
ಅದು ಆಂಧ್ರಪ್ರದೇಶದ ಪೂರ್ವ ಘಟ್ಟಗಳ ಮರೆಯಲ್ಲಿರುವ ಅರಕು ಕಣಿವೆ. 1990ರ ದಶಕದ ಕೊನೆಯಲ್ಲಿ ಅಲ್ಲಿನ ಹಳ್ಳಿಗಳ ಸುತ್ತಲೂ ಕಾಫಿ ಗಿಡಗಳು ಹಸಿರಾಗಿ ಸೊಂಪಾಗಿ ಬೆಳೆದಿದ್ದವು. ಆದರೆ ಅವುಗಳು ಜನರ ಬದುಕಿನ ಭಾಗವಾಗಿದ್ದವೇ ಹೊರತು ಸಮೃದ್ಧಿಯ ಮೂಲವಾಗಿರಲಿಲ್ಲ. ಕಾಫಿಯ ಬಂಗಾರದ ಬೆಳೆ ಬೆಳೆಯುತ್ತಿದ್ದರು ಅಲ್ಲಿನ ಬುಡಕಟ್ಟು ಕುಟುಂಬಗಳು ಮಾತ್ರ ಅರಣ್ಯ ಉತ್ಪನ್ನಗಳು, ಋತುವಿನಲ್ಲಿ ಸಿಗುವ ಬೆಳೆಗಳು ಮತ್ತು ದೈನಂದಿನ ಕೂಲಿ ಕೆಲಸದ ಮೇಲೆ ಅವಲಂಬಿತವಾಗಿದ್ದವು. ಮಧ್ಯವರ್ತಿಗಳು ಕಾಫಿಯನ್ನು ಕಡಿಮೆ ಬೆಲೆಗೆ ಖರೀದಿಸುತ್ತಿದ್ದರು ಆದರೆ ಪಾವತಿ ಮಾತ್ರ ನಿಯಮಿತವಾಗಿರಲಿಲ್ಲ. ಇದರಿಂದ ಬುಡಕಟ್ಟು ರೈತರ ಜೀವನ ದುರ್ಬಲವಾಗಿತ್ತು. ಅರಕು ಬುಡಕಟ್ಟು ಉತ್ಸವದಲ್ಲಿ ನೃತ್ಯ ಮತ್ತು ಸಂತೋಷದ ಕ್ಷಣಗಳಿದ್ದವು ಆದರೆ ಜನರ ಜೇಬಲ್ಲಿ ಹಣವಿರಲಿಲ್ಲ. ಅವರ ದೈನಂದಿನ ಜೀವನ ಕಷ್ಟಕರವಾಗಿತ್ತು.
ಆದರೆ 1999-2000ರ ಸುಮಾರಿಗೆ ಎಲ್ಲವೂ ಬದಲಾಯಿತು. ನಾಂದಿ ಫೌಂಡೇಶನ್ ಮತ್ತು ಇತರ ಸಂಸ್ಥೆಗಳು ಬುಡಕಟ್ಟು ಸಮುದಾಯವನ್ನು ಸಂಪರ್ಕಿಸಿ ಅವರಿಗೆ ಸಾವಯವ ಕಾಫಿ ಕೃಷಿಯ ತರಬೇತಿ ಆರಂಭಿಸಿದರು. “ನಮ್ಮ ತಲೆಮಾರುಗಳಿಂದಲೂ ನಾವು ರಾಸಾಯನಿಕಗಳಿಲ್ಲದೆ ಬೆಳೆ ಬೆಳೆಯುತ್ತಿದ್ದೆವು – ಅದು ನಮ್ಮ ಜೀವನ ವಿಧಾನವಾಗಿತ್ತು. ನಮ್ಮ ಆ ಸಾಂಪ್ರದಾಯಿಕ ವಿಧಾನವೇ ಇಂದು ನಮ್ಮನ್ನು ಜಾಗತಿಕ ಮಟ್ಟಕ್ಕೆ ಕರೆದೊಯ್ದಿದೆ. ನಮ್ಮ ಸಾವಯವ ಕಾಫಿ ಇಂದು ಪ್ರೀಮಿಯಂ ಉತ್ಪನ್ನವಾಗಿದೆ” ಎಂದು ಅಲ್ಲಿನವರು ಹೇಳುತ್ತಾರೆ.
