ಮೂಡುಬಿದಿರೆ: ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಇನ್ನು ಒಂದು ವಾರ ಮಾತ್ರ ಬಾಕಿ ಉಳಿದಿರುವ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಪ್ರಚಾರವನ್ನು ತೀವ್ರಗೊಳಿಸಿವೆ. ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಮತ್ತು ಜನತಾ ದಳ (ಜಾತ್ಯತೀತ) ತಮ್ಮ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಈ ಎಲ್ಲಾ ಪಕ್ಷಗಳ ನಾಯಕರು ಅವುಗಳನ್ನು ಮತದಾರರ ಬಳಿಗೆ ಕೊಂಡೊಯ್ಯುವತ್ತ ಗಮನ ಹರಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿಯಲ್ಲಿ ಇಂದು ನಡೆದ ಬಿಜೆಪಿಯ ನವ ಕರ್ನಾಟಕ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಅವರು, ದೇಶ, ಜಗತ್ತಿನಲ್ಲಿ ಕರ್ನಾಟಕದ ಹೆಸರನ್ನು ಪ್ರಸಿದ್ಧವಾಗಿ ಮಾಡಲು ಬಿಜೆಪಿಯ ಸ್ಥಿರ, ದೃಢವಾದ ಸರಕಾರ ಬೇಕು. ರಿವರ್ಸ್ ಗೇರ್ನಲ್ಲಿ ರಾಜ್ಯವನ್ನು ಒಯ್ಯುವವರನ್ನು ದೂರ ಇಡಲು ಜನತೆ ನಿರ್ಧರಿಸಿದ್ದಾರೆ. ಈ ಬಾರಿಯ ನಿರ್ಧಾರ ಬಿಜೆಪಿ ಸ್ಥಿರ ಸರಕಾರ ಎಂದು ಜನತೆ ನಿರ್ಣಯ ಮಾಡಿದ್ದಾರೆ ಎಂದರು.
ಬಿಜೆಪಿ ಸರ್ಕಾರ ಕರ್ನಾಟಕವನ್ನು ದೇಶದಲ್ಲೇ ನಂಬರ್ ಒನ್ ರಾಜ್ಯವನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದರೆ, ಕಾಂಗ್ರೆಸ್ ರಾಜ್ಯವನ್ನು ತನ್ನ ರಾಜ ಕುಟುಂಬದ ಎಟಿಎಂ ಮಾಡಲು ಪ್ರಯತ್ನಿಸುತ್ತಿದೆ. ಕಾಂಗ್ರೆಸ್ನ ಸಂಪೂರ್ಣ ರಾಜಕೀಯ ಒಡೆದು ಆಳುವ ಮೇಲೆ ನಿಂತಿದೆ ಎಂದು ಪ್ರಧಾನಿ ಹೇಳಿದರು.
ರಾಜ್ಯದಲ್ಲಿ ಹಿಂಸಾಚಾರ ಮತ್ತು ಕಾನೂನು ಸುವ್ಯವಸ್ಥೆ ಹದಗೆಡಿಸಲು ಕಾಂಗ್ರೆಸ್ ಹೆಸರುವಾಸಿಯಾಗಿದೆ ಎಂದರು. ಶಾಂತಿಯುತ ರಾಜ್ಯ ಮತ್ತು ಸಮುದಾಯಗಳ ನಡುವೆ ಸಾಮರಸ್ಯವನ್ನು ಖಚಿತಪಡಿಸಿಕೊಳ್ಳಲು, ಬಿಜೆಪಿಗೆ ಮತ ಹಾಕುವಂತೆ ಮೋದಿ ಮತದಾರರಲ್ಲಿ ಮನವಿ ಮಾಡಿದರು.
ಕರ್ನಾಟಕದಲ್ಲಿ ಮೊದಲ ಬಾರಿಯ ಮತದಾರರಿಗೆ ಮನವಿ ಮಾಡಿದ ಮೋದಿ, ರಾಜ್ಯದ ಭವಿಷ್ಯವನ್ನು ನಿರ್ಧರಿಸುವಲ್ಲಿ ಅವರ ಮತವು ನಿರ್ಣಾಯಕವಾಗಿದೆ ಎಂದು ಹೇಳಿದರು.
