ಮಂಗಳೂರು : ಕಳೆದ ಕೆಲವು ವರ್ಷಗಳಿಂದ ಮಡಂತ್ಯಾರ್ ಮೂಲದ ಜೋನ್ ಮೋನಿಸ್ ಎಂಬ ವ್ಯಕ್ತಿ ಮಂಗಳೂರಿನಲ್ಲಿ ‘ದಿರ್ವೆಂ’ ಎಂಬ ಪತ್ರಿಕೆಯನ್ನು ಬಳಸಿಕೊಂಡು ಅಮಾಯಕ ಕೊಂಕಣಿ ಜನರನ್ನು ವಂಚಿಸುತ್ತಾ ಬಂದಿರುವುದಲ್ಲದೇ ಖ್ಯಾತ ಮತ್ತು ಉದಯೋನ್ಮುಖ ಬರಹಗಾರರ ತೇಜೋವಧೆ ಮಾಡುತ್ತಾ ಭೀತಿಯ ವಾತಾವರಣವನ್ನು ಸೃಷ್ಠಿಸಿದ್ದಾನೆ.
ಮಡಂತ್ಯಾರಿನಲ್ಲಿ ಸ್ಕೀಮಿನಲ್ಲಿ ಕಪಾಟುಗಳನ್ನು ಕೊಡುತ್ತೇನೆ, ರಿಯಾಯತಿಯಲ್ಲಿ ವಿದ್ಯುತ್ ಸಂಪರ್ಕ ಒದಗಿಸುತ್ತೇನೆ, ಮೊಬೈಲ್ ಟವರ್ ಹಾಕಿಸುತ್ತೇನೆ ಎಂದು ಮುಗ್ಧ ಅಮಾಯಕ ಜನರಿಂದ ಲಕ್ಷಾಂತರ ರುಪಾಯಿ ಇಸ್ಕೊಂಡು ತಲೆಮರೆಸಿಕೊಂಡು ಮಂಗಳೂರಿಗೆ ಬಂದ ಈತ, ಇಲ್ಲಿ ದಿರ್ವೆಂ ಎಂಬ ಹೆಸರಿನಲ್ಲಿ ಪತ್ರಿಕೆ ಆರಂಬಿಸಿ ಸಾಕಷ್ಟು ಜನರಿಂದ ಹಣ ಪಡೆದುಕೊಂಡು, ಮರುಪಾವತಿ ಮಾಡದೇ, ವಿಚಾರಿಸಿದಾಗ ಪತ್ರಿಕೆಯಲ್ಲಿ ಬರೆದು ಮಾನ ಹರಾಜು ಹಾಕುವ ಧಮಕೀ ನೀಡುತ್ತಿದ್ದಾನೆ. ಇತ್ತೀಚಿನ ಕೆಲವು ಸಂಚಿಕೆಗಳಲ್ಲಿ ಕೆಲವರ ಭಾವಚಿತ್ರದ ಸಮೇತ ಕೀಳಾಗಿ ಬರೆದು ತೇಜೋವಧೆ ಮಾಡಿದ್ದಾನೆ. ಸಾಲದ ರೂಪದಲ್ಲಿ ದುಡ್ಡು ಕೊಟ್ಟ ಸಾಕಷ್ಟು ಉದ್ಯಮಿಗಳು, ಬರಹಗಾರರು, ಪಾದ್ರಿಗಳು ಭಯಭೀತರಾಗಿ ತೀರಾ ಅಸಹಾಯಕ ಪರಿಸ್ಥಿತಿಯಲ್ಲಿದ್ದಾರೆ. ಈತನ ಕೈಯಲ್ಲಿ ‘ಪತ್ರಿಕೆ’ ಎಂಬ ಅಸ್ತ್ರವಿದೆ ಮತ್ತು ಅದನ್ನು ಬಳಸಿ ತೇಜೋವಧೆ ಮಾಡುತ್ತಿರವ ಇವನ ವರಸೆಗೆ ಹೆದರಿ ಮರ್ಯಾದೆಗೋಸ್ಕರ ಅಂತ ಹಲವರು ಯಾವುದೇ ರೀತಿಯ ಕ್ರಮ ಕೈಗೊಳ್ಳಲು ಮುಂದೆ ಬರುತ್ತಿಲ್ಲ.
