ಬೆಂಗಳೂರು: ನಟ ಕಮಲಹಾಸನ್ ಅವರು ಸಿನಿಮಾ ಪ್ರಚಾರಕ್ಕಾಗಿ ಕನ್ನಡಕ್ಕೆ ಅವಮಾನವಾಗುವಂತೆ ಮಾತನಾಡಿದ್ದಾರೆ. ಇದು ಖಂಡನೀಯ ಎಂದು ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ನಗರದ ಗೋಲ್ಡ್ ಫಿಂಚ್ ಹೋಟೆಲ್ ನಲ್ಲಿ ಇಂದು ಪತ್ರಕರ್ತರೊಂದಿಗೆ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕನ್ನಡ, ತಮಿಳು, ತೆಲುಗು, ಮಲಯಾಳಂ ಸೇರಿ ನಮ್ಮ ದೇಶದ ಯಾವುದೇ ಭಾಷೆ ಇರಬಹುದು ನಾವೆಲ್ಲರೂ ಭಾರತೀಯರು. ನಾವೆಲ್ಲರೂ ಒಟ್ಟಾಗಿ ಬದುಕಬೇಕಿದೆ” ಎಂದರು.
ಕರ್ನಾಟಕ- ತಮಿಳುನಾಡಿನ ನಡುವೆ ನೀರು ಮತ್ತು ಭಾಷೆಯ ವಿಚಾರದಲ್ಲಿ ಬೆಂಕಿ ಹಚ್ಚಲು ತುಂಬ ಜನರು ಪ್ರಯತ್ನಿಸುತ್ತಾರೆ. ಆದರೆ, ನಾವು ಒಟ್ಟಾಗಿ ಬದುಕಬೇಕಾದ, ಒಟ್ಟಾಗಿ ಇರಬೇಕಾದ ಅಗತ್ಯ ಇದೆ. ಕಮಲಹಾಸನ್ ಅವರು ಇವತ್ತು ಚಾಲ್ತಿಯಲ್ಲಿ ಇಲ್ಲದ ನಾಣ್ಯ, ಅವರಿಗೆ ಬೆಲೆ ಕೊಡಬೇಕಾದ ಅಗತ್ಯವಿಲ್ಲ ಎಂದಿದ್ದಾರೆ.
ದಕ್ಷಿಣ ಭಾರತದ ತಮಿಳು, ಕನ್ನಡ, ತುಳು ಮೊದಲಾದ ಭಾಷೆಗಳು ಒಟ್ಟಿಗೆ ಬೆಳೆದಿವೆ ಎಂದು ಭಾಷಾ ತಜ್ಞರು ಹೇಳಿದ್ದಾರೆ. ಇದಕ್ಕೆ ಆ ಭಾಷೆ ಮೊದಲು, ಈ ಭಾಷೆ ನಂತರ ಎಂಬುದಿಲ್ಲ, ಇವೆಲ್ಲವೂ ಅವಳಿ ಮಕ್ಕಳಂತೆ ಎಂದು ಸ್ಪಷ್ಟವಾಗಿ ಹೇಳಲಾಗಿದೆ ಎಂದರು.
ದಕ್ಷಿಣ ಕನ್ನಡದಲ್ಲಿ ಕಾನೂನು-ಸುವ್ಯವಸ್ಥೆ ಹದಗೆಟ್ಟ ಕುರಿತು ಪತ್ರಕರ್ತರು ಗಮನ ಸೆಳೆದರು. ದಕ್ಷಿಣ ಕನ್ನಡದಲ್ಲಿ ಮಾತ್ರವಲ್ಲ; ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಎಲ್ಲಿದೆ ಎಂದು ಪ್ರಶ್ನೆಯನ್ನು ಮುಂದಿಟ್ಟರು. ಎಲ್ಲಿ ಅತ್ಯಾಚಾರ ನಡೆಯುತ್ತಿದೆ; ಎಲ್ಲಿ ಯಾರ ಕೊಲೆ ನಡೆಯುತ್ತಿದೆ ಎಂದು ಗೊತ್ತಾಗದ ಸ್ಥಿತಿ ಇದೆ. ನಮ್ಮ ಯಾರ ಪ್ರಾಣಕ್ಕೂ ರಕ್ಷಣೆ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮನೆಯಿಂದ ಹೊರಕ್ಕೆ ಹೋದವರು ವಾಪಸ್ ಬರುವ ಗ್ಯಾರಂಟಿ ಇಲ್ಲ. ಬಾಕಿ ಎಲ್ಲ ಗ್ಯಾರಂಟಿ ಕೊಡುತ್ತಾರೆ. ಆದರೆ, ಕಾಂಗ್ರೆಸ್ಸಿನವರು ಪ್ರಾಣದ ಗ್ಯಾರಂಟಿ ಕೊಡುತ್ತಿಲ್ಲ ಎಂದು ಟೀಕಿಸಿದರು. ಗೃಹ ಸಚಿವರೇ ಹಗರಣದಲ್ಲಿ ಸಿಲುಕಿಕೊಂಡಿದ್ದಾರೆ. ಅವರೇ ಮಾಫಿಯದ ಕೈಯಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಇಂಥವರನ್ನು ಇಟ್ಟುಕೊಂಡು ಕರ್ನಾಟಕದ ಕಾನೂನು- ಸುವ್ಯವಸ್ಥೆ ಕುರಿತು ಮಾತನಾಡುವುದರಿಂದ ಪ್ರಯೋಜನ ಇಲ್ಲ ಎಂದರು.
