News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮೇಲ್ಮನೆ ಚುನಾವಣೆಯಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿಕೂಟ ಬೆಂಬಲಿಸುವಂತೆ ಕರೆ

ಬೆಂಗಳೂರು: ಯುಕವರು, ಪದವೀಧದರು ಮತ್ತು ಶಿಕ್ಷಕರ ಪರವಾಗಿ ಬಿಜೆಪಿ ಸದಾ ನಿಂತಿದೆ. ಹಲವಾರು ಸುಧಾರಣೆಗಳನ್ನು ತಂದಿದೆ. ಈ ಬಾರಿ ನಡೆಯುವ ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿಕೂಟವನ್ನು ಬೆಂಬಲಿಸಬೇಕು ಎಂದು ಮಾಜಿ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಅವರು ಮನವಿ ಮಾಡಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ- ಜೆಡಿಎಸ್ ಮೈತ್ರಿ ಪಕ್ಷಗಳು ಪದವೀಧರರ ವಿಚಾರ, ಶಿಕ್ಷಕರ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯದಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಿವೆ. ಹಲವು ಸುಧಾರಣೆ, ಪ್ರಗತಿ, ನೂತನ ಕಾಯ್ದೆ ಕಾನೂನು ಜಾರಿಗೆ ತಂದಿವೆ ಎಂದು ನುಡಿದರು. ಇವೆರಡು ಪಕ್ಷಗಳು ಶಿಕ್ಷಕರು, ಪದವೀಧರರ ಪರವಾಗಿ ನಿರಂತರವಾಗಿ ಶ್ರಮಿಸುತ್ತಿವೆ ಎಂದು ವಿವರಿಸಿದರು.

ಗುಣಮಟ್ಟದ ಶಿಕ್ಷಣದಲ್ಲಿ ಶಿಕ್ಷಕರ ಪಾತ್ರ ಮತ್ತು ಆಡಳಿತ ನೀತಿ ಮಹತ್ವದ ಪಾತ್ರ ವಹಿಸುತ್ತದೆ. ಶಿಕ್ಷಕರ ಕುರಿತು ಕಾಳಜಿ, ಗೌರವ ನೀಡದೆ ಕಾಂಗ್ರೆಸ್ ಆಡಳಿತ ನಡೆಸಿದೆ. ಕಾಂಗ್ರೆಸ್ ಪಕ್ಷವು ಶಿಕ್ಷಕರ, ಪದವೀಧರರ ವಿರುದ್ಧವಾಗಿ ನೀತಿಗಳನ್ನು ಹೊಂದಿದೆ. ಆದರೆ, ಬಿಜೆಪಿ ಶಿಕ್ಷಕರ ಪರವಾಗಿ ಹಲವಾರು ಸುಧಾರಣೆಗಳನ್ನು, ಅನುದಾನಿತ ಸಂಸ್ಥೆಗಳಲ್ಲಿ ಹುದ್ದೆ ಭರ್ತಿ ಮಾಡುವ ಕಾರ್ಯ ಮಾಡಿದೆ. ಕಾಂಗ್ರೆಸ್ ಪಕ್ಷದ ಆಡಳಿತ ನೇಮಕಾತಿಯನ್ನು ಸಂಪೂರ್ಣವಾಗಿ ನಿಷೇಧಿಸಿತ್ತು ಎಂದರು.

ಯಡಿಯೂರಪ್ಪ ಅವರ ಅವಧಿಯಲ್ಲಿ ಹುದ್ದೆ ಭರ್ತಿಗೆ ಅವಕಾಶ ಮಾಡಿಕೊಡಲಾಯಿತು. ಅನುದಾನ ಕೊಡುವ ವಿಚಾರದಲ್ಲೂ ಅವಕಾಶ, ಆಜ್ಞೆ ಮಾಡಲಾಗಿದೆ. ಜ್ಞಾನ ಆಯೋಗ ಆರಂಭ, ಮೂರನೇ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‍ಇಪಿ) ತರುವ ಮೂಲಕ ದೊಡ್ಡ ಸುಧಾರಣೆ ಮಾಡಲಾಗಿದೆ ಎಂದು ವಿವರಿಸಿದರು.

