ಮಂಗಳೂರು : ದ.ಕ.ಜಿಲ್ಲೆಯಲ್ಲಿ ಅನೈತಿಕ ಪೊಲೀಸ್ಗಿರಿ ಪ್ರಕರಣಗಳು, ಸಂಘರ್ಷ ಗಲಭೆಗಳು ಹೆಚ್ಚು ನಡೆಯುತ್ತಿವೆ ಎಂದು ಕೇಂದ್ರ ಸರಕಾರದ ವಿರುದ್ಧದ ಪ್ರತಿಭಟನೆಯನ್ನು ದ.ಕ.ಜಿಲ್ಲೆಯಿಂದ ಪ್ರಾರಂಭಿಸಲಾಗುವುದು ಎಂದು ರಾಜ್ಯ ಮಹಿಳಾ ಕಾಂಗ್ರೆಸ್ನ ಅಧ್ಯಕ್ಷರು ಹೇಳಿರುವುದು ಹಾಸ್ಯಸ್ಪದವಾಗಿರುವುದು, ಈ ಪ್ರತಿಭಟನೆಯನ್ನು ವಿಧಾನ ಸೌಧದ ಎದುರಿನಿಂದ ಪ್ರಾರಂಭಿಸಿದ್ದರೆ ಹೆಚ್ಚು ಅರ್ಥ ಪೂರ್ಣವಾಗುತ್ತಿತ್ತು. ರಾಜ್ಯದಲ್ಲಿ ಹೆಚ್ಚುತ್ತಿರುವ ಮಹಿಳಾ ದೌರ್ಜನ್ಯ, ಅತ್ಯಾಚಾರ, ಗಲಭೆ, ಕಾನೂನು ಸುವ್ಯವಸ್ಥೆಯ ಜವಾಬ್ದಾರಿ ರಾಜ್ಯ ಸರಕಾರದ್ದಾಗಿದ್ದು, ಈ ಬಗ್ಗೆ ಮಹಿಳಾ ಕಾಂಗ್ರೆಸ್ ನವರು ಪ್ರತಿಭಟನೆ ನಡೆಸಿದರೆ, ನಾವೂ ನಿಮ್ಮೊಂದಿಗೆ ಕೈ ಜೋಡಿಸುತ್ತೇವೆ.
ಜನರ ಧಾರ್ಮಿಕ ಭಾವನೆಗಳನ್ನು ಕೆರಳಿಸಿ, ದಾರಿ ತಪ್ಪಿಸಿ ಕೇಂದ್ರ ಸರಕಾರದಲ್ಲಿ ಬಿಜೆಪಿ ಆಡಳಿತಕ್ಕೆ ಬಂದಿದೆ ಎಂಬ ಅವರ ಹೇಳಿಕೆಯು ಪ್ರಜ್ಞಾವಂತ ಮತದಾರರನ್ನು ಮೂರ್ಖರೆಂದು ಅವಹೇಳನ ಮಾಡಿದಂತಿದೆ.
ಈ ಹಿಂದೆ ಕೇಂದ್ರದಲ್ಲಿ ಆಡಳಿತ ನಡೆಸಿದ ಯುಪಿಎ ಸರಕಾರವು ಬ್ರಹ್ಮಾಂಡ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ದುರ್ಬಲ ವಿದೇಶಿ ನೀತಿ, ಅನಿಯಂತ್ರಿತ ಬೆಲೆ ಏರಿಕೆಯಿಂದಾಗಿ ದೇಶದ ಘನತೆ ಗೌರವವನ್ನು ವಿಶ್ವ ಮಟ್ಟದಲ್ಲಿ ಹರಾಜು ಹಾಕಿತ್ತು, ಮಾತ್ರವಲ್ಲದೆ ಜನಸಾಮಾನ್ಯರು ಭ್ರಮನಿರಸನಗೊಳ್ಳುವಂತೆ ಮಾಡಿತ್ತು. ಸ್ವಾತಂತ್ರ್ಯ ಗಳಿಸಿ ಇಷ್ಟು ವರ್ಷಗಳಿಂದ ಆಗದ ಸಾಧನೆಯನ್ನು ಈಗಿನ ಕೇಂದ್ರ ಸರಕಾರ ಕೇವಲ ಒಂದುವರೆ ವರ್ಷಗಳಲ್ಲಿ ಸಾಧಿಸಿ, ತೋರಿಸುತ್ತಿರುವುದರಿಂದ ಕಾಂಗ್ರೆಸ್ ನಾಯಕರು ತಮ್ಮ ಭವಿಷ್ಯದ ಬಗ್ಗೆ ಚಿಂತಾಕ್ರಾಂತರಾಗಿ ರಾಜ್ಯದಲ್ಲಿ ನಡೆಯುವ ಘಟನೆಗಳ ಜವಾಬ್ದಾರಿಯನ್ನು ಕೇಂದ್ರ ಸರಕಾರದ ಹೆಗಳಿಗೇರಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಸ್ವಚ್ಚ ಭಾರತ, ಕೌಶಲ್ಯ ಭಾರತದಂತಹ ಕಾರ್ಯಕ್ರಮಗಳಿಂದ ಯುವಜನರ ಮನಸ್ಸು ಗೆದ್ದಿರುವ ನರೇಂದ್ರ ಮೋದಿಯವರ ಸರಕಾರ ಅಂತರರಾಷ್ಟ್ರೀಯ ಮಟ್ಟದಲ್ಲಿ ಪಾತಾಳ ಸೇರಿದ್ದ ದೇಶದ ಗೌರವವನ್ನು ಎತ್ತರಕ್ಕೇರಿಸಿದೆ.
