ಬೆಂಗಳೂರು: ಕಳೆದ ಸುಮಾರು ಒಂದು ದಶಕದಲ್ಲಿ ನರೇಂದ್ರ ಮೋದಿಜಿ ಅವರ ನೇತೃತ್ವದಲ್ಲಿ ಭಾರತವು ಗಮನಾರ್ಹ ಅಭಿವೃದ್ಧಿ ಸಾಧಿಸಿದೆ. ಅದೇ ಹಾದಿಯಲ್ಲಿ ಭಾರತ ಮುನ್ನಡೆಯಬೇಕಾದ ಅಗತ್ಯವಿದೆ ಎಂದು ಕೇಂದ್ರ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ತಿಳಿಸಿದರು.
ನಗರದಲ್ಲಿ ಇಂದು ಬಿಜೆಪಿ ಪ್ರಣಾಳಿಕೆ ಸಲಹಾ ಸಂಗ್ರಹ ಅಭಿಯಾನದ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಜಿ ಅವರ ಸಮರ್ಥ ನಾಯಕತ್ವದಲ್ಲಿ ಭಾರತವು ಸಮಗ್ರ ಬದಲಾವಣೆಯ ಹಾದಿಯಲ್ಲಿದೆ. ನೀವು ಇದರ ಭಾಗವಾಗಿದ್ದೀರಿ. ಜಗತ್ತು ಅತ್ಯಂತ ಆಸಕ್ತಿಯಿಂದ ನಮ್ಮತ್ತ ನೋಡುತ್ತಿದೆ. ಭಾರತ ಒಂದೆರಡು ದಶಕಗಳ ಹಿಂದೆ ಹೀಗಿರಲಿಲ್ಲ ಎಂಬ ಅಭಿಪ್ರಾಯವೂ ಅವರಲ್ಲಿದೆ ಎಂದು ತಿಳಿಸಿದರು.
ಸ್ಪರ್ಧಾತ್ಮಕತೆ ಹೆಚ್ಚಾಗಿದೆ. ವಿವಿಧ ಕ್ಷೇತ್ರದಲ್ಲಿ ಸಾಮಗ್ರಿಗಳ ಸಮರ್ಥ ಸರಬರಾಜು ವ್ಯವಸ್ಥೆಗಾಗಿ ಹುಡುಕಾಟದಿಂದ ನಮ್ಮ ಅವಕಾಶ ಹೆಚ್ಚಾಗಿದೆ. ರಷ್ಯಾ- ಉಕ್ರೇನ್ ಯುದ್ಧ, ಸುದೀರ್ಘ ಅವಧಿಯ ಕೋವಿಡ್ ಬಾಧೆ ಮತ್ತು ಆರೋಗ್ಯದ ಮೇಲಿನ ಪರಿಣಾಮ, ಅಂತರರಾಷ್ಟ್ರೀಯ ಸಂಬಂಧದಲ್ಲಿ ಬದಲಾವಣೆಗಳನ್ನು ತಂದಿದೆ ಎಂದು ಅವರು ವಿಶ್ಲೇಷಿಸಿದರು.
ಡಿಜಿಟಲ್ ಮತ್ತು ನಂಬಿಕೆ ಜೊತೆಜೊತೆಯಾಗಿ ಹೋಗಬೇಕಿದೆ. ಜರ್ಮನಿ, ಜಪಾನ್ನಂಥ ದೇಶಗಳು ನಮ್ಮ ದೇಶದ ಜೊತೆ ಹಿಂದೆ ಆತ್ಮೀಯ ಸಂಬಂಧ ಹೊಂದಿರಲಿಲ್ಲ. ಇತ್ತೀಚಿನ ದಿನಗಳಲ್ಲಿ ಈಗ ಅವುಗಳು ನಮ್ಮೊಡನೆ ಒಡಂಬಡಿಕೆ ಮಾಡಿಕೊಳ್ಳಲು ಮುಂದಾಗುತ್ತಿವೆ ಎಂದು ತಿಳಿಸಿದರು.
ಸೆಮಿ ಕಂಡಕ್ಟರ್ ಚಿಪ್ ವಿನ್ಯಾಸ, ಎಂಜಿನಿಯರಿಂಗ್ ಕಡೆ ಗಮನ ನೀಡಬೇಕು. ಆ ವಿಚಾರದಲ್ಲಿ ಬೆಂಗಳೂರು ಮುಂದಿದೆ. ಭಾರತದಲ್ಲಿ ಕಳೆದೊಂದು ದಶಕದಲ್ಲಿ ದೂರದೃಷ್ಟಿಯ ಮಹತ್ತರ ಬದಲಾವಣೆಗಳು ಆಗಿವೆ. ಭಾರತ ಮುನ್ನಡೆಯಬೇಕಾದ ದಿಕ್ಕಿನ ಕುರಿತು ಸ್ಪಷ್ಟತೆ ಲಭಿಸಿದೆ. ಇದು ಅಮೃತ ಕಾಲದಲ್ಲಿ ನಾವು ನಮ್ಮ ಜನರನ್ನು ಆತ್ಮವಿಶ್ವಾಸದಿಂದ ಮುಂದೆ ಒಯ್ಯಲು ಪೂರಕ ಆಗಬೇಕು ಎಂದು ನುಡಿದರು.
ನಾರಿ ಶಕ್ತಿಯ ಸಶಕ್ತೀಕರಣ, ಮುದ್ರಾ ಯೋಜನೆಯಿಂದ ಮಹಿಳೆಯರಿಗೆ ಆದ ಲಾಭಗಳ ಕುರಿತು ಅವರು ಮಾಹಿತಿ ನೀಡಿದರು. ಬೇಟಿ ಪಡಾವೊ- ಬೇಟಿ ಬಚಾವೊ ಮೂಲಕ ಆಗಿರುವ ಪ್ರಯೋಜನ ಗಮನಾರ್ಹ ಎಂದು ಅವರು ವಿವರಿಸಿದರು. ಆತ್ಮವಿಶ್ವಾಸ ಮತ್ತು ಪ್ರಯತ್ನ ಇದ್ದಲ್ಲಿ ಜಗತ್ತು ನಮ್ಮ ಉತ್ಪನ್ನಗಳನ್ನು ಇದಿರು ನೋಡುತ್ತಿದೆ ಎಂಬ ಸ್ಥಿತಿ ಈಗ ಬಂದಿದೆ ಎಂದು ತಿಳಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.