ಮಂಗಳೂರು : ಕರಾವಳಿ ಕರ್ನಾಟಕದ ಈ ಭಾಗ ಭೂಗತ ಚಟುವಟಿಕೆಗಳಿಗೆ ನೆಲೆಯಾಗುತ್ತಿರುವ ಎಲ್ಲಾ ಮಾಹಿತಿಗಳು ಲಭ್ಯವಿದ್ದರೂ, ಈ ಕುರಿತಾಗಿ ಪತ್ರಿಕಾ ಮಾಧ್ಯಮಗಳು ದಾಖಲೆ ಸಹಿತ ಲೇಖನಗಳನ್ನು ಪ್ರಕಟಿಸಿದ್ದರೂ, ಜನಪ್ರತಿನಿಧಿಯಾಗಿ ನಾನು ನಗರ ಕೇಂದ್ರ ಭಾಗದಲ್ಲಿರುವ ಜೈಲಿನಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳು ಹಾಗೂ ಭೂಗತ ಪಾತಕಿಗಳ ಪ್ರಭಾವದ ಕುರಿತಾಗಿ ಸಂಬಂಧಿಸಿದ ಅಧಿಕಾರಿಗಳಿಗೆ, ಗೃಹ ಮಂತ್ರಿಗಳಿಗೆ ಹಾಗೂ ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದ್ದರೂ ಯಾವುದೇ ಕ್ರಮ ಕೈಗೊಳ್ಳದಿರುವ ಸರ್ಕಾರದ ದಿವ್ಯ ನಿರ್ಲಕ್ಷ ಇಂದಿನ ಪರಿಸ್ಥಿತಿಗೆ ಕಾರಣವಾಗಿದೆ.
ನಿನ್ನೆ ನಗರದ ಕೇಂದ್ರ ಕಾರಾಗೃಹದಲ್ಲಿ ನಡೆದ ಜೋಡಿ ಕೊಲೆ ಹಾಗೂ ಗುಂಪು ಘರ್ಷಣೆ ಸರ್ಕಾರದ ಮತ್ತು ಗೃಹ ಇಲಾಖೆಯ ಘೋರ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಪೆರ್ಮುದೆ, ಹಂಡೇಲು, ಮೂಡಬಿದ್ರೆ, ಮೂಡುಶೆಡ್ಡೆ, ತೊಕ್ಕೊಟ್ಟು ಮುಂತಾದ ಕಡೆಗಳಲ್ಲಿ ನಡೆದಿರುವ ಕೊಲೆ ಹಾಗೂ ಮಾರಣಾಂತಿಕ ಹಲ್ಲೆಗಳು ಕಳೆದ ಒಂದು ತಿಂಗಳಿನಲ್ಲಿ ಕರಾವಳಿಯ ಜನತೆಯನ್ನು ದಿಗ್ಭ್ರಮೆಗೊಳಿಸಿವೆ. ಈ ಮಾರಕ ಘಟನೆಗಳನ್ನು ಅವಲೋಕನ ಮಾಡಿದಾಗ ಕ್ಷುಲ್ಲಕ ಸಂಗತಿಗಳಿಗೆ ಹೆಚ್ಚಿನ ಆದ್ಯತೆ ಕೊಡುತ್ತಿರುವ ಇಲಾಖೆ ಈ ಘೋರ ಕೃತ್ಯದ ಹಿಂದಿರುವ ಅಪರಾಧಿಗಳ ಅಧೀನ ಕಾರ್ಯನಿರ್ವಹಿಸುತ್ತಿದೆಯೋ ಎಂಬ ಸಂಶಯ ಉಂಟಾಗುತ್ತಿದೆ. ಇಲ್ಲದಿದ್ದಲ್ಲಿ, ಜೈಲುವಾಸಿಗಳಾಗಿರುವ ಅಪರಾಧಿಗಳಿಗೆ ಮೊಬೈಲು, ಮಾದಕದ್ರವ್ಯ, ಹಾಗೂ ಶಸ್ತ್ರಗಳ ಪೂರೈಕೆ ಎಲ್ಲಿಂದ ಸಾಧ್ಯ? ಜೈಲಿನಲ್ಲಿ ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ ನಡೆದಾಗಲೂ ಪೊಲೀಸ್ ಇಲಾಖೆ ಎಚ್ಚತ್ತುಕೊಳ್ಳದಿರುವುದು ಘೋರ ದುರಂತ ಎಂದವರು ಹೇಳಿದ್ದಾರೆ.
ಶಾಲಾ ವಿದ್ಯಾರ್ಥಿಗಳ ಮೇಲೆ ಹೆಚ್ಚುತ್ತಿರುವ ಅತ್ಯಾಚಾರ, ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳೇ ಅಸಭ್ಯ ಚಿತ್ರೀಕರಣದಲ್ಲಿ ಮೀಸಲಾಗಿರುವ ಘಟನೆ ಹಾಗೂ ಮುಂದುವರೆದ ಭಾಗವಾಗಿ ಅಧಿಕಾರಿಯ ರಾಜೀನಾಮೆ ಪ್ರಹಸನ, ಎಸ್.ಐ. ಮಲ್ಲಿಕಾರ್ಜುನ ಬಂಡೆ ಹತ್ಯೆ ಪ್ರಕರಣ, ಎಸೈ ಜಗದೀಶ್ ಹತ್ಯೆ ಹಾಗೂ ಕರಾವಳಿ ಕರ್ನಾಟಕವನ್ನು ಬೆಚ್ಚಿ ಬೀಳಿಸಿದ ಘಟನೆಗಳು ರಾಜ್ಯದಲ್ಲಿ ಪೊಲೀಸ್ ಇಲಾಖೆಯು ಸಂಪೂರ್ಣ ನಿಷ್ಕ್ರೀಯವಾಗಿರುವುದನ್ನು ಹಾಗೂ ಗೃಹಮಂತ್ರಿಗಳ ಅಧ್ಯಕ್ಷತೆಯನ್ನು ಎತ್ತಿ ತೋರಿಸುತ್ತದೆ. ಇಷ್ಟೆಲ್ಲಾ ಗಂಭೀರ ಅಪರಾಧಗಳು ನಡೆಯುತ್ತಿದ್ದರೂ ನನ್ನ ಅವಧಿಯಲ್ಲಿ ಕನಿಷ್ಠ ಲಾಟಿಚಾರ್ಚ್ ನಡೆದಿಲ್ಲ ಎನ್ನುವ ನಿಕಟಪೂರ್ವ ಗೃಹ ಸಚಿವರ ಹೇಳಿಕೆ ಹಾಸ್ಯಸ್ಪದ ಹಾಗೂ ನಾಚಿಕೆಗೇಡಿನ ಸಂಗತಿಯಾಗಿದೆ.
