ಮಂಗಳೂರು: “ಒಂದು ಭವ್ಯ ಕಟ್ಟಡದ ಭದ್ರತೆ ಹೇಗೆ ಅದರ ಅಡಿಪಾಯವನ್ನವಲಂಬಿಸಿದೆಯೋ ಅದೇ ರೀತಿಯಲ್ಲಿ ವ್ಯಕ್ತಿಯ ಭವಿಷ್ಯ ಅವನು ವಿದ್ಯಾರ್ಥಿ ಜೀವನದಲ್ಲಿ ಗಳಿಸಿದ ಶಿಸ್ತು, ಜ್ಞಾನ ಹಾಗೂ ವ್ಯಕ್ತಿತ್ವವನ್ನವಲಂಬಿಸಿದೆ. ಕೇವಲ ಉದ್ಯೋಗ ಗಳಿಕೆಯೇ ಶಿಕ್ಷಣದ ಉದ್ದೇಶವಲ್ಲ. ಉದ್ಯೋಗ, ವ್ಯಾಪಾರ ಮತ್ತು ವ್ಯವಹಾರ ಜೀವನದ ಒಂದು ಭಾಗ ಮಾತ್ರ. ಶಿಕ್ಷಣ ನಮಗೆ ಸಮಾಜದಲ್ಲಿ ಉತ್ತಮ ನಾಗರೀಕರಾಗಿ ಬದುಕುವುದನ್ನು ಕಲಿಸಬೇಕು. ಮತ್ತು ನಮ್ಮ ಜ್ಞಾನವನ್ನು ಸಮಜದ ಉನ್ನತಿಗೆ ಬಳಸುವಂತೆ ಪ್ರೇರಣೆ ನೀಡಬೇಕು. ಹಾಗಾದಾಗ ಮಾತ್ರ ವ್ಯಕ್ತಿ ಸಮಾಜ ಹಾಗು ದೇಶದ ಅಭಿವೃದ್ಧಿ ಸಾದ್ಯ. ಆ ದಿಸೆಯಲ್ಲಿ ಶ್ರಮಿಸುತ್ತಿರುವ ಶಾರದಾ ಶಿಕ್ಷಣ ಸಂಸ್ಥೆಗಳ ಪ್ರಯತ್ನ ನಿಜಕ್ಕೂ ಶ್ಲಾಘನೀಯ ಎಂದು ಖ್ಯಾತ ವೈದ್ಯ ಹಾಗೂ ಮಂಗಳೂರು ಕಸ್ತೂರ್ಬಾ ಮೆಡಿಕಲ್ ಕಾಲೇಜ್ ಆಸ್ಪತ್ರೆಯ ಪ್ರಾಧ್ಯಾಪಕ ಡಾ| ಚಕ್ರಪಾಣಿ ಅವರು ಹೇಳಿದರು. ಅವರು ನಗರದ ಶಾರದಾ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ಕಾಲೇಜಿನ ಪ್ರಾಂಶುಪಾಲ ಡಾ| ಡಿ. ಶ್ರೀಪತಿ ರಾವ್ ಅವರು ಕಾಲೇಜಿನ ವಾರ್ಷಿಕ ವರದಿಯನ್ನು ವಾಚಿಸಿದರೆ, ಸಂಖ್ಯಾಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಸ್ಮಿತಾ ಪೈ ಅತಿಥಿಗಳ ಪರಿಚಯ ಮಾಡಿದರು.
ಶಾರದ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಪ್ರೊ| ಎಂ.ಬಿ ಪುರಾಣಿಕ್ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.
ವೇದಿಕೆಯಲ್ಲಿ ಶಾರದ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷರಾದ ಶ್ರೀ ಕೆ.ಎಸ್ ಕಲ್ಲೂರಾಯ, ಟ್ರಸ್ಟಿಗಳಾದ ಶ್ರೀ ಪ್ರದೀಪ್ ಕುಮಾರ್ ಕಲ್ಕೂರ, ಶ್ರೀ ಸೀತಾರಾಮ್ ಆಚಾರ್, ಶಾರದಾ ಶಿಕ್ಷಣ ಸಂಸ್ಥೆಗಳ ಸಲಹೆಗಾರರಾದ ಡಾ| ಲೀಲಾ ಉಪಾಧ್ಯಾಯ, ಎಸ್.ಕೆ.ಡಿ.ಬಿ. ಅಸೋಸಿಯೇಶನ್ನ ಕಾರ್ಯದರ್ಶಿಗಳಾದ ಶ್ರೀ ಸುಧಾಕರ ರಾವ್ ಪೇಜಾವರ, ಶಾರದಾ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ| ಕಬ್ಬಿನಾಲೆ ಬಾಲಕೃಷ್ಣ ಭಾರದ್ವಾಜ್, ಶಾರದಾ ಪ.ಪೂ. ಕಾಲೇಜಿನ ಉಪಪ್ರಾಂಶುಪಾಲರಾದ ಶ್ರೀ ಮಹಾಬಲೇಶ್ವರ ಭಟ್ ಮತ್ತು ಶಿಕ್ಷಕ ರಕ್ಷಕ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಈ ಸಮಾರಂಭದಲ್ಲಿ ಕಾಲೇಜಿನ ಹಳೆವಿದ್ಯಾರ್ಥಿ ಹಾಗೂ ಕಳೆದ ವರ್ಷ ಪಿ.ಯು.ಸಿ ’ವಾಣಿಜ್ಯ’ ವಿಭಾಗದ ಪರೀಕ್ಷೆಯಲ್ಲಿ ರಾಜ್ಯಕ್ಕೇ ಮೊದಲನೆಯವಳಾಗಿ (593/600 ಅಂಕಗಳು) ಸಾಧನೆ ಮಾಡಿದ ಕುಮಾರಿ ರಶ್ಮಿತಾ ಪಿ., ಕಾಲೇಜಿನ ’ವಿಜ್ಞಾನ ವಿಭಾಗದಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿದ ಕುಮಾರಿ ಆರ್ಯ ಯಂ. ಹಾಗೂ ಈ ವರ್ಷದ ಅತ್ಯುತ್ತಮ ವಿದ್ಯಾರ್ಥಿ ಪ್ರಶಸ್ತಿ ಗಳಿಸಿದ ಕುಮಾರಿ ಮಧುರಾ ಕಾರಂತ್ ಇವರುಗಳನ್ನು ಚಿನ್ನದ ಪದಕ ಹಾಗೂ ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಕಲಿಕೆಯಲ್ಲಿ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.
ವೇದಘೂಷದೊಂದಿಗೆ ಆರಂಭಗೊಂಡ ಕಾರ್ಯಕ್ರಮದ ಮೊದಲಿಗೆ ವಿದ್ಯಾರ್ಥಿನಿ ಕು| ಹಿಮಾ ಕರ್ಕೇರ ಸ್ವಾಗತಿಸಿ ಕೊನೆಯಲ್ಲಿ ಮಾ| ರೋಶನ್ ಅಲೆಕ್ಸ್ ವಂದಿಸಿದರು. ಕು| ರೇಶ್ಮಾ ಕಾರ್ಯಕ್ರಮ ನಿರ್ವಹಿಸಿದರು.
ಸಭಾಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕತಿಕ ಕಾರ್ಯಕ್ರಮಗಳು ನಡೆದುವು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.