ಮಂಗಳೂರು : ಮೈಂಡ್ ಸಂಸ್ಥೆಯು ನಗರದ ಕೆನರಾ ಕಾಲೇಜಿನ ಸಭಾಂಗಣದಲ್ಲಿ ‘ಸಂಶೋಧನ ತರಬೇತಿ ಕಮ್ಮಟ’ ಎಂಬ ಕಾರ್ಯಾಗಾರವನ್ನು ಆಯೋಜಿಸಿತ್ತು. ಈ ಕಾರ್ಯಾಗಾರವನ್ನು ದೀಪಬೆಳಗಿಸುವುದರ ಮೂಲಕ ಖ್ಯಾತ ವಿಮರ್ಶಕರು, ಲೇಖಕರು ಮತ್ತು ಸಂಶೋಧನ ವಿಧಾನ ಪರಿಣತರು ಆದ ಡಾ. ಜಿ.ಬಿ. ಹರೀಶ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಸಂಶೋಧನೆ ಎಂಬುದು ಸತ್ಯಾಸತ್ಯತೆಯನ್ನು ದೇಶಕ್ಕೆ ಕೊಡುವ ಸಾಧನವಾಗಬೇಕಿತ್ತು. ಆದರೆ ಇಂದಿನ ವಿಶ್ವವಿದ್ಯಾಲಯದಲಿ ಮಾಡುವ ಸಂಶೋಧನೆಗಳಿಂದ ಈ ಸತ್ಯಾಸತ್ಯತೆಯನ್ನು ಕಾಣಲು ಸಾಧ್ಯವಾಗದಿರುವುದಕ್ಕೆ ಖೇಧವನ್ನು ವ್ಯಕ್ತಪಡಿಸಿದರು. ನಮ್ಮ ದೇಶದ ಸಂಶೋಧನೆಗಳು ಧರ್ಮಪಾಲರ ಸಂಶೋಧನೆಯ ವಿಷಯಗಳನ್ನು ಒಳಗೊಂಡಿರಬೇಕು. ಅಷ್ಟೇ ನಿಖರವಾಗಿರುವ ಮಾಹಿತಿಯನ್ನು ಧರ್ಮಪಾಲರು ನೀಡುತ್ತಿದ್ದರು. ಆದರೆ ಈ ಸತ್ಯವನ್ನು ಇಂದಿನ ಸಂಶೋಧಕರು ಮುಂದಿಡಲು ಹೋದರೆ ಅವರು ಸಂಶೋಧನೆಯನ್ನು ಪೂರ್ಣಮಾಡಲು ಸಾಧ್ಯವಿಲ್ಲದ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಅವರು ಈ ಕಾರ್ಯಾಗಾರದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಸತ್ಯಾಸತ್ಯತೆಯ ನೈಜ ಸಂಶೋಧನೆಯನ್ನು ಮಾಡುವುದರ ಮೂಲಕ ದೇಶದ ಪ್ರಗತಿಯನ್ನು ಕಾಣಬೇಕೆಂದು ಸಲಹೆ ನೀಡಿದರು.
