ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಜಮ್ಮು ಮತ್ತು ಕಾಶ್ಮೀರದಲ್ಲಿ ಸುಮಾರು 44,000 ಕೋಟಿ ರೂ. ಮೌಲ್ಯದ ಹಲವಾರು ಮೂಲಸೌಕರ್ಯ ಯೋಜನೆಗಳಿಗೆ ಚಾಲನೆ ನೀಡಿದರು.
ಪ್ರಮುಖ ಯೋಜನೆಗಳಲ್ಲಿ ಅಂಜಿ ಸೇತುವೆ ಮತ್ತು ಚೆನಾಬ್ ಸೇತುವೆ ಸೇರಿವೆ. ಕಾಶ್ಮೀರ ಕಣಿವೆಗೆ ರೈಲು ಸಂಪರ್ಕವನ್ನು ಹೆಚ್ಚಿಸುವ ಮೂಲಕ ಕತ್ರಾ ಮತ್ತು ಶ್ರೀನಗರ ನಡುವಿನ ಎರಡು ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳಿಗೆ ಪ್ರಧಾನಿ ಮೋದಿ ಹಸಿರು ನಿಶಾನೆ ತೋರಿದರು.
ರಿಯಾಸಿ ಜಿಲ್ಲೆಯಲ್ಲಿ ನದಿಪಾತ್ರದಿಂದ 359 ಮೀಟರ್ ಎತ್ತರದಲ್ಲಿರುವ ವಿಶ್ವದ ಅತಿ ಎತ್ತರದ ರೈಲ್ವೆ ಕಮಾನು ಸೇತುವೆಯಾದ ಚೆನಾಬ್ ಸೇತುವೆಯನ್ನು ಅವರು ಮೊದಲು ಉದ್ಘಾಟಿಸಿದರು. ರಾಷ್ಟ್ರಧ್ವಜವನ್ನು ಬೀಸುತ್ತಾ ಸೇತುವೆಯುದ್ದಕ್ಕೂ ನಡೆದ ಪ್ರಧಾನಿ ಈ ಸೇತುವೆಯನ್ನು ಎಂಜಿನಿಯರಿಂಗ್ ಸಾಧನೆಯ ಅದ್ಭುತ ಸಂಕೇತ ಎಂದು ಕರೆದರು. ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಮತ್ತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ, “ನಮ್ಮ ನೆರೆಯ ದೇಶವು ಶಾಂತಿ, ಪ್ರವಾಸೋದ್ಯಮ ಮತ್ತು ಬಡವರ ಜೀವನೋಪಾಯವನ್ನು ಸಹ ವಿರೋಧಿಸುತ್ತದೆ. ಏಪ್ರಿಲ್ 22 ರಂದು ಪಹಲ್ಗಾಮ್ನಲ್ಲಿ ನಡೆದದ್ದು ಇದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ. ಪಾಕಿಸ್ಥಾನವು ಮಾನವೀಯತೆ ಮತ್ತು ಕಾಶ್ಮೀರಿಯತೆ ಎರಡರ ಮೇಲೂ ದಾಳಿ ಮಾಡಿತು” ಎಂದಿದ್ದಾರೆ.
“ಕಾಶ್ಮೀರದ ಆದಾಯವನ್ನು ನಿಲ್ಲಿಸುವುದು ಮತ್ತು ಭಾರತದಲ್ಲಿ ಗಲಭೆಗಳನ್ನು ಸೃಷ್ಟಿಸುವುದು ಅವರ ಉದ್ದೇಶವಾಗಿತ್ತು. ಜಮ್ಮು-ಕಾಶ್ಮೀರದ ಬಡ ಕುಟುಂಬಗಳಿಗೆ ಬೆಂಬಲವಾಗಿರುವ ಬೆಳೆಯುತ್ತಿರುವ ಪ್ರವಾಸೋದ್ಯಮವನ್ನು ಪಾಕಿಸ್ಥಾನ ಗುರಿಯಾಗಿಸಿಕೊಂಡಿದೆ” ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.