ನವದೆಹಲಿ: ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಸಾಧನೆ ಮಾಡಿದ ಒಟ್ಟು 162 ಕ್ರೀಡಾಪಟುಗಳು ಮತ್ತು 84 ತರಬೇತುದಾರರಿಗೆ ʻಅಸಾಧಾರಣ ಸಾಧನೆʼ ಪ್ರಶಸ್ತಿ ಮತ್ತು ಅತ್ಯುತ್ತಮ ಪ್ರಶಸ್ತಿ ವಿಭಾಗದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು, ಒಟ್ಟು 85.02 ಲಕ್ಷ ರೂ. ನಗದು ಪ್ರಶಸ್ತಿಗಳೂ ಇದರಲ್ಲಿ ಸೇರಿವೆ.
ಕೇಂದ್ರ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು ನವದೆಹಲಿಯಲ್ಲಿ ಇಂದು ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಖಾತೆ ಸಹಾಯಕ ಸಚಿವ ನಿಶಿತ್ ಪ್ರಮಾಣಿಕ್ ಅವರ ಸಮ್ಮುಖದಲ್ಲಿ 246 ಕ್ರೀಡಾಪಟುಗಳು ಮತ್ತು ತರಬೇತುದಾರರಿಗೆ ಭಾರತೀಯ ಕ್ರೀಡಾ ಪ್ರಾಧಿಕಾರದ ಮೊದಲ ʻಎಸ್ಎಐ ಸಾಂಸ್ಥಿಕ ಪ್ರಶಸ್ತಿʼಗಳನ್ನು ಪ್ರದಾನ ಮಾಡಿದರು. ಕ್ರೀಡಾ ಇಲಾಖೆಯ ಕಾರ್ಯದರ್ಶಿ ಸುಜಾತಾ ಚತುರ್ವೇದಿ, ʻಎಸ್ಎಐʼ ಮಹಾ ನಿರ್ದೇಶಕರಾದ ಸಂದೀಪ್ ಪ್ರಧಾನ್ ಮತ್ತು ಸಚಿವಾಲಯದ ಇತರ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.
ಇಲ್ಲಿನ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಒಟ್ಟು 162 ಕ್ರೀಡಾಪಟುಗಳು ಮತ್ತು 84 ತರಬೇತುದಾರರಿಗೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಸಾಧನೆಗಾಗಿ ʻಅಸಾಧಾರಣ ಸಾಧನೆ ಪ್ರಶಸ್ತಿʼ ಮತ್ತು ʻಅತ್ಯುತ್ತಮ ಪ್ರಶಸ್ತಿʼ ವಿಭಾಗದಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಇದರಲ್ಲಿ ಒಟ್ಟು 85.02 ಲಕ್ಷ ರೂ ಮೌಲ್ಯದ ನಗದು ಬಹುಮಾನವೂ ಸೇರಿದೆ. 2016ರಿಂದ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಕ್ರೀಡಾ ಉತ್ತೇಜನ ಯೋಜನೆಗಳ ಅಡಿಯಲ್ಲಿ `ಎಸ್ಎಐʼನ ಕ್ರೀಡಾಪಟುಗಳು ಮತ್ತು ತರಬೇತುದಾರರು ತೋರಿದ ಅಸಾಧಾರಣ ಪ್ರದರ್ಶನವನ್ನು ಈ ಪ್ರಶಸ್ತಿಗಳು ಸೂಚಿಸುತ್ತವೆ. ಹೀಗಾಗಿ 2016-17, 2017-18, 2018-19 ಮತ್ತು 2019-20ರ ವರ್ಷಗಳಲ್ಲಿ ಅರ್ಹ ಅಭ್ಯರ್ಥಿಗಳಿಗೆ ಪ್ರಶಸ್ತಿಗಳನ್ನು ನೀಡಲಾಗಿದೆ.
ಪ್ರಶಸ್ತಿ ವಿಜೇತರನ್ನು ಶ್ಲಾಘಿಸಿದ ಅನುರಾಗ್ ಠಾಕೂರ್ ಅವರು, “ಇಂದು ಪ್ರಶಸ್ತಿ ಪಡೆದ ಎಲ್ಲಾ ಕ್ರೀಡಾಪಟುಗಳು ಮತ್ತು ತರಬೇತುದಾರರನ್ನು ನಾನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ಕ್ರೀಡೆಗಳು ನಮ್ಮ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಹೃದಯಕ್ಕೆ ಬಹಳ ಹತ್ತಿರವಾದಂಥವು ಮತ್ತು ಅವರ ದೂರದೃಷ್ಟಿಗೆ ಅನುಗುಣವಾಗಿ, ಕ್ರೀಡಾಪಟುಗಳಿಗೆ ಹಲವಾರು ಸೌಲಭ್ಯಗಳನ್ನು ವಿಸ್ತರಿಸಲಾಗುತ್ತಿದೆ. ಪ್ರತಿಯೊಬ್ಬ ಕ್ರೀಡಾಪಟುವೂ ತನ್ನ ಪೀಳಿಗೆಗೆ ಸ್ಫೂರ್ತಿʼ ಎಂದರು.