ಕರಾವಳಿಯ ಈ ಭಾಗದಲ್ಲಿ ಹೆಚ್ಚುತ್ತಿರುವ ಮಾದಕ ದ್ರವ್ಯ ಸಾಗಾಟ, ಖೋಟಾ ನೋಟು ಚಲಾವಣೆ, ಅಕ್ರಮ ಶಸ್ತ್ರಾಸ್ತ್ರ ಸಂಗ್ರಹ, ಪಬ್ನಲ್ಲಿ ಶೂಟೌಟ್ ಪ್ರಕರಣ, ಹೊರದೇಶಗಳಿಂದ ಬರುತ್ತಿರುವ ಬೆದರಿಕೆ ಕರೆಗಳು, ಕರಾವಳಿಯಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಮರಳು ಮಾಫಿಯಾ, ಅವ್ಯಾಹತವಾಗಿ ನಡೆಯುತ್ತಿರುವ ಗೋವುಗಳ ಕಳ್ಳಸಾಗಾಣಿಕೆ, ಅಕ್ರಮ ಕಸಾಯಿಕಾನೆ, ಪ್ರತಿಷ್ಟಿತ ಕಾಲೇಜಿಗಳ ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವ ಮಾದಕ ದ್ರವ್ಯದ ಬಳಕೆ, ಹೆಣ್ಮಕ್ಕಳ ಕಣ್ಮರೆ ಮುಂತಾದ ಅಕ್ರಮ, ಅನೈತಿಕ ಹಾಗೂ ಸಮಾಜ ಘಾತುಕ ಚಟುವಟಿಕೆಗಳನ್ನು ಹತ್ತಿಕ್ಕುವಲ್ಲಿ ಹಾಗೂ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಪೊಲೀಸ್ ಇಲಾಖೆ ಸಂಪೂರ್ಣವಾಗಿ ವಿಫಲವಾಗಿದ್ದು, ಈ ಕೂಡಲೆ ಇಲಾಖೆ ಎಚ್ಚೆತ್ತುಕೊಂಡು ಯಾವುದೇ ಒತ್ತಡಗಳಿಗೂ ಮಣಿಯದೆ ನಿಷ್ಪಕ್ಷವಾದ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಕಾರಾಗೃಹದಲ್ಲಿ ನಡೆದ ಜೋಡಿ ಹತ್ಯೆ ಘಟನೆಯ ಕುರಿತು ವರದಿ ಮಾಡಲು ಹೋದ ಮಾಧ್ಯಮ ಪ್ರತಿನಿಧಿಗಳು ಹಾಗೂ ಪತ್ರಕರ್ತರ ಮೇಲೆ ನಡೆಸಿದ ಹಲ್ಲೆಯನ್ನು ತೀವ್ರವಾಗಿ ಖಂಡಿಸುತ್ತಾ, ಹಲ್ಲೆನಡೆಸಿದ ಮಾಡೂರು ಇಸೂಬ್ ಸಹಚರರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತೇನೆ.
ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸುತ್ತಿರುವ ಮೂವರು ಮಂತ್ರಿಗಳು ಹಾಗೂ ಆಡಳಿತ ಪಕ್ಷದ ಶಾಸಕರು ನಿರಂತರವಾಗಿ ಒಂದು ಕಣ್ಣಿಗೆ ಸುಣ್ಣ ಒಂದು ಕಣ್ಣಿಗೆ ಬೆಣ್ಣೆ ಎನ್ನುವ ರೀತಿಯಲ್ಲಿ ವರ್ತಿಸಿ ಈ ರೀತಿಯ ಅಪರಾಧಿ ಚಟುವಟಿಕೆಗಳನ್ನು ಪರೋಕ್ಷವಾಗಿ ಪ್ರೊತ್ಸಾಹಿಸಿದ ಪರಿಣಾಮವೇ ಈ ರೀತಿಯ ಘಟನೆಗಳಿಗೆ ಕಾರಣ ಎಂದು ಸಾರ್ವಜನಿಕರು ಮಾತನಾಡುತ್ತಿರುವುದು ವಿಷಾದನೀಯ. ಉಸ್ತುವಾರಿ ಸಚಿವರು ಹಾಗೂ ಆಡಳಿತ ಪಕ್ಷದ ಶಾಸಕರು ಇನ್ನಾದರೂ ತಮ್ಮ ಸಾಂವಿಧಾನಿಕ ಕರ್ತವ್ಯವನ್ನು ನಿಭಾಯಿಸುವಂತೆ ಆಗ್ರಹಿಸಿದ್ದಾರೆ ಎಂದು ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.