ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪಂಗಡ ಜನಾಂಗದ ಮಕ್ಕಳ ಹಣವನ್ನು ರಾಜಕಾರಣಕ್ಕೆ ಬಳಸಿಕೊಂಡವರಿಗೆ ಮುಂದಿನ ದಿನಗಳಲ್ಲಿ ಜನರೇ ತಕ್ಕ ಪಾಠವನ್ನು ಕಲಿಸುತ್ತಾರೆ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅದೇ ಹಣದಲ್ಲಿ ಇವತ್ತು ಸಂಸದರು ಮತ್ತು ವಿಧಾನಸಭಾ ಸದಸ್ಯರಾಗಿರಬಹುದು. ಆದರೆ ಈ ನಾಡಿನ ಜನ ಎಲ್ಲವನ್ನು ನೋಡುತ್ತಿದ್ದಾರೆ. ಅವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ತಿಳಿಸಿದರು.
ಬಳ್ಳಾರಿ ಜಿಲ್ಲೆಯಲ್ಲಿ ಸಂಸದ ತುಕಾರಾಮ್, ಬಳ್ಳಾರಿ ನಗರ ಶಾಸಕ ನಾರ ಭರತ್ ರೆಡ್ಡಿ, ಕೂಡ್ಲಿಗಿ ಶಾಸಕ ಡಾ. ಶ್ರೀನಿವಾಸ್ ಮ್ತತು ಕಂಪ್ಲಿ ಶಾಸಕ ಗಣೇಶ್ ಇವರೆಲ್ಲರ ಮನೆ ಮೇಲೆ ಜಾರಿ ನಿರ್ದೇಶನಾಲಯದ (ಇಡಿ) ದಾಳಿ ಆಗುತ್ತಿದೆ. ಈ ನಾಯಕರು ಬಹಳಷ್ಟು ಸಾಚಾವೆಂದು ಮತನಾಡುತ್ತಿದ್ದರು. ಇವರೆಲ್ಲ ಮಾಡುವುದೆಲ್ಲ ಅನಾಚಾರ; ಮನೆಮುಂದೆ ಬೃಂದಾವನ ಎನ್ನುವ ರೀತಿಯಲ್ಲಿ ಮಾತನಾಡುತ್ತಿದ್ದರು. ಬಹಳಷ್ಟು ಜನರು ಇವರನ್ನು ಸಾಚಾಗಳು; ಮಾತನಾಡುವ ರೀತಿ ನಡೆದುಕೊಳ್ಳತ್ತಾರೆ ಎಂದು ಅಂದುಕೊಂಡಿದ್ದರು ಎಂದು ತಿಳಿಸಿದರು.
ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಭ್ರಷ್ಟಾಚಾರದ ಬಗ್ಗೆ ರಾಜ್ಯಾಧ್ಯಕ್ಷರಾದ ವಿಜಯೇಂದ್ರ, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ನೇತೃತ್ವದಲ್ಲಿ ಪಾದಯಾತ್ರೆ ಮಾಡಿದ್ದೆವು. ಸಚಿವ ನಾಗೇಂದ್ರರವರು ರಾಜೀನಾಮೆಯನ್ನು ಕೊಡಬೇಕು ಎಂದು ಒತ್ತಾಯ ಮಾಡಿದ್ದೆವು. ನಮ್ಮ ಒತ್ತಾಯದ ಮೇರೆಗೆ ಆ ಸ್ಥಾನಕ್ಕೆ ಸಚಿವರು ರಾಜೀನಾಮೆ ನೀಡಿ ಜೈಲು ಪಾಲಾದರು ಎಂದು ಅವರು ತಿಳಿಸಿದರು.
ತನಿಖೆ ನಡೆಯುವ ಸಂದರ್ಭದಲ್ಲಿ ನಿಗಮದ ಒಬ್ಬ ಅಧಿಕಾರಿ ಚಂದ್ರಶೇಖರ್ ರವರು ಡೆತ್ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡರು. ಆ ಡೆತ್ನೋಟಿನಲ್ಲಿ ಬಹಳ ಸ್ಪಷ್ಟವಾಗಿ ಮಂತ್ರಿಯ ಕೈವಾಡವಿದೆ ಮತ್ತು ಶಾಮೀಲಾಗಿದ್ದಾರೆ ಎಂದಿದ್ದರು. ಯಾವ ಯಾವ ಅಧಿಕಾರಿಗಳು ಶಾಮೀಲಾಗಿದ್ದರು ಎಂದು ತಿಳಿಸಿದ್ದರು. ಬಿಜೆಪಿ, ಇವತ್ತಿನ ತನಕ ವಾಲ್ಮೀಕಿ ಹಗರಣದ ವಿರುದ್ಧ ಹೋರಾಟ ಮಾಡಿಕೊಂಡು ಬಂದಿದೆ ಎಂದು ಅವರು ವಿವರಿಸಿದರು.
