ಮಂಗಳೂರು: ಕಾಂಗ್ರೆಸ್ ಪಕ್ಷವು ಭ್ರಷ್ಟಾಚಾರದ ಕೂಪವಾಗಿದೆ. ಕೈ ನಾಯಕರು ಈ ತನಕ ಒಟ್ಟು 5 ಲಕ್ಷ ಕೋಟಿ ರೂ.ಗಳಷ್ಟು ಭ್ರಷ್ಟಾಚಾರವನ್ನು ಎಸಗಿದ್ದಾರೆ ಎಂಬುದಕ್ಕೆ ಸಾಕ್ಷಾಧಾರಗಳಿವೆ ಎಂದು ಬಿಜೆಪಿ ರಾಜ್ಯ ವಕ್ತಾರ ಎಂ.ಜಿ ಮಹೇಶ್ ಆರೋಪಿಸಿದ್ದಾರೆ.
ಮಂಗಳೂರಿನಲ್ಲಿ ಬಿಜೆಪಿ ಚುನಾವಣಾ ಕಛೇರಿ ಉದ್ಘಾಟಿಸಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಒಟ್ಟು 29 ಕಾಂಗ್ರೆಸ್ಸಿನ ಹಾಲಿ ಶಾಸಕರು ವಾಮಮಾರ್ಗದ ಮೂಲಕ ಹಣ ಸ್ವೀಕರಿಸುತ್ತಿರುವುದು ಸ್ಟಿಂಗ್ ಅಪರೇಶನ್ ಮೂಲಕ ಬೆಳಕಿಗೆ ಬಂದಿದೆ ಎಂದರು.
ಲಂಚ ಸ್ವೀಕರಿಸುವ ಮೂಲಕ ಭ್ರಷ್ಟಾಚಾರದಲ್ಲಿ ಭಾಗಿಯಾದ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರ ಪಟ್ಟಿಯನ್ನು ಈ ಸಂದರ್ಭ ಬಿಡುಗಡೆಗೊಳಿಸಿದ ಮಹೇಶ್, ಕೈ ಪಕ್ಷದಲ್ಲಿ ಲಂಚ ಸ್ವೀಕರಿಸಿದ್ದಾರೆ ಎಂಬ ಆರೋಪ ಹೊತ್ತಿರುವ ಒಟ್ಟು 29 ಶಾಸಕರಲ್ಲಿ 13 ಹಾಲಿ ಶಾಸಕರಿಗೆ ಈಗಾಗಲೇ ಕಾಂಗ್ರೆಸ್ ಪಕ್ಷವು ಟಿಕೆಟ್ ನೀಡಿದೆ ಎಂದು ಆರೋಪಿಸಿದರು. ವರ್ತಮಾನದಲ್ಲಿ ಕಾಂಗ್ರೆಸ್ ಪಕ್ಷವು ನೈತಿಕತೆಯ ಬಗ್ಗೆ ಮಾತನಾಡುವ ಅರ್ಹತೆಯನ್ನು ಸಂಪೂರ್ಣವಾಗಿ ಕಳೆದುಕೊಂಡಿದೆ ಎಂದರು. ಬಿಜೆಪಿಯು ಕಾರ್ಯಕರ್ತರನ್ನು ಗೌರವಿಸುವ ಕೇಡರ್ ಬೇಸ್ಡ್ ಪಕ್ಷವಾಗಿದೆ. ಭ್ರಷ್ಟಾಚಾರ ವಿಚಾರದಲ್ಲಿ ಶೂನ್ಯ ಸಹಿಷ್ಠುತೆ ಹೊಂದಿರುವ ಬಿಜೆಪಿಯು ʼನಾ ಖಾವುಂಗಾ, ನಾ ಖಾನೇದುಂಗಾʼ ಎಂಬ ನೀತಿಗೆ ಬದ್ಧವಾಗಿದೆ ಎಂದರು.
ವರ್ತಮಾನದಲ್ಲಿ ಕೈ ಪಕ್ಷವು ಕುಟುಂಬ ರಾಜಕಾರಣ, ತುಷ್ಠೀಕರಣ, ಸ್ವಜನ ಪಕ್ಷಪಾತ ಸಹಿತ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಆರೋಪಿಸಿದರು. ಈ ಬಾರಿ ಬಿಜೆಪಿ ಪಕ್ಷವೂ ಎಂದಿನಂತೆ ಆಂತರಿಕ ಚುನಾವಣೆಯ ಮೂಲಕ ಸಮೀಕ್ಷೆಗೆ ಮುಂದಾಗಿದ್ದು ಅರ್ಹ ಅಭ್ಯರ್ಥಿಗಳನ್ನು ಕಾರ್ಯಕರ್ತರೇ ಆಯ್ಕೆ ಮಾಡಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲೂ ಆಂತರಿಕ ಚುನಾವಣೆ ನಡೆದಿದೆ. ಪುತ್ತೂರು ಮತ್ತು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಆಂತರಿಕ ಚುನಾವಣೆಗಳು ಪ್ರಗತಿಯಲ್ಲಿವೆ ಎಂದರು. ಮಂಡಲ ಮಟ್ಟದ ಬಿಜೆಪಿ ಪದಾಧಿಕಾರಿಗಳು, ತಾಲೂಕು ಪಂಚಾಯತ್ ಬಿಜೆಪಿ ಅಭ್ಯರ್ಥಿಗಳು ಮತ ಚಲಾಯಿಸಿದ್ದಾರೆ ಎಂದರು.
ಬಿಜೆಪಿಯು ನುಡಿದಂತೆ ನಡೆಯುವ ಪಕ್ಷವಾಗಿದ್ದು, ಅಭಿವೃದ್ಧಿ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿದೆ ಎಂದರು. ಪಕ್ಷಕ್ಕೆ ಕಾರ್ಯಕರ್ತರೇ ಶಕ್ತಿಯಾಗಿದ್ದು ಅವರ ಭಾವನೆಗಳಿಗೆ ಮನ್ನಣೆ ನೀಡುತ್ತದೆ ಎಂದು ಹೇಳಿದರು.
ಮಾರ್ಚ್ 7-8ರೊಳಗೆ ಬಿಜೆಪಿ ಕೋರ್ ಸಮಿತಿ ಸಭೆಯು ಬೆಂಗಳೂರಿನಲ್ಲಿ ನಡೆಯಲಿದ್ದು ಸೂಕ್ತ ಅಭ್ಯರ್ಥಿಗಳನ್ನು ಆರಿಸಿ ಕ್ಷೇತ್ರವಾರು ಅಂತಿಮ ಅಭ್ಯರ್ಥಿಗಳ ಪಟ್ಟಿಯನ್ನು ಪಕ್ಷ ವರಿಷ್ಠರು ಬಿಡುಗಡೆಗೊಳಿಸಲಿದ್ದಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಸ್ಥಳೀಯ ನಾಯಕರಾದ ರವಿಶಂಕರ್ ಮಿಜಾರು, ರತನ್ ರಮೇಶ್ ಪೂಜಾರಿ, ಸಂಜಯ ಪ್ರಭು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.