ಬೆಂಗಳೂರು: ಬಿಜೆಪಿ ಸರಕಾರ ಜನಸಾಮಾನ್ಯರ ಸರಕಾರ. ಜನಸಾಮಾನ್ಯರ ಸಿಎಂ ಆಗಿ ಬಸವರಾಜ ಬೊಮ್ಮಾಯಿಯವರು ಹೊರಹೊಮ್ಮಿದ್ದಾರೆ ಎಂದು ರಾಜ್ಯದ ಆರೋಗ್ಯ, ಕುಟುಂಬ ಕಲ್ಯಾಣ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವ ಡಾ|| ಕೆ. ಸುಧಾಕರ್ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಇಂದು ಮಾತನಾಡಿದ ಅವರು, ಚುನಾವಣಾ ಪ್ರಣಾಳಿಕೆ ಸಲಹಾ ಸಮಿತಿಯು ಸಮೃದ್ಧ ಕರ್ನಾಟಕವೇ ಬಿಜೆಪಿಯ ಭರವಸೆ ಎಂಬ ಘೋಷಣೆಯೊಂದಿಗೆ ಕೆಲಸ ಮಾಡಲಿದೆ. ಚುನಾವಣೆ ಹೊಸ್ತಿಲಲ್ಲಿ ನಾವಿದ್ದೇವೆ. ಕರ್ನಾಟಕವನ್ನು ಹೆಮ್ಮೆಯ ರಾಜ್ಯವನ್ನಾಗಿ ಮಾಡಲು ಬದ್ಧರಿದ್ದೇವೆ. ಭವ್ಯ ಭವಿಷ್ಯಕ್ಕೆ ನಾವು ಸಿದ್ಧತೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಕನಿಷ್ಠ 50 ಸೆಕ್ಟರ್ ಸಭೆಗಳನ್ನು ಮಾಡಲಾಗುವುದು. ತೋಟಗಾರಿಕೆ, ರೇಷ್ಮೆ ಸೇರಿ ಕೃಷಿ ವಲಯದ ಸಭೆ, ಕೈಗಾರಿಕೆ, ಸಣ್ಣ ಮಧ್ಯಮ, ಗುಡಿ ಕೈಗಾರಿಕೆ ಸಬಲೀಕರಣಕ್ಕೆ ತಂಡದ ಸಭೆ ನಡೆಸಲಾಗುತ್ತದೆ. ಈ ಸೆಕ್ಟರ್ ಸಭೆಗಳಲ್ಲಿ ಕೇಂದ್ರ ಸಚಿವರು, ಹಿರಿಯ ನಾಯಕರು ಪಾಲ್ಗೊಳ್ಳುತ್ತಾರೆ ಎಂದು ವಿವರ ನೀಡಿದರು.
ವಾಟ್ಸಪ್ ಸಂಖ್ಯೆ +91 8595158158 ಗೆ ಜನಸಾಮಾನ್ಯರು ಪ್ರಣಾಳಿಕೆ ಕುರಿತು ಸಲಹೆ ನೀಡಬಹುದು. ಕ್ಯೂ ಆರ್ ಕೋಡ್ ಮೂಲಕ ಸಲಹೆ ನೀಡಬಹುದು. ಮಂಡಲದ ವಿವಿಧೆಡೆ 25 ಬಾಕ್ಸ್ ಸೇರಿ ಒಟ್ಟು 8 ಸಾವಿರ ಸಲಹಾ ಪೆಟ್ಟಿಗೆ ಇಡಲಾಗುವುದು. ವೆಬ್ ಸೈಟ್ ಇದ್ದು ಅದನ್ನು ಬಾಕ್ಸ್ ಮೇಲೆ ತಿಳಿಸಿದ್ದೇವೆ. ರಾಜ್ಯದ ಒಂದು ಕೋಟಿಗೂ ಹೆಚ್ಚು ಜನರನ್ನು ತಲುಪುವ ಗುರಿ ಇದೆ ಎಂದರು.