ಬಿಜೆಪಿ ಸಂಕಲ್ಪವು ಕರ್ನಾಟಕವನ್ನು ನಂಬರ್ ವನ್ ಮಾಡುವುದಾಗಿದೆ. ಆಧುನಿಕ ಮೂಲಸೌಕರ್ಯ, ರಾಜ್ಯವನ್ನು ಉತ್ಪಾದನಾ ಕ್ಷೇತ್ರದ ಸೂಪರ್ ಪವರ್ ಮಾಡಲು ಬಿಜೆಪಿಗೆ ಅಧಿಕಾರ ಕೊಡಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಿಳಿಸಿದರು.
ಕಾಂಗ್ರೆಸ್ ಅವಧಿಯಲ್ಲಿ ಶೌಚಾಲಯದ ಅಭಾವದಿಂದ ಮಹಿಳೆಯರ ಘನತೆಗೆ ಕುಂದುಂಟಾಗಿತ್ತು. ಬಾಲಕಿಯರು ಶಾಲೆ ತೊರೆಯುವ ಸ್ಥಿತಿ ಇತ್ತು. ಬಡವರು ಬಡವರಾಗಿಯೇ ಉಳಿದಿದ್ದರು. ಬಡವರ ಸಮಸ್ಯೆಗಳನ್ನು ಪರಿಹರಿಸಲು ಬಿಜೆಪಿ ಬರಬೇಕಾಯಿತು ಎಂದು ನುಡಿದರು. ಮಹಿಳಾ ಸಶಕ್ತೀಕರಣಕ್ಕೆ ಬಿಜೆಪಿ ಶ್ರಮಿಸಿತು. ಪಿಎಂ ಕಿಸಾನ್ ಸಮ್ಮಾನ್ ನಿಧಿ, ಮುದ್ರಾ ಯೋಜನೆಯ ಪ್ರಯೋಜನ ಜನರನ್ನು ನೇರವಾಗಿ ತಲುಪಿದೆ. ಮಹಿಳೆಯರ ಹೆಸರಿನಲ್ಲಿ ಮನೆಗಳ ನಿರ್ಮಾಣ ನಡೆದಿದೆ. ದೇಶ ಪ್ರಗತಿಯ ಹಾದಿಯಲ್ಲಿ ನಡೆದಿದೆ ಎಂದು ನುಡಿದರು.
ಜನತಾ ಜನಾರ್ದನರ ಆದೇಶ ನಮ್ಮ ಪರವಾಗಿದೆ ಎಂದರು. ಕಾಂಗ್ರೆಸ್ ಪಕ್ಷವು ಅವರ ನಾಯಕ ನಿವೃತ್ತಿ ಆಗುವುದಕ್ಕಾಗಿ, ಬಿಜೆಪಿ ಸರಕಾರದ ಜನಹಿತದ ಯೋಜನೆಗಳನ್ನು ರದ್ದು ಮಾಡಲು ಜನಮತ ಬಯಸುತ್ತಿದೆ ಎಂದು ಟೀಕಿಸಿದರು.