ಇಷ್ಟು ಮಾತ್ರವಲ್ಲದೇ ತನ್ನ ಪತ್ರಿಕೆಯ ಬಗ್ಗೆ ಏನಾದರೂ ಮಾತನಾಡಿದರೆ ಅವರಿಗೆ ಶಾಪ ತಟ್ಟುತ್ತದೆ, ರೋಗ ಬರುತ್ತದೆ, ಅಫಘಾತ ಸಂಭವಿಸುತ್ತದೆ ಎಂದು ಪತ್ರಿಕೆಯಲ್ಲಿ ಬರೆದು ಬೆದರಿಸುತ್ತಾನೆ. ಯುವ ಮತ್ತು ಉದಯೋನ್ಮುಖ ಬರಹಗಾರರನ್ನು ಪ್ರೋತ್ಸಾಹಿಸಿ ಬೆಳೆಸುವ ಪತ್ರಿಕಾ ಸಂಪಾದಕನ ಆದ್ಯ ಕರ್ತವ್ಯವನ್ನು ಮರೆತ ಈತ, ಇತ್ತೀಚೆಗೆ ಪ್ರತಿಭಾನ್ವಿತ ಕೊಂಕಣಿ- ಕನ್ನಡ ಬರಹಗಾರ ಹಾಗೂ ಪ್ರಾಧ್ಯಾಪಕ ಮೆಲ್ವಿನ್ ಕೊಳಲ್ಗಿರಿಯರು ರಸ್ತೆ ಅಪಘಾತದಲ್ಲಿ ಗಾಯಗೊಂಡು ಹಾಸಿಗೆಯಲ್ಲಿದ್ದಾಗ ನನ್ನ ಶಾಪ ತಟ್ಟಿ ಹಾಸಿಗೆ ಹಿಡಿದರು ಎಂದು ಪತ್ರಿಕೆಯಲ್ಲಿ ಕೀಳಾಗಿ ಮೂದಲಿಸಿ ಬರೆದು ಅರಳಿ ಬೆಳೆಯಬೇಕಾದ ಉದಯೋನ್ಮುಖ ಬರಹಗಾರನ ಮನೋಬಲವನ್ನು ಕುಗ್ಗಿಸುವ ವಿಕೃತ ಕೆಲಸ ಮಾಡಿದ್ದಾನೆ.
ಇದೇ ರೀತಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕೊಂಕಣಿ ಕವಿ ಮೆಲ್ವಿನ್ ರೊಡ್ರಿಗಸ್ ಬಗ್ಗೆ, ಹೆಸರಾಂತ ವಿಮರ್ಶಕ ಎಚ್ಚೆಮ್, ಪೆರ್ನಾಲ್ ಬಗ್ಗೆ, ಪ್ರಖ್ಯಾತ ಕವಿ ವಿಲ್ಸನ್ ಕಟೀಲ್ ಬಗ್ಗೆ ಕೂಡಾ ಬಹಳ ಕೀಳಾಗಿ ಪತ್ರಿಕೆಯಲ್ಲಿ ಬರೆದು ನಿಂದಿಸಿದ್ದಾನೆ.
ಯಾವುದೇ ಸಾಹಿತ್ಯಿಕ ಹಿನ್ನೆಲೆಯಾಗಲೀ, ಪತ್ರಿಕೆ ನಡೆಸುವ ಸಾಮರ್ಥ್ಯ, ನೈಜ ಕಾಳಜಿಯಾಗಲೀ ಇಲ್ಲದ ಜೋನ್ ಮೋನಿಸ್ ಎಂಬ ವಂಚಕನ ಕೈಗೆ, ಆತನ ಹಿನ್ನೆಲೆಯನ್ನು ವಿಚಾರಿಸದೇ, ಸೂಕ್ತ ತನಿಖೆ ಮಾಡದೇ ‘ಪತ್ರಿಕೆ’ ಎಂಬ ಅಸ್ತ್ರವನ್ನು ಜಿಲ್ಲಾಡಳಿತ ನೀಡಿರುವುದರಿಂದ ನಾವೆಲ್ಲರೂ ಭೀತಿಯಲ್ಲಿ ಬದುಕುವಂತಾಗಿದೆ. ಭೃಷ್ಟಾಚಾರವಿಲ್ಲದ ಇಲಾಖೆಯೆಂದು ಹೇಳಲಾಗುವ ಅಂಚೆ ಇಲಾಖೆ ಕೂಡಾ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ, ಆರ್.ಎನ್.ಐ. ದಾಖಲೆಗಳಲ್ಲಿ ಈಗಲೂ ವಾರಪತ್ರಿಕೆಯಾಗಿ ನೋಂದಾವಣೆಯಲ್ಲಿರುವ ಈತನ ಪತ್ರಿಕೆಗೆ ಮಾಸಪತ್ರಿಕೆಯೆಂದು ಅಂಚೆ ರಿಯಾಯತಿ ನೀಡಿದೆ.
