ಮಂಗಳೂರು : ಕಳೆದ ಏಳೆಂಟು ತಿಂಗಳಿನಿಂದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಸಾಮರಸ್ಯ ಕದಡುವ ಯತ್ನ ಹೆಚ್ಚಾಗಿ ನಡೆಯುತ್ತಿದೆ. ಪೊಲೀಸ್ ಇಲಾಖೆ ಏನೂ ಕ್ರಮಕೈಗೊಳ್ಳದೆ ಸುಮ್ಮನಿದೆ. ಸರಕಾರ ತುಷ್ಟೀಕರಣದ ರಾಜಕೀಯ ನಡೆಸುತ್ತಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ.
ನಗರದ ಜಿಲ್ಲಾ ಬಿ.ಜೆ.ಪಿ. ಕಛೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಅಮಾಯಕ ಹಿಂದೂ ಹುಡುಗರ ಮೇಲೆ ಪೊಲೀಸ್ ಕೇಸ್ ಇಲಾಖೆ ದಾಖಲಿಸುತ್ತಿದೆ. ಆದರೆ ಆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯಲ್ಲಿ ಪ್ರಗತಿಯಾಗುತ್ತಿಲ್ಲ. ಪೊಲೀಸ್ ಇಲಾಖೆ ಸುಮ್ಮನಿದ್ದು ಇದರಿಂದ ಪೊಲೀಸ್ ಇಲಾಖೆಯನ್ನು ಜನರು ಅನುಮಾನದಿಂದ ನೋಡುವಂತಾಗುತ್ತಿದೆ ಗೋಕಳ್ಳತನ ಮತ್ತು ಇತರ ವಿಷಯಗಳನ್ನು ತಡೆಯುವಲ್ಲಿಯೂ ವಿಫಲವಾಗಿದೆ.
ಮೂಡಬಿದರೆಯಲ್ಲಿ ಕೊಲೆಗೀಡಾದ ಪ್ರಶಾಂತ್ ಅವರ ಕೊಲೆ ಪ್ರಕರಣ ಆರೋಪಿಗಳನ್ನು ಬಂಧಿಸುವಲ್ಲಿ ಸರಕಾರ ವಿಫಲವಾಗಿದ್ದು ಅವರು ಹತ್ಯೆಯನ್ನು ನೋಡಿದ ಪ್ರತ್ಯೇಕ್ಷ ಸಾಕ್ಷಿದಾರರೋರ್ವರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗೆ ಪಾಕಿಸ್ಥಾನದಿಂದ ಬೆದರಿಕೆ ಕರೆ ಬರುತ್ತಿದ್ದವು ಎಂದು ಹೇಳಲಾಗುತ್ತಿದೆ. ಇದರಿಂದ ಸಾಕ್ಷಿನಾಶದ ಪ್ರಯತ್ನ ನಡೆದಂತಾಗಿದೆ. ಗೋಹತ್ಯೆಯನ್ನು ವಿರೊಧಿಸಿ ಪ್ರತಿಭಟನೆ ನಡೆದಿತ್ತು. ಅದೇ ಸಂದರ್ಭ ಗೋಹತ್ಯೆ ವಿರೋಧಿಸುವವರ ವಿರುದ್ಧ ಸೋಮಾಯಾಜಿ ಮತ್ತು ಹನೀಫ್ ಮೊದಲಾದವರು ಉಗ್ರವಾಗಿ ಪ್ರತಿಭಟಿಸಿ ಕೋಮು ಸಾಮರಸ್ಯ ಕದಡುವ ಮಾತುಗಳನ್ನಾಡಿದರು. ಅದಾದ ಕೆಲವು ದಿನಗಳ ಬಳಿಕ ಈ ಹತ್ಯೆ ನಡೆದಿದೆ. ಅಲ್ಲದೇ ಪ್ರಶಾಂತ್ ಸಾಯುವ ಮುನ್ನ ನಾಲ್ಕು ಹೆಸರುಗಳನ್ನು ಹೇಳಿದ್ದು ಪೋಲೀಸ್ ಇಲಾಖೆ ಯಾಕೆ ಕ್ರಮಕೈಗೊಳ್ಳದೆ ಕೈಕಟ್ಟಿ ಕುಳಿತಿದೆ?
ಅ.19 ರೊಳಗೆ ಪ್ರಶಾಂತ್ ಕೊಲೆ ನಡೆಸಿದ ಹಂತಕರನ್ನು ಬಂಧಿಸಬೇಕು. ಇಲ್ಲದಿದ್ದಲ್ಲಿ ಅ.20 ರಂದು ಮಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಆರ್.ಅಶೋಕ್, ಈಶ್ವರಪ್ಪ, ಪ್ರಹ್ಲಾದ್ ಜೋಷಿ, ಶೋಭಾ ಕರಂದ್ಲಾಜೆ, ಸುರೇಶ್ ಕುಮಾರ್ ಜೊತೆಗೂಡಿ ಮಂಗಳೂರಿನ ಪುರಭವನದೆದರು ಮಹಾತ್ಮಗಾಂಧಿ ಮತ್ತು ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪ್ರತಿಭಟನೆ ಮಾಡಲಿದ್ದೇವೆ. ಪ್ರತಿಭಟನೆಯು ಪ್ರಶಾಂತ್ ಹತ್ಯೆಯನ್ನು ಖಂಡಿಸಿ ಮತ್ತು ಆತನ ಹತ್ಯೆಯ ಆರೋಪಿಗಳನ್ನು ಬಂಧಿಸುವಂತೆ ಮಾತ್ರವಲ್ಲ ಅದರ ಹಿಂದಿರುವ ಪ್ರೇರಣಾ ಶಕ್ತಿಗಳನ್ನು ಬಂಧಿಸುವಂತೆ ಆಗ್ರಹಿಸಿಲಾಗುವುದು ಎಂದು ಅವರು ತಿಳಿಸಿದರು.
ಈ ಸಂದರ್ಭ ಬಿಜೆಪಿ ಜಿಲ್ಲಾಧ್ಯಕ್ಷರಾದ ಕೆ.ಪ್ರತಾಪ್ ಸಿಂಹ ನಾಯಕ್, ಕೃಷ್ಣ ಜೆ. ಪಾಲೆಮಾರ್, ಮೋನಪ್ಪ ಭಂಡಾರಿ, ವಿಕಾಸ್ ಪುತ್ತೂರು, ಡಾ.ಭರತ್ ಶೆಟ್ಟಿ, ರುಕ್ಮಯ್ಯ ಪೂಜಾರಿ, ಉಮಾನಾಥ್ ಕೋಟ್ಯಾನ್, ರವಿಶಂಕರ್ ಮಿಜಾರ್, ಸುಧೀರ್ ಶೆಟ್ಟಿ ಕಣ್ಣೂರು, ಕಿಶೋರ್ ರೈ ಮುಂತಾದವರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.