2013ರಲ್ಲಿ ಸಿದ್ದರಾಮಯ್ಯನವರು ಪಿಎಫ್ಐ ಕೇಸನ್ನು ವಾಪಸ್ ಪಡೆದರು. 800 ರೌಡಿಗಳನ್ನು ರಸ್ತೆಗೆ ಬಿಟ್ಟರು. ಆ ರೌಡಿಗಳು ನಮ್ಮ ಹುಡುಗರನ್ನು ಕೊಂದು ಹಾಕಿದರು. ಇವತ್ತು ಮತ್ತೆ ಹುಬ್ಬಳ್ಳಿ ಪೊಲೀಸ್ ಠಾಣೆ ಸುಟ್ಟವರು ಸೇರಿ 46 ಕೇಸ್ ವಾಪಸ್ ಪಡೆಯಲು ಹೊರಟಿದ್ದರು. ಇದರಿಂದ 1500 ಕ್ರಿಮಿನಲ್ ಹಿನ್ನೆಲೆ ಉಳ್ಳವರು ಬಂಧವಿಮುಕ್ತರಾಗುತ್ತಿದ್ದರು. ಇದನ್ನು ತಡೆದ ಹೈಕೋರ್ಟಿಗೆ ಧವ್ಯವಾದಗಳು ಎಂದು ತಿಳಿಸಿದರು.
ಸಚಿವ ದಿನೇಶ್ ಗುಂಡೂರಾವ್ ಅವರು, ದಕ್ಷಿಣ ಕನ್ನಡದಲ್ಲಿ ಮುಸ್ಲಿಮರಿಗೆ ರಕ್ಷಣೆ ಇಲ್ಲ ಎನ್ನುತ್ತಾರೆ. ಹಾಗಿದ್ದರೆ ಅವರು ಒಂದು ಜನಾಂಗಕ್ಕೆ ರಕ್ಷಣೆ ಕೊಡುವ ಉಸ್ತುವಾರಿ ಸಚಿವರೇ? ನಮ್ಮ ಪ್ರಾಣಕ್ಕೆ ಬೆಲೆ ಇಲ್ಲವೇ ಎಂದು ಕೇಳಿದರು. ಕರ್ನಾಟಕವನ್ನು ನೀವೇನು ಮಾಡಬೇಕೆಂದಿದ್ದೀರಿ ಎಂದು ಪ್ರಶ್ನೆಯನ್ನು ಮುಂದಿಟ್ಟರು.
ಇದನ್ನು ಗೂಂಡಾ ರಾಜ್ಯ ಮಾಡಲು ಹೊರಟಿದ್ದೀರಿ. ಒಂದು ಕಾಲಕ್ಕೆ ಬಿಹಾರ ಗೂಂಡಾ ರಾಜ್ಯ ಎನ್ನುತ್ತಿದ್ದೆವು. ದೆಹಲಿಯಲ್ಲಿ ಕುಳಿತಾಗ ಕರ್ನಾಟಕದಲ್ಲಿ ಏನಾಗುತ್ತಿದೆ ಎಂದು ಕೇಳುತ್ತಾರೆ. ನಮ್ಮಲ್ಲಿ ಉತ್ತರ ಇಲ್ಲ; ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಪರಮೇಶ್ವರರ ನೇತೃತ್ವದಲ್ಲಿ ಅಂಥ ರಾಜ್ಯವನ್ನಾಗಿ ಇವತ್ತು ಕರ್ನಾಟಕವನ್ನು ಮಾಡಿದ್ದಾರೆ ಎಂದು ಟೀಕಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.