ಇವತ್ತು ವಿದೇಶಿಯರೆದುರು ನಾನು ಭಾರತೀಯ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ದಿನವನ್ನು ಮಾನ್ಯ ನರೇಂದ್ರಮೋದಿಯವರು ಸೃಷ್ಟಿಸಿದ್ದಾರೆ. ಕೇಂದ್ರ ಸರಕಾರದ ಈ ಯೋಜನೆಗಳ ವಿರುದ್ಧ ಅನವಶ್ಯಕ ಟೀಕೆ ಮಾಡುವವರು ಮೊನ್ನೆ ಕಾಂಗ್ರೆಸಿನ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಬೆಂಗಳೂರಿನ ಕಾಲೇಜಿನಲ್ಲಿ ಸಂವಾದ ನಡೆಸುವಾಗ ಎದುರಿಸಿದ ಮುಜುಗರ ಸನ್ನಿವೇಶವನ್ನು ನೆನಪು ಮಾಡುವುದು ಒಳಿತು. ಕೇಂದ್ರದಲ್ಲಿ ಬಿಜೆಪಿ ಸರಕಾರ ಬಂದ ಬಳಿಕ ದೇಶದ ಆರ್ಥಿಕತೆ ಪುನಶ್ಚೇತನಗೊಳ್ಳುತ್ತಿರುವುದು, ಕೋಮು ಗಲಭೆಗಳ ಸಂಖ್ಯೆ ಕ್ಷೀಣಿಸುತ್ತಿರುವುದು ಅಂಕಿ ಅಂಶಗಳಿಂದಲೇ ತಿಳಿದು ಬರುತ್ತದೆ.
ತೈಲೋತ್ಪನ್ನಗಳ ಬೆಲೆಯು ಅಂತರರಾಷ್ಟ್ರೀಯ ತೈಲ ಮಾರುಕಟ್ಟೆಯ ಬೆಲೆಯನ್ನು ಅವಲಂಬಿಸಿದ್ದರೂ, ಕೇಂದ್ರದಲ್ಲಿ ಬಿಜೆಪಿ ಸರಕಾರ ಬಂದ ಬಳಿಕ ಪೆಟ್ರೋಲ್, ಡೀಸಿಲ್ ಬೆಲೆ ನಿಯಂತ್ರಣದಲ್ಲಿದೆ. ಜವಾಬ್ದಾರಿಯುತ ವಿಪಕ್ಷವಾಗಿ ರಚನಾತ್ಮಕವಾಗಿ ಟೀಕೆ, ಟಿಪ್ಪಣಿಗಳನ್ನು ಮಾಡುವ ಕಾಂಗ್ರೆಸ್ನವರು ಕೇಂದ್ರದಲ್ಲಿ ತಮ್ಮ ಅಧಿಕಾರ ಅವಧಿಯಲ್ಲಿ ಆಗುತ್ತಿದ್ದ ಪದೇ ಪದೇ ಏರಿಕೆಯ ಅಂಕಿ ಅಂಶಗಳನ್ನು ಗಮನಿಸಿ ಮತ್ತೇ ಈ ಬಗ್ಗೆ ಹೇಳಿಕೆ ನೀಡುವುದು ಉಚಿತ.
ಆದ್ದರಿಂದ ರಾಜ್ಯ ಮಹಿಳಾ ಕಾಂಗ್ರೆಸ್ ನಡೆಸುವ ಪ್ರತಿಭಟನೆಯು ಕೇವಲ ರಾಜಕೀಯ ಪ್ರೇರಿತವಾಗಿದ್ದು, ಕೇಂದ್ರ ಸರಕಾರದ ಜನಪರ ಯೋಜನೆಗಳಿಂದ ಕಂಗೆಟ್ಟು, ಜನರ ಹಾದಿ ತಪ್ಪಿಸುವ ತಂತ್ರವಾಗಿದೆ ಎಂದು ರೂಪಾ ಡಿ.ಬಂಗೇರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.