News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಮೇಜರ್ ಓಂಕಾರ್ ಸಿಂಗ್ ಕಲ್ಕತ್ ಮತ್ತು ಆಪರೇಷನ್ ಗುಲ್ಮಾರ್ಗ್ 

1947  ರಲ್ಲಿ, ದೇಶ ವಿಭಜನೆಯ ಅವ್ಯವಸ್ಥೆಯ ನಡುವೆ, ವಾಯುವ್ಯ ಗಡಿ ಪ್ರಾಂತ್ಯದ (ಇಂದಿನ ಪಾಕಿಸ್ತಾನ) ಬನ್ನು ಎಂಬ ಗಡಿ ಪಟ್ಟಣದಲ್ಲಿ ಭಾರತೀಯ ಸೈನ್ಯಾಧಿಕಾರಿ ಮೇಜರ್ ಓಂಕಾರ್ ಸಿಂಗ್ ಕಲ್ಕತ್ ಅವರ ಕೈಗೆ ಒಂದು ರಹಸ್ಯ ಪತ್ರ ಸಿಕ್ಕಿತ್ತು. ಆ ಪತ್ರವು ಜಮ್ಮು ಮತ್ತು ಕಾಶ್ಮೀರದ ಮೇಲೆ ಆಕ್ರಮಣ ಮಾಡುವ ವಿವರವಾದ ನೀಲನಕ್ಷೆ – ಆಪರೇಷನ್ ಗುಲ್ಮಾರ್ಗ್‌ನ ರಹಸ್ಯವನ್ನು ಬಹಿರಂಗಪಡಿಸಿತ್ತು. ಆ ಸಮಯದಲ್ಲಿ ಕಲ್ಕತ್ ಅವರು ಬನ್ನು ಫ್ರಾಂಟಿಯರ್ ಬ್ರಿಗೇಡ್‌ನಲ್ಲಿ ಬ್ರಿಗೇಡ್ ಮೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಅವರ ಕಮಾಂಡಿಂಗ್ ಆಫೀಸರ್, ಬ್ರಿಟಿಷ್ ಅಧಿಕಾರಿ ಬ್ರಿಗೇಡಿಯರ್ ಸಿ. ಪಿ. ಮುರ್ರೆ ಅಧಿಕೃತ ಪ್ರವಾಸದಲ್ಲಿದ್ದಾಗ ಬಂದಿದ್ದ ಪತ್ರ ಅವರಿಗೆ ಭಾರತದ ವಿರುದ್ಧದ ಷಡ್ಯಂತ್ರ ತಿಳಿಯುವಂತೆ ಮಾಡಿತ್ತು. 

ಸ್ವಾತಂತ್ರ್ಯದ ನಂತರ ಕೇವಲ ಐದು ದಿನಗಳು ಕಳೆದಿದ್ದ ಆಗಸ್ಟ್ 20, 1947ರಂದು, “ವೈಯಕ್ತಿಕ/ಅತ್ಯುನ್ನತ ರಹಸ್ಯ” ಎಂದು ಗುರುತಿಸಲಾಗಿದ್ದ ಡೆಮಿ-ಅಧಿಕೃತ ಪತ್ರವೊಂದು ಬ್ರಿಗೇಡಿಯರ್ ಮುರ್ರೆ ಅವರ ಹೆಸರಿನಲ್ಲಿ ಬಂದಿತ್ತು. ಕಸ್ಟಮ್ ಪ್ರಕಾರ, ಕಮಾಂಡರ್ ಅನುಪಸ್ಥಿತಿಯಲ್ಲಿ ಬ್ರಿಗೇಡ್ ಮೇಜರ್ ಆಗಿದ್ದ ಕಲ್ಕತ್ ಅವರು ಆ ಪತ್ರವನ್ನು ತೆರೆಯುವ ಅಧಿಕಾರ ಹೊಂದಿದ್ದರು. ಪತ್ರವನ್ನು ತೆರೆದ ಕಲ್ಕತ್‌ಗೆ ಅದು ಸಾಮಾನ್ಯ ಮಿಲಿಟರಿ ಪತ್ರವಲ್ಲ ಎಂದು ತಿಳಿಯಿತು. ಅದು ಪಾಕಿಸ್ತಾನ ಸೈನ್ಯದ ಕಮಾಂಡರ್-ಇನ್-ಚೀಫ್ ಜನರಲ್ ಸರ್ ಫ್ರಾಂಕ್ ಮೆಸ್ಸೆರ್ವಿ ಅವರಿಂದ ಬಂದಿದ್ದು, ಜೊತೆಗೆ “ಆಪರೇಷನ್ ಗುಲ್ಮಾರ್ಗ್” ಎಂಬ ಶೀರ್ಷಿಕೆಯ ವಿವರವಾದ ದಾಖಲೆ ಲಗತ್ತಾಗಿತ್ತು. ಇದು ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಆಕ್ರಮಿಸಿ ವಶಪಡಿಸಿಕೊಳ್ಳುವ ಸಂಪೂರ್ಣ ಯೋಜನೆಯಾಗಿತ್ತು.