ಕೌಶಲ್ಯಯುಕ್ತ ಶಿಕ್ಷಣ ನೀಡುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಜೀ ಅವರು ಮಹತ್ವದ ಕ್ರಮ ತೆಗೆದುಕೊಂಡಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜಕೀಯ ಪ್ರೇರಿತವಾಗಿ ಕಾಂಗ್ರೆಸ್ ಪಕ್ಷವು ವಿರೋಧಿಸಿದೆ. ವೈಜ್ಞಾನಿಕವಾಗಿ ಯೋಚಿಸದೆ, ಚರ್ಚೆ- ವಿಮರ್ಶೆ ಇಲ್ಲದೆ ಏಕಾಏಕಿಯಾಗಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ತೆಗೆದುಹಾಕುತ್ತೇವೆ ಹಾಗೂ ರಾಜ್ಯ ಶಿಕ್ಷಣ ನೀತಿ ತರುವುದಾಗಿ ಮನಬಂದಂತೆ ನಿಲುವು ತೆಗೆದುಕೊಂಡಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

7ನೇ ವೇತನ ಆಯೋಗದ ಶಿಫಾರಸು ಜಾರಿ ಮಾಡದ ಈ ಕಾಂಗ್ರೆಸ್ ಸರಕಾರವು ರಾಜ್ಯವನ್ನು ಸಾಲದ ಸುಳಿಯಲ್ಲಿ ಸಿಲುಕಿಸಿದೆ. ಒಪಿಎಸ್ ಕುರಿತು ಸುಳ್ಳು ಭರವಸೆ ಕೊಟ್ಟಿದ್ದಾರೆ. ಇದೇ ಯುಪಿಎ ಸರಕಾರ ಎನ್‍ಪಿಎಸ್ ಜಾರಿಗೊಳಿಸಿತ್ತು ಎಂದು ಟೀಕಿಸಿದರು. ಶಿಕ್ಷಣ ಕ್ಷೇತ್ರವನ್ನು ಸದಾ ಹಾಳು ಮಾಡುವ ಕೆಲಸದಲ್ಲಿ ಕಾಂಗ್ರೆಸ್ಸಿನವರು ತೊಡಗಿದ್ದಾರೆ ಎಂದು ದೂರಿದರು.

ಸಿಇಟಿ ಪರೀಕ್ಷೆ ವಿಚಾರ, ಹೊಸದಾಗಿ ಜಾರಿ ಮಾಡಿದ ಪಬ್ಲಿಕ್ ಎಕ್ಸಾಮ್ ವಿಚಾರದಲ್ಲಿ ಗೊಂದಲ, ಸಮಸ್ಯೆಗಳು ಕಾಡುವಂತಾಗಿದೆ. ಶಿಕ್ಷಣ ವಾತಾವರಣವನ್ನು ಹದಗೆಡಿಸಿದ್ದಾರೆ. ಯುವ ನೀತಿಯಲ್ಲೂ ಡೋಂಗಿ ನೀತಿ ಜಾರಿ ಮಾಡಿದ್ದಾರೆ ಎಂದು ತಿಳಿಸಿದರು.

ನಮ್ಮ ಸರಕಾರ ಪಾಲಿಟೆಕ್ನಿಕ್, ಐಟಿಐ ಗುಣಮಟ್ಟ ಹೆಚ್ಚಿಸಿ ಅಡ್ಮಿಶನ್ ಶೇ 100ಕ್ಕೆ ಹೆಚ್ಚಳವಾಗಿದೆ. ಇಲ್ಲಿ ಕಲಿತ ಎಲ್ಲರಿಗೂ ಉದ್ಯೋಗ ಸಿಗುತ್ತಿದೆ. ಎಲ್ಲ ಸರಕಾರಿ ಕಾಲೇಜುಗಳಲ್ಲಿ ಶೇ 87ರಷ್ಟು ಅಕ್ರೆಡಿಷನ್ ಕೊಡಿಸಿದ್ದೇವೆ. ಇದೊಂದು ದೊಡ್ಡ ಸಾಧನೆ. ಶಿಕ್ಷಕರ ನೇಮಕಾತಿ ವೇಳೆ ಪಾರದರ್ಶಕ ಕೌನ್ಸೆಲಿಂಗ್ ನಡೆಸಿದ್ದೇವೆ ಎಂದು ವಿವರ ನೀಡಿದರು.

ಬಡ್ತಿ ಕಾಣದ ಶಿಕ್ಷಕರಿಗೆ ಬಡ್ತಿ ಕೊಡಿಸಿದ್ದೇವೆ. ಸುಧಾರಣೆ ನಡೆಸಿದ್ದು, ನೇಮಕಾತಿ, ಪಾರದರ್ಶಕತೆ, ಕೆರಿಯರ್ ಪ್ರಮೋಷನ್ ನೀಡಿದ್ದೇವೆ. ನಮ್ಮ ಅವಧಿಯಲ್ಲಿ 25ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿದ್ದೇವೆ ಎಂದು ತಿಳಿಸಿದರು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top