ನವದೆಹಲಿ: ಇಂದು ವಿಶ್ವ ಜಲ ದಿನ. ನೀರಿನ ಪ್ರಾಮುಖ್ಯತೆಯ ಬಗ್ಗೆ ಜನರ ಗಮನವನ್ನು ಸೆಳೆಯಲು ಮತ್ತು ನೀರಿನ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆಯ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಮಾರ್ಚ್ 22 ಅನ್ನು ವಿಶ್ವ ಜಲ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ಇದು ಸುರಕ್ಷಿತ ನೀರಿನ ಪ್ರವೇಶವಿಲ್ಲದೆ ಬದುಕುತ್ತಿರುವ 2.2 ಶತಕೋಟಿ ಜನರ ಬಗ್ಗೆ ಜಾಗೃತಿ ಮೂಡಿಸುತ್ತದೆ. ಇದು ಜಾಗತಿಕ ನೀರಿನ ಬಿಕ್ಕಟ್ಟನ್ನು ನಿಭಾಯಿಸಲು ಕ್ರಮ ಕೈಗೊಳ್ಳಲು ಉತ್ತೇಜನ ನೀಡುತ್ತದೆ. ಸುಸ್ಥಿರ ಅಭಿವೃದ್ಧಿ ಗುರಿ VI: 2030 ರ ವೇಳೆಗೆ ಎಲ್ಲರಿಗೂ ನೀರು ಮತ್ತು ನೈರ್ಮಲ್ಯ ಸಾಧಿಸುವುದನ್ನು ಬೆಂಬಲಿಸುವುದು ವಿಶ್ವ ಜಲ ದಿನದ ಪ್ರಮುಖ ಉದ್ದೇಶವಾಗಿದೆ.
ಈ ವರ್ಷದ ಥೀಮ್ ʼಅಂತರ್ಜಲ, ಅದೃಶ್ಯವನ್ನು ಗೋಚರಿಸುವಂತೆ ಮಾಡುವುದುʼ ಎಂಬುದಾಗಿದೆ. ಪ್ರಪಂಚದ ಸಿಹಿನೀರಿನ ಶೇಕಡಾ 99 ರಷ್ಟನ್ನು ಅಂತರ್ಜಲ ಹೊಂದಿದೆ. ಈ ಅಮೂಲ್ಯವಾದ ಸಂಪನ್ಮೂಲವು ಜನರು ಮತ್ತು ಪರಿಸರ ವ್ಯವಸ್ಥೆಗಳಿಗೆ ನಿರ್ಣಾಯಕ ಪ್ರಯೋಜನಗಳನ್ನು ಒದಗಿಸುತ್ತದೆ ಮತ್ತು ಇದನ್ನು ಮಾಲಿನ್ಯ ಮತ್ತು ಶೋಷಣೆಯಿಂದ ರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ.
ಪ್ರತಿ ಹನಿ ನೀರನ್ನು ಉಳಿಸುವ ಪ್ರತಿಜ್ಞೆಯನ್ನು ಪ್ರತಿಯೊಬ್ಬರೂ ಪುನರುಚ್ಚರಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಕರೆ ನೀಡಿದ್ದಾರೆ.
“ನಮ್ಮ ರಾಷ್ಟ್ರವು ಜಲ ಸಂರಕ್ಷಣೆ ಮತ್ತು ನಾಗರಿಕರಿಗೆ ಶುದ್ಧ ಕುಡಿಯುವ ನೀರಿನ ಪ್ರವೇಶವನ್ನು ಖಚಿತಪಡಿಸಿಕೊಳ್ಳಲು ಜಲ ಜೀವನ್ ಮಿಷನ್ನಂತಹ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ” ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಕಳೆದ ಕೆಲವು ವರ್ಷಗಳಿಂದ, ರಾಷ್ಟ್ರದ ಎಲ್ಲಾ ಭಾಗಗಳಲ್ಲಿ ವಿನೂತನ ಪ್ರಯತ್ನಗಳು ನಡೆಯುತ್ತಿದ್ದು, ನೀರಿನ ಸಂರಕ್ಷಣೆಗಾಗಿ ಸಾಮೂಹಿಕ ಆಂದೋಲನ ನಡೆಯುತ್ತಿರುವುದು ಹರ್ಷದಾಯಕವಾಗಿದೆ ಎಂದಿರುವ ಅವರು, ನೀರು ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಎಲ್ಲ ವ್ಯಕ್ತಿಗಳು ಮತ್ತು ಸಂಸ್ಥೆಗಳನ್ನು ಪ್ರಧಾನಿ ಶ್ಲಾಘಿಸಿದರು.
ವಿಶ್ವ ಜಲ ದಿನದಂದು, ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಅವರು ನೀರನ್ನು ವಿವೇಚನಾಯುಕ್ತವಾಗಿ ಬಳಸಲು ಪ್ರತಿಯೊಬ್ಬರು ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದ್ದಾರೆ. ಸುಸ್ಥಿರ ಅಭಿವೃದ್ಧಿಗೆ ನೀರು ಮೂಲವಾಗಿದೆ ಮತ್ತು ಈ ಸೀಮಿತ ಮತ್ತು ಅಮೂಲ್ಯ ಸಂಪನ್ಮೂಲವನ್ನು ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
Together, let’s further water conservation and contribute to a sustainable planet. Every drop saved helps our people and enhances our progress. https://t.co/NOqIzxinKL
— Narendra Modi (@narendramodi) March 22, 2022