ರಾಷ್ಟ್ರೀಯ ಶಿಕ್ಷಣ ನೀತಿಯ ಅವಿಭಾಜ್ಯ ಅಂಗವಾಗಿ ಕ್ರೀಡೆಗಳ ಮಹತ್ವವನ್ನು ಠಾಕೂರ್ ಒತ್ತಿ ಹೇಳಿದರು. “ವಿದ್ಯಾರ್ಥಿಯು ಕ್ರೀಡೆಯಲ್ಲಿ ಮಾಡಿದ ಸಾಧನೆಗಳನ್ನು ಅವನ ಅಥವಾ ಅವಳ ಶಾಲೆಯಲ್ಲಿ ಘೋಷಿಸಿದಾಗ, ಅದು ಇತರ ವಿದ್ಯಾರ್ಥಿಗಳಿಗೂ ಶಿಕ್ಷಣದಿಂದ ಆಚೆಗೆ ನೋಟ ಹರಿಸಲು ಮತ್ತು ಅವರ ಜೀವನದಲ್ಲಿ ಕ್ರೀಡೆಗಳಿಗೆ ಸ್ಥಾನ ನೀಡಲು ಪ್ರೇರೇಪಿಸುತ್ತದೆ. ಕ್ರೀಡಾಪಟುವಿನ ಶಕ್ತಿ ಅಂಥದ್ದು. ಕ್ರೀಡೆಯು ರಾಷ್ಟ್ರೀಯ ಶಿಕ್ಷಣ ನೀತಿಯ ಅವಿಭಾಜ್ಯ ಅಂಗವಾಗಿದೆ. ಹಾಗಾಗಿ ಅದೀಗ ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನದ ಒಂದು ಭಾಗವಾಗಿರುವುದು ನನಗೆ ಸಂತೋಷ ತಂದಿದೆʼ ಎಂದು ಶ್ರೀ ಠಾಕೂರ್ ಹೇಳಿದರು.
ʻಆಜಾದಿ ಕಾ ಅಮೃತ್ ಮಹೋತ್ಸವʼದ ವರ್ಷದಲ್ಲಿ ಈ ಪ್ರಶಸ್ತಿಗಳನ್ನು ನೀಡುತ್ತಿರುವುದು ಮಹತ್ವದ ಸಂದರ್ಭವಾಗಿದೆ ಎಂದು ಸಹಾಯಕ ಸಚಿವ ಪ್ರಮಾಣಿಕ್ ಹೇಳಿದರು. ಚಾಂಪಿಯನ್ಗಳಿಗೆ ಎಲ್ಲಾ ರೀತಿಯ ಯಶಸ್ಸನ್ನು ಹಾರೈಸುತ್ತೇನೆ. ನಮ್ಮ ಕ್ರೀಡಾಪಟುಗಳು ಮತ್ತು ತರಬೇತುದಾರರಿಗೆ ಭಾರತೀಯ ಕ್ರೀಡಾ ಪ್ರಾಧಿಕಾರ ಸದಾ ಬೆಂಬಲವಾಗಿರುತ್ತದೆ ಎಂಬ ಭರವಸೆಯನ್ನು ಮೂಡಿಸಲು ಈ ಪ್ರಶಸ್ತಿ ಪ್ರದಾನವು ಒಂದು ಉತ್ತಮ ಮಾರ್ಗವಾಗಿದೆ.
ʻಅಸಾಧಾರಣ ಸಾಧನೆ ಪ್ರಶಸ್ತಿʼ (ರಾಷ್ಟ್ರೀಯ ಮಟ್ಟದ ಸಾಧನೆಗಳಿಗಾಗಿ) ಮತ್ತು ʻಅತ್ಯುತ್ತಮ ಪ್ರಶಸ್ತಿʼ (ಅಂತರರಾಷ್ಟ್ರೀಯ ಮಟ್ಟದ ಸಾಧನೆಗಳಿಗಾಗಿ) ವಿಭಾಗಗಳಲ್ಲಿ ಈ ಪ್ರಶಸ್ತಿಗಳನ್ನು ನೀಡಲಾಗಿದೆ. ಆಯ್ಕೆ ಸಮಿತಿಯು ಹಿರಿಯ ʻಎಸ್ಎಐʼ ಅಧಿಕಾರಿಗಳು ಮತ್ತು ಕ್ರೀಡಾ ಕ್ಷೇತ್ರದ ಪ್ರಸಿದ್ಧ ವ್ಯಕ್ತಿಗಳನ್ನು ಒಳಗೊಂಡಿತ್ತು, ಅವರು ವಿವಿಧ ʻಎಸ್ಎಐʼ ರಾಷ್ಟ್ರೀಯ ಉತ್ಕೃಷ್ಟ ಕೇಂದ್ರಗಳ ಪ್ರಾದೇಶಿಕ ನಿರ್ದೇಶಕರಿಂದ ಪಡೆದ ನಾಮನಿರ್ದೇಶನಗಳನ್ನು ಅಂತಿಮಗೊಳಿಸಿದರು.
ಪ್ರಶಸ್ತಿ ವಿಜೇತರಿಗೆ ಪ್ರಶಸ್ತಿ ಪತ್ರದ ಜೊತೆಗೆ ವಿಶೇಷ ಬ್ಲೇಜರ್ ಸಹ ನೀಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.