ಮಂಗಳೂರು : ನಗರದ ಕೊಡಿಯಾಲಬೈಲಿನ ಶಾರದಾ ವಿದ್ಯಾಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ನಗರದ ಪ್ರಖ್ಯಾತ ವೈದ್ಯ ಡಾ| ಬಿ. ಶ್ರೀನಿವಾಸ ಕಕ್ಕಿಲ್ಲಾಯರು ಸಮಾರಂಭದ ಮುಖ್ಯ ಅತಿಥಿಯಾಗಿ ಪಾಲ್ಗೊಂಡರು. ಪ್ರಪಂಚದಲ್ಲೆಡೆ ಸಾವಿರಾರು ಭಾಷೆಗಳು ಬಳಕೆಯಲ್ಲಿದ್ದು, ಮನುಷ್ಯ ಮಾತನಾಡುವ ಎಲ್ಲಾ ಭಾಷೆಗಳೂ ಶ್ರೇಷ್ಠವೇ ಆಗಿದೆ. ದ್ರಾವಿಡ ಭಾಷಾ ಸಮೂಹಕ್ಕೆ ಸೇರಿದ ಕನ್ನಡ ಭಾಷೆಯು ಅತ್ಯಂತ ಪ್ರಾಚೀನ ಭಾಷೆಯಾಗಿದ್ದು ಅತ್ಯಂತ ಶ್ರೀಮಂತವಾದ ಸಾಹಿತ್ಯಿಕ ಪರಂಪರೆಯನ್ನೂ ಹೊಂದಿದೆ. ನಮ್ಮ ಮುಂದಿನ ಪೀಳಿಗೆಯೆನ್ನಿಸಿದ ವಿದ್ಯಾರ್ಥಿಗಳು, ಯುವಜನತೆ, ನಿತ್ಯ ವ್ಯವಹಾರದಲ್ಲಿ ಕನ್ನಡ ಭಾಷೆಯನ್ನು ಬಳಕೆ ಮಾಡಿದಾಗ ಮಾತ್ರ ಭಾಷೆ ಉಳಿಯಲು ಸಾಧ್ಯ ಎಂಬುದಾಗಿ ಅತಿಥಿ ಭಾಷಣದಲ್ಲಿ ಅಭಿಪ್ರಾಯವಿತ್ತ ಡಾ| ಕಕ್ಕಿಲ್ಲಾಯರು ವಿವಿಧ ಭಾಷೆಗಳ ಉಗಮದ ಕಾರಣಗಳು, ಅವುಗಳ ಪ್ರಭೇದಗಳು, ಭಾಷಾ ಪ್ರಸರಣ, ಬೆಳವಣಿಗೆಯ ಹಂತಗಳ ಬಗ್ಗೆ ಸಂಕ್ಷಿಪ್ತವಾಗಿ ತಮ್ಮ ವಿಚಾರವನ್ನು ತಿಳಿಸಿದರು.
ಶಾರದಾ ವಿದ್ಯಾಸಂಸ್ಥೆಗಳ ಉಪಾಧ್ಯಕ್ಷರಾದ ಕೆ.ಎಸ್. ಕಲ್ಲೂರಾಯರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಅನೇಕ ಹಿರಿಯರ ಸತತ ಹೋರಾಟ, ಪರಿಶ್ರಮದ ಫಲವಾಗಿ ಕರ್ನಾಟಕ ರಾಜ್ಯದ ಸ್ಥಾಪನೆಯಾಯಿತು. ಕನ್ನಡಗರಾದ ನಾವು ನಮ್ಮ ಭಾಷೆ, ಸಂಸ್ಕೃತಿ, ಪರಂಪರೆಗಳ ಬಗ್ಗೆ ಅಭಿಮಾನವನ್ನು ಪಡುವುದರ ಜತೆಗೆ ನಿತ್ಯ ವ್ಯವಹಾರದಲ್ಲಿ ಕನ್ನಡವನ್ನು ಬಳಸಿ ಭಾಷೆಯ ಉಳಿವಿಗೆ ಶ್ರಮಿಸಬೇಕು ಎಂಬುದಾಗಿ ಕೆ.ಎಸ್.ಕಲ್ಲೂರಾಯರು ಈ ಸಂದರ್ಭದಲ್ಲಿ ಮಾತನಾಡುತ್ತಾ ಕರೆ ನೀಡಿದರು.
ಶಾರದಾ ವಿದ್ಯಾ ಸಂಸ್ಥೆಗಳ ಶೈಕ್ಷಣಿಕ ಸಲಹೆಗಾರರಾದ ಡಾ| ಲೀಲಾ ಉಪಾಧ್ಯಾಯ, ಶ್ರೀಮತಿ ವಿನೋದಾ ಅನಂತರಾಮ ರಾವ್, ಶಾರದಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ| ಬಾಲಕೃಷ್ಣ ಭಾರಧ್ವಾಜ್, ಶಾರದಾ ಪದವಿ-ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ| ಶ್ರೀಪತಿ ರಾವ್, ವಿದ್ಯಾಲಯ ಪ್ರಾಂಶುಪಾಲೆ ಶ್ರೀಮತಿ ಸುನೀತಾ ವಿ ಮಡಿಯವರು ಸಭಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಾರದಾ ವಿದ್ಯಾಲಯದ ವಿದ್ಯಾರ್ಥಿನಿ ಕು| ಶ್ರೇಯಾ ಭಟ್ ಮತ್ತು ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಪ್ರಥಮ್ ರಾಜ್ಯೋತ್ಸವ ಆಚರಣೆಯ ಮಹತ್ವದ ಬಗ್ಗೆ ಭಾಷಣವಿತ್ತರು. ಶಾರದಾ ವಿದ್ಯಾಲಯ ಮತ್ತು ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಪ್ರಾರ್ಥನೆ, ನಾಡಗೀತೆ, ರೈತಗೀತೆ, ಸಮೂಹಗೀತೆಗಳನ್ನು ಸಾಂದರ್ಭಿಕವಾಗಿ ಹಾಡಿ ಕಾರ್ಯಕ್ರಮದ ಶೋಭೆಯನ್ನು ಹೆಚ್ಚಿಸಿದರು. ಶಾರದಾ ವಿದ್ಯಾಲಯದ ವಿದ್ಯಾರ್ಥಿ ತೇಜಸ್ ಐತಾಳ್ ಸ್ವಾಗತಗೈದರೆ, ಚಕಿತ್ ಧನ್ಯವಾದ ಸಮರ್ಪಣೆಗೈದನು. ವಿದ್ಯಾಲಯದ ವಿದ್ಯಾರ್ಥಿ ನಾಯಕಿ ಕು| ನಂದಿನಿ ಶೆಟ್ಟಿ ಕಾರ್ಯಕ್ರಮ ನಿರ್ವಹಣೆಗೈದಳು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಶುಭ ಸಮಾಪ್ತಿಗೊಂಡಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.