ಮಾರ್ಚ್ 25ರವರೆಗೆ 224 ಕ್ಷೇತ್ರಗಳಲ್ಲೂ ಸಭೆ ನಡೆಯಲಿದೆ. ಜೊತೆಗೆ ವಿಡಿಯೋ ವ್ಯಾನ್ ಪ್ರಗತಿ ರಥದಲ್ಲೂ ಸಲಹಾ ಪೆಟ್ಟಿಗೆ ಇರುತ್ತದೆ ಎಂದು ತಿಳಿಸಿದರು.
ಪ್ರತಿ ವರ್ಗದ ಜನರಿಗೆ ಅಭಿವೃದ್ಧಿಯ ಅಮೃತವನ್ನು ತಮ್ಮ ಬಜೆಟ್ ಮೂಲಕ ಮುಖ್ಯಮಂತ್ರಿಯವರು ನೀಡಿದ್ದಾರೆ. ಕಾಂಗ್ರೆಸ್ ಕೇವಲ 38 ಶೇ. ಭರವಸೆ ಅನುಷ್ಠಾನ ಮಾಡಿತ್ತು. ಕೋವಿಡ್, ಅತಿವೃಷ್ಟಿಯ ವಿಕೋಪ ಇದ್ದರೂ, ಆರ್ಥಿಕ ಹಿಂಜರಿತದ ನಡುವೆ ಇಷ್ಟು ಕಾರ್ಯಕ್ರಮಗಳನ್ನು ಕೊಟ್ಟಿದ್ದೇವೆ. ನಮಗೆ ಸ್ಪಷ್ಟ ಬಹುಮತವನ್ನು ಕೊಡಿ. ನೂರಕ್ಕೆ ನೂರು ಭರವಸೆಗಳನ್ನು ಈಡೇರಿಸುತ್ತೇವೆ ಎಂದು ತಿಳಿಸಿದರು.
ಡಬಲ್ ಎಂಜಿನ್ ಸರಕಾರವು ದೇಶ ಮತ್ತು ರಾಜ್ಯದ ಅಭಿವೃದ್ಧಿಗೆ ಶ್ರಮಿಸಿದೆ. ರೈಲ್ವೆ ಸೇರಿ ಅನೇಕ ರಾಷ್ಟ್ರೀಯ ಯೋಜನೆಗಳಾಗಿವೆ. ವಿಮಾನನಿಲ್ದಾಣಗಳ ಅಭಿವೃದ್ಧಿಗೆ ಕೇಂದ್ರ- ರಾಜ್ಯ ಸರಕಾರಗಳು ಶ್ರಮಿಸಿವೆ. ಡಬಲ್ ಎಂಜಿನ್ ಸರಕಾರದ ಸಾಧನೆ ಏನು ಎಂದು ಕೇಳುವವರಿಗೆ ಇದು ತಕ್ಕ ಉತ್ತರ. ಶಿವಮೊಗ್ಗ ವಿಮಾನನಿಲ್ದಾಣವನ್ನು ಪ್ರಧಾನಿಯವರು ಉದ್ಘಾಟಿಸಲಿದ್ದಾರೆ. ಮೈಸೂರು ರನ್ವೇ ವಿಸ್ತರಣೆ ನಡೆದಿದೆ. ಬೆಂಗಳೂರು- ಮೈಸೂರು ದಶಪಥ ಯೋಜನೆ ಸಿದ್ಧಗೊಂಡಿದೆ. ಹಿಂದೆ ಕಾಂಗ್ರೆಸ್ ಸರಕಾರವು ನೀರಾವರಿಗೆ 10 ಸಾವಿರ ಕೋಟಿ ಕೊಡುವ ಭರವಸೆ ನೀಡಿತ್ತು. ಯುಕೆಪಿಗೆ 5 ವರ್ಷದಲ್ಲಿ 5 ಸಾವಿರ ಕೋಟಿಯನ್ನೂ ನೀಡಿಲ್ಲ.
ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ನೀಡಿದ್ದು, ಮಧ್ಯ ಕರ್ನಾಟಕದ ಜನರಿಗೆ ನೀರಾವರಿ, ಕುಡಿಯುವ ನೀರಿಗೆ ಪ್ರಯೋಜನ ಸಿಗಲಿದೆ. ಕಳಸಾ ಬಂಡೂರಿ ಯೋಜನೆಗೆ 1 ಸಾವಿರ ಕೋಟ ಕೊಡಲಾಗಿದೆ. ಇದರ ವಿಳಂಬಕ್ಕೆ ಕಾಂಗ್ರೆಸ್ ಕಾರಣ. ಕೇಂದ್ರದಲ್ಲಿ ಯುಪಿಎ, ಕರ್ನಾಟಕ, ಗೋವಾದಲ್ಲಿ ಕಾಂಗ್ರೆಸ್ ಇದ್ದರೂ ಅದನ್ನು ಅನುಷ್ಠಾನಕ್ಕೆ ತಂದಿರಲಿಲ್ಲ ಎಂದು ಟೀಕಿಸಿದರು.
ಎಲ್ಲ ಪ್ರದೇಶದಲ್ಲಿ ಸರ್ವಾಂಗೀಣ ಅಭಿವೃದ್ಧಿ ಆಗುತ್ತಿದೆ. ಕಲ್ಯಾಣ ಕರ್ನಾಟಕಕ್ಕೆ 371 ಜೆ ಮಾಡಿಸಿದ್ದಾಗಿ ಕಾಂಗ್ರೆಸ್ ಹೇಳಿತ್ತು. ಅವರ 5 ವರ್ಷಗಳ ಅವಧಿಯಲ್ಲಿ ಕೇವಲ 2080 ಕೋಟಿ ರೂ. ಖರ್ಚಾಗಿದೆ. ನಾವು ಈ ಸಾಲಿನಲ್ಲಿ 5 ಸಾವಿರ ಕೋಟಿ ಪ್ರಕಟಿಸಿದ್ದೇವೆ. ಇದು ನಮ್ಮ ಬದ್ಧತೆ ಎಂದು ವಿವರಿಸಿದರು.
ಬ್ರ್ಯಾಂಡ್ ಬೆಂಗಳೂರು ಉಳಿಸಿ ಬೆಳೆಸುವ ಜೊತೆಗೆ ಬಿಯಾಂಡ್ ಬೆಂಗಳೂರು ಪ್ರಗತಿಗೆ ಮುಂದಾಗಿದ್ದೇವೆ. ಕೊಪ್ಪಳದ ಆಟಿಕೆ ತಯಾರಿಕೆ ಘಟಕದಿಂದ 25 ಸಾವಿರ ಜನರಿಗೆ ನೇರ ಉದ್ಯೋಗ, 1 ಲಕ್ಷ ಜನರಿಗೆ ಪರೋಕ್ಷ ಉದ್ಯೋಗ ಸಿಗುತ್ತಿದೆ. ಸೆಮಿ ಕಂಡಕ್ಟರ್ ಹೂಡಿಕೆಯಲ್ಲಿ ಬೆಂಗಳೂರು ಮುಂಚೂಣಿಯಲ್ಲಿದೆ. 1.16 ಲಕ್ಷ ಕೋಟಿ ಕರ್ನಾಟಕದ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿಗೆ ಬಳಸಿದ್ದಾರೆ. 4 ಸಾವಿರ ಕಿಮೀ ಹೆದ್ದಾರಿ ನಿರ್ಮಾಣ ಆಗಿದೆ. ಡಬಲ್ ಎಂಜಿನ್ ಏನು ಮಾಡಿದೆ ಎಂದು ಕೇಳುವವರು ಗಮನಿಸಬೇಕು ಎಂದು ಆಗ್ರಹಿಸಿದರು. 12 ಕೋಟಿ ಕೋವಿಡ್ ಲಸಿಕೆಗೆ ಎಷ್ಟಾಗುತ್ತದೆ? ಔಷಧಿ, ಚಿಕಿತ್ಸೆ, ಲಸಿಕೆ ಉಚಿತ ಇತ್ತು. ಯಾವ ದೇಶದಲ್ಲೂ ಇದನ್ನು ಮಾಡಿಲ್ಲ ಎಂದು ವಿವರಿಸಿದರು.