ಮಹಿಳೆಯರು, ಯುವಜನರ ಉತ್ಸಾಹ, ರೈತರ ಕಣ್ಣುಗಳಲ್ಲಿ ಆಶಾವಾದ ನೋಡಿದ್ದೇನೆ. ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರಕಾರ ಎಂಬ ಘೋಷಣೆ ನನ್ನ ಕಿವಿಗಳಲ್ಲಿ ಅನುರಣಿಸುತ್ತಿದೆ. ದಕ, ಉಡುಪಿ ಶಿಕ್ಷಣದಲ್ಲಿ ಉನ್ನತ ಸ್ಥಾನ ಪಡೆದಿದೆ. ಕರ್ನಾಟಕವು ಔದ್ಯೋಗಿಕ ಕ್ಷೇತ್ರ, ಮೀನುಗಾರಿಕೆ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ನಂಬರ್ ವನ್ ಮಾಡಲು ನಾವು ಬದ್ಧರಿದ್ದೇವೆ. ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲೂ ಬಿಜೆಪಿ ಕರ್ನಾಟಕವನ್ನು ನಂಬರ್ ವನ್ ಮಾಡಲಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷವು ಕುಟುಂಬವಾದದ ಪಕ್ಷ. ಕರ್ನಾಟಕವನ್ನು ಅದು ಪಕ್ಷದ ಎಟಿಎಂ ಮಾಡಲು ಬಯಸುತ್ತಿದೆ. ಶೇ 85 ರಷ್ಟು ಕಮಿಷನ್ ಪಡೆಯುವ ಕಾಂಗ್ರೆಸ್ ಪಕ್ಷವು ಕರ್ನಾಟಕವನ್ನು ದಶಕದಷ್ಟು ಹಿಂದಕ್ಕೆ ಎಳೆಯಲಿದೆ. ಜೆಡಿಎಸ್ ಕೂಡ ಅದೇ ರೀತಿಯಲ್ಲಿದೆ ಎಂದು ಆರೋಪಿಸಿದರು.
ರಾಜ್ಯದ ಕರಾವಳಿ ಪ್ರದೇಶವನ್ನು ಕಾಂಗ್ರೆಸ್ ಪಕ್ಷ ಕಡೆಗಣಿಸಿತ್ತು ಎಂದು ಟೀಕಿಸಿದ ಅವರು, ಬಿಜೆಪಿ, ಮೀನುಗಾರಿಕೆಗೆ ಪ್ರತ್ಯೇಕ ಸಚಿವಾಲಯ ರಚಿಸಿದ್ದನ್ನು ಉಲ್ಲೇಖಿಸಿದರು. ಕರಾವಳಿ, ಮೀನುಗಾರರು ಕಾಂಗ್ರೆಸ್ ಕಣ್ಣಿಗೆ ಕಾಣುತ್ತಿರಲಿಲ್ಲವೇ ಎಂದು ಪ್ರಶ್ನಿಸಿದರು.
ಕರ್ನಾಟಕದ ಭವಿಷ್ಯ ನಿರ್ಧರಿಸುವ ಯುವ ನೂತನ ಮತದಾರರು ಬಿಜೆಪಿಗೆ ಮತ ಕೊಟ್ಟು ಉತ್ತಮ ಭವಿಷ್ಯವನ್ನು ತಮ್ಮದಾಗಿಸಿಕೊಳ್ಳಬೇಕು ಎಂದು ಆಶಿಸಿದರು. ಅಸ್ಥಿರತೆಗೆ ಹೆಸರಾದ ಕಾಂಗ್ರೆಸ್ ಯುವಜನರಿಗೆ ಉತ್ತಮ ಭವಿಷ್ಯ ನೀಡಲು ಸಾಧ್ಯವಿಲ್ಲ. ಕಾಂಗ್ರೆಸ್ ವಿಕಾಸ, ಶಾಂತಿಯ ವಿರೋಧಿ ಪಕ್ಷ. ಕಾಂಗ್ರೆಸ್ ಆತಂಕವಾದವನ್ನು, ತುಷ್ಟೀಕರಣವನ್ನು ಬಯಸುವ ಪಕ್ಷ ಎಂದು ಟೀಕಿಸಿದರು.