2000ರ ದಶಕದ ಆರಂಭದಲ್ಲಿ ಅನೇಕ ಬುಡಕಟ್ಟು ಮಹಿಳೆಯರು ಕಾಫಿ ಸಹಕಾರ ಸಂಘವನ್ನು ಸೇರಿದಳು. ಮಧ್ಯವರ್ತಿಗಳ ನಿಯಂತ್ರಣದಿಂದ ಮುಕ್ತಗೊಂಡು, ರೈತರು ನೇರವಾಗಿ ಗುಣಮಟ್ಟದ ಕಾಫಿ ಉತ್ಪಾದಿಸಲು ಶುರು ಮಾಡಿದರು. ಮಾಗಿದ ಚೆರ್ರಿಗಳನ್ನು ಕೈಯಿಂದ ಆರಿಸುವುದು, ವಿಂಗಡಿಸುವುದು, ಶುಷ್ಕಗೊಳಿಸುವುದು – ಇವೆಲ್ಲವೂ ಅಂತರರಾಷ್ಟ್ರೀಯ ಮಾನದಂಡಗಳಿಗೆ ತಾಳೆಯಾಗುವಂತೆ ಕಲಿತರು. ಹಿಂದೆ ಹೊಲದಲ್ಲಿ ಸದ್ದಿಲ್ಲದೆ ಕೆಲಸ ಮಾಡುತ್ತಿದ್ದ ಮಹಿಳೆಯರು ಈಗ ಸಭೆಗಳಲ್ಲಿ ಕೂತು ನಿರ್ಧಾರ ತೆಗೆದುಕೊಳ್ಳುವ ಮಟ್ಟಕ್ಕೆ ಬೆಳೆದರು. ಸಹಕಾರದಲ್ಲಿ 50% ಮಹಿಳಾ ಪ್ರಾತಿನಿಧ್ಯ ಇದೆ – ಇದು ಸಾಮಾಜಿಕ ವಿಶ್ವಾಸದ ದೊಡ್ಡ ಹೆಜ್ಜೆಯೇ ಆಗಿದೆ.
ಕೆಲವು ವರ್ಷಗಳಲ್ಲಿ ಜನರ ಆದಾಯ ಸ್ಥಿರವಾಯಿತು. ಕುಟುಂಬಗಳು ಸಾಲದಿಂದ ಮುಕ್ತಗೊಂಡವು. ಮಕ್ಕಳು ನಿಯಮಿತ ಶಾಲೆಗೆ ಹೋಗಲಾರಂಭಿಸಿದರು. ಮನೆಗಳು ಮಣ್ಣಿನ ಗುಡಿಸಲುಗಳಿಂದ ಸದೃಢ ಕಟ್ಟಡಗಳಿಗೆ ಬದಲಾದವು. ವಲಸೆ ಕಡಿಮೆಯಾಯಿತು. ಪುರುಷರು ಹೊರಗೆ ಕೆಲಸಕ್ಕೆ ಹೋಗುವ ಅಗತ್ಯ ಕಡಿಮೆಯಾಯಿತು. ಇಂದು ಅಲ್ಲಿನ ಮಕ್ಕಳು ಕಾಲೇಜಿನಲ್ಲಿ ಓದುತ್ತಿದ್ದಾರೆ. ಒಂದು ಕಾಲದಲ್ಲಿ ಅದು ಕೇವಲ ಕನಸಾಗಿತ್ತು.
