ಬೆಂಗಳೂರು: ‘ಥಗ್ ಲೈಫ್’ ಬಿಡುಗಡೆಗೂ ಮುನ್ನ ಕನ್ನಡದ ಬಗ್ಗೆ ಹೇಳಿಕೆ ನೀಡಿ ವಿವಾದ ಸೃಷ್ಟಿ ಮಾಡಿರುವ ನಟ ಕಮಲ್ ಹಾಸನ್ ಅವರು ರಾಜ್ಯ ಚಲನಚಿತ್ರ ಮಂಡಳಿಗೆ ಪತ್ರ ಬರೆದು ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ, ನನಗೆ ಸಿನಿಮಾ ಭಾಷೆ ಬರುತ್ತದೆ, ಅದರಂತೆ ಮಾತನಾಡುತ್ತೇನೆ ಎಂದಿದ್ದಾರೆ. ಹೈಕೋರ್ಟ್ ಛಿಮಾರಿ ಹಾಕಿದ ದಿನವೇ ಕಮಲ್ ಈ ಪತ್ರ ಬರೆದಿದ್ದಾರೆ.
ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ದುರುಪಯೋಗಪಡಿಸಿಕೊಂಡು ಜನರ ಭಾವನೆಗಳನ್ನು ನೋಯಿಸಬೇಡಿ ಎಂದು ಹೈಕೋರ್ಟ್ ಕಮಲ್ಗೆ ಎಚ್ಚರಿಸಿದೆ. ಆಡಿದ ಮಾತುಗಳನ್ನು ಹಿಂದಕ್ಕೆ ತೆಗೆದುಕೊಳ್ಳಲು ಸಾಧ್ಯವಿಲ್ಲ ಆದರೆ ಕ್ಷಮೆಯಾಚಿಸಲು ಏನು ಕಷ್ಟ ಎಂದು ಕಮಲ್ ಹಾಸನ್ ಅವರನ್ನು ಪ್ರಶ್ನೆ ಮಾಡಿದೆ.
“ನೀವು ಸಾಮಾನ್ಯ ವ್ಯಕ್ತಿಯಲ್ಲ, ನಿಮಗೆ ಮಾತನಾಡುವ ಹಕ್ಕಿದೆ. ಆದರೆ ಭಾವನೆಗಳನ್ನು ನೋಯಿಸುವ ಹಕ್ಕಿಲ್ಲ. ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿಯ ಮೂಲಭೂತ ಹಕ್ಕನ್ನು ಜನಸಾಮಾನ್ಯರ ಭಾವನೆಗಳಿಗೆ ನೋವುಂಟು ಮಾಡುವ ಮಟ್ಟಿಗೆ ನೀಡಲಾಗಿಲ್ಲ. ಈ ಪ್ರಕರಣವನ್ನು ನಾವು ನಿಮಗೆಯೇ ಬಿಟ್ಟಿದ್ದೇವೆ, ನೀವು ಯಾರಿಗಾದರೂ ನೋವುಂಟು ಮಾಡಿದ್ದರೆ ಕ್ಷಮೆಯಾಚಿಸಿ. ನೀವು ಹೇಳಿಕೆ ನೀಡಿದ್ದೀರಿ. ಆ ಹೇಳಿಕೆಯನ್ನು ಹಿಂತೆಗೆದುಕೊಳ್ಳಿ ಅಷ್ಟೇ. ಕರ್ನಾಟಕದಿಂದ ಕೋಟಿಗಟ್ಟಲೆ ಗಳಿಸಬಹುದು. ಆದರೆ ನಿಮಗೆ ಕನ್ನಡದ ಜನರ ಅಗತ್ಯವಿಲ್ಲದಿದ್ದರೆ ಅವರಿಂದ ಬರುವ ಆದಾಯವನ್ನು ಬಿಟ್ಟು ಬಿಡಿ. ಆದರೆ ನೀವು ಸಾರ್ವಜನಿಕ ಭಾವನೆಗಳನ್ನು ಕಸಿದುಕೊಳ್ಳಲು ಮುಂದಾಗಬಾರದು, ತಪ್ಪಾದರೆ ಕ್ಷಮೆಯಾಚನೆ ಮಾಡಬೇಕು'” ಎಂದು ನ್ಯಾಯಾಲಯ ಖಡಕ್ ಆಗಿ ಹೇಳಿದೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸೇರಿದಂತೆ ಅಧಿಕಾರಿಗಳಿಗೆ ಕರ್ನಾಟಕದಲ್ಲಿ ಥಗ್ ಲೈಫ್ ಚಿತ್ರ ಬಿಡುಗಡೆಯಾಗುವುದಕ್ಕೆ ಅಡ್ಡಿಪಡಿಸಬಾರದು ಅಥವಾ ನಿರ್ಬಂಧಿಸಬಾರದು ಎಂದು ನಿರ್ದೇಶನ ನೀಡಬೇಕೆಂದು ಕೋರಿ ಕಮಲ್ ಹಾಸನ್ ಅವರು ಸಲ್ಲಿಸಿದ ಅರ್ಜಿಯ ವಿಚಾರಣೆಯ ವೇಳೆ ನ್ಯಾಯಾಲಯ ಈ ಹೇಳಿಕೆಗಳನ್ನು ನೀಡಿದೆ.
