಣ ಇಲಾಖೆ ಹಾಗೂ ಶಿಕ್ಷಣ ಸಚಿವರ ವೈಫಲ್ಯತೆಯ ಕಾರಣವಾಗಿದೆ. ಮಾರ್ಚ್ 23 ರಂದು ರಸಾಯನ ಶಾಸ್ತ್ರ ಪ್ರಶ್ನೆ ಪತ್ರಿಕೆಯು ಸೋರಿಕೆಯಾದಾಗ ಮಾರ್ಚ್ 29 ಕ್ಕೆ ಪರೀಕ್ಷೆಯನ್ನು ಘೋಷಿಸಿ ಪ್ರತಿಭಟನೆ ನಡೆದಾಗ ಪರೀಕ್ಷೆಯನ್ನು ಮಾರ್ಚ್ 31ಕ್ಕೆ ನಡೆಸಲು ತೀರ್ಮಾನಿಸಲಾಯಿತು.
ಮಾರ್ಚ್ 23 ರ ಪ್ರಶ್ನೆ ಪತ್ರಿಕೆಸೋರಿಕೆಯಾದಾಗಲೇ ಕಟ್ಟುನಿಟ್ಟಿನ ಕ್ರಮಕೈಗೊಳ್ಳದೆ ಮರು ಪರೀಕ್ಷಾದಿನ ಘೋಷಣೆ ಮಾಡಿರುವುದು ಹಾಗೂ ಪ್ರಶ್ನೆ ಪತ್ರಿಕೆಯ ಭದ್ರತೆಯ ಕುರಿತು ಯಾವುದೇ ಮುಂಜಾಗರೂಕತಾ ಕ್ರಮ ಕೈಗೊಳ್ಳದಿರುವುದು ಬೇಜವಾಬ್ದಾರಿತನಕ್ಕೆ ಕೈಕನ್ನಡಿಯಾಗಿದೆ. ಮೊದಲ ಬಾರಿಗೆ ಸೋರಿಕೆಯಾದಾಗ ಕ್ರಮ ಕೈಗೊಂಡಿದ್ದಿದ್ದರೆ 2ನೇ ಬಾರಿ ಹೀಗಾಗುತ್ತಿರಲಿಲ್ಲ. ಈ ಹಗರಣದಲ್ಲಿ ಯಾವುದೋ ಪ್ರಭಾವಿ ವ್ಯಕ್ತಿಯು ಶಾಮಿಲಾಗಿದ್ದು ಅವರ ರಕ್ಷಣೆ ಮಾಡಲು ಸರಕಾರ ಪ್ರಯತ್ನಿಸುತ್ತಿರುವ ಕುರಿತು ಶಂಕೆ ಮೂಡುತ್ತಿದೆ.
ವಿಧಾನಸಭೆಯಲ್ಲಿ ಪ್ರತಿಪಕ್ಷಗಳು ಮಾನ್ಯ ಶಿಕ್ಷಣ ಮಂತ್ರಿಗಳ ರಾಜೀನಾಮೆಗೆ ಆಗ್ರಹಿಸಿದಾಗ ನಾನ್ಯಾಕೆ ರಾಜೀನಾಮೆ ಕೊಡಬೇಕು ಎಂದು ಉಡಾಫೆಯ ಉತ್ತರ ನೀಡುವುದರ ಮೂಲಕ ತಮ್ಮ ಇಲಾಖೆಯಲ್ಲಿ ನಡೆದಿರುವ ಹಗರಣ ತಮಗೆ ಸಂಬಂಧಿಸಿರುವುದಿಲ್ಲ ಎಂಬುವುದನ್ನು ಒಪ್ಪಿಕೊಂಡು ಇಲಾಖೆಯ ಅಧಿಕಾರಿಗಳ ಮೇಲೆ ಹಿಡಿತವಿಲ್ಲ ಎಂಬುವುದನ್ನು ಸಾಬೀತುಪಡಿಸಿರುತ್ತಾರೆ.
ಈ ಪ್ರಕರಣದಲ್ಲಿ 40 ಮಂದಿ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಅಮಾನತುಗೊಳಿಸಿದ ಕ್ರಮವು ಸಮಸ್ಯೆಗೆ ಪರಿಹಾರವಲ್ಲ ಈ ರೀತಿಯ ಕ್ರಮ ಕೋಟೆ ಸೂರೆಹೋದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬಂತಿದೆ.
ಎರಡನೇ ಬಾರಿ ಒಂದೇ ವಿಷಯದ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿ ವಿದ್ಯಾರ್ಥಿಗಳು ಹಾಗೂ ಹೆತ್ತವರು ಗೊಂದಲಕ್ಕೆ ಸಿಲುಕಿ ಭವಿಷ್ಯದ ಬಗ್ಗೆ ಚಿಂತಿಸುವಂತಾಗಿದೆ. ಆದ್ದರಿಂದ ಮುಖ್ಯಮಂತ್ರಿಗಳಿಗೆ ವಿದ್ಯಾರ್ಥಿಗಳಿಗೆ ಹಾಗೂ ಹೆತ್ತವರಿಗೆ ನ್ಯಾಯ ಒದಗಿಸಲು ಮನಸ್ಸಿದ್ದರೆ ಶಿಕ್ಷಣ ಸಚಿವರನ್ನು ಹೊಣೆಗಾರರನ್ನಾಗಿ ಸಂಪುಟದಿಂದ ಕೈಬಿಡಬೇಕು ಮತ್ತು ಹಗರಣದಲ್ಲಿ ಭಾಗಿಯಾದ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ಮೇಲೆ ಕ್ರಿಮಿನಲ್ ಮೊಕದ್ದಮ್ಮೆ ದಾಖಲಿಸಿ ತ್ವರಿತ ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸುವಂತೆ ಆಗ್ರಹಿಸುತ್ತೇನೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.