ಮಂಗಳೂರು : ಭಾರತೀಯ ಪರಂಪರೆ ವಿಶ್ವಕ್ಕೆ ಮಾದರಿ, ಉತ್ಕೃಷ್ಟ ಬದುಕು ರೂಪಿಸಲು ಯೋಗ ಪರಂಪರೆ ಮಹತ್ತರವಾದ ಕೊಡುಗೆ ನೀಡಿದೆ. ಯೋಗ ವಿದ್ಯೆಯನ್ನು ಶಾಸ್ತ್ರೀಯವಾಗಿ ಅಭ್ಯಾಸಿಸಲು ಮಹರ್ಷಿ ಪತಂಜಲಿ ನೀಡಿದ ಮಾರ್ಗ ಮಹತ್ತರವಾದದ್ದು. ರಾಜಯೋಗವೆಂಬ ವಿದ್ಯೆಯನ್ನು ಸಿದ್ದಿಸಲು ಹಠಯೋಗ ಒಂದು ಉತ್ತಮ ಮಾರ್ಗ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಯೋಗ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ| ಕೆ. ಕೃಷ್ಣ ಶರ್ಮ ಅಭಿಪ್ರಾಯ ಪಟ್ಟರು.
ಅವಿಷ್ಕಾರ ಯೋಗ ಮತ್ತು ವೃತ್ತಿಪರ ಯೋಗ ಚಿಕಿತ್ಸಕರ ನೇತೃತ್ವದಲ್ಲಿ ನಡೆಯುತ್ತಿರುವ ದಸರಾ ಯೋಗ -2015 ದಲ್ಲಿ ಹಠಯೋಗ ಮತ್ತು ಯೋಗನಿದ್ರದ ಬಗ್ಗೆ ಮಾತನಾಡುತ್ತಾ ಯೋಗ ವಿದ್ಯೆಯು ಬೇರೆ ಬೇರೆ ರೂಪದಲ್ಲಿದ್ದರೂ ಅದನ್ನು ಶಾಸ್ತ್ರೀಯ ಪರಂಪರೆಯಲ್ಲಿ ಅಭ್ಯಾಸ ಮಾಡಿದಾಗ ಒಳ್ಳೆಯ ಫಲಿತಾಂಶ ಸಿಗುತ್ತದೆ. ಇಂತಹ ಫಲಿತಾಂಶದ ಅನುಭವದ ಸಾರವೇ ಯೋಗವನ್ನು ವಿಶ್ವ ಮೆಚ್ಚಿಕೊಂಡು ಈ ವಿದ್ಯೆಗೆ ಯುನೆಸ್ಕೋ ಮಾನ್ಯತೆ ಕೂಡ ಲಭಿಸಿದ್ದು.
ಆದರೆ ಯೋಗಾಭ್ಯಾಸ ವೈಜ್ಞಾನಿಕವಾದ ದಾಖಲೆಗಳಿಲ್ಲದೆ ಯಾವುದು ಸರಿ ಯಾವುದು ತಪ್ಪು ಎಂದು ಜನರು ಅರಿತುಕೊಳ್ಳಲು ಆಗದಿರುವುದರಿಂದ ಈಗ ಯೋಗ ಒಂದು ವ್ಯಾಯಾಮ ರೂಪ ಪಡೆದಿದೆ. ಹಠಯೋಗ ಅಭ್ಯಾಸವೆಂದರೆ ಉನ್ನತ ಸಾಧನೆಗೆ ನಮ್ಮನ್ನು ನಾವು ತಯಾರಿ ಮಾಡಿಕೊಂಡಂತೆ ಹಠಯೋಗದಲ್ಲಿ ಬರುವ ಆಹಾರ ಕ್ರಮ, ಆಹಾರ ವಿಧ, ಪಥ್ಯ ಅಪಥ್ಯದ ಬಗ್ಗೆ ಅರಿತುಕೊಂಡು, ಶಾಸ್ತ್ರೀಯವಾಗಿ ಹೇಳಿದ ರೀತಿಯಲ್ಲಿ ಯೋಗಾಸನ, ಶುದ್ದೀಕರಣ ಕ್ರಿಯೆ ಪ್ರಾಣಾಯಾಮ, ಬಂದಮುದ್ರಾ ಹಾಗೂ ಧ್ಯಾನದ ವಿಧಾನಗಳನ್ನು ಅಭ್ಯಾಸ ಮಾಡುವುದೇ ಉನ್ನತ ಸಾಧನೆಯ ಮೊದಲು ಹಂತ ಎಂದು ಹೇಳಿದರು. ಯೋಗ ನಿದ್ರೆ ಎಂಬುದು ಮನುಷ್ಯ ತನ್ನ ಪೂರ್ಣ ವಿಶ್ರಾಂತಿಗೆ ಒಳಪಡಿಸಿ ಚುರುಕು, ಲವಲವಿಕೆ ಹಾಗೂ ಚೈತನ್ಯವನ್ನು ನೀಡುವದರೊಂದಿಗೆ ಹಲವಾರು ಮಾರಕ ಖಾಯಿಲೆಗಳಿಂದಲೂ ಪುನರ್ ಜೀವನ ಪಡೆಯಬಹುದು ಎಂದು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾರದಾ ಶಿಕ್ಷಣ ಸಂಸ್ಥೆಯ ಶೈಕ್ಷಣಿಕ ಸಲಹೆಗಾರರಾದ ಡಾ| ಲೀಲಾ ಉಪಾದ್ಯಾಯ ಮಾತನಾಡುತ್ತಾ ಯೋಗವನ್ನು ಅನುಷ್ಠಾನಗೊಳಿಸುವುದೇ ಕಷ್ಟ. ಒಮ್ಮೆ ಜೀವನದ ಭಾಗವಾಗಿ ಯೋಗ ಬಂದಾಗ ಜೀವನವು ಸುಂದರ ಹಾಗೂ ಸಂತೃಪ್ತಿಯ ಬದುಕು ನಮ್ಮದಾಗುತ್ತದೆ. ಇಂತಹ ವಿದ್ಯೆಯನ್ನು ಮಕ್ಕಳಿಗೆ ಚಿಕ್ಕಂದಿನಿಂದಲೇ ನೀಡಿ ಒಂದು ಸ್ವಸ್ಥ ಸಮಾಜ ಕಟ್ಟಲು ಕೊಡುಗೆ ನೀಡಬೇಕು. ಯೋಗದಲ್ಲಿ ಉನ್ನತ ಅಧ್ಯಯನದಲ್ಲಿ ತೊಡಗಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಆವಿಷ್ಕಾರ ಯೋಗದ ಸಂಸ್ಥೆಯ ಮುಖ್ಯಸ್ಥ ಕುಶಾಲಪ್ಪ ಯೋಗ ವಿಜ್ಞಾನದಲ್ಲಿ ಅಧ್ಯಯನ ಪೂರೈಸಿಕೊಂಡು ದೇಶ ವಿದೇಶಗಳಿಗೆ ಸಂಪನ್ಮೂಲ ವ್ಯಕ್ತಿಗಳು ಪಲಾಯಣ ಮಾಡುತ್ತಿದ್ದರೂ, ಮಂಗಳೂರನ್ನು ಯೋಗದ ಕಾರ್ಯಕ್ಷೇತ್ರವಾಗಿ ಆಯ್ಕೆ ಮಾಡಿಕೊಂಡ ವೃತ್ತಿಪರ ಯೋಗ ಚಿಕಿತ್ಸಕರು ಸಮಾಜ ಸೇವೆಯ ಧ್ಯೇಯಕಾರ ಕು. ದಿತಿಯವರು ಚಿಕಿತ್ಸಾ ಸಹಯಾರ್ಥವಾಗಿ ವಿಶೇಷ ಯೋಗ ತರಬೇತಿ ಹಠಯೋಗ ಮತ್ತು ಯೋಗ ನಿದ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಜನರು ತಮ್ಮ ಆರೋಗ್ಯವನ್ನು ಕಾಪಾಡಿಕೊಂಡು ಆರೋಗ್ಯದ ವೆಚ್ಚದ ಹಣವನ್ನು ಸಮಾಜ ಸೇವೆಗೆ ಬಳಸಬಹುದು ಎಂದು ಹೇಳಿದರು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ ಹಿರಿಯ ಯೋಗ ಚಿಕಿತ್ಸಕ ಡಾ| ಕೆ. ಗಣೇಶ್ ಭಟ್ ಮಾತನಾಡುತ್ತಾ ಯೋಗ ವಿದ್ಯೆಯನ್ನು ಪಾರಂಪರಿಕವಾಗಿ ಶಾಸ್ತ್ರೀಯವಾಗಿ ಹಾಗೂ ವೈಜ್ಞಾನಿಕವಾಗಿ ಅಧ್ಯಯನ ಮಾಡಿಕೊಂಡು ಇನ್ನೊಬ್ಬರಿಗೆ ಕಲಿಸಿಕೊಡುವುದು ಉತ್ತಮ ಕ್ರಮವನ್ನು ಇನ್ನೊಬ್ಬರಿಗೆ ಯೋಗ ಶಿಕ್ಷಣವನ್ನು ನೀಡುವಾಗ ತಾವು ಅದರ ಅಧ್ಯಯನದಲ್ಲಿ ತೊಡಗಿಸಿಕೊಂಡು, ವ್ಯಕ್ತಿಗತ ವಿಮರ್ಶೆಯಿಂದ ಯೋಗ ಚಿಕಿತ್ಸೆ ನೀಡಿದಾಗ ಎಂತಹ ಮಾರಕ ಖಾಯಿಲೆಗೂ ಯೋಗದಿಂದ ಪರಿಹಾರ ಸಿಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮ ವಿಜಯವಾಣಿಯ ಸ್ಥಾನೀಯ ಸಂಪಾದಕರಾದ ಶ್ರೀ ಸುರೇಂದ್ರ ವಾಗ್ಳೆ, ಸಂಗೀತ ಗುರು ಬಳ್ಳಿಪದವು ಯೋಗೀಶ ಶರ್ಮ ಉಪಸ್ಥಿತರಿದ್ದರು. ಯೆನಪೋಯ ಆಸ್ಪತ್ರೆಯ ಯೋಗ ಚಿಕಿತ್ಸಕಿ ಶ್ರೀಮತಿ ವಿದ್ಯಾಶ್ರೀ ವಂದಿಸಿದರು. ಆಯಾಮ ಯೋಗ ಚಿಕಿತ್ಸಕ ಶ್ರೀಕಾಂತ್ ಎಸ್. ವಿ. ನಿರೂಪಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.