ನವದೆಹಲಿ: ಬುಲೆಟ್ ರಾಣಿ ಎಂದೇ ಖ್ಯಾತನಾಮರಾಗಿರುವ ತಮಿಳುನಾಡಿನ ಮಹಿಳೆ ರಾಜಲಕ್ಷ್ಮಿ ಮಂಡ ಅವರು ಭಾರತದ 75 ನೇ ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ‘ಇನ್ಕ್ರೆಡಿಬಲ್ ಇಂಡಿಯಾಸ್ ಏಕ್ತಾ ಯಾತ್ರಾ’ ಹೆಸರಿನಲ್ಲಿ ಬುಲೆಟ್ ಮೂಲಕ ಭಾರತದುದ್ದಗಲಕ್ಕೆ ಯಾತ್ರೆ ಆರಂಭಿಸಿದ್ದಾರೆ.
ಮಧುರೈನಿಂದ ಆರಂಭವಾಗಿ ಹಿಮಾಚಲ ಪ್ರದೇಶದ ಅಟಲ್ ಟನೆಲ್ ಬಳಿ ಮುಕ್ತಾಯಗೊಳ್ಳುವ ಬುಲೆಟ್ ಮೂಲಕ ಏಕತಾ ಯಾತ್ರೆ ಬೆಂಗಳೂರು ತಲುಪಿದ್ದು, ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದ ಮುಂಭಾಗದಲ್ಲಿ ರಾಜಲಕ್ಷ್ಮಿ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸ್ವಾಗತಿಸಿದರು.
ಬಳಿಕ ಮಾತನಾಡಿದ ಯಾತ್ರೆ ಮಹತ್ವದ ಉದ್ದೇಶವನ್ನು ಹೊಂದಿದೆ ಎಂದರು. ದೇಶವು ಈಗಾಗಲೇ ಅಭಿವೃದ್ಧಿಪರ ಚಿಂತನೆಯ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಸಮಗ್ರ ಅಭಿವೃದ್ಧಿ ಕಡೆಗೆ ದಾಪುಗಾಲಿಡುತ್ತಿದೆ. ನಮ್ಮ ಸರಕಾರಗಳ ಉತ್ತಮ ಯೋಜನೆಗಳ ಕುರಿತು ಜಾಗೃತಿ ಮೂಡಿಸಲು ಕಾರ್ಯಕರ್ತರು ಮುಂದಾಗಬೇಕು ಎಂದು ತಿಳಿಸಿದರು. ರಾಜಲಕ್ಷ್ಮೀ ಅವರ ನೇತೃತ್ವದ ಸುಮಾರು 25 ಜನರ ತಂಡವು ಈ ಯಾತ್ರೆ ನಡೆಸುತ್ತಿದೆ. ಒಟ್ಟು 4,450 ಕಿಮೀ ದೂರವನ್ನು ಈ ಯಾತ್ರೆ ಕ್ರಮಿಸಲಿದೆ. ಒಟ್ಟು 19 ದಿನಗಳ ಯಾತ್ರೆ ಇದಾಗಿದ್ದು, ತಂಡವು ಈಗಾಗಲೇ ಒಂದು ಸಾವಿರ ಕಿಮೀ ಕ್ರಮಿಸಿದೆ. ಈ ತಂಡಕ್ಕೆ ಶುಭವಾಗಲಿ ಎಂದು ಹಾರೈಸಿದರು.
ಈ ಹಿಂದೆಯೂ ಇಂತಹ ಹಲವು ಯಾತ್ರೆಗಳನ್ನು ನಡೆಸಿರುವ ಇವರು, ಈ ಬಾರಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ, ಮಡಿದ ವೀರರಿಗೆ ಗೌರವ ಸಲ್ಲಿಸುವ ಮತ್ತು ಯುವ ಜನರಲ್ಲಿ ರಾಷ್ಟ್ರಭಕ್ತಿಯನ್ನು ಹೆಚ್ಚಿಸುವ ಸದುದ್ದೇಶದ ಜೊತೆಗೆ ಯಾತ್ರೆ ಆರಂಭಿಸಿರುವುದಾಗಿ ತಿಳಿಸಿದ್ದಾರೆ. ‘ನಮ್ಮ ದೇಶ – ನಮ್ಮ ಹೆಮ್ಮೆ, ನಮ್ಮ ಪ್ರಧಾನಿ – ನಮ್ಮ ಹೆಮ್ಮೆ’ ಎಂಬ ಘೋಷವಾಕ್ಯದಡಿ ಈ ಯಾತ್ರೆಯನ್ನು ಅವರು ಆಗಸ್ಟ್ 1, 2021 ರಂದು ಆರಂಭ ಮಾಡಿದ್ದಾರೆ.
ಇವರ ಈ ಯಾತ್ರೆಗೆ ಮಧುರೈನ ಡಾ. ಇಮಾಮ್ ಉಮರ್ ಅಹಮದ್ ಇಲ್ಯಾಸಿ (ಚೀಫ್ ಇಮಾಮ್ ಆಫ್ ಇಂಡಿಯಾ) ಅವರು ಚಾಲನೆ ನೀಡಿದ್ದಾರೆ. ಈ ಯಾತ್ರೆಯ ಮೂಲಕ ಪ್ರಧಾನಿ ಮೋದಿ ಅವರು ದೇಶದ ಸಮಗ್ರತೆ, ಏಕತೆ, ಅಭಿವೃದ್ಧಿಯ ಆಶಯದ ಜೊತೆಗೆ ಜಾರಿಗೊಳಿಸಿದ ಯೋಜನೆಗಳು, ಅಭಿವೃದ್ಧಿಗಾಗಿ ಆರಂಭಿಸಿದ ಕೆಲಸ ಕಾರ್ಯಗಳ ಬಗ್ಗೆ ತಿಳಿಯುವ ಮತ್ತು ಜನರಿಗೆ ತಿಳಿಸುವ ಕೆಲಸವನ್ನು ಅವರು ಮಾಡಲಿದ್ದಾರೆ.
ಮಧುರೈನಿಂದ ಹಿಮಾಚಲದ ಅಟಲ್ ಟನಲ್ ವರೆಗೆ ಇವರ ಈ ಬುಲೆಟ್ ಯಾತ್ರೆ ನಡೆಯಲಿದೆ. ಆಗಸ್ಟ್ 1 ರಿಂದ ಆರಂಭವಾಗಿರುವ ಈ ಯಾತ್ರೆ ಆಗಸ್ಟ್ 19 ರಂದು ಅಟಲ್ ಟನಲ್ನಲ್ಲಿ ಸಮಾಪ್ತಿಯಾಗಲಿದೆ. ಮಧುರೈ, ಚೆನ್ನೈ, ಬೆಂಗಳೂರು, ಅನಂತಪುರ, ಹೈದರಾಬಾದ್, ನಾಗ್ಪುರ್, ಸಾಗರ್, ಆಗ್ರಾ, ನವದೆಹಲಿ, ಹರ್ಯಾಣ, ಪಂಜಾಬ್, ಮನಾಲಿ, ಅಟಲ್ ಟನಲ್ ವರೆಗೆ 4450 ಕಿಮೀ ಯಾತ್ರೆಯನ್ನು ರಾಜಲಕ್ಷ್ಮಿ ಅವರು ಮುಗಿಸಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.