ಕೋವಿಡ್ ಅನ್ವಯ ಗರೀಬ್ ಕಲ್ಯಾಣ್ ಯೋಜನೆಯಡಿ 2 ವರ್ಷದಿಂದ ಉಚಿತ ಆಹಾರ ನೀಡಲಾಗುತ್ತಿದೆ. ಕಾಂಗ್ರೆಸ್ನವರು ಅನ್ನಭಾಗ್ಯ ಬ್ರ್ಯಾಂಡ್ ಅನ್ನು ತಮ್ಮದೆಂದು ತಿಳಿಸಿ ಪ್ರಚಾರ ಮಾಡಿದ್ದರು ಎಂದು ಆಕ್ಷೇಪಿಸಿದರು. ಜನರಿಗೆ ಅಕ್ಕಿ, ಭತ್ತ, ತೌಡು ಯಾರು ಮಾಡಿದ್ದಾರೆಂದು ಗೊತ್ತಿದೆ. ಅಕ್ಕಿ ಕೊಟ್ಟವರು ನಾವು. ಪರಿಶಿಷ್ಟ ಜಾತಿ, ಪಂಗಡದ ಕಲ್ಯಾಣಕ್ಕೆ ನಾವು ಗರಿಷ್ಠ ಅನುದಾನ ಕೊಟ್ಟಿದ್ದೇವೆ. ಮೀಸಲಾತಿ ವಿಚಾರದಲ್ಲಿ ನಾವು ಬದ್ಧತೆಯಿಂದ ಪ್ರಮಾಣ ಹೆಚ್ಚಳವನ್ನು ಅನುಷ್ಠಾನಕ್ಕೆ ತಂದಿದ್ದೇವೆ.ಕಾಂಗ್ರೆಸ್ನವರು ಕೇವಲ ಬಾಯಿಮಾತಿನಲ್ಲಿ ಅದನ್ನು ಹೇಳುತ್ತ ಬಂದಿದ್ದರು ಎಂದು ಆರೋಪಿಸಿದರು.
ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಿ 1 ಲಕ್ಷಕ್ಕೂ ಹೆಚ್ಚು ಜನರಿಗೆ ಹಕ್ಕುಪತ್ರವನ್ನು ನೀಡಿದ್ದೇವೆ. ಬ್ಯಾಂಕ್ ಸಾಲ, ಮನೆ ಇಲ್ಲದೆ ದಯನೀಯ ಸ್ಥಿತಿಯಲ್ಲಿ ಇದ್ದರು. ನೆನೆಗುದಿಗೆ ಬಿದ್ದ ಸಮಸ್ಯೆಯನ್ನು ಇತ್ಯರ್ಥಪಡಿಸಿದ್ದೇವೆ ಎಂದು ವಿವರಿಸಿದರು.
ರೈತ ಸಮ್ಮಾನ್ ಯೋಜನೆಯಡಿ ನಮ್ಮ ರಾಜ್ಯದಲ್ಲಿ 59 ಲಕ್ಷ ಕೃಷಿಕರಿಗೆ ಪ್ರಯೋಜನ ಸಿಗುತ್ತಿದೆ. ಇವರಿಗೆ 10 ಸಾವಿರ ರೂ. ನೇರವಾಗಿ ಸಿಗುತ್ತಿದೆ. ಇದು ದೇಶದ ಇತಿಹಾಸದಲ್ಲೇ ಮೊದಲು. ರೈತರಿಗೆ ಸ್ಪಷ್ಟ ಕಾರ್ಯಕ್ರಮ ಕೊಡಲು ಕಾಂಗ್ರೆಸ್ ವಿಫಲವಾಗಿತ್ತು. ರೈತ ವಿದ್ಯಾನಿಧಿ ಸೇರಿ ಹೊಸ ಕಾರ್ಯಕ್ರಮಗಳನ್ನು ನಾವು ಜಾರಿಗೊಳಿಸಿದ್ದೇವೆ. ಇದು ಗ್ರಾಮೀಣ ಪ್ರದೇಶದಲ್ಲಿ ದೊಡ್ಡ ಪರಿಣಾಮ ಬೀರುತ್ತಿದೆ. ಇದರಡಿ 12 ಲಕ್ಷ ಜನರಿಗೆ 460 ಕೋಟಿಯನ್ನು ವಿನಿಯೋಗಿಸಿದ್ದೇವೆ. ದಯನೀಯವಾಗಿ ಆರ್ಥಿಕವಾಗಿ ಹಿಂದುಳಿದವರಿಗೆ ಪ್ರಯೋಜನ ಸಿಗುತ್ತಿದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.