ನವದೆಹಲಿ: ಟೊಕಿಯೋ ಒಲಿಂಪಿಕ್ಸ್ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಕ್ರೀಡಾಪಟುಗಳ ಬಗ್ಗೆ ದೇಶ ಹೆಮ್ಮೆ ಪಡುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.
ತಮ್ಮ ತಿಂಗಳ ಮನ್ ಕಿ ಬಾತ್ ಕಾರ್ಯಕ್ರಮದ 79 ನೇ ಸಂಚಿಕೆಯಲ್ಲಿ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡ ಅವರು, ಟೊಕಿಯೋ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭದ ಸ್ಮರಣೀಯ ದೃಶ್ಯಗಳು ನನ್ನ ಮನಸ್ಸಿನಲ್ಲಿ ಇನ್ನೂ ಹಸಿರಾಗಿದೆ ಎಂದರು. ಹಾಗೆಯೇ ಆನ್ಲೈನ್ ಮೂಲಕ ಸಾರ್ವಜನಿಕರು ದೇಶದ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವಂತೆಯೂ ಅವರು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಕಾರ್ಗಿಲ್ ಯುದ್ಧದ ಸ್ಮರಣೆಯ ಬಗೆಗೂ ಮಾತನಾಡಿದ ಮೋದಿ, ಜುಲೈ 26 ದೇಶವಾಸಿಗಳು ಮರೆಯಲಾರದ ಕಾರ್ಗಿಲ್ ವಿಜಯ ದಿನ. ಕಾರ್ಗಿಲ್ ಯುದ್ಧ ನಮ್ಮ ದೇಶದ ಯೋಧರ ಶೌರ್ಯ ಪ್ರದರ್ಶನವಾಗಿದೆ. ಆ ವೀರರನ್ನು ಸದಾ ಸ್ಮರಿಸುವುದಾಗಿಯೂ ತಿಳಿಸಿದ್ದಾರೆ.
ಹಾಗೆಯೇ ಆಗಸ್ಟ್ 15 ರಂದು ಭಾರತ 75 ನೇ ಸ್ವಾತಂತ್ರ್ಯ ದಿನವನ್ನು ಆಚರಣೆ ಮಾಡುತ್ತದೆ. ನಾವು ಸ್ವಾತಂತ್ರ್ಯದ 75 ವರ್ಷಗಳನ್ನು ಗುರುತಿಸುವ ನಿಟ್ಟಿನಲ್ಲಿ ಅಮೃತ ಮಹೋತ್ಸವ ಆರಂಭಿಸಿರುವುದಾಗಿ ತಿಳಿಸಿದ್ದಾರೆ. ಈ ಮಹೋತ್ಸವದ ಮೂಲಕ ನಾವು ದೇಶದ ಸ್ವಾತಂತ್ರ್ಯ ಹೋರಾಟದ ಈ ವರೆಗೆ ಬೆಳಕಿಗೆ ಬಾರದೇ ಇರುವ ಅಂಶಗಳನ್ನು ತಿಳಿದುಕೊಳ್ಳುತ್ತಿದ್ದೇವೆ ಎಂದು ಹೇಳಿದರು.
ಅಮೃತ ಮಹೋತ್ಸವ ಸರ್ಕಾರದ ಕಾರ್ಯಕ್ರಮ ಅಲ್ಲ. ಬದಲಾಗಿ ಅದು ಜನರ ಕಾರ್ಯಕ್ರಮ ಎಂದು ಪ್ರಧಾನಿ ತಿಳಿಸಿದರು. ಇದು ನಮ್ಮ ದೇಶದ ಸ್ವಾತಂತ್ರ್ಯ ಹೋರಾಟದ ಆದರ್ಶಗಳನ್ನು, ಏಕತೆಯ ವಿಚಾರಗಳನ್ನು ಜನರಿಗೆ ತಿಳಿಸುಕೊಡುವಲ್ಲಿ ಪ್ರಯತ್ನ ನಡೆಸಲಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಹಾಗೆಯೇ ಆಗಸ್ಟ್ 7 ಖಾದಿ ದಿನಾಚರಣೆಯಾಗಿದ್ದು, ಇದು ದೇಶದ ಸ್ವದೇಶಿ ಚಳುವಳಿಯ ಧ್ಯೋತಕ. ಇದು ದೇಶದ ಕುಶಲಕರ್ಮಿಗಳ ಜೊತೆಗೆ ನೇರ ಸಂಬಂಧ ಹೊಂದಿದೆ. ಖಾದಿ ಖರೀದಿ ಮಾಡುವ ಮೂಲಕ ದೇಶ ಸೇವೆ ಮಾಡೋಣ ಎಂದು ಅವರು ತಿಳಿಸಿದರು.
ಹಾಗೆಯೇ ದೇಶದ 75% ಯುವಜನತೆ ಮನ್ ಕಿ ಬಾತ್ ಕಾರ್ಯಕ್ರಮವನ್ನು ಕೇಳುತ್ತಾರೆ. ಇದು ಯುವ ಜನರ ಮನಸ್ಸನ್ನು ಅರಿತುಕೊಳ್ಳುವ ನಿಟ್ಟಿನಲ್ಲಿ ನನಗೆ ನೆರವಾಗುತ್ತಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು. ತಂತ್ರಜ್ಞಾನದ ಬಗೆಗೂ ಮನ್ ಕಿ ಬಾತ್ನಲ್ಲಿ ಪ್ರಸ್ತಾಪಿಸಿದ ಅವರು, ಇದರಿಂದ ಯುವ ಜನತೆ ಪ್ರೇರಣೆ ಪಡೆಯುವುದಾಗಿ ಅಭಿಪ್ರಾಯ ವ್ಯಕ್ತಪಡಿಸಿದರು.
ಹಾಗೆಯೇ ಸೇವೆಯ ಬಗೆಗೂ ಮಾತನಾಡಿದ ಪ್ರಧಾನಿ ಮೋದಿ, ಸಮಾಜದಲ್ಲಿ ಹಣಕ್ಕಿಂತ ಸೇವೆಯ ಪ್ರಜ್ಞೆ ಮುಖ್ಯ ಎಂದು ತಿಳಿಸಿದರು. ವಾಸ್ತವವನ್ನು ಒಪ್ಪಿಕೊಂಡು ಬದುಕುವವರು ಸಮಾಜಮುಖಿ ಜೀವನ ನಡೆಸುತ್ತಾರೆ ಎಂದು ಅವರು ತಿಳಿಸಿದರು.
ಹಾಗೆಯೇ ಇನ್ನೇನು ಸಾಲು ಸಾಲು ಹಬ್ಬಗಳು ಬರಲಿದ್ದು, ಈ ಸಂದರ್ಭದಲ್ಲಿ ಕೊರೋನಾ ಮುಂಜಾಗ್ರತೆಗಳನ್ನು ಮರೆಯದೇ ಅನುಸರಿಸುವಂತೆ ದೇಶವಾಸಿಗಳಿಗೆ ಮೋದಿ ಕಿವಿಮಾತು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.