ಬೈಂದೂರು: ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರುರಾಜ್ ಗಂಟಿಹೊಳೆ ಅವರು ಬೃಹತ್ ಸಮಾವೇಶ ನಡೆಸಿ ಬಳಿಕ ಇಂದು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಬಿ.ವೈ ರಾಘವೇಂದ್ರ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಸಮಾವೇಶದಲ್ಲಿ ಮಾತನಾಡಿದ ಬಿ.ವೈ ರಾಘವೇಂದ್ರ ಅವರು, ಬಡವರ ಮಗ, ಹೃದಯವಂತ ಗಂಟಿಹೊಳೆ ಅವರನ್ನು ಆರಿಸಿ ವಿಧಾನಸಭೆಗೆ ಕಳುಹಿಸಿ ಎಂದು ಜನರಲ್ಲಿ ಮನವಿ ಮಾಡಿದರು.
ಬಳಿಕ ಬೈಂದೂರು ಬಿಜೆಪಿ ಕಛೇರಿಯಲ್ಲಿ ನಡೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ, ಇಡೀ ಕರಾವಳಿ ಭಾಗದಲ್ಲಿ ಅತ್ಯಂತ ದೊಡ್ಡ ಅಂತರದಲ್ಲಿ ಗೆಲ್ಲುವ ಕ್ಷೇತ್ರವಿದ್ದರೆ ಅದು ಗುರುರಾಜ್ ಗಂಟಿಹೊಳೆ ಪ್ರತಿನಿಧಿಸುವ ಬೈಂದೂರು ವಿಧಾನಸಭಾ ಕ್ಷೇತ್ರ. ಇಡೀ ಕರಾವಳಿಯಲ್ಲಿ ಭಾಜಪದ ಪರವಾದ ಬಹಳ ದೊಡ್ಡ ಅಲೆ ಇದೆ ಎಂದು ಹೇಳಿದರು.
“ಈ ಭಾಗದ ಯುವಕರ, ಧಮನಿತರ, ಸನಾತನ ಪರಂಪರೆಯ ಧ್ವನಿಯಾಗಿ ಗುರುರಾಜ್ ಗಂಟಿಹೊಳೆ ವಿಧಾನಸಭೆ ಪ್ರವೇಶಿಸಬೇಕು. ಮೂರುವರೆ-ನಾಲ್ಕು ವರ್ಷಗಳ ಹಿಂದೆ ಯುವಮೋರ್ಚಾದ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದ ನನ್ನನ್ನು ಪಕ್ಷ ಗುರುತಿಸಿ ಲೋಕಸಭಾ ಚುನಾವಣೆಯ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿತ್ತು. ಪಕ್ಷದ ಈ ತೀರ್ಮಾನದಿಂದಾಗಿ ಅಂದು ಬೆಂಗಳೂರಿನ ದಕ್ಷಿಣ ಕಾರ್ಯಕರ್ತರಲ್ಲಿ ಯಾವ ರೀತಿಯ ಸಂಚಲನ ಮೂಡಿಸಿತ್ತೊ ಅದೇ ರೀತಿಯ ಮಿಂಚಿನ ಸಂಚಲನವನ್ನು ಇಂದು ಗುರುರಾಜ್ ಗಂಟಿಹೊಳೆಯವರನ್ನು ಅಭ್ಯರ್ಥಿ ಮಾಡುವ ಮೂಲಕ ನಾವೆಲ್ಲರೂ ಅನುಭವಿಸುತ್ತಿದ್ದೇವೆ” ಎಂದರು.
