ಮಂಗಳೂರು : ಫೆಬ್ರವರಿ ತಿಂಗಳಲ್ಲಿ ಜರಗಲಿರುವ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಸೋಲನ್ನು ಖಚಿತಪಡಿಸಿಕೊಂಡಿರುವ ಜಿಲ್ಲೆಯ ಉಸ್ತುವಾರಿ ಮತ್ತು ಆರೋಗ್ಯ ಸಚಿವರು ಜಿಲ್ಲೆಯ ಜನರ ಜ್ವಲಂತ ಸಮಸ್ಯೆಗಳಾದ ಎತ್ತಿನಹೊಳೆ ಮತ್ತು ರೈತರ ಕುಮ್ಕಿ ಹಕ್ಕಿನ ವಿಚಾರ ಬಿಜೆಪಿ ಮೇಲೆ ಆರೋಪ ಮಾಡುತ್ತಿರುವುದು ಹಾಸ್ಯಸ್ಪದವಾಗಿದೆ ಎಂದು ದ.ಕ.ಜಿಲ್ಲಾ ಬಿಜೆಪಿ ಟೀಕಿಸಿದೆ.
ಎತ್ತಿನ ಹೊಳೆ ಯೋಜನೆ ಅನುಷ್ಠಾನಕ್ಕೆ ರಾಜ್ಯ ಸರಕಾರ ಬದ್ಧವಾಗಿದೆ ಎಂದು ಸರಕಾರ ವಿಧಾನ ಸಭೆಯಲ್ಲಿ ಉತ್ತರ ನೀಡಿ, ಮುಖ್ಯಮಂತ್ರಿಯಾಗಿ, ಸಂಬಂಧಪಟ್ಟ ಇಲಾಖಾ ಮಂತ್ರಿಗಳು ಅದನ್ನು ಸಮರ್ಥಿಸುತ್ತಿದ್ದಾರೆ. ಬಿಜೆಪಿ ಸರಕಾರ ಇರುವಾಗ ರೈತರ ಜಮೀನಿಗೆ ತಾಗಿಕೊಂಡಿರುವ ಸರಕಾರಿ ಪರಂಬೋಕು ಜಮೀನಿನ ಕುಮ್ಕಿ ಹಕ್ಕನ್ನು ಗರಿಷ್ಟ 5 ಎಕ್ರೆವರೆಗೆ ನಿಗದಿಪಡಿಸಿ ಮಸೂದೆ ಮಾಡಿ ರಾಜ್ಯಪಾಲರಲ್ಲಿಗೆ ಕಳುಹಿಸಿದಾಗ ಅದನ್ನು ರಾಜ್ಯಪಾಲರು ಸಹಿ ಹಾಕಲು ನಿರಾಕರಿಸಿದ ವಿಚಾರ ಗೊತ್ತಿದ್ದೂ, ಇಬ್ಬರು ಮಂತ್ರಿಗಳು ತಿರುಚಿ ಹೇಳಿಕೆ ನೀಡುತ್ತಿರುವುದು ಹಾಸ್ಯಸ್ಪದವಾಗಿದೆ.
ತನ್ನ ಇಲಾಖೆಯ ಬಗ್ಗೆ ಸದನಕ್ಕೆ ತಪ್ಪು ಮಾಹಿತಿ ನೀಡಿ ವಿಧಾನಸಭಾ ಅಧ್ಯಕ್ಷರಿಂದ ಛೀಮಾರಿ ಹಾಕಿಸಿಕೊಂಡ ಸಚಿವ ಖಾದರ್ರವರು ಎತ್ತಿನಹೊಳೆ ಯೋಜನೆ ಬಗ್ಗೆ ಗೊಂದಲದ ಹೇಳಿಕೆ ನೀಡುತ್ತಿರುವುದು ದುರುದ್ದೇಶ ಪೂರಿತವಾಗಿದೆ. ಭೂಸುಧಾರಣಾ ಕಾಯಿದೆ, ಅಕ್ರಮ-ಸಕ್ರಮ, ರೈತರಿಗೆ ಉಚಿತ ವಿದ್ಯುತ್, ಮನೆ ನಿವೇಶನ, ಹಕ್ಕುಪತ್ರ ಇತ್ಯಾದಿ ಮೂಲಭೂತ ವಿಚಾರಗಳ ಬಗ್ಗೆ ಜಿಲ್ಲೆಯಲ್ಲಿ ಜನಸಂಘದ ಕಾಲದಿಂದಲೂ ಬಿಜೆಪಿ ಹೋರಾಟ ಮಾಡಿಕೊಂಡು ಬಂದಿರುವ ವಿಚಾರ ಸಚಿವ ರಮಾನಾಥ ರೈಯವರಿಗೆ ದ.ಕ.ಜಿಲ್ಲಾ ಬಿಜೆಪಿ ನೆನಪು ಮಾಡಿಕೊಡುತ್ತಿದೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದ ನಂತರ ಅಕ್ರಮ ಮರಳುಗಾರಿಕೆ ಗೋ-ಕಳ್ಳತನ, ವಿದ್ಯುತ್ ಕೊರತೆ, ಪಡಿತರ ಅವ್ಯವಸ್ಥೆ, ರೈತರ ಆತ್ಮಹತ್ಯೆ, ಹೆಣ್ಣು ಮಕ್ಕಳ ಅಪಹರಣ, ಕಾನೂನು ಸುವ್ಯವಸ್ಥೆಯಲ್ಲಿ ಕೊರತೆ ಇತ್ಯಾದಿ ವಿಚಾರಗಳಿಂದ ನಲುಗಿರುವ ಕಾಂಗ್ರೆಸ್ ಸರಕಾರ ಕೇಂದ್ರದಲ್ಲಿ ಎನ್.ಡಿ.ಎ. ಸರಕಾರದ ಜನ ಹಿತ ಕಾರ್ಯಕ್ರಮಗಳು ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿಗೆ ಅಧಿಕಾರ ನೀಡಲಿದೆ. ಅಲ್ಲದೆ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಜಿಲ್ಲೆಯ ಇಬ್ಬರು ಮಂತ್ರಿಗಳು ವಿಫಲರಾಗಿದ್ದು, ಹತಾಶ ಹೇಳಿಕೆ ನೀಡುತ್ತಿರುವುದು ಖಂಡನೀಯ ಎಂದು ಮಾಜಿ ಶಾಸಕ ಜಿಲ್ಲಾ ವಕ್ತಾರ ಕೆ.ಜಯರಾಮ್ ಶೆಟ್ಟಿ ಮಂತ್ರಿಗಳ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.