ಇವತ್ತಿನ ಇ.ಡಿ. ದಾಳಿಯಿಂದ ಹಲವಾರು ನಾಯಕರ ಮುಖವಾಡ ಕಳಚಿ ಬೀಳಬೇಕಾಗಿದೆ. ಈ ಹಗರಣದ ಹಿಂದೆ ಯಾವ ಮಹಾನಾಯಕ ಇದ್ದಾರೆ ಎಂದು ತಿಳಿಯಬೇಕಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡ ಮಕ್ಕಳ ವಿದ್ಯಾರ್ಥಿಗಳ ಪ್ರೋತ್ಸಾಹಧನ, ಸ್ಕಾಲರ್ಶಿಪ್ ಹಣ, ಗಂಗಾ ಕಲ್ಯಾಣ ಯೋಜನೆಯ ಹಣ, ಬಡವರಿಗೆ ನೀಡಬೇಕಾದ ಯೋಜನೆಯ ಹಣವನ್ನು ಇವರು ನುಂಗಿ ನೀರನ್ನು ಕುಡಿದಿದ್ದಾರೆ ಎಂದು ಆರೋಪಿಸಿದರು.
ನಿಗಮದ 187 ಕೋಟಿ ಹಣವನ್ನು ಬಾರ್ ಶಾಪ್ಗಳಿಗೆ, ಸೆಕ್ಯುರಿಟಿ ಏಜೆನ್ಸಿಗಳಿಗೆ, ರೈತರ ಖಾತೆಗಳಿಗೆ ವರ್ಗಾವಣೆ ಮಾಡಿದರು. ವರ್ಗಾವಣೆ ಮಾಡಿದ ಹಣ ಎಲ್ಲಿಹೋಯಿತು ಎಂದು ಪ್ರಶ್ನಿಸಿದ್ದರೂ ಹಣ ಎಲ್ಲಿ ಹೋಗಿದೆ ಎಂದು ಸರ್ಕಾರಕ್ಕೂ ಉತ್ತರ ಕೊಡುವುದಕ್ಕೆ ಆಗುತ್ತಿಲ್ಲ. ಈ ಸರ್ಕಾರವು ಪರಿಶಿಷ್ಟ ಜಾತಿ-ಪಂಗಡಗಳ ಜನರ ಪರವಾಗಿ ನಾವು ಇದ್ದೇವೆ ಎಂದು ಹೇಳಿಕೆ ನೀಡುತ್ತದೆ. ಆದರೆ ಆ ಮಕ್ಕಳನ್ನು ಉಳಿಸುವ ಕೆಲಸ ಕಾಂಗ್ರೆಸ್ ಸರ್ಕಾರ ಮಾಡಲಿಲ್ಲ ಎಂದು ಆಕ್ಷೇಪಿಸಿದರು.
ಸರ್ಕಾರ ಬರಬಹುದು; ಹೋಗಬಹುದು. ಆದರೆ ಮಂತ್ರಿಗಳು ಹಾಗೂ ಜನಪ್ರತಿನಿಧಿಗಳು ಯಾವ ರೀತಿ ಇರಬೇಕು ಎಂದು ಅವರಿಗೆ ಜ್ಞಾನವಿರಬೇಕು. ಸರ್ಕಾರದ ಹಣವನ್ನು ಇವರು ನುಂಗಿ ಹಾಕುತ್ತಾರೆ ಎಂದರೆ ಇವರು ರಾಜಕಾರಣಿ ಎಂದು ಕರೆಸಿಕೊಳ್ಳಲು ಯೋಗ್ಯರೇ ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿಗಳು ಮತ್ತೊಮ್ಮೆ ನಾಗೇಂದ್ರರವರಿಗೆ ಸಚಿವ ಸ್ಥಾನ ನೀಡುವುದಾಗಿ ಹೇಳುತ್ತಿದ್ದಾರೆ. ಅವರಿಗೆ ಮಂತ್ರಿ ಸ್ಥಾನ ನೀಡಿ; ನಮ್ಮ ಆಕ್ಷೇಪವಿಲ್ಲ. ಆದರೆ ನೂರಾರು ಕೋಟಿ ಭ್ರಷ್ಟಾಚಾರ ಮಾಡಿರುವ ಹಣದ ವಸೂಲಿಗೆ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಆಗ್ರಹಿಸಿದರು. ಒಬಿಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸೋಮಶೇಖರ್, ಬಿಜೆಪಿ ಮುಖಂಡರಾದ ಎಂ.ಡಿ. ಲಕ್ಷ್ಮೀನಾರಾಯಣ್, ವೆಂಕಟೇಶ್ ಅವರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.