ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ತಮ್ಮ ಮಾಸಿಕ ರೇಡಿಯೊ ಕಾರ್ಯಕ್ರಮ ‘ಮನ್ ಕಿ ಬಾತ್’ ಮೂಲಕ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ್ದು, ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡುವಂತೆ ಪ್ರತಿಯೊಬ್ಬರಿಗೂ ಮನವಿ ಮಾಡಿದ್ದಾರೆ.
“ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಸ್ವಾತಂತ್ರ್ಯದ ಬಳಿಕ ಹುತಾತ್ಮರಾದ ದೇಶದ ಎಲ್ಲ ಯೋಧರ ಹೆಸರುಗಳನ್ನು ಬರೆಯಲಾಗಿದೆ. “ಹುತಾತ್ಮರ ಸ್ಮಾರಕದ ಎದುರುಗಡೆ ಪ್ರಜ್ವಲಿಸುತ್ತಿರುವ ಅಮರ್ ಜವಾನ್ ಜ್ಯೋತಿ ಹುತಾತ್ಮರ ಅಮರತ್ವದ ಪ್ರತೀಕ” ಎಂದು ಕೆಲವು ಮಾಜಿ ಸೈನಿಕರು ನನಗೆ ಪತ್ರ ಬರೆದು ತಿಳಿಸಿದ್ದಾರೆ. ನಿಜವಾದ ಅರ್ಥದಲ್ಲಿ ‘ಅಮರ್ ಜವಾನ್ ಜ್ಯೋತಿ’ಯಂತೆ ನಮ್ಮ ಹುತಾತ್ಮರು, ಅವರ ಪ್ರೇರಣೆ ಮತ್ತು ಕೊಡುಗೆಯು ಸದಾ ಅಮರವಾಗಿರಲಿದೆ. ಸಮಯಸಿಕ್ಕಾಗ ತಪ್ಪದೇ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ ಎಂದು ನಾನು ಮನವಿ ಮಾಡುತ್ತೇನೆ” ಎಂದಿದ್ದಾರೆ.
ಇದುವರೆಗೆ ಸುಮಾರು ನಾಲ್ಕೂವರೆ ಕೋಟಿ ಮಕ್ಕಳಿಗೆ ಲಸಿಕೆ ಡೋಸ್ ನೀಡಿರುವುದು ಹೆಮ್ಮೆಯ ವಿಷಯ ಎಂದ ಮೋದಿ,. 15 ರಿಂದ 18 ವರ್ಷ ವಯಸ್ಸಿನ ಸುಮಾರು 60 ಪ್ರತಿಶತದಷ್ಟು ಯುವಜನತೆ ಕೇವಲ ಮೂರರಿಂದ ನಾಲ್ಕು ವಾರಗಳಲ್ಲಿ ಲಸಿಕೆಯನ್ನು ಪಡೆದಿದ್ದಾರೆ. ಇದರಿಂದ ಯುವಜನತೆಗೆ ರಕ್ಷಣೆ ದೊರೆಯುವುದಲ್ಲದೆ, ಅವರು ತಮ್ಮ ವ್ಯಾಸಂಗ ಮುಂದುವರಿಸಲು ಸಹಕಾರಿಯಾಗುತ್ತದೆ ಎಂದರು.
20 ದಿನಗಳಲ್ಲಿ ಒಂದು ಕೋಟಿ ಜನರು ಬೂಸ್ಟರ್ ಡೋಸ್ ತೆಗೆದುಕೊಂಡಿದ್ದಾರೆ. ಸ್ಥಳೀಯ ಲಸಿಕೆ ಮೇಲೆ ಜನರ ನಂಬಿಕೆಯೇ ದೇಶದ ಶಕ್ತಿ ಎಂದು ಬಣ್ಣಿಸಿದರು. ಅವರು ಕೋವಿಡ್ ಪ್ರಕರಣಗಳ ಕಡಿತವನ್ನು ಸಕಾರಾತ್ಮಕ ಸಂಕೇತವೆಂದು ಕರೆದರು. ಸುರಕ್ಷಿತವಾಗಿರಲು ಜನರಿಗೆ ಎಚ್ಚರಿಕೆ ನೀಡಿದರು ಮತ್ತು ದೇಶದ ಆರ್ಥಿಕ ಚಟುವಟಿಕೆಗಳ ವೇಗವನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿದರು.
ಪದ್ಮಪುರಸ್ಕಾರದಿಂದ ಸನ್ಮಾನಿತರಾಗಲಿರುವ ಕರ್ನಾಟಕದವರಾದ ಅಮೈ ಮಹಾಲಿಂಗ ನಾಯಕ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಮೋದಿ, ಅವರು ಕರ್ನಾಟಕದ ಓರ್ವ ರೈತ ಮತ್ತು ಅವರನ್ನು ಸುರಂಗ ಮನುಷ್ಯ ಎಂದೂ ಕರೆಯಲಾಗುತ್ತದೆ. ಕೃಷಿಯಲ್ಲಿ ಅವರ ಆವಿಷ್ಕಾರ ಎಂತವರನ್ನೂ ಚಕಿತಗೊಳಿಸುತ್ತದೆ. ಅವರ ಪ್ರಯತ್ನಗಳಿಂದಾಗಿ ಸಣ್ಣ ರೈತರಿಗೆ ದೊಡ್ಡ ಪ್ರಯೋಜನ ಸಿಗುತ್ತಿದೆ ಎಂದಿದ್ದಾರೆ.
ಇಂಡಿಯಾ ಗೇಟ್ನಲ್ಲಿ ನೇತಾಜಿಯವರ ಡಿಜಿಟಲ್ ಶಿಲ್ಪವನ್ನು ಸಹ ಸ್ಥಾಪಿಸಲಾಗಿದೆ ಮತ್ತು ಇದನ್ನು ಉತ್ಸಾಹದಿಂದ ಸ್ವಾಗತಿಸಿದ್ದಕ್ಕಾಗಿ ಜನರಿಗೆ ಧನ್ಯವಾದ ಅರ್ಪಿಸಿದರು. ಆಜಾದಿ ಕಾ ಅಮೃತ್ ಮಹೋತ್ಸವದಲ್ಲಿ, ಈ ಪ್ರಯತ್ನಗಳ ಮೂಲಕ ಭಾರತವು ತನ್ನ ರಾಷ್ಟ್ರೀಯ ಚಿಹ್ನೆಗಳನ್ನು ಮರುಸ್ಥಾಪಿಸುತ್ತಿದೆ ಎಂದು ಅವರು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.