ಈ ಬಳಿಕ ಪತ್ರ ಬರೆದಿರುವ ಕಮಲ್, “ಥಗ್ ಲೈಫ್ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಡಾ. ರಾಜ್ಕುಮಾರ್ ಅವರ ಕುಟುಂಬದ ಬಗ್ಗೆ, ವಿಶೇಷವಾಗಿ ಶಿವ ರಾಜ್ಕುಮಾರ್ ಅವರ ಬಗ್ಗೆ ನಿಜವಾದ ಪ್ರೀತಿಯಿಂದ ಹೇಳಲಾದ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಮತ್ತು ಔಟ್ ಆಫ್ ಕಾಂಟೆಕ್ಸ್ಟ್ ಮಾಡಲಾಗಿದೆ ಎಂಬುದು ನನಗೆ ನೋವುಂಟುಮಾಡುತ್ತದೆ. ನನ್ನ ಮಾತುಗಳು ನಾವೆಲ್ಲರೂ ಒಂದೇ ಮತ್ತು ಒಂದೇ ಕುಟುಂಬದವರು ಮತ್ತು ಯಾವುದೇ ರೀತಿಯಲ್ಲಿ ಕನ್ನಡವನ್ನು ಕೀಳು ಮಾಡಬಾರದು ಎಂದು ತಿಳಿಸಲು ಮಾತ್ರ ಉದ್ದೇಶಿಸಲಾಗಿತ್ತು. ಕನ್ನಡ ಭಾಷೆಯ ಶ್ರೀಮಂತ ಪರಂಪರೆಯ ಬಗ್ಗೆ ಯಾವುದೇ ವಿವಾದ ಅಥವಾ ಚರ್ಚೆ ಇಲ್ಲ” ಎಂದಿದ್ದಾರೆ.
“ತಮಿಳಿನಂತೆಯೇ, ಕನ್ನಡವು ನಾನು ಬಹಳ ಹಿಂದಿನಿಂದಲೂ ಮೆಚ್ಚುವ ಹೆಮ್ಮೆಯ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಪ್ರದಾಯವನ್ನು ಹೊಂದಿದೆ. ನನ್ನ ವೃತ್ತಿಜೀವನದುದ್ದಕ್ಕೂ, ಕನ್ನಡ ಮಾತನಾಡುವ ಸಮುದಾಯವು ನನಗೆ ನೀಡಿದ ವಾತ್ಸಲ್ಯವನ್ನು ನಾನು ಪಾಲಿಸಿದ್ದೇನೆ ಮತ್ತು ನಾನು ಇದನ್ನು ಸ್ಪಷ್ಟ ಆತ್ಮಸಾಕ್ಷಿ ಮತ್ತು ದೃಢನಿಶ್ಚಯದಿಂದ ಹೇಳುತ್ತೇನೆ: ಭಾಷೆಯ ಮೇಲಿನ ನನ್ನ ಪ್ರೀತಿ ನಿಜವಾದದ್ದು ಮತ್ತು ಕನ್ನಡಿಗರು ತಮ್ಮ ಮಾತೃಭಾಷೆಯ ಬಗ್ಗೆ ಹೊಂದಿರುವ ಪ್ರೀತಿಗೆ ನನಗೆ ಅಪಾರ ಗೌರವವಿದೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.