ಸಣ್ಣ-ಪುಟ್ಟ ವ್ಯವಹಾರಗಳ ಜೊತೆ ಜೊತೆಗೆ ಅವರಿಗೆ ಬರುವ ಆದಾಯದಲ್ಲಿ ಈಶಾನ್ಯ ಭಾರತದಲ್ಲಿರುವ ನಮ್ಮ ಯುವಕರನ್ನು ಕರೆತಂದು ಅವರ ವಿದ್ಯಭ್ಯಾಸದ ಜವಾಬ್ದಾರಿಯನ್ನು ಹೆಗಲ ಮೇಲೆ ಹಾಕಿಕೊಂಡು ಒಂದೇ ಭಾರತದ ಪರಿಕಲ್ಪನೆಯನ್ನು ಹಳ್ಳಿಗಾಡಿನಲ್ಲಿ ತರುವ ಚಿಂತನೆಯಲ್ಲಿ ಗುರುರಾಜ್ ತೊಡಗಿಕೊಂಡಿದ್ದಾರೆ. ಕಳೆದ ಕೆಲ ದಿನಗಳಿಂದ ದಿನಪತ್ರಿಕೆಗಳಲ್ಲಿ ಅಭ್ಯರ್ಥಿಗಳ ಆಸ್ತಿಗಳ ಲೆಕ್ಕಾಚಾರಗಳು ಎಲ್ಲರ ಹುಬ್ಬೇರಿಸುವಂತೆ ಮಾಡುತ್ತಿದೆ. ಆದರೆ ಈ ಹಣಗಳ ಕೋಟ್ಯಾಧೀಶ್ವರರ ಮಧ್ಯದಲ್ಲಿ ಗುಣಗಳ ಕೋಟ್ಯಾಧೀಶರಾಗಿ ಜನ ಸಂಪತ್ತನ್ನು ಗಳಿಸಿರುವ ಒಬ್ಬ ಕಾರ್ಯಕರ್ತನಾಗಿ ಗುರುರಾಜ್ ಗಂಟಿಹೊಳಿ ಕಂಗೊಳಿಸುತ್ತಿದ್ದಾರೆ ಎಂದರು.
ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ಚುನಾವಣಾ ರಾಜಕಾರಣದಿಂದ ದೂರ ಸರಿದ ಬಳಿಕ ಆ ಜಾಗವನ್ನು ಯಾರು ತುಂಬುತ್ತಾರೆ ಎನ್ನುವ ಪ್ರಶ್ನೆ ಸಾವಿರಾರು ಕಾರ್ಯಕರ್ತರಲ್ಲಿ ಮೂಡಿರುವುದು ಸಹಜ. ಬಹಳ ಹೆಮ್ಮೆಯಿಂದ, ವಿಶ್ವಾಸದಿಂದ ಹೇಳಬಲ್ಲೆ, ಈ ಭಾಗದಲ್ಲಿ ಕುಂದಾಪುರದ ವಾಜಪೇಯಿ ಎಂದು ಯಾವ ರೀತಿಯಲ್ಲಿ ಶ್ರೀನಿವಾಸ ಶೆಟ್ಟರು ಹೆಸರು ಮಾಡಿದ್ದರೋ ಅದೇ ರೀತಿಯ ಪ್ರೀತಿ, ವಿಶ್ವಾಸ, ಗೌರವವನ್ನು ಕಾರ್ಯಕರ್ತರಲ್ಲಿ, ಮತದಾರರಲ್ಲಿ ಗುರುರಾಜ್ ಗಂಟಿಹೊಳೆ ಬರುವ ದಿನಗಳಲ್ಲಿ ಸಂಪಾದಿಸುತ್ತಾರೆ ಎಂದರು.
ಚಿತ್ರನಟಿ ಶ್ರುತಿ ಮಾತನಾಡಿ, ರಾಜ್ಯದ ಹಲವಾರು ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಿದ್ದೆ. ಆದರೆ ಬೈಂದೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಬಹಳ ವಿಭಿನ್ನ. ಹಣವಿರುವ ಅಭ್ಯರ್ಥಿಗಳನ್ನು ನೋಡಿದ್ದೇನೆ. ಆದರೆ ಕೇವಲ ಗುಣಕ್ಕೆ ಹೆಸರಾಗಿರುವ ಅಭ್ಯರ್ಥಿ ಕ್ಷೇತ್ರದಲ್ಲಿದ್ದಾರೆ. ಭಾರತೀಯ ಜನತಾ ಪಾರ್ಟಿಯ ಕನಸೇ ಅದು. ಓಬ್ಬ ಚಾ ಮಾರುವ ವ್ಯಕ್ತಿ ನಮ್ಮ ದೇಶದ ಪ್ರಧಾನಿಯಾಗಿದ್ದು ನಮ್ಮ ಕಣ್ಮುಂದೆ ಇದೆ. ಹಾಗೆಯೇ ಬಡವರ ಮನೆ ಹುಡುಗನನ್ನು ಶಾಸಕನಾಗಿ ಕಾಣುವ ದಿನಗಳು ದೂರವಿಲ್ಲ. ಈ ಚುನಾವಣೆಯಲ್ಲಿ ಒಂದಷ್ಟು ಬದಲಾವಣೆಗಳನ್ನು ತರುವ ನಿಟ್ಟಿನಲ್ಲಿ 60 ಕ್ಕೂ ಹೆಚ್ಚು ಹೊಸ ಮುಖಗಳಿಗೆ ಬಿಜೆಪಿ ಪ್ರಾಶಸ್ತ್ಯ ನೀಡಿದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.