ಯೋಜನೆಯ ಪ್ರಕಾರ, ಪಾಕಿಸ್ತಾನವು ಸುಮಾರು 20 ಬುಡಕಟ್ಟು ಲಷ್ಕರ್‌ಗಳನ್ನು ರಚಿಸುವುದು, ಪ್ರತಿಯೊಂದು ಲಷ್ಕರ್ ಸುಮಾರು 1,000 ಪಶ್ತೂನ್ ಬುಡಕಟ್ಟು ಯೋಧರನ್ನು ಒಳಗೊಳ್ಳುವುದು. ಈ ಪಡೆಗಳನ್ನು ಪಾಕಿಸ್ತಾನ ಸೈನ್ಯದ ಅಧಿಕಾರಿಗಳು ಶಸ್ತ್ರಸಜ್ಜಿತಗೊಳಿಸಿ, ಸರಬರಾಜು ಮಾಡಿ, ಮಾರ್ಗದರ್ಶನ ನೀಡಿ, ರಹಸ್ಯವಾಗಿ ನಿಯಂತ್ರಿಸುವುದು. ಕಾರ್ಯಾಚರಣೆಯನ್ನು “ಜನರಲ್ ತಾರಿಕ್” ಎಂಬ ಕಾವ್ಯನಾಮದಲ್ಲಿ ಮೇಜರ್ ಜನರಲ್ ಅಕ್ಬರ್ ಖಾನ್ ನೇತೃತ್ವದಲ್ಲಿ ನಡೆಸುವುದು. 

ಬುಡಕಟ್ಟು ಪಡೆಗಳು ಮುಜಫರಾಬಾದ್ ಮೂಲಕ ಶ್ರೀನಗರದತ್ತ ಮುನ್ನಡೆಯುತ್ತಾ ರಾಜ್ಯವನ್ನು ಪಾಕಿಸ್ತಾನಕ್ಕೆ ಸೇರಿಸಿಕೊಳ್ಳುವುದು…ಈ ಯೋಜನೆಗಳನ್ನು ಪತ್ರದಲ್ಲಿ ವಿವರಿಸಲಾಗಿತ್ತು.  ಆಕ್ರಮಣದ ಯೋಜಿತ ದಿನಾಂಕ ಅಕ್ಟೋಬರ್ 20, 1947. ಪತ್ರವನ್ನು ಓದಿದ ಕಲ್ಕತ್ ಅವರು ಪಾಕಿಸ್ತಾನವು “ಬುಡಕಟ್ಟು ದಂಗೆ”ಯ ವೇಷದಲ್ಲಿ ಸಂಘಟಿತ ಮಿಲಿಟರಿ ಆಕ್ರಮಣವನ್ನು ಯೋಜಿಸುತ್ತಿರುವುದನ್ನು ಅರ್ಥಮಾಡಿಕೊಂಡರು. ಆಗಸ್ಟ್ 21 ರಂದು ಬ್ರಿಗೇಡಿಯರ್ ಮುರ್ರೆ ಬನ್ನುಗೆ ಹಿಂದಿರುಗಿದಾಗ ಕಲ್ಕತ್ ಅವರಿಗೆ ಎಲ್ಲ ವಿಷಯ ತಿಳಿಸಿದರು. 

