ಹಾವೇರಿ: ಕರ್ನಾಟಕ ಭೇಟಿಯಲ್ಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಇಂದು ಹಾವೇರಿಯಲ್ಲಿ ಬೃಹತ್ ರೋಡ್ ಶೋ ನಡೆಸಿದರು.
ಬಳಿಕ ಸಾರ್ವಜನಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕದಲ್ಲಿ 4 ಲೇನ್, 6 ಲೇನ್ ರಸ್ತೆಗಳು ನಿರ್ಮಾಣವಾಗುತ್ತಿವೆ, ವಂದೇ ಭಾರತ್ ರೈಲು ಸಂಚರಿಸುತ್ತಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಬಡವರಿಗೆ ಮನೆಗಳು ದೊರಕುತ್ತಿವೆ. ಬಡವರಿಗೆ ಉಚಿತವಾಗಿ 5 ಕೆಜಿ ಆಹಾರ ಧಾನ್ಯ ದೊರಕುತ್ತಿದೆ. ಆಯುಷ್ಮಾನ್ ಭಾರತದಡಿ ಜನರಿಗೆ ಉಚಿತ ಆರೋಗ್ಯ ಸೇವೆ ದೊರಕುತ್ತಿದೆ. ಇದೇ ರೀತಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳಿಗಾಗಿ ಕಮಲದ ಚಿನ್ನೆಗೆ ಮತ ಚಲಾಯಿಸಬೇಕು ಎಂದರು.
ಭಾರತದಲ್ಲಿ ಅತಿ ಹೆಚ್ಚು ವಿದೇಶಿ ಹೂಡಿಕೆ ಕರ್ನಾಟಕಕ್ಕೆ ಹರಿದು ಬರುತ್ತಿದೆ. ಕರ್ನಾಟಕದಲ್ಲಿ ಎಫ್ ಡಿ ಐಗೆ ಮತ್ತಷ್ಟು ಬಲ ನೀಡಲು ನಾವು ಬಿಜೆಪಿಯನ್ನು ಆರಿಸಬೇಕು. ಪಿಎಫ್ ಐ ನಂತಹ ದೇಶದ್ರೋಹಿ ಸಂಘಟನೆಗಳ ಮೇಲೆ ನಿಷೇಧವನ್ನು ಹೇರಿದ್ದೇವೆ. ಸಿದ್ದರಾಮಯ್ಯ ಮುಂತಾದ ಪ್ರತಿಪಕ್ಷಗಳ ನಾಯಕರು ನಾವು ಅಧಿಕಾರಕ್ಕೆ ಬಂದರೆ ಪಿಎಫ್ ಐ ಮೇಲಿನ ನಿಷೇಧವನ್ನು ತೆರವುಗೊಳಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಪಿ ಎಫ್ ಐ ಕಾರ್ಯಕರ್ತರ ಮೇಲಿನ ಹಲವಾರು ಪ್ರಕರಣಗಳನ್ನು ಅವರು ವಾಪಸ್ ಪಡೆದಿದ್ದನ್ನು ನಾವು ಕಂಡಿದ್ದೇವೆ. ಆದರೆ ಬೊಮ್ಮಾಯಿ ಸರಕಾರ ಅಪರಾಧಿಗಳನ್ನು ಶಿಕ್ಷಿಸುವ ಕಾರ್ಯ ಮಾಡಿತು. ಬಿಜೆಪಿಯನ್ನು ಆಯ್ಕೆ ಮಾಡಿದಾಗ ಮಾತ್ರ ರಾಜ್ಯದಲ್ಲಿ ಶಾಂತಿ ಮತ್ತು ಅಭಿವೃದ್ಧಿ ಸಾಧ್ಯ ಎಂದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ತಮ್ಮ ನಾಮಪತ್ರ ಸಲ್ಲಿಸಲಿದ್ದಾರೆ. ಇದು ಕೇವಲ ಶಾಸಕ ಸ್ಥಾನಕ್ಕಾಗಿನ ನಾಮಪತ್ರವಲ್ಲ , ಇದು ಕರ್ನಾಟಕಕ್ಕೆ ನೀಡಲಾಗುವ ನಿರ್ದೇಶನವನ್ನು ಮುನ್ನಡೆಸುವ ಒಂದು ಮಾರ್ಗವಾಗಿದೆ. ಬೊಮ್ಮಾಯಿ ಅವರು ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಅವರಿಗೆ ನರೇಂದ್ರ ಮೋದಿ ಅವರು ಮಾಡಿದ ಕಾರ್ಯಗಳನ್ನು ಮುಂದಕ್ಕೆ ತೆಗೆದುಕೊಂಡು ಹೋಗಲು ಮತ್ತೊಂದು ಅವಕಾಶ ನೀಡಬೇಕಾಗಿದೆ. ಇಂದು ಇಲ್ಲಿ ನೆರೆದಿರುವ ಜನ ಸಮೂಹದ ಉತ್ಸಾಹ ನೋಡುತ್ತಿದ್ದರೆ ಬೊಮ್ಮಾಯಿ ಅವರನ್ನು ಮತ್ತೆ ವಿಧಾನಸಭೆಗೆ ಕಳುಹಿಸುವ ನಿರ್ಧಾರವನ್ನು ಜನರು ಖಚಿತಪಡಿಸಿದಂತಿದೆ ಎಂದರು.
ಕರ್ನಾಟಕದಲ್ಲಿ ಅಭಿವೃದ್ಧಿಯ ಗಂಗೆ ಸದಾ ಹರಿಯುತ್ತಿರಬೇಕು, ಹೀಗಾಗಿ ಬಿಜೆಪಿಗೆ ಮತ ನೀಡಬೇಕು ಎಂದು ನಾನು ಜನರಲ್ಲಿ ಮನವಿ ಮಾಡುತ್ತೇನೆ. ಮೋದಿ ಅವರ ಕಾರ್ಯಗಳಿಂದ ಕರ್ನಾಟಕ ವಂಚಿತವಾಗಬಾರದು, ಹೀಗಾಗಿ ಇಲ್ಲಿ ಬಿಜೆಪಿ ಸರ್ಕಾರ ರಚನೆಯಾಗಬೇಕು. ಕಾಂಗ್ರೆಸ್ ಎಂದರೆ ಭ್ರಷ್ಟಾಚಾರ, ಅಪರಾಧಿಕರಣ, ಕಮಿಷನ್. ಕಾಂಗ್ರೆಸ್ ನಾಯಕರು ನಾಯಕರಲ್ಲ, ಅವರು ಎಟಿಎಂ ಚಲಾಯಿಸುವವರು. ಕರ್ನಾಟಕದ ಹಣವನ್ನು ಅವರು ದೆಹಲಿಗೆ ತಲುಪಿಸುವ ಕಾರ್ಯ ಮಾಡುತ್ತಾರೆ. ಅಂತಹ ಸರಕಾರ ನಮಗೆ ಬೇಡವೇ ಬೇಡ. ಮೋದಿ ಮೂಲಕ ಕಳುಹಿಸಲಾಗುವ ಹಣ ಕರ್ನಾಟಕದ ನೆಲಕ್ಕೆ ತಲುಪಿಸುವ ಸರ್ಕಾರ ನಮಗೆ ಬೇಕು ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.