ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ದೂರವಾಣಿ ಮೂಲಕ ಸಂಭಾಷಣೆ ನಡೆಸಿದ್ದಾರೆ. ಸೆಪ್ಟೆಂಬರ್ ತಿಂಗಳಿನಲ್ಲಿ ಇಬ್ಬರು ಮುಖಂಡರು ಭೇಟಿಯಾಗುವ ನಿರೀಕ್ಷೆ ಇದೆ.
ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳಲು ಭಾರತವು ಅಮೆರಿಕದ ನಿರ್ಬಂಧಗಳನ್ನು ಎದುರಿಸುತ್ತಿರುವಾಗ, ಮೋದಿ ಕಳೆದ ವಾರ ಪುಟಿನ್ ಅವರೊಂದಿಗೆ ಮಾತನಾಡಿದ್ದರು ಮತ್ತು ರಾಜಕೀಯ ಮತ್ತು ರಾಜತಾಂತ್ರಿಕ ವಿಧಾನಗಳ ಮೂಲಕ ಸಂಘರ್ಷ ಪರಿಹಾರಕ್ಕಾಗಿ ಕರೆ ನೀಡಿದ್ದರು. ಈಗ ಅವರು ಝೆಲೆನ್ಸ್ಕಿ ಜೊತೆ ಮಾತನಾಡಿದ್ದು ಮಹತ್ವ ಪಡೆದುಕೊಂಡಿದೆ.
ಸಂಘರ್ಷದ ಶಾಂತಿಯುತ ಇತ್ಯರ್ಥಕ್ಕಾಗಿ ಭಾರತದ “ಸ್ಥಿರ ” ನಿಲುವನ್ನು ಮೋದಿ ಪುನರುಚ್ಚರಿಸಿದ್ದಾರೆ ಮತ್ತು ಶಾಂತಿಯ ಆರಂಭಿಕ ಪುನಃಸ್ಥಾಪನೆಗಾಗಿ ಭಾರತಹೊಂದಿರುವ ನಿಲುವನ್ನು ಪ್ರತಿಪಾದಿಸಿದ್ದಾರೆ. ಇನ್ನೊಂದೆಡೆ ಝೆಲೆನ್ಸ್ಕಿ ಅವರು, ಈ ಯುದ್ಧದ ಮುಂದುವರಿಕೆಗೆ ಹಣಕಾಸು ಒದಗಿಸುವ ಸಾಮರ್ಥ್ಯವನ್ನು ಕಡಿಮೆ ಮಾಡಲು ರಷ್ಯಾದ ಇಂಧನ, ವಿಶೇಷವಾಗಿ ತೈಲದ ರಫ್ತನ್ನು ಮಿತಿಗೊಳಿಸುವುದು ಅಗತ್ಯ ಎಂದು ಪ್ರತಿಪಾದಿಸಿದ್ದಾರೆ ಎನ್ನಲಾಗಿದೆ.
“ರಷ್ಯಾದ ಮೇಲೆ ಸ್ಪಷ್ಟವಾದ ಹತೋಟಿ ಹೊಂದಿರುವ ಪ್ರತಿಯೊಬ್ಬ ನಾಯಕನೂ ಅದಕ್ಕೆ ಯುದ್ಧ ನಿಲ್ಲಿಸುವ ಸೂಚನರ ನೀಡುವುದು ಮುಖ್ಯ” ಎಂದು ಝೆಲೆನ್ಸ್ಕಿ ಹೇಳಿದ್ದಾರೆ.
ದೀರ್ಘ ಸಂಭಾಷಣೆಯ ಸಮಯದಲ್ಲಿ ರಷ್ಯಾ ವಿರುದ್ಧದ ನಿರ್ಬಂಧಗಳ ಬಗ್ಗೆ ವಿವರವಾಗಿ ಚರ್ಚಿಸಿದ್ದೇನೆ ಎಂದು ಝೆಲೆನ್ಸ್ಕಿ ಹೇಳಿದ್ದಾರೆ. ಉಕ್ರೇನ್ ಸಂಬಂಧಿತ ಬೆಳವಣಿಗೆಗಳ ಬಗ್ಗೆ ಝೆಲೆನ್ಸ್ಕಿ ಮೋದಿಗೆ ವಿವರಿಸಿದ್ದಾರೆ ಮತ್ತು ಮೋದಿ ಅವರಿಗೆ ಧನ್ಯವಾದ ಹೇಳಿದ್ದಾರೆ ಎಂದು ಮಾತ್ರ ಭಾರತೀಯ ಹೇಳಿಕೆಯಲ್ಲಿ ತಿಳಿಸಲಾಗಿದ್ದು, ನಿರ್ಬಂಧಗಳ ಬಗ್ಗೆ ಯಾವುದೇ ಉಲ್ಲೇಖವಿಲ್ಲ.
ನ್ಯಾಯಯುತ ಮತ್ತು ಶಾಶ್ವತ ಶಾಂತಿಯನ್ನು ಸಾಧಿಸಲು ಉಕ್ರೇನ್ನ ಪ್ರಯತ್ನಗಳನ್ನು ಮೋದಿ ಬೆಂಬಲಿಸಿದ್ದಾರೆ ಮತ್ತು ಉಕ್ರೇನ್ಗೆ ಸಂಬಂಧಿಸಿದ ಎಲ್ಲವನ್ನೂ ಉಕ್ರೇನ್ನ ಭಾಗವಹಿಸುವಿಕೆಯೊಂದಿಗೆ ನಿರ್ಧರಿಸಬೇಕು ಎಂಬ ಝೆಲೆನ್ಸ್ಕಿಯವರ ನಿಲುವನ್ನು ಹಂಚಿಕೊಂಡಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷರ ಕಚೇರಿ ಹೇಳಿದೆ.
ಇನ್ನೊಂದೆಡೆ ಟ್ರಂಪ್-ಪುಟಿನ್ ಸಭೆಗೆ ಶ್ವೇತಭವನವು ಝೆಲೆನ್ಸ್ಕಿಯನ್ನು ಆಹ್ವಾನಿಸುವುದನ್ನು ಪರಿಗಣಿಸುತ್ತಿದೆ ಎಂದು ವಾಷಿಂಗ್ಟನ್ ವರದಿಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.