ಮುರ್ರೆ ಗಾಬರಿಗೊಂಡು, “ಇದರ ಬಗ್ಗೆ ಯಾರಿಗೂ ಒಂದು ಮಾತೂ ಹೇಳಬೇಡಿ. ಹೇಳಿದರೆ ಪಾಕಿಸ್ತಾನಿಗಳು ನಿಮ್ಮನ್ನು ಜೀವಂತವಾಗಿ ಬಿಡುವುದಿಲ್ಲ” ಎಂದು ಎಚ್ಚರಿಸಿದರು. ಆದರೆ ಕಲ್ಕತ್ ಅವರಿಗೆ ರಹಸ್ಯ ತಿಳಿದಿದೆ ಎಂಬ ಸುದ್ದಿ ಪಾಕಿಸ್ತಾನಿ ಅಧಿಕಾರಿಗಳಿಗೆ ಹೇಗೋ ತಿಳಿಯಿತು. ಈ ಮಾಹಿತಿಯನ್ನು ಅವರು ಭಾರತಕ್ಕೆ ತಲುಪಿಸಬಹುದು ಎಂದು ಭಯಪಟ್ಟು ಕಲ್ಕತ್ ಅವರನ್ನು ಗೃಹಬಂಧನದಲ್ಲಿ ಇರಿಸಲಾಯಿತು. ಆದರೆ ಒಬ್ಬ ದಯಾಳು ಬ್ರಿಟಿಷ್ ಬೇಸ್ ಕಮ್ಯುನಿಕೇಷನ್ ಅಧಿಕಾರಿಯ ಸಹಾಯದಿಂದ ಕಲ್ಕತ್ ವಿಭಜನೆಯ ಅಸ್ತವ್ಯಸ್ತ ವಾತಾವರಣದಲ್ಲಿ ವೇಷ ಬದಲಾಯಿಸಿ ತಪ್ಪಿಸಿಕೊಂಡರು. ಸರಕು ರೈಲು ಹತ್ತಿ ಅಕ್ಟೋಬರ್ 18, 1947 ರಂದು ಅಂಬಾಲಾ ತಲುಪಿದರು.