ಕೊಂಕಣಿ ಸಾಹಿತಿಗಳು ಮತ್ತು ಕಲಾವಿದರ ಆತ್ಮಗೌರವ ಮತ್ತು ಹಿತಾಸಕ್ತಿಗಾಗಿ ಹೋರಾಡುವ ‘ಕೊಂಕಣಿ ರೈಟರ್ಸ್ ಆಂಡ್ ಆರ್ಟಿಸ್ಟ್ ಎಸೋಶಿಯೇಶನ್’ ಈ ಕುರಿತು ಸಂಬಂದಿತ ಅಧಿಕಾರಿಗಳಿಗೆ ಭೇಟಿಯಾಗಿ, ಕಳೆದ ಮಾರ್ಚ್ ತಿಂಗಳಲ್ಲಿ ದೂರನ್ನು ದಾಖಲಿಸಿದ್ದರೂ, ಈತನ ಮೇಲೆ ಯಾವುದೇ ಶಿಸ್ತುಕ್ರಮ ಕೈಗೊಳ್ಳಲಿಲ್ಲದಿರುವುದರಿಂದ, ಈತ ತನ್ನ ವಿಕೃತ ಕಾಯಕವನ್ನು ನಿರಾತಂಕವಾಗಿ ಎಗ್ಗಿಲ್ಲದೇ ಮುಂದುವರಿಸಿಕೊಂಡು ಹೋಗುತ್ತಿದ್ದಾನೆ. ಕೊಟ್ಟ ಸಾಲ ಕೇಳಲು ಹೋದವರ ಮೇಲೆ ಪೊಲೀಸು ಠಾಣೆಯಲ್ಲಿ ಸುಳ್ಳು ದೂರುಗಳನ್ನು ದಾಖಲಿಸಿ ಬೆದರಿಸುತ್ತಿದ್ದಾನೆ.
ತಾವೆಲ್ಲಾ ಪತ್ರಿಕೋದ್ಯಮದಲ್ಲಿದ್ದು, ಆರೋಗ್ಯಕರ ಸಮಾಜದ ಕನಸು ನನಸಾಗಿಸುವತ್ತ ಪ್ರಾಮಾಣಿಕವಾಗಿ ದುಡಿಯುವವರು. ಕಷ್ಟಪಟ್ಟು ಸಂಪಾದಿಸಿ, ಇಳಿವಯಸ್ಸಿನಲ್ಲಿ ನೆರವಾದೀತು ಎಂದು ಕೂಡಿಟ್ಟ ನಮ್ಮ ಅಲ್ಪ ಸ್ವಲ್ಪ ಉಳಿತಾಯನ್ನೂ ಕಳೆದುಕೊಂಡು ಮಾನಸಿಕ ಹಿಂಸೆ ಅನುಭವಿಸುತ್ತಾ, ಭೀತಿಯ ವಾತವರಣದಲ್ಲಿ ಬದುಕುತ್ತಿರುವ ನಮ್ಮ ಸಂಕಷ್ಟಗಳನ್ನು ಅರ್ಥ ಮಾಡಿ, ನಮಗೆ ಸಹಾಯ ಮಾಡುತ್ತೀರೆಂದು ನಂಬಿದ್ದೇವೆ.
ಕೊಂಕಣಿ ಸಾಹಿತಿಗಳು ಮತ್ತು ಕಲಾವಿದರ ಸಂಘಟನೆ ಈಗಾಗಲೇ ಈತನಿಂದ ವಂಚನೆಗೊಳಗಾಗಿ, ಸಾಕಷ್ಟು ಮೊತ್ತವನ್ನು ಕಳಕೊಂಡು ಹತಾಶೆಯಲ್ಲಿರುವವರಿಗಾಗಿ ಹೋರಾಡಲು ಒಂದು ಜಂಟಿ ಕ್ರೀಯಾ ಸಮಿತಿಯನ್ನು ರಚಿಸಿದ್ದು, ಈ ಸಮಿತಿಯು ಅಮಾಯಕ ಜನರ ದುಡ್ಡು ವಾಪಾಸು ಸಿಗುವವರೆಗೆ ಹೋರಾಡಲಿದೆ. ಈತನಿಂದ ವಂಚನೆಗೊಳಗಾದ ಜನರು ಸಮಿತಿಯ ಅಧ್ಯಕ್ಷ ರೊನಾಲ್ಡ್ ಸಿಕ್ವೇರಾ ( ಮೊಬಾಯ್ಲ್ : ೯೪೪೮೪೮೫೩೭೭ ) ಕಾರ್ಯದರ್ಶಿ ಫ್ಲೋರಿನ್ ರೋಚ್ ( ಮೊಬಾಯ್ಲ್ : ೯೮೮೦೮೧೦೩೨೯ ) ಇವರನ್ನು ಸಂಪರ್ಕಿಸಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.