ನವದೆಹಲಿ: ಈದ್ ಅಲ್-ಅಧಾ ಸಂದರ್ಭದಲ್ಲಿ ನೀಡಲಾಗುವ ಪ್ರಾಣಿ ಬಲಿಯನ್ನು ಸ್ವತಃ ಮುಸ್ಲಿಂ ದೇಶವೊಂದು ನಿಷೇಧಿಸುವ ಮೂಲಕ ಭಾರೀ ಸುದ್ದಿ ಮಾಡಿದೆ. ಮೊರಾಕೊದ ದೊರೆ ಮೊಹಮ್ಮದ್ VI, ಆರ್ಥಿಕ ಒತ್ತಡಗಳು ಮತ್ತು ಜಾನುವಾರುಗಳ ಆರೋಗ್ಯದ ಮೇಲಿನ ಕಳವಳಗಳನ್ನು ಉಲ್ಲೇಖಿಸಿ ಈ ವರ್ಷದ ಈದ್ ಅಲ್-ಅಧಾ ಸಮಯದಲ್ಲಿ ಮೇಕೆಗಳನ್ನು ಬಲಿ ನೀಡುವುದನ್ನು ನಿಷೇಧಿಸಿ ನಿರ್ದೇಶನವನ್ನು ಹೊರಡಿಸಿದ್ದಾರೆ. ಆರು ವರ್ಷಗಳ ತೀವ್ರ ಬರ ಮತ್ತು ಜಾನುವಾರು ವೆಚ್ಚಗಳು ಗಗನಕ್ಕೇರುತ್ತಿರುವ ಕಾರಣ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದಿದ್ದಾರೆ. ಅಲ್ಲದೇ ಮೊರೊಕ್ಕನ್ನರು ಪ್ರಾರ್ಥನೆ ಮತ್ತು ದಾನದ ಮೂಲಕ ಮಾತ್ರ ಈದ್ ಆಚರಿಸುವಂತೆ ಒತ್ತಾಯಿಸಿದ್ದಾರೆ.
ರಾಷ್ಟ್ರದ ಪರವಾಗಿ ನಾನೇ ಪ್ರಾಣಿ ಬಲಿ ಅರ್ಪಿಸುವುದಾಗಿ ಅವರು ಘೋಷಿಸಿದ್ದಾರೆ. ಆದರೆ ಅವರ ನಡೆ ಜನರ ಅಸಮಾಧಾನಕ್ಕೆ ಕಾರಣವಾಗಿದ್ದು ಆಳವಾದ ಆಧ್ಯಾತ್ಮಿಕ ಮಹತ್ವವನ್ನು ಹೊಂದಿರುವ ಶತಮಾನಗಳಷ್ಟು ಹಳೆಯ ಆಚರಣೆಯನ್ನು ನಿರ್ಬಂಧಿಸಿರುವುದು ಸರಿಯಲ್ಲ ಎಂಬ ಅನಿಸಿಕೆ ವ್ಯಕ್ತಪಡಿಸಿದ್ದಾರೆ.
ಮೊರಾಕೊ ರಾಜನ ಅನಿರೀಕ್ಷಿತ ನಿರ್ಧಾರ ಧಾರ್ಮಿಕ ಮತ್ತು ರಾಜಕೀಯ ಚರ್ಚೆಯ ಕೇಂದ್ರಬಿಂದುವಾಗಿ ಹೊರಹೊಮ್ಮಿದೆ. ಪ್ರಾಣಿ ಬಲಿ ತಪ್ಪಿಸಲು ಮೊರಕ್ಕೋ ಅಧಿಕಾರಿಗಳು ಮನೆಗಳಿಗೆ ನುಗ್ಗಿ ಮೇಕೆಗಳನ್ನು ವಶಪಡಿಸಿಕೊಳ್ಳುವುದನ್ನು ತೋರಿಸುವ ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಇದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ. ಅನೇಕ ಮೊರೊಕನ್ನರು ಈ ನಿಷೇಧವು ಈದ್ ಅಲ್-ಅಧಾದ ಆಧ್ಯಾತ್ಮಿಕ ಮಹತ್ವವನ್ನು ಅಗೌರವಿಸುತ್ತದೆ ಮತ್ತು ಧಾರ್ಮಿಕ ತ್ಯಾಗ ಮಾಡುವ ತಮ್ಮ ಹಕ್ಕನ್ನು ಕಸಿದುಕೊಳ್ಳುತ್ತದೆ ಎಂದಿದ್ದಾರೆ.
ಈದ್ ಅಲ್-ಅಧಾ ಹಬ್ಬವನ್ನು ‘ತ್ಯಾಗದ ಹಬ್ಬ’ ಎಂದೂ ಕರೆಯುತ್ತಾರೆ. ಇದು ಪ್ರಪಂಚದಾದ್ಯಂತ ಮುಸ್ಲಿಮರು ಆಚರಿಸುವ ಅತ್ಯಂತ ಮಹತ್ವದ ಇಸ್ಲಾಮಿಕ್ ಹಬ್ಬಗಳಲ್ಲಿ ಒಂದಾಗಿದೆ. ಇದು ದೇವರ ಆಜ್ಞೆಗೆ ಅನುಗುಣವಾಗಿ ತನ್ನ ಮಗನನ್ನು ತ್ಯಾಗ ಮಾಡಲು ಸಿದ್ಧರಾಗಿದ್ದ ಪ್ರವಾದಿ ಇಬ್ರಾಹಿಂ ಅವರ ಅಚಲ ಭಕ್ತಿಯನ್ನು ಪ್ರದರ್ಶಿಸುವ ಹಬ್ಬ. ಈ ನಂಬಿಕೆಯ ಸಂಕೇತವಾಗಿ, ಮುಸ್ಲಿಮರು ಸಾಂಪ್ರದಾಯಿಕವಾಗಿ ಪ್ರಾಣಿಯನ್ನು, ಸಾಮಾನ್ಯವಾಗಿ ಮೇಕೆ, ಕುರಿ ಅಥವಾ ಹಸುವನ್ನು ಬಲಿ ನೀಡುತ್ತಾರೆ ಮತ್ತು ಮಾಂಸವನ್ನು ಕುಟುಂಬ, ಸ್ನೇಹಿತರು ಮತ್ತು ನಿರ್ಗತಿಕರಿಗೆ ದಾನ ಮಾಡುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.