ಮಂಗಳೂರು: ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ಕಾರ್ಪೊರೇಶನ್ ಅಡಿಯಲ್ಲಿ ಆರಂಭಿಸಲಾಗಿರುವ ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆಯ ಅನ್ವಯ ಫೆ.27ರಂದು ಅಡ್ಯಾರಿನ ಸಹ್ಯಾದ್ರಿ ಕಾಲೇಜಿನಲ್ಲಿ ಉದ್ಯೋಗ ಶಿಬಿರವನ್ನು ಏರ್ಪಡಿಸಲಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದರು.
ಶುಕ್ರವಾರ ನಗರದ ‘ದಿ ಓಶಿಯನ್ ಪರ್ಲ್’ ಹೋಟೆಲ್ನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆಯ ಅನ್ವಯ ದೇಶದಾದ್ಯಂತ ಇರುವ ಲಕ್ಷಾಂತರ ಯುವಜನತೆಗೆ ವೃತ್ತಿಪರ ತರಬೇತಿಗಳನ್ನು ನೀಡಲಾಗುತ್ತಿದೆ. ಅವರಿಗೆ ಉದ್ಯೋಗ ದೊರಕಿಸಿಕೊಡುವ ನಿಟ್ಟಿನಲ್ಲಿ ಉದ್ಯೋಗ ಮೇಳಗಳನ್ನು ನಡೆಸಲಾಗುತ್ತಿದೆ. ಇದರ ಉಪಯೋಗವನ್ನು ಕರಾವಳಿಯ ಯುವಜನೆತೆ ಪಡೆದುಕೊಳ್ಳಲಿ ಎಂಬ ಉದ್ದೇಶದಿಂದ ಉದ್ಯೋಗ ಶಿಬಿರವನ್ನು ಮಂಗಳೂರಿನಲ್ಲಿ ನಡೆಸಲು ನಿರ್ಧರಿಸಿದ್ದೇವೆ ಎಂದರು.
ಈ ಉದ್ಯೋಗ ಶಿಬಿರದಲ್ಲಿ ಪಾಲ್ಗೊಳ್ಳಲು ಈಗಾಗಲೇ 50 ಕಂಪನಿಗಳು ಹೆಸರು ನೋಂದಾವಣೆ ಮಾಡಿಕೊಂಡಿವೆ. ಇನ್ನೂ 25 ಕಂಪನಿಗಳು ನೋಂದಾಯಿಸಿಕೊಳ್ಳುವ ಸಾಧ್ಯತೆ ಇದ್ದು, ಒಟ್ಟು 75ಕಂಪನಿಗಳು ಇದರಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಇದರಿಂದ ಒಟ್ಟು 2 ಸಾವಿರ ಉದ್ಯೋಗಗಳು ಸೃಷ್ಟಿಯಾಗಬಹುದು ಎಂಬ ಭರವಸೆ ಇದೆ ಎಂದರು.
ಇದರಲ್ಲಿ ಭಾಗವಹಿಸುವವರಿಗೆ ಉದ್ಯೋಗ ಖಾತ್ರಿಯಾಗಿ ಸಿಗಬೇಕು ಎಂಬ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ, ಹೀಗಾಗಿ ಇದು ಉದ್ಯೋಗ ಮೇಳ ಅಥವಾ ಉತ್ಸವ ಅಲ್ಲ, ಇದು ಶಿಬಿರ. ಇದರ ಸಂಪೂರ್ಣ ಜವಾಬ್ದಾರಿಯನ್ನು ನೋಡಿಕೊಳ್ಳಲು ಸಮಿತಿಯನ್ನು ರಚಿಸಲಾಗಿದ್ದು, ಇದರ ನೇತೃತ್ವವನ್ನು ರಾಜೇಶ್ ನಾಯ್ಕ್ ವಹಿಸಲಿದ್ದಾರೆ ಎಂದರು.
ರೂಮನ್ ಟೆಕ್ನಾಲಜಿ ಸಹಭಾಗಿತ್ವದಲ್ಲಿ ಈ ಉದ್ಯೋಗ ಶಿಬಿರವನ್ನು ಆಯೋಜನೆ ಮಾಡಲಾಗುತ್ತಿದೆ. ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ್ ಯೋಜನೆಯ ಅಧಿಕೃತ ಸಹಭಾಗಿತ್ವವನ್ನು ಈ ಸಂಸ್ಥೆ ಹೊಂದಿದ್ದು, ದೇಶದಾದ್ಯಂತ ಹಲವಾರು ಉದ್ಯೋಗ ಮೇಳಗಳನ್ನು ಆಯೋಜನೆ ಮಾಡಿಕೊಂಡು ಬಂದಿದೆ.
ಅಲ್ಲದೇ ಈ ಯೋಜನೆಯಡಿ ಉದ್ಯೋಗ ತರಬೇತಿಗಳನ್ನೂ ನೀಡಲಾಗುತ್ತಿದೆ. ಇದರಲ್ಲಿ 18ರಿಂದ 35 ವರ್ಷದವರು ಪಾಲ್ಗೊಳ್ಳಬಹುದಾಗಿದೆ. ಮೊದಲು ಹೆಸರನ್ನು ನೋಂದಾಯಿಸಿಕೊಂಡು, ಅಸಿಸ್ಟೆಂಟ್ ಫೀಸ್ 10 ಸಾವಿರ ಪಾವತಿಸಬೇಕು. ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಬಳಿಕ 10 ಸಾವಿರವನ್ನು ವಾಪಾಸ್ ನೀಡಲಾಗುತ್ತದೆ ಎಂದು ರೂಮನ್ ಟೆಕ್ನಾಲಜಿ ಸಿಇಓ ಮನೀಶ್ ಕುಮಾರ್ ಮಾಹಿತಿ ನೀಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.