ಇಂದು ಅರಕು ಕಾಫಿ ಯುರೋಪ್, ಜಪಾನ್ ಮತ್ತು ಇತರ ದೇಶಗಳಿಗೆ ರಫ್ತಾಗುತ್ತಿದೆ. 2017ರಲ್ಲಿ ಪ್ಯಾರಿಸ್ನಲ್ಲಿ ಅರಕು ಕೆಫೆ ತೆರೆಯಿತು – ಭಾರತದ ಸ್ಪೆಷಲ್ ಕಾಫಿಗೆ ಜಾಗತಿಕ ಮನ್ನಣೆ ದೊರೆಯಿತು. 2018ರಲ್ಲಿ ಪ್ಯಾರಿಸ್ Prix Epicures OR ಪ್ರಶಸ್ತಿಯಲ್ಲಿ ಗೋಲ್ಡ್ ಮೆಡಲ್ ಗೆದ್ದಿತು. “ನಾನು ಆಂಧ್ರಪ್ರದೇಶದ ಹೊರಗೆ ಎಂದಿಗೂ ಹೋಗಿಲ್ಲ. ಆದರೆ ನನ್ನ ಕೈಯಿಂದ ಆರಿಸಿದ ಕಾಫಿ ಪ್ಯಾರಿಸ್ನಲ್ಲಿ ಇಂದು ಕುಡಿಯಲ್ಪಡುತ್ತಿದೆ” ಎಂದು ಇಂದು ಅಲ್ಲಿನ ಜನ ಹೇಳುತ್ತಿದ್ದಾರೆ.
ಇಂದು ಅರಕು ಕಾಫಿ ಕೇವಲ ಬೆಳೆಯಲ್ಲ – ಇದು ಬುಡಕಟ್ಟು ಜ್ಞಾನವನ್ನು ಗೌರವಿಸಿ ಭವಿಷ್ಯವನ್ನು ನಿರ್ಮಿಸುವ ಸಾಧ್ಯತೆಯ ಸಂಕೇತ. ಕಾಫಿ ಸುಗ್ಗಿಯ ಸಮಯದಲ್ಲಿ ತೋಟದಲ್ಲಿ ನಡೆಯುವಾಗ ಇಂದು ಕೇವಲ ಗಿಡಗಳನ್ನಲ್ಲ, ಪರಿವರ್ತನೆಯನ್ನು ನಾವು ನೋಡುತ್ತೇವೆ. ಅಲ್ಲಿನ ಸಂಸ್ಕೃತಿ ಉಳಿದಿದೆ – ಧಿಮ್ಸಾ ನೃತ್ಯ, ಅರಣ್ಯ ಪೂಜೆ, ಹಬ್ಬಗಳು ಮುಂದುವರೆದಿವೆ. ಆದರೆ ಜೊತೆಗೆ ಆದಾಯದ ಘನತೆ, ಜಾಗತಿಕ ಮನ್ನಣೆ ಮತ್ತು ಮಹಿಳಾ ಸಬಲೀಕರಣವೂ ಗೋಚರಿಸಿದೆ.
ಅರಕು ಕಣಿವೆಯ ಕಾಫಿ ಒಂದು ಕಪ್ನಲ್ಲಿ ಮಾತ್ರವಲ್ಲ – ಅದು ಲಕ್ಷ್ಮಿ ಮತ್ತು ಅವಳ ಸಮುದಾಯದ ಆತ್ಮವಿಶ್ವಾಸ, ಸ್ವಾಭಿಮಾನ ಮತ್ತು ಹೊಸ ಆಸೆಯಲ್ಲೂ ಇದೆ. ಇದು ಸಾಂಪ್ರದಾಯಿಕ ಜ್ಞಾನವನ್ನು ಆಧುನಿಕ ಅವಕಾಶಗಳೊಂದಿಗೆ ಸಂಯೋಜಿಸಿದರೆ, ಬದಲಾವಣೆ ಸಾಧ್ಯ ಎಂಬುದನ್ನು ತೋರಿಸಿಕೊಟ್ಟಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