ದೇಶದ ಪ್ರಗತಿಯನ್ನು ಕಾಂಗ್ರೆಸ್ ಸಹಿಸುವುದಿಲ್ಲ. ಹಂಚುವ ಆಧಾರದಲ್ಲಿ ಕಾಂಗ್ರೆಸ್ ನೀತಿ ಇದೆ. ಆತಂಕವಾದದಲ್ಲಿ ಬಂಧಿತರನ್ನು ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡುತ್ತ ಬಂದಿದೆ. ಇದರಿಂದ ಶಾಂತಿ ಸಿಗಲು ಸಾಧ್ಯವೇ ಎಂದು ಪ್ರಶ್ನಿಸಿದರು. ದೇಶವಿರೋಧಿ ಶಕ್ತಿಗಳನ್ನು ಬಿಡುಗಡೆ ಮಾಡುವ ಅವರಿಂದ ಸಹಾಯ ಪಡೆಯುವ ರಿವರ್ಸ್ ಗೇರ್ ಕಾಂಗ್ರೆಸ್ ಪಕ್ಷಕ್ಕೆ ಮತ ಕೊಡದಿರಿ ಎಂದು ಮನವಿ ಮಾಡಿದರು.
ಸೇನೆಯನ್ನು, ಸೈನಿಕರನ್ನು ಅಪಮಾನಿಸುವ, ಸೇನಾ ವರಿಷ್ಠರನ್ನು ಟೀಕಿಸುವ ಪಕ್ಷ ಕಾಂಗ್ರೆಸ್. ರಿವರ್ಸ್ ಗೇರ್ ಕಾಂಗ್ರೆಸ್ ನಮ್ಮ ಪ್ರಜಾಸತ್ತಾತ್ಮಕ ದೇಶದ ಕುರಿತು ಟೀಕಿಸುತ್ತದೆ. ಭಾರತ ವಿಶ್ವವಂದ್ಯ ದೇಶವಾಗಿದೆ. ಇದನ್ನು ಕಾಂಗ್ರೆಸ್ ಸಹಿಸುತ್ತಿಲ್ಲ ಎಂದು ಆಕ್ಷೇಪಿಸಿದರು.
ಸ್ಟಾರ್ಟಪ್ಗೆ ಮಹತ್ವ ನೀಡಿದ ರಾಜ್ಯ ಕರ್ನಾಟಕ. ಕರ್ನಾಟಕವು ಬಾಹ್ಯಾಕಾಶ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆಯನ್ನು ಮಾಡಿದೆ. ಎಚ್ಎಎಲ್ ಕೂಡ ಗರಿಷ್ಠ ಲಾಭ ಮಾಡಿದೆ. ಪ್ರಾಮಾಣಿಕತೆಯಿಂದ ಬಿಜೆಪಿ ಸೇವೆಯೇ ಇದಕ್ಕೆ ಕಾರಣ ಎಂದು ವಿಶ್ಲೇಷಿಸಿದರು. ಯುವಜನರಿಗೆ ಉಜ್ವಲ ಭವಿಷ್ಯ ಸಿಗಲು ಬಿಜೆಪಿಯನ್ನೇ ಬೆಂಬಲಿಸಿ ಎಂದು ಮನವಿ ಮಾಡಿದರು.
ವಿಶ್ವದ 5ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಭಾರತ ಹೊರಹೊಮ್ಮಿದೆ. ಗುಲಾಮರನ್ನಾಗಿ ನಮ್ಮನ್ನು ಆಳಿದ್ದ ಇಂಗ್ಲೆಂಡನ್ನು ನಾವು ಹಿಂದಿಕ್ಕಿದ್ದೇವೆ. ವಿಶ್ವದ 3ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಲು ನಿಮ್ಮೆಲ್ಲರ ಸಹಕಾರ ಬೇಕು ಎಂದ ಅವರು, ಕರ್ನಾಟಕ ಇಲ್ಲದೆ ನಾವು ಮುಂದೆ ಸಾಗಲು ಅಸಾಧ್ಯ. ಆದ್ದರಿಂದ ಕರ್ನಾಟಕದಲ್ಲಿ ಬಿಜೆಪಿ ಸರಕಾರ ಬೇಕು ಎಂದು ತಿಳಿಸಿದರು. ಮನೆಮನೆಗೆ ತೆರಳಿ ನನ್ನ ನಮಸ್ಕಾರ ತಿಳಿಸಿ, ಬಿಜೆಪಿಯ ಶಕ್ತಿ ಹೆಚ್ಚಿಸಿ ಎಂದು ವಿನಂತಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.