ಅಲ್ಲಿಂದ ದೆಹಲಿಗೆ ರೈಲು ಹತ್ತಿ, ಅಕ್ಟೋಬರ್ 19ರಂದು ರಕ್ಷಣಾ ಸಚಿವ ಸರ್ದಾರ್ ಬಲದೇವ್ ಸಿಂಗ್, ಬ್ರಿಗೇಡಿಯರ್ ಕಲ್ವಂತ್ ಸಿಂಗ್ ಮತ್ತು ಕರ್ನಲ್ ಪಿ. ಎನ್. ಥಾಪರ್ ಅವರನ್ನು ಭೇಟಿ ಮಾಡಿ ಆಪರೇಷನ್ ಗುಲ್ಮಾರ್ಗ್‌ನ ಎಲ್ಲಾ ವಿವರಗಳನ್ನು ತಿಳಿಸಿದರು. ಆದರೆ ಭಾರತೀಯ ಅಧಿಕಾರಿಗಳ ಪ್ರತಿಕ್ರಿಯೆ ನಿರಾಶಾದಾಯಕವಾಗಿತ್ತು. ಅಂತಹ ಯೋಜನೆ ಸಾಧ್ಯವೇ ಇಲ್ಲ ಎಂದು ಅವರು ಕಲ್ಕತ್ ಅವರ ಮಾಹಿತಿಯನ್ನು ತಳ್ಳಿಹಾಕಿದರು. ಕೆಲವರು ಅದನ್ನು ಉತ್ಪ್ರೇಕ್ಷೆ ಎಂದೂ ಬಿಟ್ಟರು. ಹೀಗಾಗಿ ಯಾವುದೇ ಗಂಭೀರ ಕ್ರಮಗಳನ್ನು ತೆಗೆದುಕೊಳ್ಳಲಿಲ್ಲ. ಎರಡು ದಿನಗಳ ನಂತರ, ಅಕ್ಟೋಬರ್ 22, 1947 ರಂದು ಪಾಕಿಸ್ತಾನ ಬೆಂಬಲಿತ ಬುಡಕಟ್ಟು ಪಡೆಗಳು ಕಲ್ಕತ್ ಎಚ್ಚರಿಸಿದಂತೆಯೇ ಜಮ್ಮು-ಕಾಶ್ಮೀರಕ್ಕೆ ನುಗ್ಗಿದವು. ಮುಜಫರಾಬಾದ್ ಮೂಲಕ ಮುನ್ನಡೆದು ಶ್ರೀನಗರದತ್ತ ಸಾಗಿದವು. ಮಹಾರಾಜ ಹರಿ ಸಿಂಗ್ ಅವರು ಅಕ್ಟೋಬರ್ 26 ರಂದು ಭಾರತದೊಂದಿಗೆ ವಿಲೀನ ಒಪ್ಪಂದಕ್ಕೆ ಸಹಿ ಹಾಕಿದರು. ನಂತರ ಭಾರತೀಯ ಸೈನ್ಯವನ್ನು ಆ ರಾಜ್ಯಕ್ಕೆ ಕಳುಹಿಸಲಾಯಿತು. ಅಕ್ಟೋಬರ್ 27 ರಂದು ಶ್ರೀನಗರಕ್ಕೆ ವಿಮಾನದ ಮೂಲಕ ಭಾರತೀಯ ಸೈನಿಕರನ್ನು ಇಳಿಸಿ ನಗರವನ್ನು ರಕ್ಷಿಸಲಾಯಿತು.  ಪ್ರಧಾನಿ ಜವಾಹರಲಾಲ್ ನೆಹರು ಅವರಿಗೆ ಕಲ್ಕತ್ ಅವರು ವಾರಗಳ ಹಿಂದೆಯೇ ಎಚ್ಚರಿಕೆ ನೀಡಿದ್ದರು ಎಂಬ ವಿಷಯ ತಿಳಿದು ಕೋಪಗೊಂಡರಾದರೂ, ಆಗಲೇ ಬಹುತೇಕ ತಡವಾಗಿತ್ತು.

ಇಂದು, ಎಂಟು ದಶಕಗಳ ನಂತರವೂ ಆ ಘಟನೆಗಳ ಪರಿಣಾಮಗಳು ದಕ್ಷಿಣ ಏಷ್ಯಾದ ಭೂ-ರಾಜಕೀಯವನ್ನು ರೂಪಿಸುತ್ತಲೇ ಇವೆ. ಆ ದೊಡ್ಡ ಇತಿಹಾಸದಲ್ಲಿ ಮೇಜರ್ ಓಂಕಾರ್ ಸಿಂಗ್ ಕಲ್ಕತ್ ಅವರ ಧೈರ್ಯ, ದೇಶಭಕ್ತಿ ಮತ್ತು ತ್ಯಾಗ ಒಂದು ಪ್ರಕಾಶಮಾನ ಅಧ್ಯಾಯವಾಗಿ ಉಳಿದಿದೆ. ಪಾಕಿಸ್ತಾನ-ಬ್ರಿಟಿಷ್ ಪಿತೂರಿಯನ್ನು ಬಹಿರಂಗಪಡಿಸಿದ ಧೈರ್ಯಶಾಲಿ ಅಧಿಕಾರಿಯಾಗಿ ಅವರ ಹೆಸರು ಚರಿತ್ರೆಯಲ್ಲಿ ಸ್ಥಾನ ಪಡೆದಿದೆ. ಅವರ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿದ್ದರೆ ಇತಿಹಾಸವೇ ಬೇರೆಯಾಗುತ್ತಿತ್ತು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top