ವಾರಾಣಸಿ: ಇಂದಿನಿಂದ ಬನಾರಸ್ನಲ್ಲಿ ಕರ್ನಾಟಕ ರೇಷ್ಮೆಯ ಹೊಸ ಶೆಕೆ ಆರಂಭವಾಗಿದೆ ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣಗೌಡ ಅವರು ಸಂತಸ ವ್ಯಕ್ತಪಡಿಸಿದರು.
ವಾರಣಾಸಿಯಲ್ಲಿ ನೂತನವಾಗಿ ಆರಂಭಿಸಲಾಗಿರುವ ಕರ್ನಾಟಕ ರೇಷ್ಮೆ ಮಾರುಕಟ್ಟೆಯನ್ನು ಸಚಿವ ಡಾ.ನಾರಾಯಣಗೌಡ, ಉತ್ತರ ಪ್ರದೇಶ ರೇಷ್ಮೆ, ಖಾದಿ ಗ್ರಾಮೋದ್ಯೋಗ, ಎಂಎಸ್ಎಂಇ ಸಚಿವ ರಾಕೇಶ್ ಸಾಚಾನ್, ವಾರಣಾಸಿ ಶಾಸಕ ರವೀಂದ್ರ ಜೈಸ್ವಾಲ್ ಇಂದು ಉದ್ಘಾಟನೆಗೊಳಿಸಿದರು.
“ನಮ್ಮ ಹಲವು ದಿನಗಳ ಪ್ರಯತ್ನ ಇಂದು ಸಾಕಾರಗೊಂಡಿದೆ. ಉತ್ತರ ಪ್ರದೇಶದಲ್ಲಿ ಸುಮಾರು 3 ಸಾವಿರ ಮೆಟ್ರಿಕ್ ಟನ್ ರೇಷ್ಮೆಗೆ ಬೇಡಿಕೆ ಇದ್ದು, ಕರ್ನಾಟಕ ರೇಷ್ಮೆ ಮಂಡಳಿಯ ಮಾರುಕಟ್ಟೆಯ ಮೂಲಕ ಉತ್ತಮ ಗುಣಮಟ್ಟದ ರೇಷ್ಮೆಯನ್ನು ಪೂರೈಸಲಾಗುವುದು. ವಾರಾಣಾಸಿಯಲ್ಲಿ ಕೆಎಸ್ಎಂಬಿ ಘಟಕ ಆರಂಭಿಸಿರುವುದರಿಂದ ಕರ್ನಾಟಕದ ರೇಷ್ಮೆ ಬೆಳೆಗಾರರು ಮತ್ತು ರೀಲರ್ಸ್ಗಳಿಗೆ ಆದಾಯ ವೃದ್ಧಿಯಾಗಲಿದೆ” ಎಂದು ಸಚಿವ ಡಾ.ನಾರಾಯಣಗೌಡ ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ.
ವಾರಣಾಸಿ ಸೇರಿದಂತೆ ಉತ್ತರ ಪ್ರದೇಶದಲ್ಲಿ ರೇಷ್ಮೆಗೆ ಬೇಡಿಕೆ ಹೆಚ್ಚಿದ್ದರೂ ಉತ್ತರ ಪ್ರದೇಶದಲ್ಲಿ ಕೇವಲ 7984 ಎಕರೆಯಲ್ಲಿ ಮಾತ್ರ ಹಿಪ್ಪುನೇರಳೆ ಬೆಳೆಯಲಾಗುತ್ತಿದೆ. ಹಾಗಾಗಿ , ಉತ್ತರ ಪ್ರದೇಶದಲ್ಲಿ ಉತ್ಪಾದನೆ ಹೆಚ್ಚಿಸಲು ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಕರ್ನಾಟಕದಲ್ಲಿ ಬಳಸುತ್ತಿರುವ ತಂತ್ರಜ್ಞಾನ, ರೈತರಿಗೆ ನೀಡುತ್ತಿರುವ ಸೌಲಭ್ಯಗಳು, ಮಾರುಕಟ್ಟೆ ವ್ಯವಸ್ಥೆ ಹಾಗೂ ರೇಷ್ಮೆಯಿಂದ ಉತ್ಪಾದಿಸಲಾಗುತ್ತಿರುವ ಉಪ ಉತ್ಪನ್ನಗಳ ಬಗ್ಗೆ ಇಲ್ಲಿನ ರೈತರಿಗೆ ತರಬೇತಿ ನೀಡಲಾಗುವುದು. ಕರ್ನಾಟಕಕ್ಕೆ ರೈತರನ್ನು ಕಳುಹಿಸಿಕೊಡುವಂತೆ ಉತ್ತರ ಪ್ರದೇಶದ ಸಚಿವರಿಗೆ ಸಚಿವ ಡಾ.ನಾರಾಯಣಗೌಡ ಅವರು ಮನವಿ ಮಾಡಿದರು.