ಕಾರ್ಯಾಗಾರದ ಬಗ್ಗೆ ಪ್ರಾಸ್ತಾವಿಕ ಮಾತನಾಡಿದ ಮೈಂಡ್ನ ನಿರ್ದೇಶಕರಾದ ಸುವೃತ್ ಕುಮಾರ್ರವರು ಯುವ ಸಂಶೋಧಕರಿಗೆ ಉತ್ತಮ ತರಬೇತಿಯ ಮೂಲಕ ಸದಾವಕಾಶಗಳ ಹೆಬ್ಬಾಗಿಲು ತೆರೆದು ತೋರುವ ನಿಟ್ಟಿನಲ್ಲಿ ಸಂಶೋಧನ ತರಬೇತಿ ಕಮ್ಮಟವನ್ನು ಆಯೋಜಿಸಲಾಗಿದೆ. ಈಗಾಗಲೇ ಪಿ.ಎಚ್.ಡಿ.ಗೆ ಹೆಸರು ನೊಂದಾಯಿಸಿರುವ, ಮುಂದೆ ಸಂಶೋಧನಾ ಜಗತ್ತಿಗೆ ಪ್ರವೇಶಿಸಲಿರುವ ಹಾಗೂ ಅಂತಿಮ ವರ್ಷದ ಸ್ನಾತಕೋತ್ತರ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳು ಮತ್ತು ಸಂಶೋಧನೆಯಲ್ಲಿ ಆಸಕ್ತಿಯಿರುವ ಉಪನ್ಯಾಸಕರಿಗೆ ಅದು ಉಪಯುಕ್ತವಾಗಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಮಣಿಪಾಲ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್ಸ್ನ ಹೆಸರಾಂತ ಪ್ರಾಧ್ಯಾಪಕರಾದ ಪ್ರೊ. ನಂದನ ಪ್ರಭು, ಮೈಂಡ್ನ ಸಂಯೋಜಕರಾದ ರಮೇಶ್ ಕೆ. ಉಪಸ್ಥಿತರಿದ್ದರು. ಕಾರ್ಯಾಗಾರದ ನಿರೂಪಣೆಯನ್ನು ಸಹ್ಯಾದ್ರಿ ಎಮ್.ಬಿ.ಎ. ವಿಭಾಗದ ಪ್ರಾಧ್ಯಾಪಕರಾದ ರಮೇಶ್ ಕೆ. ಜಿ., ಪ್ರಾರ್ಥನೆಯನ್ನು ಸುಧಾ, ಸ್ವಾಗತವನ್ನು ಸಂಯೋಜಕರಾದ ರಮೇಶ್ ಕೆ. ಹಾಗೂ ಧನ್ಯವಾದವನ್ನು ಮಂಗಳೂರು ವಿವಿ ಪಿಎಚ್ಡಿ ವಿದ್ಯಾರ್ಥಿ ಸುದೀಪ್ ನೆರವೇರಿಸಿದರು.
ಈ ಕಾರ್ಯಾಗಾರದಲ್ಲಿ ಸಂಶೋಧನೆ ಮತ್ತು ಸಂಶೋಧನೆಯ ಆಧುನಿಕ ವಿಧಾನಗಳು ಎಂಬ ವಿಷಯದ ಬಗ್ಗೆ ಖ್ಯಾತ ವಿಮರ್ಶಕರು, ಲೇಖಕರು ಮತ್ತು ಸಂಶೋಧನ ವಿಧಾನ ಪರಿಣಿತರು ಆದ ಡಾ.ಜಿ.ಬಿ. ಹರೀಶ್ ಪ್ರಕರಣಗಳು ಮುಖೇನ ಸಂಶೋಧನ ಅಧ್ಯಯನವನ್ನು ಮಣಿಪಾಲ ವಿಶ್ವವಿದ್ಯಾಲಯ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್ನ ಹೆಸರಾಂತ ಪ್ರಾಧ್ಯಾಪಕರಾದ ಪ್ರೊ. ನಂದನ ಪ್ರಭು ಹಾಗೂ ಸಮಕಾಲೀನ ಸಂದರ್ಭದಲ್ಲಿ ಸಂಶೋಧಕರಿಗಿರುವ ಅವಕಾಶಗಳು ಹಾಗೂ ಸಂಶೋಧನಾ ಫೆಲೋಶಿಪ್ಗಳ ಬಗ್ಗೆ ವಿಶ್ವ ಪ್ರಸಿದ್ಧ ಸಂಶೋಧಕ, ಐಐಟಿ, ಐಐಎಸ್ಸಿ, ಐಐಎಂಗಳ ಪ್ರಾಧ್ಯಾಪಕರು ಆದ ಡಾ. ಅಶೋಕ್ ರಾವ್ ವಿಚಾರ ಮಂಡನೆ ಹಾಗೂ ಚರ್ಚೆಯನ್ನು ನಡೆಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.