ಬೆಂಗಳೂರು: ಆದರ್ಶಗಳು, ವೈಚಾರಿಕತೆಯ ದೇಶ ನಮ್ಮದು. ಅಹಲ್ಯಾಬಾಯಿ ಹೋಳ್ಕರ್ ಎಂದರೆ ಅದು ಕೇವಲ ಹೆಸರಲ್ಲ. ಅಹಲ್ಯಾಬಾಯಿ ಹೋಳ್ಕರ್ ಒಂದು ಶ್ರದ್ಧೆ. ಅಹಲ್ಯಾಬಾಯಿ ಹೋಳ್ಕರ್ ಒಂದು ವೈಚಾರಿಕತೆ, ಅವರು ನಮಗೆ ಪ್ರೇರಕಶಕ್ತಿ ಎಂದು ಕೇಂದ್ರ ಸಚಿವೆ ಕು. ಶೋಭಾ ಕರಂದ್ಲಾಜೆ ಅವರು ಅಭಿಪ್ರಾಯ ಪಟ್ಟಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಆಯೋಜಿಸಿದ್ದ ಪೂಜ್ಯನೀಯ ಅಹಲ್ಯಬಾಯಿ ಹೋಳ್ಕರ್ ಅವರ 300ನೇ ಜನ್ಮ ವರ್ಷಾಚರಣೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾರತದ ಆದರ್ಶಗಳನ್ನು ಚೀನಾ, ಇತರ ವಿದೇಶಗಳಲ್ಲಿ ಹೇಳಿದರೆ ಅದು ಅವರಿಗೆ ಅರ್ಥವಾಗುವುದಿಲ್ಲ. ಶ್ರದ್ಧೆ ಎಂದರೇನೆಂಬ ವಿಶ್ಲೇಷಣೆ ಅವರಿಂದ ಅಸಾಧ್ಯ. ಪ್ರೀತಿ ಎಂದರೆ ಅವರು ಲವ್ ಎಂದಷ್ಟೇ ತಿಳಿದಿದ್ದಾರೆ. ಮಾತೃತ್ವ, ಸಹೋದರತ್ವ ಎಂದರೆ ಏನೆಂಬುದು ವಿದೇಶೀಯರಿಗೆ ಅರ್ಥವಾಗಲಾರದು ಎಂದದರು.
ಆಪರೇಷನ್ ಸಿಂದೂರ ನಡೆಯುವ ವೇಳೆ 4 ದಿನಗಳ ಕಾಲ 24 ಗಂಟೆಯೂ ಪ್ರಧಾನಿ ನರೇಂದ್ರ ಮೋದಿಜೀ ಅವರು ಕೆಲಸ ಮಾಡಿದ್ದರು. ರಾತ್ರಿ ನಿದ್ರೆ ಮಾಡಿಲ್ಲ. ಅಹಲ್ಯಾಬಾಯಿ ಅವರಂಥ ಹಿರಿಯರು ನಮ್ಮ ಮೇಲೆ ಜವಾಬ್ದಾರಿ ಬಿಟ್ಟು ಹೋಗಿದ್ದಾರೆ. ಅದನ್ನು ನಾವು ಅನುಸರಿಸಬೇಕೆಂಬ ಬದ್ಧತೆ ಮೋದಿಜೀ ಅವರಲ್ಲಿದೆ ಎಂದು ವಿಶ್ಲೇಷಿಸಿದರು.
ಶಿವಾಜಿ ಮಹಾರಾಜರ ಕುರಿತು ಭಾಷಣ ಮಾಡಿದರೆ ಸಾಲದು. ಅವರ ಕೆಲಸಗಳನ್ನು ಕನಿಷ್ಠ ಶೇ 10ರಷ್ಟನ್ನಾದರೂ ನಾವು ಮುಂದುವರಿಸಬೇಕಲ್ಲವೇ. ಅಹಲ್ಯಬಾಯಿ ಹೋಳ್ಕರ್ ಅವರ ಕೆಲಸಗಳ ಶೇ 10ರಷ್ಟನ್ನಾದರೂ ನಾವು ಅಳವಡಿಸಿಕೊಂಡು ಮುಂದುವರಿಸಬೇಕಲ್ಲವೇ ಎಂದು ಪ್ರಶ್ನಿಸಿದರು.
ವಿಧಾನಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಅವರು ಮಾತನಾಡಿ, ಇತಿಹಾಸ ತೆರೆದರೆ ನಾವು ಅನೇಕ ಮಹಾರಾಜರು, ರಾಣಿಯರ ಚರಿತ್ರೆಯನ್ನು ಓದಲು ಅವಕಾಶವಾಗುತ್ತದೆ. ಋಷಿ ಮುನಿಗಳು, ಜ್ಞಾನಿಗಳು, ವಿಜ್ಞಾನಿಗಳು, ಕವಿಗಳ ಚರಿತ್ರೆಯನ್ನು ಓದುತ್ತೇವೆ. ಅಹಲ್ಯಾಬಾಯಿ ಹೋಳ್ಕರ್ ಅವರು ಒಳ್ಳೆಯ ಆಡಳಿತಗಾರರು ಎಂದು ವಿವರಿಸಿದರು.
ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಮತ್ತು ಶಾಸಕ ಸಿ.ಕೆ.ರಾಮಮೂರ್ತಿ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷರಾದ ಆಶಾ ಎಸ್.ರಾವ್, ವಿಜಯಲಕ್ಷ್ಮೀ ಆನಂದ್, ರಾಜ್ಯ ಕಾರ್ಯಕಾರಿಣಿ ಸದಸ್ಯೆ ಪೂರ್ಣಿಮಾ ಪ್ರಕಾಶ್ ಮೊದಲಾದ ಪ್ರಮುಖರು ಭಾಗವಹಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.