ಯುಪಿ ರೇಷ್ಮೆ ಸಚಿವ ರಾಕೇಶ್ ಸಾಚನ್ ಮಾತನಾಡಿ, ವಾರಾಣಾಸಿಯಲ್ಲಿ ಬನಾರಸ್ ಸೀರೆ ಉತ್ಪಾದನೆ ಹೆಚ್ಚಿದೆ. ಆದರೆ, ಚೀನಾ ರೇಷ್ಮೆಗೆ ಕಡಿವಾಣ ಹಾಕಿದ ಬಳಿಕ ರೇಷ್ಮೆಗೆ ಹೆಚ್ಚಿನ ಬೇಡಿಕೆ ಇದೆ. ಆದರೆ, ಉತ್ತರ ಪ್ರದೇಶದಲ್ಲಿ ಬಳಕೆಗಿಂತ ಉತ್ಪಾದನೆ ಕಡಿಮೆ ಇದೆ. ಹಾಗಾಗಿ ಕರ್ನಾಟಕ ಸರ್ಕಾರದೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ಉತ್ಪಾದನೆ ಹೆಚ್ಚಿಸಲು ತಂತ್ರಜ್ಞಾನ ಸೇರಿದಂತೆ ಎಲ್ಲಾ ರೀತಿಯ ನೆರವು ನೀಡುವುದಾಗಿ ತಿಳಿಸಿರುವುದಕ್ಕೆ ಧನ್ಯವಾದ ಅರ್ಪಿಸುತ್ತೇನೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ರೇಷ್ಮೆ ಉತ್ಪಾದನೆ ಹೆಚ್ಚಳ ಸಂಬಂಧಿಸಿದಂತೆ ಚರ್ಚಿಸಲಾಗುವುದು. ಅಲ್ಲದೇ, ಕರ್ನಾಟಕಕ್ಕೆ ಉತ್ತರ ಪ್ರದೇಶ ರೈತರ ನಿಯೋಗವನ್ನು ಕಳುಹಿಸಿಕೊಡಲಾಗುವುದು ಎಂದಿದ್ದಾರೆ.
ಉತ್ತರ ಪ್ರದೇಶದಲ್ಲಿ ಕೆಎಸ್ಎಂಬಿ ಕಾರ್ಯಕ್ರಮ ಹಮ್ಮಿಕೊಂಡಿದ್ದರೂ ಕನ್ನಡತನವನ್ನು ಮೆರೆಸಲಾಗಿದೆ. ನಾಮಫಲಕ ಸೇರಿದಂತೆ ಎಲ್ಲಾ ಕಡೆ ಕನ್ನಡತನಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿತ್ತು. ಕೆಂಪು ಮತ್ತು ಹಳದಿ ಬಟ್ಟೆಯಲ್ಲಿ ಸಿಂಗರಿಸುವ ಮೂಲಕ ಕಾಶಿಯಲ್ಲೂ ಕನ್ನಡದ ಕಂಪು ಸೂಸುವಂತೆ ಮಾಡಲಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.